Advertisement

ಸಿಟಿಯೊಳಗೆ ಬಸ್‌ ಬೇ ನಿರ್ಮಾಣ; 1 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ಗೆ ಸಿದ್ಧತೆ

08:09 PM Aug 02, 2021 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂ ರಿಗೆ ಪೂರವಾಗುವಂತೆ ನಗರದಲ್ಲಿನ ಪ್ರಮುಖ ಜಂಕ್ಷನ್‌ಗಳಲ್ಲಿ 1.09 ಕೋಟಿ ರೂ. ವೆಚ್ಚದಲ್ಲಿ ಬಸ್‌ ಬೇ ನಿರ್ಮಾಣಕ್ಕೆ ಮನಪಾ ಮುಂದಾಗಿದೆ.

Advertisement

ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ನಗರದ ಬಂಟ್ಸ್‌ ಹಾಸ್ಟೆಲ್‌, ಮಲ್ಲಿಕಟ್ಟೆ, ಕೆಪಿಟಿ, ಮೇರಿಹಿಲ್‌, ಕುಲಶೇಖರ ಸಹಿತ ಇತರ ಜಂಕ್ಷನ್‌ಗಳಲ್ಲಿ ಬಸ್‌ ಬೇ ನಿರ್ಮಾಣ ಮಾಡುವ ಬಗ್ಗೆ ಕ್ರಿಯಾ ಯೋಜನೆಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಿದ್ದು, ಸದ್ಯದಲ್ಲೇ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಅದರೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು ಪಾಲಿಕೆಯ ಉದ್ದೇಶ.

ಹಂಪನಕಟ್ಟೆ, ಬಂಟ್ಸ್‌ಹಾಸ್ಟೆಲ್‌, ಪಿ.ವಿ. ಎಸ್‌. ಜಂಕ್ಷನ್‌, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ ಸಹಿತ ನಗರದ ವಿವಿಧ ಕಡೆಗಳಲ್ಲಿ ಬಸ್‌ ಲೇನ್‌ ಈಗಾಗಲೇ ಇದ್ದು, ಅದು ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ಅಲ್ಲಿಯ ಬಸ್‌ ಲೇನ್‌ ಅಭಿವೃದ್ಧಿಯ ಜತೆ ಮತ್ತೂ ಕೆಲವು ಜಂಕ್ಷನ್‌ಗಳಲ್ಲಿ ಅಗತ್ಯವಿದ್ದರೆ ಅಲ್ಲಿಯೂ ಬಸ್‌ ಬೇ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ವೃತ್ತ, ಜಂಕ್ಷನ್‌ಗಳ ಅಭಿವೃದ್ಧಿ:

ಬಸ್‌ ಬೇ ನಿರ್ಮಾಣದ ಜತೆಯೇ ಪ್ರಮುಖ ವೃತ್ತ, ಜಂಕ್ಷನ್‌ಗಳ ಅಭಿವೃದ್ಧಿಗೂ ಮನಪಾ ಮುಂದಾಗಿದ್ದು, ಅದರಂತೆ, ನಗರದ ರಾಷ್ಟ್ರಕವಿ ಗೋವಿಂದ ಪೈ ವೃತ್ತ (ನವಭಾರತ ವೃತ್ತ), ಉರ್ವ ವೃತ್ತ ಅಭಿವೃದ್ಧಿಗೊಳ್ಳಲಿದೆ. ಹೊನ್ನಕಟ್ಟೆ ಜಂಕ್ಷನ್‌, ಕೆಎಸ್ಸಾರ್ಟಿಸಿ ಜಂಕ್ಷನ್‌ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಬಿಜೈ, ಕಂಕನಾಡಿ, ಪಿವಿಎಸ್‌ ಜಂಕ್ಷನ್‌, ಹಂಪನಕಟ್ಟೆ ಸಹಿತ ವಿವಿಧ ಕಡೆಗಳಲ್ಲಿನ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿಗಳು ಸಾಗುತ್ತಿದೆ.

Advertisement

ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ನಗರದಲ್ಲಿ ಸುಗಮ ಸಂಚಾರಕ್ಕೆಂದು ಕೆಲವೊಂದು ಜಂಕ್ಷನ್‌ಗಳಲ್ಲಿ ಈಗಾಗಲೇ ಬಸ್‌ ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳು ಅವೈಜ್ಞಾನಿಕವಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್‌ ಆಯುಕ್ತರ ಗಮನಕ್ಕೂ ತಂದಿದ್ದೇವೆ. ಕೆಲವೊಂದು ಜಂಕ್ಷನ್‌ಗಳಲ್ಲಿನ ಬಸ್‌ ಲೇನ್‌ಗಳಲ್ಲಿ ಬಸ್‌ಗಳು ಸಾಲು ಸಾಲು ನಿಂತಿರುತ್ತವೆ. ಹೀಗಿದ್ದಾಗ ಮುಂದಿನ ಬಸ್‌ ನಿರ್ಗಮಿಸದೆ ಹಿಂದಿನ ಬಸ್‌ ಹೋಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬಸ್‌ ಲೇನ್‌ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪಾಲಿಕೆ ಬಸ್‌ ಬೇ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ನಗರದಲ್ಲಿ ಅದಕ್ಕೆ ಅಷ್ಟೊಂದು ಜಾಗ ಇಲ್ಲ. ಆ ಬದಲು ಬಸ್‌ಗಾಗಿ ಪ್ರತ್ಯೇಕ ಲೇನ್‌ ನಿರ್ಮಾಣ ಮಾಡಬಹುದು’ ಎನ್ನುತ್ತಾರೆ.

ಲೇನ್‌ ತಪ್ಪುತ್ತಿದೆ  ಬಸ್‌ಗಳು ! :

ಸುಗಮ ಸಂಚಾರ ಸುಧಾರಣೆಯ ಉದ್ದೇಶದಿಂದ ನಗರದ ವಿವಿಧ ಕಡೆಗಳಲ್ಲಿ ಬಸ್‌ ಲೇನ್‌ ನಿರ್ಮಾಣ ಮಾಡಲಾಗಿದೆ. ಬಸ್‌ ಬೇ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇರುವ ಕಾರಣ ಲೇನ್‌ಗಳಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಬಹುತೇಕ ಬಸ್‌ ಲೇನ್‌ ಒಳಗೆ ಬಸ್‌ಗಳು ಬರುತ್ತಿಲ್ಲ. ಬದಲಾಗಿ ರಸ್ತೆಯಲ್ಲೇ ನಿಲ್ಲುತ್ತಿವೆ. ಇನ್ನು ಬಸ್‌ ಲೇನ್‌ಗಳಲ್ಲಿ ಬಸ್‌ ಹೊರತುಪಡಿಸಿ ಇತರ ವಾಹನಗಳೂ ಸಂಚರಿಸುತ್ತಿವೆ. ಹೀಗಿದ್ದಾಗ ಹೊಸದಾಗಿ ಬಸ್‌ ಬೇ ನಿರ್ಮಾಣಕ್ಕೂ ಮುನ್ನ ಈ ರೀತಿಯ ಸಮಸ್ಯೆಗಳ ಬಗ್ಗೆಯೂ ಸ್ಥಳೀಯಾಡಳಿತ ಗಮನ ನೀಡಬೇಕಾಗಿದೆ.

ನಗರದ ಪ್ರಮುಖ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದ್ದು, ಸುಗಮ ವಾಹನ ಸಂಚಾರಕ್ಕೆ ಪ್ರಮುಖ ರಸ್ತೆಗಳಲ್ಲಿ ಬಸ್‌ ಬೇ ನಿರ್ಮಾಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 1.9 ಕೋಟಿ ರೂ. ವೆಚ್ಚದಲ್ಲಿ ಬಸ್‌ ಬೇ ನಿರ್ಮಿಸಲು ಮುಂದಾಗಿದ್ದೇವೆ. ಅದರಂತೆ ಸದ್ಯದಲ್ಲಿಯೇ ಟೆಂಡರ್‌ ಕರೆಯಲಾಗುವುದು. ಕೆಲವೊಂದು ಕಡೆಗಳಲ್ಲಿ ಬಸ್‌ ಲೇನ್‌ಗಳಿದ್ದು, ಅವುಗಳ ಸುಧಾರಣೆಗೂ ಕ್ರಮ ಕೈಗೊಳ್ಳಲಾ ಗುವುದು. -ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next