Advertisement

ಕಾಂಗ್ರೆಸ್‌ ಕೆಟ್ಟ ರಾಜನೀತಿ ದೇಶಕ್ಕೆ ಅಪಾಯ

09:13 PM Jan 10, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರು, ಭಾರತದ ಮುಸ್ಲಿಮರಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ತಿಳಿಸಲು ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಪೌರತ್ವ ತಿದ್ದುಪಡಿ ಕಾನೂನು ಪರ ಜಾಗೃತಿ ಮೂಡಿಸಲು ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಕೆಟ್ಟ ರಾಜ ನೀತಿ ದೇಶದ ಭದ್ರತೆಗೆ ಅಪಾಯಕಾರಿ ಎಂದು ಟೀಕಿಸಿದರು.

ಎತ್ತಿಕಟ್ಟುವ ಕೆಲಸ: ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಚರ್ಚೆಗೆ ಬಾರದೇ, ಚರ್ಚೆಗೆ ಅವಕಾಶ ಕೊಡದೇ ಅಪಪ್ರಚಾರದ ಮೂಲಕ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ. ಜನ ಸಂಘರ್ಷಕ್ಕೆ ಇಳಿಯಬೇಕು, ಹೋರಾಟ ಮಾಡಬೇಕು, ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ನಷ್ಟ ಉಂಟು ಮಾಡಬೇಕೆಂಬ ಉದ್ದೇಶದಿಂದ ಹೋರಾಟ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ದೇಶದ ಹಾಗೂ ರಾಜ್ಯದ ಜನತೆ ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರು. 2019 ರಲ್ಲಿ ಪೌರತ್ವ ತಿದ್ದುಪಡಿ ಕಾನೂನು ಜಾರಿಗೆ ತಂದ ಬಳಿಕ ಕೇಂದ್ರ ಗೃಹ ಸಚಿವರು ಸ್ಪಷ್ಟವಾಗಿ ಭಾರತದಲ್ಲಿ ಹುಟ್ಟಿದ ಯಾವುದೇ ವ್ಯಕ್ತಿಗೆ ಅಥವಾ ಯಾವುದೇ ಧರ್ಮದಲ್ಲಿ ಹುಟ್ಟಿರಲಿ ಈ ಕಾನೂನು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ದೇಶಗಳು ಮುಸ್ಲಿಂ ರಾಷ್ಟ್ರಗಳೆಂದು ಘೋಷಿಸಿಕೊಂಡಿವೆ. ಆದರೆ ಅಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಬೌದ್ಧ, ಸಿಖ್‌, ಕ್ರೈಸ್ತ ಧರ್ಮದ ಜನತೆಗೆ ಪೌರತ್ವ ಕೊಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಆದರೆ ಭಾರತದಲ್ಲಿ ನೆಲದಲ್ಲಿ ಹುಟ್ಟಿದ ಯಾರಿಗೂ ಈ ಕಾಯ್ದೆ ತೊಂದರೆ ಆಗುವುದಿಲ್ಲ ಎಂದರು.

Advertisement

ಪ್ರಚೋದಿಸಿ ದಿಕ್ಕು ತಪ್ಪಿಸುವ ಕೆಲಸ: ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿ, ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಅನುಮಾನ, ಆತಂಕಕ್ಕಿಂತ ಕಾಂಗ್ರೆಸ್‌ ಮತ್ತಿತರ ಪಕ್ಷಗಳು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಜನರನ್ನು ಪ್ರಚೋದಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹಾಗೂ ಕಮ್ಯೂನಿಸ್ಟ್‌ ಪಕ್ಷಗಳು ಯಾವ ಕಾರಣಕ್ಕೆ ಪ್ರಚೋದನೆ ಮಾಡುತ್ತಿವೆ ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ವಿನಾಕರಣ ವಿಶ್ವ ವಿದ್ಯಾಲಯಗಳಲ್ಲಿ ಕೆಲವರು ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಿ ಹೋರಾಟಕ್ಕೆ ಇಳಿಸಿ ಅವರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಅಶಾಂತಿ ಸೃಷ್ಟಿಸಲು ಮುಂದಾಗಿದೆ: ಪಕ್ಷ ದೇಶದ ಜನತೆಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ. ಇದು ಏಕಾಏಕಿ ತೆಗೆದುಕೊಂಡ ತೀರ್ಮಾನ ಅಲ್ಲ. ಸಂಸತ್‌ ಹಾಗೂ ರಾಜ್ಯಸಭೆಯ ಎರಡು ಸದನಗಳಲ್ಲಿ ಚರ್ಚೆ ಆಗಿ ಅಂಗೀಕಾರಗೊಂಡಿದೆ. ಕಾಂಗ್ರೆಸ್‌ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದೆ ಎಂದು ಶಾಸಕ ಸುಧಾಕರ್‌ ಕಿಡಿಕಾರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ, ಮಾಜಿ ಶಾಸಕಿ ಜ್ಯೋತಿರೆಡ್ಡಿ, ಮುಖಂಡರಾದ ಗೋಪಿನಾಥ್‌, ಮುರಳೀಧರ್‌, ರಾಮರೆಡ್ಡಿ, ಚಂದ್ರಶೇಖರ್‌, ಕೃಷ್ಣಾರೆಡ್ಡಿ, ಆರ್‌.ಶ್ರೀನಿವಾಸ್‌, ರಾಮಲಿಂಗಪ್ಪ, ಮರಳಕುಂಟೆ ಕೃಷ್ಣಮೂರ್ತಿ, ಪಿ.ನಾಗೇಶ್‌, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಲಕ್ಷ್ಮೀಪತಿ, ಲಕ್ಷ್ಮೀನಾರಾಯಣಗುಪ್ತ, ಹನುಮಂತಪ್ಪ, ಸಿ.ಬಿ.ಕಿರಣ್‌ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಪಕ್ಷ ರಾಜಕೀಯ ಕಾರಣಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಪಪ್ರಚಾರ ಮಾಡಲು ಹೊರಟಿದೆ. ಅಲ್ಪಸಂಖ್ಯಾತರ ಮತಬ್ಯಾಂಕ್‌ ಗಟ್ಟಿ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್‌ ಬಯಸಿದೆ. ಆದರೆ ಇದರಿಂದ ವೋಟ್‌ ಬ್ಯಾಂಕ್‌ ಗಟ್ಟಿ ಆಗಲ್ಲ. ದೇಶದಲ್ಲಿ ಎರಡು ಸಮುದಾಯಗಳನ್ನು ಸಂಘರ್ಷಕ್ಕೀಡು ಮಾಡುವ ಪಾಪದ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ.
-ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next