Advertisement

ದೊಡ್ಡಬೆಳವಂಗಲ ಹತ್ಯೆ ಪ್ರಕರಣ: ಕೈ ಖಂಡನೆ

02:58 PM Feb 22, 2023 | Team Udayavani |

ದೊಡ್ಡಬಳ್ಳಾಪುರ: ಇತಿಹಾಸದಲ್ಲಿ ಎಂದಿಗೂ ಸ್ಥಳೀಯ ರಿಂದ ತಾಲೂಕಿನ ನೆಮ್ಮದಿ ಹಾಳಾಗಿಲ್ಲ. ಆದರೆ, ದೊಡ್ಡಬೆಳವಂಗಲದಲ್ಲಿ ಫೆ.17ರಂದು ಕಪ್ಪುಚುಕ್ಕೆ ಎಂಬಂತೆ ಜೋಡಿ ಹತ್ಯೆ ಪ್ರಕರಣ ನಡೆದಿದೆ. ಈ ಘಟನೆಯನ್ನು ಕಾಂಗ್ರೆಸ್‌ ಖಂಡಿಸಿದ್ದು, ಕ್ರೀಡಾಕೂಟ ಆಯೋಜಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕೆಂದು ಮುಖಂಡರು ಒತ್ತಾಯಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ಮಾಧ್ಯಮ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ಚುನಾವಣೆ ಸಂದರ್ಭದಲ್ಲಿ ಹೊರಗಿನಿಂದ ತಾಲೂಕಿಗೆ ಬಂದವರಿಂದ ಇಲ್ಲಿನ ಯುವ ಸಮುದಾಯ ಹಾದಿತಪ್ಪುತ್ತಿದ್ದು, ಹತ್ಯೆಯಾಗುವ ಮಟ್ಟಕ್ಕೆ ತಲುಪಿರುವುದು ವಿಪರ್ಯಾಸ ಎಂದು ಹೇಳಿದರು.

ಯುವಜನರನ್ನು ಹಾಳು ಮಾಡುತ್ತಿದ್ದಾರೆ: ಜೆಡಿಎಸ್‌ ಆಕಾಂಕ್ಷಿ ಎಂದು ಜೆ.ಪಿ.ನಗರದಿಂದ ಬಂದ ಮಂಜುನಾಥ್‌ ಎನ್ನುವವರು ಯುವಕರಿಗೆ ಟಾಟಾ ಸುಮೋ, ಹಣ ಕೊಟ್ಟು, ತಾಲೂಕಾದ್ಯಂತ ಓಡಾಡಿಸಿ, ಮಧ್ಯಾಹ್ನ ಡಾಬಾಗಳಲ್ಲಿ ಕೂರಿಸುತ್ತಿದ್ದರು. ನಂತರ ಬಂದ ಚೆನ್ನಿಗಪ್ಪ ಗೌರವಯುತವಾಗಿದ್ದ ತಾಲೂಕಿನ ರಾಜಕೀಯವನ್ನು ಮತಕ್ಕಿಷ್ಟು ಎಂದು ಬೆಲೆ ಕಟ್ಟಿದ್ದು, ನಂತರ ಬಂದ ನಾರಾಯಣಗೌಡ, ಮೂರ್‍ನಾಲ್ಕು ಚುನಾವಣೆಗಳಲ್ಲಿ ಬಿ.ಮುನೇಗೌಡ ಯುವಕರಿಗೆ ಪಾರ್ಟಿ ಮಾಡಿಸಿ ಹಾಳು ಮಾಡಿದ್ದರೆ, 2 ವರ್ಷದಿಂದ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವ ವ್ಯಕ್ತಿ ಡಿಜೆ, ಕ್ರಿಕೆಟ್‌ ಮತ್ತಿತರ ಕಾರ್ಯಕ್ರಮ ಆಯೋಜಿಸಿ ಯುವಜನರನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಕ್ರಿಮಿನಲ್‌ ಕೇಸು ಹಾಕಿ: ದೊಡ್ಡಬೆಳವಂಗಲ ಹತ್ಯೆ ಘಟನೆಗೆ ಸೂಕ್ತ ಮುಂಜಾಗ್ರತೆವಹಿಸದ ಆಯೋಜಕರ ಬೇಜವಾಬ್ದಾರಿಯೇ ಮುಖ್ಯ ಕಾರಣವಾಗಿದ್ದು, ಪೊಲೀಸರು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿರುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಅವರು, ಶಾಸಕರ ಕುರಿತು ಮನೆ ಮನೆಗೆ ಮದ್ಯ ಸರಬರಾಜು ಮಾಡುತ್ತಾರೆ ಎಂಬಂತೆ ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ. ಆದರೆ, ವೆಂಕಟರಮಣಯ್ಯ ಅವರು ಶಾಸಕರಾಗುವ ಮುನ್ನವೇ ಸರ್ಕಾರದ ನಿಯಮದಡಿ ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿದ್ದಾರೆ. ಈ ಕುರಿತಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಸರ್ಕಾರವೇ ಗುರಿ ನಿಗದಿ ಮಾಡಿರುವ ಕಾರಣ, ಮದ್ಯ ಅಕ್ರಮ ಮಾರಾಟ ಮಾಡಲು ಸರ್ಕಾರವೇ ಒತ್ತಡ ಹೇರುತ್ತಿದೆ ಎನ್ನುತ್ತಾರೆ ಎಂದರು. ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೈರೇಗೌಡ ಮಾತನಾಡಿ, ದೊಡ್ಡಬೆಳವಂಗಲದಲ್ಲಿ ನಡೆದ ಅಹಿತರ ಘಟನೆಯನ್ನು ಕಾಂಗ್ರೆಸ್‌ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರು ಯಾರೇ ಆದರೂ, ಕಠಿಣ ಕ್ರಮಕೈಗೊಳ್ಳಬೇಕೆಂದು ಪೊಲೀಸ್‌ ಇಲಾಖೆಯನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.

ಫೋಟೋ ಪ್ರದರ್ಶನ: ತಾಲೂಕಿನಲ್ಲಿ ಎಂದು ನಡೆಯದ ಘಟನೆ ನಡೆದಿದ್ದು, ಶಿವರಾತ್ರಿ ಹಬ್ಬದ ಅಂಗವಾಗಿ ಕ್ರೀಡಾಕೂಟ ಆಯೋಜಿಸಿದ್ದವರೇ ನೇರೆ ಹೊಣೆ. ಅದರೆ, ತಮ್ಮ ತಪ್ಪಿಂದ ತಪ್ಪಿಸಿಕೊಳ್ಳಲು ಅನ್ಯರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜೊತೆ ಆರೋಪಿ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಮತ್ತೆ ಅದೇ ಆರೋಪಿ ಆಗಿನ ಉಸ್ತುವಾರಿ ಸಚಿವ ಆರ್‌.ಅಶೋಕ್‌, ಈಗ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ಜೊತೆ ಇರುವ ಪೋಟೋ ಸಹ ಇದೆ. ಇದಕ್ಕೇನು ಹೇಳುತ್ತಾರೆ ಎಂದು ಫೋಟೋಗಳನ್ನು ಪ್ರದರ್ಶಿಸಿ, ಪ್ರಶ್ನಿಸಿದರು.

Advertisement

ಇಬ್ಬಗೆ ನೀತಿ: ಪ್ರವೀಣ್‌ ನೆಟ್ಟಾರ್‌ ಸಾವಿಗೆ ಸರ್ಕಾರ ಪರಿಹಾರ ನೀಡಬಹುದಾದರೆ, ಅವರದ್ದೇ ಪಕ್ಷದ ಮುಖಂಡ ಆಯೋಜಿಸಿದ್ದ ಕ್ರೀಡಾಕೂಟದಿಂದ ಸಾವಿಗೀಡಾದ ಅಮಾಯಕರ ಕುಟುಂಬಕ್ಕೆ ಪರಿಹಾರ ನೀಡದೇ ಇರುವುದು ಆಡಳಿತರೂಢ ಬಿಜೆಪಿ ಸರ್ಕಾರದ ಇಬ್ಬಗೆ ನೀತಿ ಅಲ್ಲವೇ ಎಂದು ಪ್ರಶ್ನಿಸಿದರು.

ಅಶಾಂತಿ ಸೃಷ್ಟಿ: ಕಸಬಾ ಅಧ್ಯಕ್ಷ ಅಪ್ಪಿವೆಂಕಟೇಶ್‌, ಕೆಪಿಸಿಸಿ ಸದಸ್ಯ ಹೇಮಂತರಾಜ್‌ ಮಾತನಾಡಿ, ದೊಡ್ಡಬೆಳವಂಗಲ ಘಟನೆಯನ್ನು ಖಂಡಿಸಿದ್ದು, ಅನ್ಯ ಪಕ್ಷಗಳು ಯುವ ಸಮುದಾಯವನ್ನು ದಿಕ್ಕು ತಪ್ಪಿಸಿ, ತಾಲೂಕಿನಲ್ಲಿ ಅಶಾಂತಿ ಸೃಷ್ಟಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಪಿ.ಜಗನಾಥ್‌, ಪ್ರಧಾನ ಕಾರ್ಯದರ್ಶಿ ಅಖೀಲೇಶ್‌, ಸೇವಾದಳದ ಜಿಲ್ಲಾಧ್ಯಕ್ಷ ಕಾಂತರಾಜ್‌, ನಗರಸಭೆ ಸದಸ್ಯ ನಾಗರಾಜ್‌, ಮುಖಂಡರಾದ ಕೆ.ಎಂ. ಕೃಷ್ಣಮೂರ್ತಿ, ರಾಮಚಂದ್ರರೆಡ್ಡಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next