Advertisement

ಕಾಂಗ್ರೆಸ್‌ಗೆ ನಾಲ್ಕರಲ್ಲಿ ಗೆಲುವು ಪೂರಕ, ನಾಲ್ಕು ಫಿಪ್ಟಿ-ಫಿಪ್ಟಿ

11:36 PM Dec 02, 2019 | mahesh |

ಬೆಂಗಳೂರು: ಉಪ ಚುನಾವಣೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗುತ್ತಿದ್ದು, ಮೂರೂ ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳ ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ 15 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳಲ್ಲಿ ಸ್ಪಷ್ಟವಾಗಿ ಗೆಲ್ಲುವ ಸಾಧ್ಯತೆ ಇದೆ. ಎಷ್ಟು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ಇದೆ ಎನ್ನುವ ಬಗ್ಗೆ ಎಐಸಿಸಿ ವೀಕ್ಷಕರು ಪಕ್ಷದ ಹೈಕಮಾಂಡ್‌ಗೆ ವರದಿ ನೀಡಿದ್ದಾರೆ. ಅದು ನಿಜವಾದರೆ, ಬಿಜೆಪಿಗೆ ಒಂದರ್ಥದಲ್ಲಿ ಅವಕಾಶ ಹೆಚ್ಚಲಿದೆ. ಆದರೆ, ಕಾಂಗ್ರೆಸ್‌ ಲೆಕ್ಕಾಚಾರದ ಪ್ರಕಾರ, ಉಳಿದ “ಫಿಪ್ಟಿ-ಫಿಪ್ಟಿ’ ಅವಕಾಶ ಇರುವ ಕ್ಷೇತ್ರಗಳನ್ನು ಕೈವಶ ಮಾಡಿಕೊಂಡರೆ ಬಿಜೆಪಿ ಲೆಕ್ಕಾಚಾರ ಬುಡಮೇಲಾಗಲಿದೆ.

Advertisement

ಎಐಸಿಸಿ ವೀಕ್ಷಕರು ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕಂಡುಕೊಂಡಂತೆ ರಾಣಿಬೆನ್ನೂರು, ಕಾಗ ವಾಡ, ಅಥಣಿ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳು ಗೆಲ್ಲಲು ಪೂರಕ ವಾತಾವರಣ ಇದೆ. ಈಗಿರುವ ವಾತಾವರಣವೇ ಮತದಾನದ ನಡೆಯುವ ದಿನದವರೆಗೂ ಮುಂದುವರಿದರೆ, ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎನ್ನುವ ವರದಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಣೆಬೆನ್ನೂರಿನಲ್ಲಿ ಕೆ.ಬಿ.ಕೋಳಿವಾಡ್‌ ಅವರಿಗೆ ಕಳೆದ ಚುನಾವಣೆಯ ಸೋಲಿನ ಅನುಕಂಪ ಹಾಗೂ ಕೊನೆಯ ಚುನಾವಣೆ ಎಂಬ ವಿಷಯ ಗೆಲುವಿಗೆ ಪೂರಕವಾಗಲಿದೆ. ಹುಣಸೂರಿನಲ್ಲಿ ಎಚ್‌.ಪಿ. ಮಂಜು ನಾಥ್‌, ಕಾಗವಾಡದಲ್ಲಿ ರಾಜು ಕಾಗೆ, ಅಥಣಿಯಲ್ಲಿ ಗಜಾನನ ಮಂಗಸೂಳಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಗಳ ಮೇಲೆ ಮತದಾರರಿಗೆ ಇರುವ ಆಕ್ರೋಶವೇ ಗೆಲುವಿಗೆ ಪೂರಕವಾಗಲಿದೆ
ಎಂಬ ವರದಿ ಸಲ್ಲಿಸಿದ್ದಾರೆ.

ನಾಲ್ಕು ಫಿಪ್ಟಿ-ಫಿಪ್ಟಿ: ಇನ್ನು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಫಿಪ್ಟಿ-ಫಿಪ್ಟಿ. ಶಿವಾಜಿನಗರ, ಚಿಕ್ಕಬಳ್ಳಾಪುರ, ಹೊಸಕೋಟೆ ಹಾಗೂ ವಿಜಯನಗರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪೂರಕ ವಾತಾವರಣ ಇದ್ದು, ಬಿಜೆಪಿಯಿಂ ದಲೂ ಅಷ್ಟೇ ಪ್ರಬಲ ಸ್ಪರ್ಧೆ ಇರುವುದರಿಂದ ಗೆಲುವಾಗಿ ಪರಿವರ್ತಿಸಲು ಕೊನೆ ಕ್ಷಣದವರೆಗೂ ಹೋರಾಟ ಅಗ ತ್ಯವಿದೆ ಎಂಬ ಅಭಿಪ್ರಾಯ ನೀಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ಗೆ ಎರಡು?: ಕಾಂಗ್ರೆಸ್‌ ವೀಕ್ಷಕರ ವರದಿಯಲ್ಲಿ ಜೆಡಿಎಸ್‌ ಗೆಲ್ಲುವ ಸಾಧ್ಯತೆ ಇರುವ
ಕ್ಷೇತ್ರಗಳ ಮಾಹಿತಿಯನ್ನೂ ನೀಡಿದ್ದಾರೆ. ಯಶವಂತಪುರ ಹಾಗೂ ಮಂಡ್ಯದ ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲ್ಲುವ ಸಾಧ್ಯತೆ ಇದೆ ಎಂಬ ವರದಿ ನೀಡಿದ್ದಾರೆ. ವೀಕ್ಷಕರ ನೇಮಕ: ಉಪ ಚುನಾವಣೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದ್ದು, ಪ್ರತಿ ಕ್ಷೇತ್ರಕ್ಕೂ ಎಐಸಿಸಿಯಿಂದ ಹಿರಿಯ ನಾಯಕರನ್ನೇ ವೀಕ್ಷಕರನ್ನಾಗಿ ನೇಮಕ ಮಾಡಿದೆ.

Advertisement

ಈಗಾಗಲೇ ಒಂದು ವಾರದಿಂದ ತಮಗೆ ಜವಾಬ್ದಾರಿ ವಹಿಸಿರುವ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ವೀಕ್ಷಕರು
ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯಾ ಸಾಧ್ಯತೆಯ ವರದಿ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ
ಕೆ.ಸಿ.ವೇಣುಗೋಪಾಲ್‌ ಮೂಲಕ ಪಕ್ಷದ ಹೈಕಮಾಂಡ್‌ ಗೆ ವರದಿ ನೀಡಿದ್ದು, ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗೆ ಯಾವ ಅಂಶಗಳು ಅಡ್ಡಿಯಾಗಿವೆ ಎನ್ನುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೈ ಕಮಾಂಡ್‌ ಹೊಸ ಲೆಕ್ಕಾಚಾರ: ಪಕ್ಷದ ವೀಕ್ಷಕರು ಸಲ್ಲಿಸಿರುವ ವರದಿಯಿಂದ ಕಾಂಗ್ರೆಸ್‌ ಹೈಕಮಾಂಡ್‌  ಚಕಿತಗೊಂಡಿದೆ ಎನ್ನಲಾಗಿದ್ದು, ವೀಕ್ಷಕರ ವರದಿ ನಿಜವಾದರೆ, ಕರ್ನಾಟಕದ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಮರು ಮೈತ್ರಿ ಲೆಕ್ಕಾಚಾರವನ್ನು ಕಾಂಗ್ರೆಸ್‌ ಹೈಕಮಾಂಡ್‌ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಪಕ್ಷದ ಎಲ್ಲ ಹಿರಿಯ ನಾಯಕರಿಗೆ ಸಕ್ರಿಯರಾಗುವಂತೆ ಸೂಚಿಸಿದ್ದು, ಪಕ್ಷ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಕಾರ್ಯತಂತ್ರ ರೂಪಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಸುವಂತೆ ಸೂಚಿಸಿದೆ.

ಒಂದು ವೇಳೆ, ಜೆಡಿಎಸ್‌-ಕಾಂಗ್ರೆಸ್‌ ಸೇರಿ 10 ಸ್ಥಾನ ಪಡೆದರೆ, ರಾಜ್ಯದಲ್ಲಿ ಜೆಡಿಎಸ್‌ ಜೊತೆಗೆ ಮತ್ತೆ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಾಗುತ್ತದೆ. ಈ ಮೂಲಕ ಮಹಾರಾಷ್ಟ್ರದ ನಂತರ ಬಿಜೆಪಿಯೇತರ ಮೈತ್ರಿಗೆ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ ಎನ್ನುವುದು ಕಾಂಗ್ರೆಸ್‌ ಹೈಕಮಾಂಡ್‌ ನ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ.

ಸಂಪನ್ಮೂಲದ ಕೊರತೆ ಸಮಸ್ಯೆ? : ಉಪ ಚುನಾವಣೆ ಯಲ್ಲಿ ಇದುವರೆಗೂ ಮೂರೂ ಪಕ್ಷಗಳು ಬಹಿರಂಗ ಪ್ರಚಾರದ ಲೆಕ್ಕಾಚಾರದಲ್ಲಿ ಸೋಲು-ಗೆಲುವಿನ ಸಾಧ್ಯಾ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡಿವೆ. ಆದರೆ, ಡಿಸೆಂಬರ್‌ 3ರ ನಂತರ ಮತದಾನ ನಡೆಯುವವರೆಗೆ ಕೊನೆಯ ಎರಡು ದಿನ ಮತದಾರರನ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಕೂಡ ಮುಖ್ಯ ಎಂಬ ಮಾಹಿತಿಯನ್ನು ವೀಕ್ಷಕರು ನೀಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎಂದುಕೊಂಡಿರುವ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಆರ್ಥಿಕ
ಸಂಪನ್ಮೂಲದ ಕೊರತೆ ಕಾಡುತ್ತಿದೆ. ಬಿಜೆಪಿ ಅದನ್ನೇ ಪ್ರಮುಖ ಅಸOಉವಾಗಿ ಬಳಸಿಕೊಂಡು ತಮ್ಮ ಅಭ್ಯರ್ಥಿ ಗಳನ್ನು ಗೆಲ್ಲಿಸಿಕೊಂಡು ಬರುವ ಕಾರ್ಯತಂತ್ರ ರೂಪಿಸಿದರೆ, ಕಷ್ಟವಾಗಬಹುದು ಎನ್ನುವ ಸೂಚನೆಯನ್ನೂ ವೀಕ್ಷಕರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಲೆಕ್ಕಾಚಾರ
ಬಿಜೆಪಿ, ಆಂತರಿಕ ಸಮೀಕ್ಷೆಯಲ್ಲಿ ಎಂಟು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಅಥಣಿ, ಗೋಕಾಕ್‌, ಮಹಾಲಕ್ಷ್ಮೀಲೇಔಟ್‌, ಕೆ.ಆರ್‌, ಪುರಂ, ವಿಜಯನಗರ, ಹಿರೇಕೆರೂರು, ಯಲ್ಲಾಪುರ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಗೆಲುವು ಖಚಿತ ಎಂಬ ವರದಿ ನೀಡಲಾಗಿದೆ. ಈ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳ ಆಂತರಿಕ ವರದಿಯಲ್ಲಿ ಅಥಣಿ ಹಾಗೂ ರಾಣೆಬೆನ್ನೂರು ಗೆಲ್ಲುವ ಮಾಹಿತಿ ನೀಡಿದ್ದು,
ಪ್ರಬಲ ಪೈಪೋಟಿ ಇರುವ ಸಾಧ್ಯತೆ ಹೆಚ್ಚಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next