Advertisement

Karnataka- ಕಾಂಗ್ರೆಸ್‌ ಅವಸಾನದ ಹಂತಕ್ಕೆ :ರವಿ

11:16 PM Jun 22, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಗಳನ್ನು ವಾಪಸ್‌ ಪಡೆಯಲು ಕಾಂಗ್ರೆಸ್‌ ನಿರ್ಧರಿಸಿದೆ. 135 ಸ್ಥಾನ ಪಡೆದರೂ ಕಾಂಗ್ರೆಸ್‌ ಆಡಳಿತದಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲದ ಆಡಳಿತವೇ ಕಾಂಗ್ರೆಸ್‌ನ ಅವಸಾನಕ್ಕೆ ಕಾರಣವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಗುರುವಾರ ನಡೆದ “ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹುಕಾಲ ದೇಶವನ್ನು ಆಳಿದ ಕಾಂಗ್ರೆಸ್‌ ತನ್ನ ಸಾಧನೆ ಮುಂದಿಟ್ಟು ಮತಯಾಚನೆ ನಡೆಸುವ ಬದಲಿಗೆ ಜನರಿಗೆ ಗ್ಯಾರಂಟಿ ಕಾರ್ಡ್‌ನ ಆಮಿಷ ನೀಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ನ ಈ ಮಾಯಾ ಯುದ್ಧ ತಂತ್ರವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತೆವು. ಈ ಚುನಾವಣೆಯ ಸೋಲು ತಾತ್ಕಾಲಿಕ ಎಂದರು.
ಮೋದಿ ಮತ್ತೆ ಪ್ರಧಾನಿಯಾಗಬೇಕು

2024ರ ಲೋಕಸಭಾ ಚುನಾವಣೆ ಬಿಜೆಪಿ ಮಾತ್ರವಲ್ಲ, ದೇಶದ ಹಿತದೃಷ್ಟಿಯಿಂದಲೂ ಪ್ರಮುಖವಾದುದು. ದೇಶ ಉಳಿಯಬೇಕಾದರೆ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ಈ ವಿಚಾರವನ್ನು ಕಾರ್ಯಕರ್ತರು ಮನೆಮನೆಗೆ ತೆರಳಿ ಜನತೆಗೆ ಮನವರಿಕೆ ಮಾಡಬೇಕು ಎಂದರು.

9 ವರ್ಷದ ಅವಧಿಯಲ್ಲಿ ಕೇಂದ್ರ ಸರಕಾರ ಜನಧನ ಯೋಜನೆಯಲ್ಲಿ 45 ಕೋಟಿ ಬಡವರಿಗೆ ಬ್ಯಾಂಕ್‌ ಖಾತೆ, 12 ಕೋಟಿ ಜನರಿಗೆ ಉಜ್ವಲ ಯೋಜನೆ, ದೀನ್‌ದಯಾಳ್‌ ವಿದ್ಯುದೀಕರಣ ಯೋಜನೆ, ಜಲಜೀವನ್‌ ಮಿಷನ್‌ ಯೋಜನೆ, ಬೇಟಿ ಬಚಾವೊ-ಬೇಟಿ ಪಡಾವೊ, ಸುಕನ್ಯಾ ಸಮೃದ್ಧಿ, ಪಿಎಂ ಸ್ವನಿಧಿ, ಆವಾಸ್‌ ಯೋಜನೆ ಜಾರಿಗೊಳಿಸಲಾಗಿದೆ. ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ಪಂಚಕ್ಷೇತ್ರಗಳ ಅಭಿವೃದ್ಧಿ, ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮೊದಲಾದ ಹಲವು ಸಾಧನೆ ಮಾಡಿದೆ ಎಂದರು.

Advertisement

ಸಮಾನ ನಾಗರಿಕ ಸಂಹಿತೆ ಜಾರಿ
ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು ಡಾ| ಬಿ.ಆರ್‌. ಅಂಬೇಡ್ಕರ್‌ ಕೂಡ ಅಭಿಪ್ರಾಯಪಟ್ಟಿದ್ದರು. ದೇಶ ಉಳಿಯಬೇಕಾದರೆ ಸಮಾನ ನಾಗರಿಕ ಸಂಹಿತೆ ಅಗತ್ಯ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಿದೆ. ಅದಕ್ಕಾಗಿ ಜನತೆಯಿಂದ ಸಲಹೆ ಕೇಳಿದೆ. ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ. ಪ್ರಸ್ತಾವನೆಗೈದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್‌ ಶೆಟ್ಟಿ ಕಣ್ಣೂರು ಸ್ವಾಗತಿಸಿ, ಕಸ್ತೂರಿ ಪಂಜ ವಂದಿಸಿದರು. ರಾಮದಾಸ ಬಂಟ್ವಾಳ ನಿರ್ವಹಿಸಿದರು.

ಮೋದಿಯವರನ್ನು ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ರಾ: ಸಿ.ಟಿ. ರವಿ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 9 ವರ್ಷಗಳಲ್ಲಿ ಹಲವು ಯೋಜನೆಗಳನ್ನು ಜಾರಿಗಳಿಸಿದ್ದು, ಯಾವುದನ್ನೂ ಟಾಂಟಾಂ ಹೊಡೆದು ಅನುಷ್ಠಾನ ಮಾಡಿಲ್ಲ. ಯಾರಿಗೆ ಅಗತ್ಯವಿದೆ ಅಂತಹವರನ್ನು ಗುರುತಿಸಿ ಕೊಟ್ಟಿದ್ದಾರೆ. ಆದರೆ ಚುನಾವಣೆಗೆ ಮುನ್ನ ಗ್ಯಾರಂಟಿಗಳ ಡಂಗುರ ಹೊಡೆದವರು ಈಗ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಆರೋಪ ಹೊರಿಸುತ್ತಿರುವುದೇಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

2014ರಿಂದಲೇ ಕೇಂದ್ರ ಸರಕಾರ ತನ್ನ ಪಾಲಿನ 5 ಕೆಜಿ ಅಕ್ಕಿ ಕೊಡುತ್ತಿದೆ. ಆದರೆ ಕಾಂಗ್ರೆಸ್‌ ಅಕ್ಕಿಯ ವಿಚಾರದಲ್ಲಿ ರಾಜಕಾರಣ ಮಾಡುವ ದುರುದ್ದೇಶ ಹೊಂದಿದೆ. ಪ್ರಧಾನಿಯವರ ಒಪ್ಪಿಗೆ ಪಡೆದು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್‌ ಘೋಷಣೆ ಮಾಡಿದೆಯೇ ಎಂದು ಪ್ರಶ್ನಿಸಿದ ಅವರು, ಮುಂಗಾರು ಮಳೆಯ ಕೊರತೆಯನ್ನು ಗಮನಿಸಿ ಕೇಂದ್ರ ಸರಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ ಕೆಲವೊಂದು ನಿರ್ಣಯಗಳನ್ನು ಕೈಗೊಂಡಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಸರಕಾರಗಳೂ ಅಕ್ಕಿಗೆ ಬೇಡಿಕೆ ಇಟ್ಟಿವೆ. ಅವರಿಗೂ ಕೇಂದ್ರ ಸರಕಾರ ಕೊಟ್ಟಿಲ್ಲ ಎಂದರು.

ಕೇಂದ್ರ ಸರಕಾರ ಸರ್ವರ್‌ ಹ್ಯಾಕ್‌ ಮಾಡಿದೆ ಎನ್ನುವ ಕಾಂಗ್ರೆಸ್‌ನ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇನ್ನು ಸ್ವಲ್ಪ ದಿನ ಕಳೆದರೆ ನಮ್ಮ ಮೆದುಳು ಕೂಡ ಹ್ಯಾಕ್‌ ಮಾಡಿದ್ದಾರೆ ಹಾಗಾಗಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದೇವೆ ಎಂದು ಹೇಳುವ ಸಾಧ್ಯತೆಯೂ ಇದೆ ಎಂದರು.

ರಾಜ್ಯದಲ್ಲಿ ಬಿಜೆಪಿಗೆ ಮತ ಕಡಿಮೆಯಾಗಿ ಅಧಿಕಾರ ಕಳೆದುಕೊಂಡಿಲ್ಲ. ಆದರೆ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಹೀನಾಯ ಸೋಲು ಅಲ್ಲ. ಪ್ರತಾಪಸಿಂಹ, ಯೋಗೀಶ್ವರ್‌ ಹೊಂದಾಣಿಕೆ ರಾಜಕಾರಣ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ವೈಫಲ್ಯ ಮುಚ್ಚಲು ಗೊಂದಲ ಸೃಷ್ಟಿ
ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ತನ್ನ ವೈಫಲ್ಯವನ್ನು ಮರೆಮಾಚಲು, ಗೊಂದಲಗಳನ್ನು ಸೃಷ್ಟಿಸುತ್ತಿದೆ. ಈಗಾಗಲೇ ಸರಕಾರದ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಎಡಪಂಥೀಯರ ಕಪಿಮುಷ್ಟಿಯಲ್ಲಿ ಸಿಲುಕಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಕ್ಕಳು, ಹೆತ್ತವರು, ಶಿಕ್ಷಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪಠ್ಯ ಪರಿಷ್ಕರಣೆಗೆ ಮುಂದಾಗಿರುವುದು ಅಕ್ಷಮ್ಯ ಎಂದರು.
ಮುಖಂಡರಾದ ಆಗರ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕೇಶವ ಪ್ರಸಾದ್‌, ವೇದವ್ಯಾಸ ಕಾಮತ್‌, ಉದಯಕುಮಾರ್‌ ಶೆಟ್ಟಿ, ಸುದರ್ಶನ ಎಂ. ಉಪಸ್ಥಿತರಿದ್ದರು.

ಮೋದಿ ಸಾಧನೆ ಮನೆಮನೆಗೆ
ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ “ಮೋದಿ ಎಟ್‌ 9′ ಕಾರ್ಯಕ್ರಮದ ಮೂಲಕ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಪಕ್ಷ ಮಾಡಲಿದೆ. ರಾಜ್ಯದಲ್ಲಿ ಜು. 30ರ ವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯ ಮತ್ತು ಕೇಂದ್ರ ನಾಯಕರನ್ನು ಒಳಗೊಂಡ 7 ತಂಡಗಳು ರಾಜ್ಯದ ಉದ್ದಗಲಕ್ಕೆ ತೆರಳಿ ಕಾರ್ಯಕರ್ತರನ್ನು ಭೇಟಿಯಾಗಲಿವೆ ಎಂದು ಸಿ.ಟಿ. ರವಿ ತಿಳಿಸಿದರು.

ಮೋದಿಯವರು ಆಡಳಿತ ಬಂದ ಬಳಿಕ ಪ್ರಜಾಪ್ರಭುತ್ವಕ್ಕೆ ಬಲ ಬಂದಿದೆ. ವಂಶಪಾರಂಪರ್ಯದ ರಾಜಕಾರಣಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಕಾಂಗ್ರೆಸ್‌ನಿಂದ ಟೂಲ್‌ಕಿಟ್‌ ರಾಜಕೀಯ
ಉಡುಪಿ: ಕೇಂದ್ರದಲ್ಲಿ 2024ಕ್ಕೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಾರದಿದ್ದರೆ ದೇಶವನ್ನೇ ಕಳೆದುಕೊಳ್ಳಬೇಕಾದೀತು. ತುಕುಡೆ ಗ್ಯಾಂಗ್‌ಗಳು ದೇಶವನ್ನು ಸೋಲಿಓಸಲು ಹೊರಟಿವೆ. ಟೂಲ್‌ ಕಿಟ್‌ ರಾಜಕೀಯದ ಭಾಗವಾಗಿಯೇ ರಾಹುಲ್‌ ಗಾಂಧಿ ಹೇಳಿಕೆ ನೀಡುತ್ತಿದ್ದಾರೆ. ಔರಂಗಜೇಬನಿಗೂ ಕಾಂಗ್ರೆಸ್‌ಗೂ ಯಾವುದೇ ವ್ಯತ್ಯಾಸ ಇಲ್ಲ. ಆತನ ತತ್ವಾದರ್ಶಗಳನ್ನು ಜೀವಂತವಾಗಿರಿಸುವ ಕೆಲಸ ಕಾಂಗ್ರೆಸ್‌ನಿಂದ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷ ಕಾಲ ಜನಪರ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಉಡುಪಿಯ ಕಿದಿಯೂರು ಹೊಟೇಲ್‌ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಾಗಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಹೋರಾಡಬೇಕು. ಐದೂ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಉಡುಪಿ ಜಿಲ್ಲೆಯವರು ಜಯಗಳಿಸಿದ್ದು, ಅದನ್ನು ರಾಜ್ಯಕ್ಕೂ ವಿಸ್ತರಿಸುವ ವಿಶ್ವಾಸವಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಪಾಕ್‌ಗೆ ಹೋಗಲಿ
ದೇಶದಲ್ಲಿ ಏಕರೂಪ ಶಾಸನ ಜಾರಿಯಾಗಬೇಕು. ಇದನ್ನು ವಿರೋಧಿಸುವವರು ಪಾಕಿಸ್ಥಾನಕ್ಕೆ ಹೋಗಬಹುದು. ಮಹಮ್ಮದ್‌ ಜಿನ್ನಾರಂತಹ ಮನಸ್ಥಿತಿಯಿರುವವರು ಇದನ್ನು ವಿರೋಧಿಸುತ್ತಾರೆ. ಜನತಾ ಜನಾರ್ದನನ ರೂಪದಲ್ಲಿ ಶ್ರೀಕೃಷ್ಣ ಬಿಜೆಪಿ ಪರವಾಗಿ ನಿಂತು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾನೆ ಎಂದರು.

ಮೋದಿ ದುಡ್ಡು; ಸಿದ್ದು ಜಾತ್ರೆ!
ದೇಶದ ಜನರ ಜೀವಕ್ಕೆ ಗ್ಯಾರಂಟಿ ನೀಡಿದ್ದು ಮೋದಿ. ಆದರೆ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸದ್ದಿಲ್ಲದೆ ಬೆಲೆ ಏರಿಕೆ ಮಾಡುತ್ತಿದೆ. ಒಟ್ಟಿನಲ್ಲಿ “ಮೋದಿ ದುಡ್ಡು ಸಿದ್ದರಾಮಯ್ಯ ಜಾತ್ರೆ’ ಎಂಬ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದರು.

15 ಕೆಜಿ ಅಕ್ಕಿ ನೀಡಲಿ
ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮತಾಂತರ ನಿಷೇಧ ಕಾಯ್ದೆ ರದ್ದು ಪಡಿಸಿದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ. ಕಾಂಗ್ರೆಸ್‌ ಸರಕಾರ ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೇ ಜಾರಿಗೆ ತರಬೇಕು. ಕೇಂದ್ರ ಸರಕಾರದ ಐದು ಕೆಜಿ ಅಕ್ಕಿಯಲ್ಲದೇ ರಾಜ್ಯ ಸರಕಾರವೇ 10 ಕೆಜಿ ಅಕ್ಕಿ ಸಹಿತ ಒಟ್ಟು 15 ಕೆಜಿ ಅಕ್ಕಿಯನ್ನು ರಾಜ್ಯದ ಜನತೆಗೆ ನೀಡಬೇಕು ಎಂದರು.

ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅಧ್ಯಕ್ಷತೆ ವಹಿಸಿ, ಪ್ರಸ್ತಾವನೆಗೈದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್‌ ಶೆಟ್ಟಿ ಮತ್ತು ಸದಾನಂದ ಉಪ್ಪಿನಕುದ್ರು ನಿರೂಪಿಸಿದರು. ಸತ್ಯಾನಂದ ನಾಯಕ್‌ ವಂದಿಸಿದರು.

ಸ್ಕ್ಯಾಮ್‌ ಇಲ್ಲ; ಸ್ಕೀಂ ಮಾತ್ರ!
ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಆಕಾಶ, ಭೂಮಿ, ಪಾತಾಳದಲ್ಲಿ ಹಗರಣ ನಡೆದಿದೆ. ಆದರೆ ಮೋದಿ ಪ್ರಧಾನಿಯಾದ ಬಳಿಕ ಎಲ್ಲ ಸ್ಕ್ಯಾಮ್‌ಗಳು ನಿಂತುಹೋಗಿ ವಿವಿಧ ಸ್ಕೀಂಗಳು ಜನರಿಗೆ ಸಿಗುತ್ತಿವೆ ಎಂದು ಸಿಟಿ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next