Advertisement

ಅಶೋಕ, ಸೋಮಣ್ಣ ವಿರುದ್ಧ ಆಯೋಗಕ್ಕೆ ಕಾಂಗ್ರೆಸ್‌ ದೂರು

11:45 PM Apr 26, 2023 | Team Udayavani |

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳಾದ ಆರ್‌. ಅಶೋಕ ಮತ್ತು ವಿ. ಸೋಮಣ್ಣ ಅವರನ್ನು ಚುನಾವಣ ಕಣದಿಂದ ಅಮಾನತುಗೊಳಿಸುವಂತೆ ಕಾಂಗ್ರೆಸ್‌ ಬುಧವಾರ ಚುನಾವಣ ಆಯೋಗಕ್ಕೆ ದೂರು ನೀಡಿದೆ.

Advertisement

ಪದ್ಮನಾಭನಗರದಿಂದ ನಾಮಪತ್ರ ಸಲ್ಲಿಸಿರುವ ಸಚಿವ ಆರ್‌. ಅಶೋಕ್‌ ಅವರು ತಾನೊಬ್ಬ ಕಾನೂನು ಪದವೀಧರನಾಗಿದ್ದು, ಇದನ್ನು ಪರಿಗಣಿಸಿ ಪಕ್ಷವು ತಮಗೆ ಟಿಕೆಟ್‌ ನೀಡಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬಿಜೆಪಿಯೂ ತನ್ನ ಅಭ್ಯರ್ಥಿಗಳ ವಿವರದಲ್ಲಿ ಅಶೋಕ್‌ ಅವರನ್ನು ಕಾನೂನು ಪದವೀಧರ ಎಂದು ಉಲ್ಲೇಖೀಸಿದೆ. ಆದರೆ ಅಶೋಕ್‌ ಸಲ್ಲಿಸಿರುವ ನಾಮಪತ್ರದಲ್ಲಿ ಕಾನೂನು ಪದವೀಧರ ಎಂಬ ಉಲ್ಲೇಖೀಸಿಲ್ಲ. ಆದ್ದರಿಂದ ತಪ್ಪು ಮಾಹಿತಿ ನೀಡಿದ ಆರೋಪದಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ಬಾಬು ದೂರಿನಲ್ಲಿ ಮನವಿ ಮಾಡಿದ್ದಾರೆ.

ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಅಲ್ಲಿನ ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿಗೆ ಹಣದ ಆಮಿಷವೊಡ್ಡಿ ಕಣದಿಂದ ಹಿಂದೆ ಸರಿಯುವಂತೆ ಮೂರನೇ ವ್ಯಕ್ತಿಯಿಂದ ಒತ್ತಾಯಿಸಿದ್ದಲ್ಲದೆ, ಬೆದರಿಕೆಯನ್ನೂ ಹಾಕಿದ್ದಾರೆ. ಈ ಬಗೆಗಿನ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಮಾಧ್ಯಮಗಳಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಚುನಾವಣ ಕಣದಿಂದ ಅಮಾನತುಗೊಳಿಸಬೇಕು ಎಂದೂ ರಮೇಶ್‌ಬಾಬು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next