Advertisement

ದಿಗ್ವಿಜಯ್‌, ಡಿಕೆಶಿ ಬಂಧನಕ್ಕೆ ಕಾಂಗ್ರೆಸ್‌ ಆಕ್ಷೇಪ

10:56 PM Mar 18, 2020 | Team Udayavani |

ವಿಧಾನಸಭೆ: ಮಧ್ಯಪ್ರದೇಶ ಶಾಸಕರು ಉಳಿದುಕೊಂಡಿರುವ ನಗರದ ಹೊರವಲಯದ ಹೋಟೆಲ್‌ ಬಳಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಡಾ.ರಂಗನಾಥ್‌ ಅವರನ್ನು ಬಂಧಿಸಿದ ವಿಚಾರ ಸದನದಲ್ಲಿ ಪ್ರಸ್ತಾಪವಾಗಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು.

Advertisement

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ್‌ ವಿಷಯ ಪ್ರಸ್ತಾಪಿಸಿದಾಗ ಸಚಿವರಾದ ಕೆ.ಎಸ್‌ ಈಶ್ವರಪ್ಪ, ಜಗದೀಶ್‌ ಶೆಟ್ಟರ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಮಾತನಾಡಿ, ಈ ಮನೆಯ ಸದಸ್ಯರಾದ ಡಿಕೆಶಿ ಸೇರಿ ಹಲವರನ್ನು ಬಂಧಿಸಲಾಗಿದೆ. ಈ ವಿಷಯ ಸ್ಪೀಕರ್‌ ಗಮನಕ್ಕೆ ಬಂದಿದೆಯಾ? ಎಂದು ಪ್ರಶ್ನಿಸಿದರು.

ಇದು ಕಾಂಗ್ರೆಸ್‌-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಆದರೆ, ಸ್ಪೀಕರ್‌ ಚರ್ಚೆಗೆ ಅವಕಾಶ ನೀಡಲಿಲ್ಲ. ಗದ್ದಲದ ನಡುವೆಯೇ ವರದಿ ಮಂಡನೆ, ವಿಧೇಯಕ ಮಂಡನೆ, ಕಾಗದ ಪತ್ರಗಳ ಮಂಡನೆ ನಡೆಸಿ, ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಸಾರ್ವಜನಿಕರಿಗೆ ಪರಿಷತ್‌ ಕಲಾಪ ವೀಕ್ಷಣೆಗೆ ನಿಷೇಧ
ವಿಧಾನ ಪರಿಷತ್‌: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಬುಧವಾರ ಸದನದಲ್ಲಿ ಈ ಕುರಿತು ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿಯವರು ಪ್ರಕಟಣೆ ಹೊರಡಿಸಿದ್ದು, ಕೊರೊನಾ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ವೀಕ್ಷಕರ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಶಾಸಕರು ಹಾಗೂ ಸಚಿವರು ವೀಕ್ಷಕರ ಗ್ಯಾಲರಿ ಪ್ರವೇಶ ಕೋರಿ ಮನವಿ ಸಲ್ಲಿಸಬಾರದು. ಪಾಸ್‌ ಕೂಡ ವಿತರಿಸಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರ್ಗಾವಣೆ ವಿಧೇಯಕಕ್ಕೆ ಪರಿಷತ್‌ ಅನುಮೋದನೆ
ವಿಧಾನ ಪರಿಷತ್‌: ಶಿಕ್ಷಕರ ಹೊಸ ನೇಮಕಾತಿ ಅಥವಾ ಬಡ್ತಿ ಮೇಲೆ ಮೊದಲ ಸ್ಥಳ ನಿಯುಕ್ತಿ ಸಂದರ್ಭದಲ್ಲಿ 10 ವರ್ಷ ಗ್ರಾಮೀಣ ಸೇವೆ ಕಡ್ಡಾಯ, ಮಾಜಿ ಸೈನಿಕ, ಹುತಾತ್ಮ ಸೈನಿಕ ಪತ್ನಿಗೆ ವಿನಾಯ್ತಿ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುವ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ-2020ಕ್ಕೆ ವಿಧಾನ ಪರಿಷತ್‌ನಲ್ಲಿ ಬುಧವಾರ ಅನುಮೋದನೆ ದೊರೆತಿದೆ. ವಿಧಾನಸಭೆಯಲ್ಲಿ ಅನುಮೋದನೆಗೊಂಡಿರುವ ಈ ವಿಧೇಯಕವನ್ನು ಬುಧವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಪರಿಷತ್‌ನಲ್ಲಿ ಮಂಡಿಸಿದರು. ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿಯವರು ಧ್ವನಿಮತಕ್ಕೆ ಹಾಕಿ, ಸದನದ ಅನುಮತಿ ಪಡೆದು, ಅಂಗೀಕರಿಸಿದರು.

Advertisement

ಬೆಂಗಳೂರಿನಲ್ಲಿ ಪ್ಯಾಂಟು-ಶರ್ಟು ಹಾಕಿರುವ ಕುರುಬರನ್ನು ನೋಡಿ ಮಾತನಾಡಬೇಡಿ. ಕುರಿ ಕಾಯುತ್ತ ಊರೂರು ಅಲೆಯುತ್ತಿರುವ ಕುರುಬರ ಬಗ್ಗೆ ಹೇಳಿ.
-ಎಚ್‌.ಎಂ.ರೇವಣ್ಣ, ಕಾಂಗ್ರೆಸ್‌ ಸದಸ್ಯ

ನಮ್ಮಲ್ಲಿ (ಕುರುಬರಲ್ಲಿ) ಉಪಜಾತಿ ಇಲ್ಲ. ನಮಗಿರುವುದು ಒಂದೇ ಸಂಘ, ಅದು ಕರ್ನಾಟಕ ಪ್ರದೇಶ ಕುರುಬರ ಸಂಘ, ಇರುವುದೊಂದೆ ಪೀಠ ಅದು ಕಾಗಿನೆಲೆ ಪೀಠ.
-ರಘುನಾಥ ಮಲ್ಕಾಪುರೆ, ಬಿಜೆಪಿ ಸದಸ್ಯ

ಮೀಸಲಾತಿ ಯಾರಿಗೆ ಸಿಗಬೇಕಿತ್ತೂ ಅವರಿಗೆ ಸಿಗುತ್ತಿಲ್ಲ. ನಾವಿಂದು ಮೀಸಲಾತಿ, ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇವೆ. ಕುರಿ ದೊಡ್ಡಿಯ ಕುರುಬರ ಜೊತೆ, ಮಲ ಹೋರುವವರ ಜೊತೆ ನಾವು ಬೀಗತನ ಮಾಡ್ತೇವಾ? ಮದುವೆ ಸಂಬಂಧ, ರಕ್ತ ಸಂಬಂಧ ಬೆಳೆಸುತ್ತಿದ್ದೇವಾ? 
-ಗೋವಿಂದ ಕಾರಜೋಳ, ಡಿಸಿಎಂ

ಕೆಳಗಿನವರಿಗೆ ಮೀಸಲಾತಿ ತಲುಪಬೇಕು ನಿಜ. ಆದರೆ, ಮೀಸಲಾತಿಯ ಲಾಭ ಪಡೆದು ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತವರು ಇನ್ನೂ ಏಳುತ್ತಲೇ ಇಲ್ಲ. ಎರಡನೇ ಮತ್ತು ಮೂರನೇ ಪಂಕ್ತಿಯವರು ಕಾಯುತ್ತಲೇ ಇದ್ದಾರೆ.
-ಆಯನೂರು ಮಂಜುನಾಥ, ಬಿಜೆಪಿ ಸದಸ್ಯ

ನೀನು (ಕೆ.ಪಿ ನಂಜುಂಡಿ) ಸಾವಿರ ಕೋಟಿ ಒಡೆಯ. ನಿನ್ಯಾವ ಹಿಂದುಳಿದವನು?
-ಬಸವರಾಜ ಹೊರಟ್ಟಿ, ಜೆಡಿಎಸ್‌ ಸದಸ್ಯ.

ನಿಮ್ಮ (ಹೊರಟ್ಟಿ) ಮುಂದೆ ನಾನು ಇನ್ನೂ ಬಡವ.
-ಕೆ.ಪಿ. ನಂಜುಂಡಿ, ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next