Advertisement

ಶೆಟ್ಟರ ಗೆಲ್ಲಿಸಲೇಬೇಕೆಂಬ ಫ್ಲಡ್‌ಗೇಟ್‌ ಓಪನ್‌

12:16 PM May 09, 2023 | Team Udayavani |

ಹುಬ್ಬಳ್ಳಿ: ಜಗದೀಶ ಶೆಟ್ಟರರನ್ನು ಸೋಲಿಸಲೇಬೇಕೆಂಬ ಒಂದಂಶದ ಅಭಿಯಾನ, ಷಡ್ಯಂತ್ರದ ನಡುವೆಯೂ ಕ್ಷೇತ್ರದ ಮತದಾರರ ಬೆಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತದಾರರಲ್ಲಿ ಅಂಡರ್‌ ಕರೆಂಟ್‌ ಪ್ರವಹಿಸಿದ್ದು, ಬೆಂಬಲದ ಫ್ಲಡ್‌ಗೇಟ್‌ ಓಪನ್‌ ಆಗಿದೆ. ಈ ಹಿಂದಿಗಿಂತಲೂ ಹೆಚ್ಚಿನ ಮತಗಳ ಅಂತರದ ಗೆಲುವು ಖಚಿತ ಎಂದು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರ-ರಾಜ್ಯ ನಾಯಕರು ಪ್ರಚಾರದುದ್ದಕ್ಕೂ ತಮ್ಮ ಅಭ್ಯರ್ಥಿಯ ಹೆಸರು ಹೇಳಿ ಗೆಲ್ಲಿಸಿ ಎನ್ನುವುದಕ್ಕಿಂತ ಜಗದೀಶ ಶೆಟ್ಟರ ಅವರನ್ನು ಸೋಲಿಸಿ ಎಂಬ ಒಂದಂಶದ ಋಣಾತ್ಮಕ ಪ್ರಚಾರಕ್ಕಿಳಿದಿದ್ದರು. ಇನ್ನು ಕೆಲವರು ಶೆಟ್ಟರ ಸೋಲಲಿ ಎಂದು ಬಯಸಿದ್ದರು. ಆದರೆ ಕ್ಷೇತ್ರದ ಮತದಾರರು ಮಾತ್ರ ನನ್ನ ಕೈ ಬಿಡಲಾರರು. ಹೋದಲ್ಲೆಲ್ಲ ಬಿಜೆಪಿಯಲ್ಲಿ ಆಗಿರುವ ಅನ್ಯಾಯಕ್ಕೆ ಸಹಾನುಭೂತಿ ತೋರಿಸುತ್ತಿದ್ದಾರೆ. ಮತದಾರರು ಪ್ರವಾಹ ರೂಪದಲ್ಲಿ ಬೆಂಬಲ ತೋರುತ್ತಿದ್ದು, ರವಿವಾರ ಉಣಕಲ್ಲನಲ್ಲಿ ನಡೆದ ರೋಡ್‌ ಶೋಗೆ ಸೇರಿದ ಜನಸ್ತೋಮ ಇನ್ನಷ್ಟು ಸ್ಫೂರ್ತಿ ನೀಡಿದೆ. ಗೆಲುವಿನ ವಿಶ್ವಾಸ ಇನ್ನಷ್ಟು ಹೆಚ್ಚಿಸಿದೆ ಎಂದರು.

ಎಲ್ಲ ಜಾತಿ, ಧರ್ಮದವರು ನನಗೆ ಬೆಂಬಲ ನೀಡುತ್ತಿದ್ದು, ಶೆಟ್ಟರನ್ನು ಎಷ್ಟೇ ಟಾರ್ಗೆಟ್‌ ಮಾಡಿದರೂ ಕ್ಷೇತ್ರದ ಮತದಾರರ ಪ್ರೀತಿ ಕಡಿಮೆಯಾಗಿಲ್ಲ. ನಾನು ಗೆದ್ದರೆ ಅದೊಂದು ಇತಿಹಾಸವಾಗಿದೆ. ಬಿಜೆಪಿಯವರು ಅನೇಕರನ್ನು ಒತ್ತಾಯಪೂರ್ವಕವಾಗಿ, ಒತ್ತಡ ತಂತ್ರದ ಮೂಲಕ ಹಿಡಿದಿಟ್ಟುಕೊಳ್ಳುವ ಯತ್ನ ಮಾಡಿದ್ದರೂ ನನ್ನ ಮೇಲಿನ ಅಭಿಮಾನ, ಪ್ರೀತಿ ಗುಪ್ತಗಾಮಿನಿ ರೂಪದಲ್ಲಿ ಪ್ರಭಾವ ಬೀರುತ್ತಿದೆ. ರಾಜಕೀಯವಾಗಿ ದಿಕ್ಸೂಚಿ ಫಲಿತಾಂಶ ಬರಲಿದೆ ಎಂದು ಹೇಳಿದರು.

ಇಚ್ಛಾಶಕ್ತಿ ತೋರದ ಸಿಎಂ: ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಹಾಗೂ ನೀರಿನ ಬಳಕೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕಳೆದ ಒಂದು ವರ್ಷದಿಂದ ತೀವ್ರ ಒತ್ತಡ ಮಾಡುತ್ತಿದ್ದರೂ, ಮುಖ್ಯಮಂತ್ರಿಯವರಿಗೆ ಹಲವು ಬಾರಿ ಹೇಳಿದರು ಇಚ್ಛಾಶಕ್ತಿ ತೋರಲಿಲ್ಲ. 24/7 ನೀರು ಪೂರೈಕೆ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಪರಿಪೂರ್ಣ ನಗರ ನಿರ್ಮಾಣ ನನ್ನ ಗುರಿಯಾಗಿದೆ. ಕಾಂಗ್ರೆಸ್‌ ಪಕ್ಷದ ನಾಯಕರು, ಮುಖಂಡರು ಎಲ್ಲರೂ ಸಂಘಟಿತವಾಗಿ ನನ್ನ ಪರವಾಗಿ ಶ್ರಮಿಸುತ್ತಿದ್ದಾರೆ. ಕೆಲವರು ಹಿಂದೇಟು ಹಾಕುತ್ತಿದ್ದಾರೆ, ಕೆಲಸ ಮಾಡುತ್ತಿಲ್ಲ ಎಂಬುದು ಸುಳ್ಳು ಎಂದರು.

ಕಾಂಗ್ರೆಸ್‌ನವರು ಹಾಗೂ ನನ್ನ ಬೆಂಬಲಿಗರ ಮೇಲೆ ಐಟಿ, ಇಡಿ ದಾಳಿ ಬೆದರಿಕೆ ಇಲ್ಲದಿಲ್ಲ. ಕೆಲವೊಂದು ಯತ್ನಗಳು ನಡೆದಿವೆ. ನನ್ನದೇನು ಸಾವಿರಾರು ಕೋಟಿ ರೂ. ಆಸ್ತಿ ಇಲ್ಲ, ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿಲ್ಲ. ಕೆಲವರು ನನಗೆ ಬಿಜೆಪಿ ಹೈಕಮಾಂಡ್‌ ವಿರುದ್ಧ ಯಾಕೆ ಹೋಗುತ್ತೀರಿ ಐಟಿ-ಇಡಿ ತೊಂದರೆ ಕೊಡುತ್ತಾರೆ ಎಂದು ಹೇಳಿದ್ದರು.

Advertisement

ನನ್ನ ಆಸ್ತಿ ಕಾನೂನು ಚೌಕಟ್ಟಿನಲ್ಲಿ ಇರುವುದರಿಂದ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಮುಖಂಡರಾದ ಅನೀಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರು, ಮಂಜುನಾಥ ಕುನ್ನೂರು, ಸತೀಶ ಮೆಹರವಾಡೆ, ಸದಾನಂದ ಡಂಗನವರ, ಬಂಗಾರೇಶ ಹಿರೇಮಠ ಇನ್ನಿತರರಿದ್ದರು.

ಭೂಮಿ ಹಂಚಿಕೆಯಾಗಿಲ್ಲ : ಕೈಗಾರಿಕಾ ಸಚಿವನಾಗಿದ್ದಾಗ ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ರಚನೆಗೆ ಯೋಜಿಸಿ ಸಾಕಷ್ಟು ಕ್ರಮ ಕೈಗೊಂಡಿದ್ದೆ. ಸಚಿವ ಸ್ಥಾನದಿಂದ ಇಳಿದ ನಂತರದಲ್ಲಿ ಸುಮಾರು ಆರು ತಿಂಗಳವರೆಗೂ ಯಾವುದೇ ಕ್ರಮ ಆಗಿರಲಿಲ್ಲ. ಬಹಿರಂಗ ಸಭೆಯಲ್ಲಿ ಈ ಬಗ್ಗೆ ಗಟ್ಟಿ ಧ್ವನಿ ಎತ್ತಿದ ನಂತರದಲ್ಲಿ ಮುಖ್ಯಮಂತ್ರಿಯವರು ಕ್ಲಸ್ಟರ್‌ಗೆ ಚಾಲನೆ ನೀಡಿದ್ದರು. ಆದರೆ, ಸುಮಾರು 1 ಲಕ್ಷ ಜನರಿಗೆ ಉದ್ಯೋಗ ನೀಡುವ, ಆರ್ಥಿಕವಾಗಿ ಕ್ರಾಂತಿಕಾರಕ ಬದಲಾವಣೆ ತರುವ ಕ್ಲಸ್ಟರ್‌ಗೆ ನಿವೇಶನ ಹಂಚಿಕೆಯಾಗಿಲ್ಲ. ಈ ಹಿಂದೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಹಣ ಕೇಳಲಾಗುತ್ತಿದೆ ಎಂದು ಶೆಟ್ಟರ ಆರೋಪಿಸಿದರು.

ಕೊನೆ ಚುನಾವಣೆ: ಇದು ನನ್ನ ಕೊನೆ ಚುನಾವಣೆಯಾಗಿದ್ದು, ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತೇನೆ. ಆದರೆ ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ಶೆಟ್ಟರ ತಿಳಿಸಿದರು.

1994ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗಲೇ 70ನೇ ವರ್ಷಕ್ಕೆ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಬಯಸಿದ್ದೆ. ಅದರಂತೆ ಇದೀಗ ಈ ಚುನಾವಣೆ ನಂತರದಲ್ಲಿ ಮುಂದಿನ ಬಾರಿಗೆ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದಲೇ ನಿವೃತ್ತಿ ಎಂದ ಮೇಲೆ ಲೋಕಸಭೆಗೆ ಸ್ಪರ್ಧಿಸುವುದು ಎಲ್ಲಿಂದ ಬಂತು ಎಂದರು.

ಮುತುವಲ್ಲಿಗಳ ಸಭೆಯಲ್ಲಿ ಮಾಜಿ ಸಿಎಂ ಮತಯಾಚನೆ: 

ಹುಬ್ಬಳ್ಳಿ: ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಣಕಲ್ಲನ ತಾಜ್‌ ನಗರ, ಭೈರಿದೇವಕೊಪ್ಪದ ಶಾಂತಿನಿಕೇತನದ ಮುತುವಲ್ಲಿಗಳ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ಮತಯಾಚನೆ ಮಾಡಿದರು.

ಕಳೆದ ಮೂರು ದಶಕಗಳಿಂದ ಕ್ಷೇತ್ರದಲ್ಲಿ ಚುನಾಯಿತಗೊಂಡ ನಂತರ ರಾಜಕೀಯ ಮಾಡದೆ ಎಲ್ಲ ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಇಲ್ಲಿವರೆಗೆ ನನ್ನ ಮೇಲೆ ಯಾವುದೇ ತರಹದ ಕಪ್ಪುಚುಕ್ಕೆ ಆಗಲಿ, ಭ್ರಷ್ಟಾಚಾರ ಆರೋಪ ಇಲ್ಲ. ಮುಸ್ಲಿಂ ಬಾಂಧವರು ನನಗೆ ಬೆಂಬಲಿಸುವ ಮೂಲಕ ದಾಖಲೆ ಮತಗಳ ಅಂತರದಿಂದ ಗೆಲ್ಲಿಸಿ, ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿಗಾಗಿ ಮತ್ತೆ ಕಾಂಗ್ರೆಸ್‌ ಸರಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಿ ಎಂದರು.

ರಾಜಸ್ಥಾನ ಮಾಜಿ ಸಚಿವೆ ನಸೀಮಾ ಆಕ್ತರ್‌, ಯೂಸೂಫ್‌ ಸವಣೂರು, ಅನ್ವರ್‌ ಮುಧೋಳ, ಮಜರ್‌ ಖಾನ್‌, ಶಫಿ ಮುದ್ದೇಬಿಹಾಳ, ಶಾಕೀರ್‌ ಸನದಿ, ಬಾಬಾಜಾನ್‌ ಮುಧೋಳ, ನನ್ನುಸಾಬ್‌ ಹೆಬ್ಬಳ್ಳಿ, ಅನಿಫ್‌ ನಾಯಕರ, ಅಜೀಜ್‌ ಮುಲ್ಲಾ, ವಾಹಬ್‌ ಮುಲ್ಲಾ, ಹಜರತ್‌ ಅಲಿ ದೊಡ್ಡಮನಿ, ಮೊಹಸೀನ್‌, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next