ರಾಮನಗರ: ”ಎಪ್ರಿಲ್- ಮೇ ನಲ್ಲಿಬರುವ ಲೋಕಸಭಾ ಚುನಾವಣೆ ಕುರಿತು ರಾಜ್ಯಮಟ್ಟದ ನಾಯಕರನ್ನ ಕರೆದು ಪಕ್ಷದ ವರಿಷ್ಠರು ಚರ್ಚೆ ಮಾಡಿ ಮಾರ್ಗಸೂಚಿಗಳನ್ನ ಕೊಟ್ಟಿದ್ದು, ಪಕ್ಷಕೂಡ ಸಜ್ಜಾಗುತ್ತಿದೆ” ಎಂದು ಗುರುವಾರ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಸುರೇಶ್, ”ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಉಸ್ತುವಾರಿ ಪಟ್ಟ ನೀಡಿರೋ ಹೈಕಮಾಂಡ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದರು.
ನೈಸ್ ಹಗರಣ ಒಪ್ಪಿಸಲು ಮೋದಿ ಬಳಿ ಸಮಯ ಕೇಳಿರೋ ಎಚ್.ಡಿ.ಕುಮಾರಸ್ವಾಮಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ”ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಿಎಂ ಆಗಿದ್ದ ಸಮಯದಲ್ಲಿ ನೈಸ್ ರಸ್ತೆಗೆ ಯೋಜನೆಗೆ ಸಹಿ ಹಾಕಿರೋದು.ರಸ್ತೆಗೆ ಸಂಬಂಧಿಸಿದಂತೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದು ದೇವೇಗೌಡರು. ನೈಸ್ ರಸ್ತೆ ಪರ ಹೋರಾಟ, ವಿರೋಧ ಮಾಡಿರೋದು ಕುಮಾರಸ್ವಾಮಿ.ರೈತರಿಗೆ ತೊಂದರೆ ಕೊಡುತ್ತಿರುವುದು ಕುಮಾರಸ್ವಾಮಿ.ಪ್ರಧಾನ ಮಂತ್ರಿಗಳ ಬಳಿ ದರಾಳವಾಗಿ ಎಲ್ಲವನ್ನೂ ಹೇಳಬಹುದು” ಎಂದು ಟಾಂಗ್ ನೀಡಿದರು.
‘ಕಾಂಗ್ರೆಸ್ ನಾಯಕರು I.N.D.I.A. ಒಕ್ಕೂಟಕ್ಕಾಗಿ ರಾಜ್ಯ ಬಲಿ ಕೊಡುತ್ತಿದ್ದಾರೆ’ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಟ್ವೀಟ್ ಕುರಿತು ಪ್ರತಿಕ್ರಿಯಿಸಿ, ”ಅವರ ಟೀಕೆ ಟಿಪ್ಪಣಿಗೆ ಉತ್ತರ ಕೊಡಲು ಸಮಯವಿಲ್ಲ.ಮಾಜಿ ಸಿಎಂಗೆ ರಾಜ್ಯದ ಜನ ರೆಸ್ಟ್ ಕೊಟ್ಟಿದ್ದಾರೆ.ಈಗಾಗಿ ಅವರಿಗೆ ಬೇರೆ ಬೇರೆ ಅಲೋಚನೆಗಳು ಬರುತ್ತಿರುತ್ತವೆ.ಕೆಲಸ ಮಾಡಿ ಅಂತ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಿದ್ದಾರೆ.ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಸಲಹೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇವೆ” ಎಂದರು.
ಕಾಂಗ್ರೆಸ್ ಬಿಟ್ಟು ಹೋದವರು ಮರಳಿ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ”ನನಗೆ ಆ ಬಗ್ಗೆ ಮಾಹಿತಿ ಇಲ್ಲ.ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ತಿರ್ಮಾನ ಮಾಡುತ್ತಾರೆ.ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಷರತ್ತು ಇಲ್ಲದೇ ಬಂದ್ರೆ ಸೇರಿಸಿಕೊಳ್ಳುತ್ತಾರೆ.ನಾವು ಯಾರಿಗೂ ಬನ್ನಿ ಬನ್ನಿ ಅಂತ ಆಹ್ವಾನ ಮಾಡಿಲ್ಲ.ನಮ್ಮ ಗುರಿ ರಾಜ್ಯದ ಸೇವೆ ಮಾಡಲು ಮಾತ್ರ.ಉತ್ತಮ ಆಡಳಿತ ಕೊಡುವುದು.ಒಳ್ಳೆಯ ಆಡಳಿತ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ” ಎಂದರು.
ಚನ್ನಪಟ್ಟಣ ಜೆಡಿಎಸ್ ಮಾಜಿ ಶಾಸಕ ಅಶ್ವತ್ಥ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಅವರು ಮೊದಲಿನಿಂದಲೂ ನನಗೆ ಸ್ನೇಹಿತರು. ಆಗಾಗ ನಾವು ಭೇಟಿ ಮಾಡುತ್ತಿರುತ್ತೇವೆ.ಪಕ್ಷದ ಸೇರ್ಪಡೆ ಬಗ್ಗೆ ನನಗೆ ಮಾಹಿತಿ ಇಲ್ಲ.ಚುನಾವಣಾ ಸಂದರ್ಭದಲ್ಲೂ ಭೇಟಿ ಮಾಡಿದ್ದಾರೆ. ಸಮಯ ಇದ್ದಾಗ ಸಿಗುತ್ತಾರೆ ಅಷ್ಟೇ” ಎಂದರು.