Advertisement

ಕೆಆರ್‌ಎಸ್‌ ಮಾದರಿ ಜಲಾಶಯ ನಿರ್ಮಾಣ

06:56 AM Feb 27, 2019 | |

ಮಾಗಡಿ: ಕೆಆರ್‌ಎಸ್‌ ಬೃಂದವನ ಮಾದರಿಯಲ್ಲಿ ಮಂಚನಬೆಲೆ ಜಲಾಶಯದ ಬಳಿ ಸುಂದರವಾದ ಪಾರ್ಕ್‌ ನಿರ್ಮಾಣ ಮಾಡಲಾಗುವುದು. 125 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎ.ಮಂಜು ತಿಳಿಸಿದರು. ತಾಲೂಕಿನ ಮಂಚನಬೆಲೆ ಎಸ್‌ಸಿ ಕಾಲೋನಿಯಲ್ಲಿ 10 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿಗೆ ಬಹು ಸಮೀಪವಿರುವ ಮಂಚನಬೆಲೆ ಜಲಾಶಯವನ್ನು ಪುನಶ್ಚೇತನಗೊಳಿಸಲು ಸರ್ಕಾರ ಬಜೆಟ್‌ನಲ್ಲಿ 125 ಕೋಟಿ ರೂ. ಮೀಸಲಿಟ್ಟಿದೆ.

Advertisement

ಮೈಸೂರಿನ ಕೆಆರ್‌ಎಸ್‌ ಬೃಂದವನ ಮಾದರಿಯಲ್ಲಿ ಮಂಚನಬೆಲೆ ಜಲಾಶಯದ ಬೆಟ್ಟಗುಡ್ಡ ಸೇರಿಸಿಕೊಂಡು ಜಲಾಶಯದ ಹಿಂಭಾಗ ಸುಂದರವಾದ ಪಾರ್ಕ್‌, ಜಲಪಾತ ನಿರ್ಮಿಸಿ ಜೊತೆಗೆ ಸಾವನದುರ್ಗವನ್ನು ಸೇರಿಸಿಕೊಂಡು ಸುಂದರವಾದ ಐತಿಹಾಸಿಕ ಪ್ರವಾಸಿ ತಾಣವನ್ನಾಗಿಸಲಾಗುವುದು. ಈಗಾಗಲೇ ಕಾವೇರಿ ನಿಗಮದಿಂದ ಗುಜರಾತಿನ ಕಂಪನಿಗೆ ಡಿಪಿಆರ್‌ ಮಾಡಿಲಿಕ್ಕೆ ವಹಿಸಲಾಗಿದೆ. ಸರ್ಕಾರದ ಸ್ಥಳ ಮತ್ತು ಸಣ್ಣ ನೀರಾವರಿ ಜಾಗವನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರೆಸಾರ್ಟ್‌ನಿಂದ ಜಲಾಶಯ ಕಲುಷಿತ: ಅಕ್ರಮವಾಗಿ ರೆಸಾರ್ಟ್‌ನಿಂದ ಜಲಾಶಯ ಕಲುಷಿತಗೊಳ್ಳುತ್ತಿರುವುದು ತನ್ನ ಗಮನಕ್ಕೆ ಬಂದಿದೆ. ಬಾಚೇನಹಟ್ಟಿ ಗ್ರಾಪಂ ಅಧಿಕಾರಿಗೆ ಅಕ್ರಮ ನಡೆಸುತ್ತಿರುವವರ ಬಗ್ಗೆ ಸೂಕ್ತ ಕ್ರಮಕ್ಕೆ ತಿಳಿಸಿದ್ದೇವೆ. ಪ್ರವಾಸೋದ್ಯಮ ಸಚಿವ ಸ.ರಾ ಮಹೇಶ್‌ರೊಂದಿಗೆ ಚರ್ಚಿಸಿದ್ದೇನೆ. ಇಲ್ಲಿನ ಸೌಂದರ್ಯದ ಸೊಬಗನ್ನು ಪ್ರವಾಸಿಗರಿಗೆ ತೋರಿಸುವ ರೆಸಾರ್ಟ್‌ ಮಾಲೀಕರಿಗೆ ಅವಕಾಶ ಕಲ್ಪಿಸಿಕೊಡಬೇಕಿದೆ.

ಜಲಾಶಯಕ್ಕೆ ಕಲುಷಿತ ನೀರು ಸೇರದಂತೆ ವ್ಯವಸ್ಥಿತವಾಗಿ ಅಲ್ಲೇ ಇಂಗಿಸಲು ವ್ಯವಸ್ಥೆ ಮಾಡಿಗೊಳ್ಳಬೇಕಾಗಿದೆ. ಜಲಾಶಯ ಉಳಿಸಲು ಗಣಿಗಾರಿಕೆ ನಿಷೇಧಿಸುವಂತೆ ಈಗಾಗಲೇ ಈ ಭಾಗದ ರೈತರು, ಸಾರ್ವಜನಿಕರು ಹಸಿರು ಕೋರ್ಟ್‌ನಲ್ಲಿ ದಾವೆ ಹೂಡಿ ಹೋರಾಟ ಮಾಡುತ್ತಿದ್ದಾರೆ. ಹೋರಾಟಕ್ಕೆ ತನ್ನ ಬೆಂಬಲವಿದೆ ಎಂದು ಹೇಳಿದರು.

ಎತ್ತಿನಹೊಳೆ ನೀರು ತುಂಬಿಸಲು ತೀರ್ಮಾನ: ತಿಪ್ಪಗೊಂಡನಹಳ್ಳಿ ಜಲಾಶಯದ ಕಲುಷಿತ ನೀರು ಮಂಚನಬೆಲೆ ಜಲಾಶಯಕ್ಕೆ ಹರಿದು ಬರುತ್ತಿದೆ. ಇದರಿಂದ ಸಾರ್ವಜನಿಕರು ಕುಡಿದರೆ ರೋಗದ ಭೀತಿಯಿದೆ ಎಂಬ ಆರೋಪವೂ ಇದೆ. 475 ಕೋಟಿ ರೂ. ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವನ್ನ ಪುನಶ್ಚೇತನಗೊಳಿಸಲು ಈಗಾಗಲೇ ಟೆಂಡರ್‌ ಕೆರೆಯಲಾಗಿದೆ. ಈಗ ಮಂಚನಬೆಲೆ ಮತ್ತು ತಿಪ್ಪಗೊಂಡನಹಳ್ಳಿಯ ಎರಡು ಜಲಾಶಯದ ನೀರನ್ನು ಹೊರಬಿಟ್ಟು, ಕಣ್ವ ನದಿ ನೀರನ್ನು ಮಂಚನಬೆಲೆ ಜಲಾಶಯಕ್ಕೆ ತುಂಬಿಸಲಾಗುವುದು. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಎತ್ತಿನಹೊಳೆ ನೀರು ತುಂಬಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

Advertisement

6 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ: ತಾಲೂಕಿನ ಮಾಡಬಾಳ್‌ ಮತ್ತು ಕಸಬಾ ಜಿಪಂ ವ್ಯಾಪ್ತಿಯಲ್ಲಿ ಒಟ್ಟು 6 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಂಚನಬೆಲೆ ಎಸ್‌ಸಿ ಕಾಲೋನಿ ಸಿಸಿ ರಸ್ತೆ ಮತ್ತು ಚರಂಡಿ, ಮಾರೇಗೌಡನದೊಡ್ಡಿಯಿಂದ ರಾಮಕಲ್‌ಪಾಳ್ಯದವರೆಗೆ ರಸ್ತೆ ಮತ್ತು ಚರಂಡಿ, ಸುಂಕುತಿಮ್ಮನಪಾಳ್ಯದ ಎಸ್‌ಸಿ ಕಾಲೋನಿಗೆ ಸಿಸಿ ರಸ್ತೆ ಮತ್ತು ಚರಂಡಿ, ಮಾಡಬಾಳ್‌ನಿಂದ ಮಾನಗಲ್‌ವರೆಗೆ ರಸ್ತೆ, ಗೆಜ್ಜಗಾರಕುಪ್ಪೆಯಿಂದ ಬಸಪ್ಪದೊಡ್ಡಿವರೆಗೆ ರಸ್ತೆ, ಗೆಜ್ಜಗಾರಕುಪ್ಪೆಯಿಂದ ನೇರಳವಾಡಿವರೆಗೆ ರಸ್ತೆ, ಕೊಟ್ಟಗಾರಹಳ್ಳಿ ಎಸ್‌ಸಿ ಕಾಲೋನಿಗೆ ರಸ್ತೆ, ಬೆಳಗವಾಡಿ ಸರ್ಕಾರಿ ಶಾಲಾ ಕೊಠಡಿ ಕಾಮಗಾರಿಗೆ ಶಾಸಕ ಎ.ಮಂಜು ಚಾಲನೆ ನೀಡಿದರು.

ಈ ವೇಳೆಯಲ್ಲಿ ಮಾಡಬಾಳ್‌ ಜಿಲ್ಲಾ ಪಂಚಾಯ್ತಿ ಸದಸ್ಯೆ ಚಂದ್ರಮ್ಮ, ಕಸಬಾ ಜಿಪಂ ಸದಸ್ಯೆ ನಾಗರತ್ನಮ್ಮ, ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್‌, ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಹಂಚೀಕುಪ್ಪೆ ಗ್ರಾಪಂ ಅಧ್ಯಕ್ಷೆ ಮಂಜುಳ, ಮಂಚನಬೆಲೆ ಮೀನುಗಾರರ ಸಂಘದ ಅಧ್ಯಕ್ಷ ಲೋಕೇಶ್‌, ಚೆಕ್ಕವೆಂಕಟಯ್ಯ, ಬಸವರಾಜು, ಕೋರಮಂಗಲದ ಶ್ರೀನಿವಾಸ್‌, ಎಸ್‌.ಕಾಂತರಾಜು, ಮೂಡ್ಲಗಿರಿ, ಮೂರ್ತಿ, ಸಿ.ಎಂ.ಮಾರೇಗೌಡ, ಶಿವಣ್ಣ, ಸಹಾಯಕ ಎಂಜಿನಿಯರ್‌ ಶಿವಕುಮಾರ್‌, ನಾರಾಯಣ್‌, ರವಿಕುಮಾರ್‌, ವೆಂಕಟೇಶ್‌, ಶೋಭಾ, ಶಿರಸ್ತೇದಾರ್‌ ಜಗದೀಶ್‌, ಕಾಳಪ್ಪ, ಉಮೇಶ್‌, ಜಗದೀಶ್‌ ಕುಮಾರ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next