Advertisement

ರಾಹುಲ್‌ಗಾಂಧಿ ಸದಸ್ಯತ್ವ ರದ್ದು: ಕಾಂಗ್ರೆಸ್‌ ಪ್ರತಿಭಟನೆ

09:50 PM Jul 07, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಕೇಂದ್ರ ಸರಕಾರ ಮಾಡುತ್ತಿರುವ ಹುನ್ನಾರ ಖಂಡಿಸಿ ಶುಕ್ರವಾರ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿ ಮುಂಭಾಗ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ವಿಧಾನಸೌಧ ಮುಂಭಾಗ ಗಾಂಧಿ ಪ್ರತಿಮೆ ಮುಂದೆಯೂ ಕಾಂಗ್ರೆಸ್‌ ಶಾಸಕರು, ಸಚಿವರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಲೋಕಸಭೆ ಚುನಾವಣೆಯಲ್ಲಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದಿರುವ ರಾಹುಲ್‌ ಗಾಂಧಿ ಅವರ ಅನರ್ಹತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ಅಧ್ಯಾಯ. ನಮ್ಮ ರಾಜ್ಯದಲ್ಲಿ ಮಾಡಿದ ಭಾಷಣ ಇಟ್ಟುಕೊಂಡು ಬಿಜೆಪಿ ಕುತಂತ್ರ ಮಾಡಿದೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಿರೀಕ್ಷೆ ಇತ್ತು. ತೀರ್ಪಿನ ವಿಚಾರವಾಗಿ ನಾವು ಮಾತನಾಡುವುದಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಪ್ರಧಾನಿ ಆಗಬಹುದಿತ್ತು. ಆದರೆ, ದೇಶಕ್ಕೆ ಆರ್ಥಿಕ ತಜ್ಞ ಅಗತ್ಯವಿದೆ ಎಂದು ಅಧಿಕಾರ ತ್ಯಾಗ ಮಾಡಿದರು. ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆ ಮೂಲಕ ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿ ಭಾರತ ಒಂದುಗೂಡಿಸಲು ಪ್ರಯತ್ನಿಸಿದರು. ಅದರಿಂದ ಅವರಿಗೆ ಸಿಕ್ಕ ಜನಬೆಂಬಲ ಸಹಿಸದೆ ಬಿಜೆಪಿ ಅವರ ಸದಸ್ಯತ್ವ ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆ ವೇಳೆ ಗೃಹ ಸಚಿವ ಡಾ| ಜಿ. ಪರಮೇಶ್ವರ, ಕೆ.ಎಚ್‌. ಮುನಿಯಪ್ಪ, ಎನ್‌.ಎಸ್‌. ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್‌. ಚಂದ್ರಪ್ಪ, ಶಾಸಕರಾದ ರಂಗನಾಥ್‌, ಶ್ರೀನಿವಾಸ್‌, ನಂಜೇಗೌಡ, ತನ್ವೀರ್‌ ಸೇs…, ಶಿವಣ್ಣ ಹಾಗೂ ಇತರರು ಇದ್ದರು.

ಬಿಜೆಪಿ ಒಡೆದ ಮನೆ
ಬಿಜೆಪಿ ಸೋಲಿನಿಂದ ಹತಾಶರಾಗಿ ಒಡೆದ ಮನೆ ಆಗಿದೆ. ಅವರಿಗೆ ವಿಪಕ್ಷದ ನಾಯಕನ ಆಯ್ಕೆ ಮಾಡುವ ಸಾಮರ್ಥ್ಯ ಇಲ್ಲವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next