Advertisement

ಸತ್ಯ ಗೊತ್ತಾದ ಮೇಲೆ, ಆಕ್ರೋಶದ ಕಟ್ಟೆ ಒಡೆಯಲಿದೆ: ಎಚ್.ಕೆ.ಪಾಟೀಲ್

04:48 PM Oct 11, 2021 | Team Udayavani |

ಹಾವೇರಿ: ದೇಶದಲ್ಲಿ ಅಜಾರಕತೆ ಸೃಷ್ಟಿಯಾಗಿದೆ. ಇಂತಹ ಕೆಟ್ಟ ಆಡಳಿತವನ್ನು ಎಂದಿಗೂ ನೋಡಿಲ್ಲ. ಜನರಿಗೆ ಸತ್ಯ ಗೊತ್ತಾದ ಮೇಲೆ, ಆಕ್ರೋಶದ ಕಟ್ಟೆ ಒಡೆಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೋಮವಾರ ಕಿಡಿಕಾರಿದ್ದಾರೆ.

Advertisement

ಅವರು ಸೋಮವಾರ ಹಾನಗಲ್ಲ ಉಪಚುನಾವಣೆ ಹಿನ್ನಲೆಯಲ್ಲಿ ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಬಿಜೆಪಿ ರೈತ ವಿರೋಧಿ ಕೆಲಸ ಮಾಡಿದೆ. ರೈತರನ್ನು ಕೊಲೆ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕು ದುಸ್ಥರವಾಗಿದೆ. ಬಿಜೆಪಿ ಜನದ್ರೋಹಿ, ರೈತ ದ್ರೋಹಿ ಸರ್ಕಾರವಾಗಿದ್ದು, ಉತ್ತರಪ್ರದೇಶದಲ್ಲಿ ರೈತರು ಹೋರಾಡುತ್ತಿದ್ದರೆ ಗೃಹ ಸಚಿವರ ಮಗ ರೈತರ ಮೇಲೆ ಕಾರ್ ಚಲಾಯಿಸಿದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿಲ್ಲ.  ಪ್ರಿಯಾಂಕ‌ ಗಾಂಧಿ ಹೋರಾಟಕ್ಕೆ ಜನ ದನಿ ಗೂಡಿಸಲು ಹೋದರೆ ಅವರನ್ನು ಬಂಧಿಸುತ್ತಾರೆ. ಕಾಂಗ್ರೆಸ್ ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಿದೆ. ಬಿಜೆಪಿಗೆ ಈ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಅಧಿಕಾರ ಕಳೆದುಕೊಂಡಿದೆ ಎಂದು ದೂರಿದರು.

ಇದನ್ನೂ ಓದಿ:ಹುಣಸೂರು: ನಗರಸಭೆ ನೂತನ ಅದ್ಯಕ್ಷರಾಗಿ ಕಾಂಗ್ರೆಸ್ ನ ಸೌರಭ ಸಿದ್ದರಾಜು ಅವಿರೋಧ ಆಯ್ಕೆ

ಯಡಿಯೂರಪ್ಪ ಅವರನ್ನು ಎರಡು ವರ್ಷಾ ಅಧಿಕಾರ ಪೂರ್ಣಗೊಳಿಸಲು ಆಗಲಿಲ್ಲ. ಕಂಡಕ್ಟರ್ ಕಮ್ ಡ್ರೈವರ್ ಆಗಿದ್ದವನ ಮೇಲೆ ಐಟಿ ರೈಡ್ ಆದರೆ 4000 ಕೋಟಿ ರೂಪಾಯಿ ಆಸ್ತಿ ಪತ್ತೆ ಆಗಿದೆ. ಈ ಆಸ್ತಿ ಎಲ್ಲಿಂದ ಬಂತು? ಅಭಿವೃದ್ಧಿ ಕೆಲಸದ ಹೆಸರಿನಲ್ಲಿ ಬಿಜೆಪಿಯವರು  ಹಣ ಲೂಟಿ ಮಾಡಿರುವುದಕ್ಕೆ ಇನ್ನೊಂದು ಉದಾಹರಣೆ ಬೇಕೆ ಎಂದು ಪ್ರಶ್ನಿಸಿದರು.

Advertisement

ಹಣ ಸಂಗ್ರಹ ಮಾಡಿದ ಚೀಫ್ ಎಂಜನಿಯರ್ ಗಳು ಇದುವರೆಗೆ ಸಸ್ಪೆಂಡ್ ಆಗಿಲ್ಲ. ಸಸ್ಪೆಂಡ್ ಮಾಡಲು ಬಿಜೆಪಿ ಸರಕಾರ ಮಹೂರ್ತ ನೋಡುತ್ತಾ ಇದೆಯಾ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಹಾನಗಲ್ಲ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀನಿವಾಸ  ಮಾನೆ ಕಳೆದ ಮೂರು ವರ್ಷದಿಂದ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿದ್ದಾರೆ. ಅವರ ಬಗ್ಗೆ ಉತ್ತಮ ಫೀಡ್ ಬ್ಯಾಕ್ ನಮಗೆ ಬಂದಿದೆ ಎಂದರು.

ಆಡಳಿತ ಪಕ್ಷ ಕಾನೂನು ಬಾಹೀರ ಕೆಲಸ ಮಾಡೋ‌ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಮೂಖ ಪ್ರೇಕ್ಷಕರಾಗಿ ಸುಮ್ಮನೆ ಕುಳಿತುಕೊಳ್ಳದೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹಾನಗಲ್ ಬೈ ಎಲೆಕ್ಷನ್ ಗೆ ಕೆಲವರಿಗೆ ವಿಶೇಷ ಜವಾಬ್ದಾರಿ ‌ನೀಡಿದ್ದು ಹಾನಗಲ್ ಉಪ ಚುನಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷರನ್ನಾಗಿ ನನಗೆ ಜವಾಬ್ದಾರಿ ನೀಡಲಾಗಿದೆ. ಇಂದಿನಿಂದ ಸಮಿತಿ ಕೆಲಸ ಶುರು ಮಾಡಿದೆ ಎಂದರು.

ಬಿಜೆಪಿ ಸರಕಾರದಿಂದ ಸ್ವಾಯತ್ತ ಸಂಸ್ಥೆಗಳ ದುರಪಯೋಗ ಹೆಚ್ಚಿದ್ದು ಇಂದಿನ ಸರಕಾರದಲ್ಲಿ ಪಾರದರ್ಶಕತೆ ದೂರವಾಗಿದೆ. ಸತ್ಯವನ್ನು ಬಿಂಬಿಸಬೇಕಾದ ಜವಾಬ್ದಾರಿಯನ್ನು ಸಂಸ್ಥೆಗಳು ಕಳೆದುಕೊಂಡಿವೆ. ಅದರಲ್ಲೂ ಮಾಧ್ಯಮವು ಒಂದು. ಮಾಧ್ಯಮದ ಶಕ್ತಿಯನ್ನು ಕುಗ್ಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಟೀಕಿಸಿದರು.

ತೈಲ ಬೆಲೆ ಏರಿಕೆಗೆ ಆಯಿಲ್ ಬಾಂಡ್ ಕಾರಣವಾಗಿದ್ದರೆ, ಕೇಂದ್ರ ಸರಕಾರ ಜನರ ಪರವಾಗಿ ಹಣ ಸಂದಾಯ ಮಾಡಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ದೇಶದಲ್ಲಿ ಬೆಲೆ ಏರಿಕೆ ದುಷ್ಪರಿಣಾಮ  ಜನ ಎದುರಿಸುತ್ತಿದ್ದಾರೆ. ಜನಸಾಮಾನ್ಯರು ಜೀವನ‌ ಮಾಡುವುದು ಕಷ್ಟ ಆಗಿದೆ. ಬಡವರು ಗಳಿಸುವುದು ನೂರು ರೂಪಾಯಿ ಪೆಟ್ರೋಲ್ 110 ರೂ ಆದರೆ ಏನ್ ಮಾಡುವುದು ಎಂದು‌ ಪ್ರಶ್ನಿಸಿದರು.

ಶ್ರೀನಿವಾಸ ಮಾನೆ ಅವರು ಯುವ ನಾಯಕರಾಗಿದ್ದು ಶಾಸನ ಸಭೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಅವರು ಹಾನಗಲ್ ಗೆ ವಲಸೆ ಬಂದಿಲ್ಲ ಮೂರು ವರ್ಷಗಳಿಂದ ಇಲ್ಲಿಯೇ ನಿರಂತರ ಕೆಲಸ ಮಾಡಿದ್ದಾರೆ. ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ದೇಶದಲ್ಲಿ ಆಡಳಿತ ನಡೆಸುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ವಿಫಲವಾಗಿವೆ. ಮತ ಕೇಳುವ ಹಕ್ಕು ಬಿಜೆಪಿ‌ ಕಳೆದುಕೊಂಡಿದೆ. ಈ ಬಾರಿ ಕಾಂಗ್ರೆಸ್ ಗೆ ಎಲ್ಲ ವರ್ಗದ ಜನರ ಆಶೀರ್ವಾದ ಇದೆ. ಕಳೆದ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಅವರು ಕಡಿಮೆ ಅಂತರದಲ್ಲಿ ಸೋತಿದ್ದರು. ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಈ ಉಪಚುನಾವಣೆಯಲ್ಲಿ ನಮ್ಮ ಸರ್ವೇ ಮಾಹಿತಿ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಸುಮಾರು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next