Advertisement

Congress leader; ಸದನದಲ್ಲಿ ಎಚ್.ಕೆ.ಪಾಟೀಲ್ ಕೃತಿ ಬಿಡುಗಡೆ

06:46 PM Jan 13, 2024 | Team Udayavani |

ಧಾರವಾಡ : ಪ್ರಜಾಪ್ರಭುತ್ವದ ಮೌಲ್ಯ ಗಟ್ಟಿಗೊಳಿಸಬೇಕಾಗಿರುವ ವಿಧಾನ ಮಂಡಲ ಕಲಾಪದ ಉದ್ದೇಶವೇ ಹಾದಿ ತಪ್ಪುತ್ತಿದ್ದು, ಇದನ್ನು ಪುನರ್ ಸ್ಥಾಪಿಸಬೇಕಾದ ಅಗತ್ಯವಿದೆ ಎಂದು ಹಿರಿಯ ರಾಜಕಾರಣಿಗಳು ಅಭಿಪ್ರಾಯ ಪಟ್ಟರು.

Advertisement

ಕವಿವಿಯ ಸುವರ್ಣಮಹೋತ್ಸವ ಸಭಾಭವನದಲ್ಲಿ ಶನಿವಾರ ನಡೆದ ಸದನದಲ್ಲಿ ಎಚ್.ಕೆ.ಪಾಟೀಲ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ರಾಜಕೀಯ ಮುಖಂಡರು, ಸಚಿವರು, ಮಾಜಿ ಸಭಾಪತಿಗಳೆಲ್ಲರೂ ಪ್ರಸ್ತುತ ರಾಜಕೀಯ ವ್ಯವಸ್ಥೆ ಮತ್ತು ಸದನದ ಕಲಾಪದ ಕಾರ್ಯವೈಖರಿ ಕುರಿತು ತೀವ್ರ ಆತಂಕ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಚುನಾವಣೆ ಸುಧಾರಣೆ ಆಗದ ಹೊರತು ಪ್ರಜಾಪ್ರಭುತ್ವ ಸುಧಾರಣೆ ಅಸಾಧ್ಯ. ಜನಪ್ರತಿನಿಽಗಳನ್ನು ಆಯ್ಕೆ ಮಾಡುವ ಜನರು ಸುಧಾರಣೆಯಾಗಬೇಕು. ಈ ಮೊದಲು ವಿಧಾನ ಪರಿಷತ್ತು ಚಿಂತಕರ ಚಾವಡಿಯಾಗಿತ್ತು. ಆದರೆ ಇಂದು ಎಲ್ಲ ರಾಜಕೀಯ ಪಕ್ಷಗಳ ಪುನರ್ ವಸತಿ ಕೇಂದ್ರವಾಗಿದೆ. ಸದ್ಯಕ್ಕೆ ಹಣ ಇದ್ದವರು ಮತ್ತು ಜಾತಿ ಇದ್ದವರು ಮಾತ್ರ ರಾಜಕೀಯ ಮಾಡುವಂತಾಗಿದೆ. ಮೌಲ್ಯಗಳಿಗೆ ಬೇಲೆಯೇ ಇಲ್ಲದ ಸ್ಥಿತಿಗೆ ಬಂದಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಮೌಲ್ಯಗಳ ಅಧಃಪತನವೆಂದ ಎಚ್.ಕೆ.
ಸಮಾರಂಭದ ಕೇಂದ್ರಬಿಂದುವಾಗಿದ್ದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವ ಮೌಲ್ಯಗಳೇ ಅಧಃಪತನವಾಗುತ್ತಿದ್ದು, ಅವುಗಳನ್ನು ಪುನರ್ ನಿರ್ಮಿಸಬೇಕಾಗಿದೆ. ಸದನದಲ್ಲಿ ಗೌರವ ಯುತ ವರ್ತನೆಗಳೇ ಕಣ್ಮರೆಯಾಗುತ್ತಿದ್ದು, ಏಕವಚನ ಸಂಬೋಽಸುವ ಪ್ರವೃತ್ತಿ ಬೆಳೆಯುತ್ತಿದೆ. ಸದನದ ಕಾರ್ಯವೈಖರಿಯನ್ನು ಸರಿಯಾಗಿ ಯಾರು ತಿಳಿದುಕೊಳ್ಳುತ್ತಿಲ್ಲ. ಹೀಗಾಗಿದ ಸದನದ ಕಲಾಪದ ಮಹತ್ವವೇ ಕಡಿಮೆಯಾಗುತ್ತಿದೆ. ಇದರ ಗುಣಮಟ್ಟ ಎತ್ತಿರಿಸುವಂತಹ ಕೆಲಸ ಮತ್ತೆ ಮಾಡಬೇಕಾಗಿದೆ ಎಂದರು.

ಮಾಧ್ಯಮಗಳನ್ನು ಸದನ ಕಲಾಪದಿಂದ ದೂರವಿಡುವ ಪ್ರವೃತ್ತಿ ಕೂಡ ಹೆಚ್ಚಾಗಿದ್ದು, ಇದರಿಂದ ಪ್ರಜಾಪ್ರಭುತ್ವದಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಶಾಸಕ ತನ್ನ ಅವಧಿಯಲ್ಲಿ ಮಾಡಿದ ಕೆಲಸ ಮತ್ತು ಸದನದಲ್ಲಿ ಮಾತನಾಡಿದ ವಿಚಾರಗಳ ಮುದ್ರಿತ ಪ್ರತಿ ಮತ್ತು ವಿಡಿಯೋ ತುಣಕನ್ನು ಸಿದ್ದಗೊಳಿಸಿ ಕ್ಯೂರ್ ಕೋಡ್ ಮಾಡಿಸಿ ಅವರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದು ಸ್ಪೀಕರ ಮತ್ತು ಸಭಾಪತಿಗಳಿಗೆ ಎಚ್.ಕೆ.ಪಾಟೀಲ್ ಸಲಹೆ ನೀಡಿದರು.

Advertisement

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಎಚ್.ಕೆ.ಪಾಟೀಲ್ ಅವರ ಈ ಕೃತಿಗಳು ಇಂದಿನ ಶಾಸಕರಿಗೂ ಕೂಡ ಉತ್ತಮ ಮಾರ್ಗದರ್ಶಿಯಾಗಿವೆ. ಅಷ್ಟೇಯಲ್ಲ, ಮುಂದಿನ ಜನಾಂಗ ಸಂಸದೀಯ ಪ್ರಜಾಪ್ರಭುತ್ವ ಅರಿಕೊಳ್ಳಲು ಇದೊಂದು ದಾಖಲಾಗಿದೆ. ಇದನ್ನು ಗ್ರಂಥಾಲಯಗಳಿಗೆ ಸೇರಿಸುವ ಪ್ರಯತ್ನ ಮಾಡಲಾಗುವುದು.ಪ್ರಜಾಪ್ರಭುತ್ವದ ಮೌಲ್ಯಗಳ ಜತೆಗೆ ತಾಳ್ಮೆ, ಪ್ರಮಾಣಿಕತೆ ಮತ್ತು ಪರಿಶ್ರಮದ ಮೂಲಕ ರಾಜಕೀಯ ಕ್ಷೇತ್ರದಲ್ಲಿರುವ ಎಚ್.ಕೆ.ಪಾಟೀಲ್ ಅವರು ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಶಾಸಕಾಂಗ ಕಳಪೆ ಪ್ರದರ್ಶನ
ಚಿಂತಕ ಹಾಗೂ ಹಿರಿಯ ರಾಜಕಾರಣಿ ಬಿ.ಎಲ್.ಶಂಕರ್ ಮಾತನಾಡಿ,ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯಗಳನ್ನು ಕಟ್ಟಿಯಾಗಿ ಕಟ್ಟಿದ್ದು ಜವಾಹರಲಾಲ್ ನೆಹರು ಅವರು. ಆದರೆ ಇಂದು ನ್ಯಾಯಾಂಗವು ಶಾಸನ ವ್ಯವಸ್ಥೆಗಿಂತಲೂ ಉತ್ತಮ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕಾರಣ ಸದನ ಕಲಾಪಗಳ ಕಳಪೆ ಚಟುವಟಿಕೆ ಮತ್ತು ಮೌಲ್ಯಯುತ ರಾಜಕಾರಣ ದೂರವಾಗಿರುವುದು. ಹೀಗಾಗಿ ಇದನ್ನು ಮತ್ತೆ ಗಟ್ಟಿಗೊಳಿಸಲು ಚುನಾವಣೆಗಳು ಸುಧಾರಣೆಯಾಗಬೇಕು ಎಂದರು.

ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಸಂಸದೀಯ ವ್ಯವಸ್ಥೆ ಸುಧಾರಣೆಯಾಗುವ ತುರ್ತು ಅಗತ್ಯವಿದೆ. ವಿಧಾನ ಪರಿಷತ್ತು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅದಕ್ಕೆ ರಾಷ್ಟ್ರೀಯ ಕಾನೂನು ಜಾರಿಯಾಗಬೇಕು.ವಿಧಾನ ಪರಿಷತ್ತಿನ ಕ್ಷೇತ್ರ ಪುನರ್ ವಿಂಗಡಣೆಯಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಎಚ್.ಕೆ.ಪಾಟೀಲ್ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರಿಂದ ನಾವೆಲ್ಲ ಕಲಿಯುವುದು ಸಾಕಷ್ಟು ಇದೆ ಎಂದರು.

ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ, ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ್, ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ.ಬಸವರಾಜ್ ವೇದಿಕೆ ಮೇಲಿದ್ದರು. ಆಂದ್ರ ಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೆ.ಬಿ.ನಾವಲಗಿಮಠ ಸ್ವಾಗತಿಸಿದರು.ಎಚ್.ಕೆ.ಪಾಟೀಲರ ಅಭಿಮಾನಿಗಳು ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಚ್.ಕೆ.ಪಾಟೀಲ್ ಸಿಎಂ ಆಗುವಷ್ಟು ಸಬಲರು
ಇನ್ನು ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿ.ಆರ್.ಸುದರ್ಶನ, ಸಂತೋಷ ಲಾಡ್ ಮತ್ತು ಬಿ.ಎಲ್.ಶಂಕರ್ ಅವರುಗಳು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಉತ್ತರ ಕರ್ನಾಟಕದ ಭಾಗದ ಹಿರಿಯ ರಾಜಕಾರಣಿ. 35 ವರ್ಷಗಳಷ್ಟು ಕಾಲ ರಾಜಕಾರಣದಲ್ಲಿದ್ದು, ಅವರು ಮುಖ್ಯಮಂತ್ರಿ ಆಗುವಷ್ಟು ಸಾಮಾರ್ಥ್ಯ ಇರುವ ವ್ಯಕ್ತಿ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಅವಕಾಶಗಳನ್ನು ದೇವರು ದಯಪಾಲಿಸಲಿ ಎಂದರು.

ಎಚ್.ಕೆ.ಪಾಟೀಲ್ ಅವರು ಕಾಂಗ್ರೆಸ್‌ನ ಅಜಾತ ಶತ್ರುವಾಗಿದ್ದಾರೆ. ಅವರನ್ನು ಕರ್ನಾಟಕದ ಉಕ್ಕಿನ ಮನುಷ್ಯ ಎನ್ನಬಹುದು. ಈ ರಾಜ್ಯದ ಮುಖ್ಯಮಂತ್ರಿ ಸೇರಿ ಇನ್ನಷ್ಟು ಹುದ್ದೆಗಳು ಅವರಿಗೆ ಒಲಿದು ಬರಲಿ.
-ಬಿ.ಎಲ್.ಶಂಕರ್,ಹಿರಿಯ ರಾಜಕಾರಣಿ.

ಒಬ್ಬ ರಾಜಕಾರಣಿಯನ್ನು ಮಾಧ್ಯಮಗಳು ಬೆಳೆಸಬೇಕಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಮಾಧ್ಯಮಗಳು ಕೂಡ ನಾವು ಮಾತನಾಡಿದ ವಿಚಾರಗಳನ್ನು ರಾಜ್ಯದ ಎಲ್ಲಾ ಭಾಗಕ್ಕೂ ತಲುಪಿಸುತ್ತಿಲ್ಲ. ಬರೀ ಸ್ಥಳೀಯ ಪುಟಗಳಿಗೆ ಸೀಮಿತಗೊಳಿಸುತ್ತಿದ್ದಾರೆ. ಹೀಗಾಗಿ ಒಬ್ಬ ರಾಜ್ಯಮಟ್ಟದ ನಾಯಕನಾಗುವ ಅವಕಾಶವನ್ನು ರಾಜಕಾರಣಿಗಳು ಕಡೆದುಕೊಳ್ಳುವಂತಾಗಿದೆ.
-ಎಚ್.ಕೆ.ಪಾಟೀಲ್, ಕಾನೂನು ಸಚಿವ.

ತ್ರಿಮೂರ್ತಿಗಳು ಒಟ್ಟಾಗಿ ಜಡದ್ರೆ ಮುಗಿತು : ಮತ್ತಿಕಟ್ಟಿ
ನಗುತ್ತಲೇ ರಾಜಕೀಯ ಒಳಗುಟ್ಟುಗಳ ಬಿಚ್ಚಿಟ್ಟ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಎಚ್.ಕೆ.ಪಾಟೀಲ್ ಅವರು ಒಬ್ಬ ಒಳ್ಳೆ ರಾಜಕಾರಣಿ. ಅವರ ತಾಳ್ಮೆ ಮೆಚ್ಚಲೆಬೇಕು. ಆದರೆ ಬಸವರಾಜ ಹೊರಟ್ಟಿ, ಎಚ್.ಕೆ.ಪಾಟೀಲ್ ಮತ್ತು ಬಸವರಾಜ ಬೊಮ್ಮಾಯಿ ಇವರು ಮೂವರು ಸೇರಿದ್ರೆ ಮುಗಿದಂತೆ ಕತೆ. ಅವರೇನಾದ್ರು ಒಟ್ಟಾಗಿ ಜಡದ್ರೆ ಅವರ ಕತೆ ಮುಗಿದೇ ಹೋಗುತ್ತದೆ. ಇದು ನನ್ನ ಸ್ವಂತ ಅನುಭವ ಎಂದು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next