Advertisement

ಕೋವಿಡ್ ನಿರ್ವಹಣೆ : ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ್ ಖರ್ಗೆ 6 ಸಲಹೆ  

06:40 PM May 09, 2021 | Team Udayavani |

ನವದೆಹಲಿ: ದೇಶಕ್ಕೆ ಅಪ್ಪಳಿಸಿರುವ ಕೋವಿಡ್ ಎರಡನೇ ಅಲೆಯ ನಿರ್ವಹಣೆ ಕುರಿತು ಕಾಂಗ್ರೆಸ್ ಸಂಸದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರು ಸಲಹೆ ನೀಡಿದ್ದಾರೆ.

Advertisement

ಭಾನುವಾರ ( ಮೇ.09) ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಖರ್ಗೆ, ಜನ ಸಾಮಾನ್ಯರಿಗೆ, ಮಧ್ಯಮ ವರ್ಗದ ಕುಟುಂಬಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡುತ್ತಿವೆ. ತಮ್ಮ ಪ್ರೀತಿ ಪಾತ್ರರನ್ನು ಉಳಿಸಿಕೊಳ್ಳಲು ಆಸ್ತಿ, ಆಭರಣ ಮಾರುತ್ತಿದ್ದಾರೆ.ಜೀವಮಾನವಿಡಿ ಬೆವರು ಸುರಿಸಿ ಉಳಿತಾಯ ಮಾಡಿದ ಹಣವನ್ನೆಲ್ಲ ಖರ್ಚು ಮಾಡುವಂತಾಗಿದೆ. ಇಂತಹ ಕುಟುಂಬಗಳಿಗೆ ಸರ್ಕಾರ ನೆರವು ನೀಡಬೇಕು. ಎಲ್ಲರಿಗೂ ಸುಲಭವಾಗಿ ಚಿಕಿತ್ಸೆ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕೋವಿಡ್ ಸೃಷ್ಟಿಸಿರುವ ಬಿಕ್ಕಟ್ಟು ಅಸಾಧಾರಣ ರಾಷ್ಟ್ರೀಯ ಯುದ್ಧದಂತಹ ಪರಿಸ್ಥಿತಿ ನಿರ್ಮಿಸಿದೆ.ಇದರ ವಿರುದ್ಧ ನಾಗರಿಕ ಸಮಾಜ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರ ತನ್ನ ಕರ್ತವ್ಯವನ್ನು ಮರೆತಂತಿದೆ ಎಂದು ಖರ್ಗೆ ಕಿಡಿ ಕಾರಿದ್ದಾರೆ.

ಸಾಮೂಹಿಕ ಮತ್ತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಸಮಗ್ರ ನೀಲನಕ್ಷೆಯನ್ನು ರೂಪಿಸಿ ಕೊರೋನಾ ಸಾಂಕ್ರಮಿಕ ರೋಗ ನಿಭಾಯಿಸಲು ಕ್ರಮಕೈಗೊಳ್ಳಬೇಕು. ಎಲ್ಲಾ ಭಾರತೀಯರಿಗೆ ಲಸಿಕೆ ವ್ಯವಸ್ಥೆ ಮಾಡಬೇಕು. ಲಸಿಕೆಗಾಗಿ ನಿಗದಿಪಡಿಸಿದ 35 ಸಾವಿರ ಕೋಟಿ ರೂಪಾಯಿ ಬಳಸಿಕೊಳ್ಳಲು ಸರ್ವಪಕ್ಷ ಸಭೆ ಕರೆಯಬೇಕೆಂದು ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಜೊತೆಗೆ ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈಗ ಲಸಿಕೆಗಳಿಗೆ ಶೇಕಡ 5 ರಷ್ಟು, ಪಿಪಿಇ ಕಿಟ್ ಗಳಿಗೆ ಶೇಕಡ 5 -12 ರಷ್ಟು, ಅಂಬುಲೆನ್ಸ್ ಗಳಿಗೆ ಶೇಕಡ 28, ಆಮ್ಲಜನಕ ಸಾಂದ್ರಕಗಳಿಗೆ ಶೇಕಡ 12 ರಷ್ಟು ತೆರಿಗೆ ಇದೆ. ಇದನ್ನು ಮನ್ನಾ ಮಾಡಬೇಕೆಂದು ಹೇಳಲಾಗಿದೆ.

Advertisement

ನಿರುದ್ಯೋಗಿ ವಲಸಿಗರಿಗೆ ನೆರವಾಗಲು ಪರಿಹಾರ ಸಾಮಗ್ರಿ ವಿತರಣೆ ಹೆಚ್ಚಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ ವೇತನ ಹೆಚ್ಚಿಸಬೇಕು ಮತ್ತು ಕೆಲಸದ ದಿನವನ್ನು 100 -200 ದಿನಗಳಿಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next