Advertisement

ಹಾಸನ ಜಿಲ್ಲೆಯಲ್ಲಿ JDS ಎದುರು ಕಾಂಗ್ರೆಸ್‌-ಬಿಜೆಪಿ ಹೋರಾಟ

12:07 AM May 03, 2023 | Team Udayavani |

ಅರಸೀಕೆರೆ

Advertisement

ಅರಸೀಕೆರೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಕೆ.ಎಂ.ಶಿವಲಿಂಗೇಗೌಡ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಂಬಂಧಿ ಎನ್‌.ಆರ್‌.ಸಂತೋಷ್‌ ಜೆಡಿಎಸ್‌ ಅಭ್ಯರ್ಥಿ. ಶಿವಲಿಂಗೇಗೌಡ ಮತ್ತು ಎನ್‌.ಆರ್‌ ಸಂತೋಷ್‌ ನಡುವೆ ನೇರ ಹಣಾಹಣಿ ಇದೆ. ಬಿಜೆಪಿ ಅಭ್ಯರ್ಥಿ ಜಿ.ವಿ.ಬಸವರಾಜು ಕಣದಲ್ಲಿದ್ದಾರೆ.

ಅಹಿಂದ ಮತಗಳನ್ನು ನಂಬಿರುವ ಶಿವಲಿಂಗೇಗೌಡರಿಗೆ ಮೂಲ ಕಾಂಗ್ರೆಸಿನ ಒಳೇಟಿನ ಆತಂಕವಿದೆ. ಲಿಂಗಾಯತರು, ಒಕ್ಕಲಿಗರ ಮತ ಬೇಟೆಗಿಳಿದಿರುವ ಎನ್‌.ಆರ್‌.ಸಂತೋಷ್‌ಗೆ ಬಿಜೆಪಿಯ ಜಿ.ವಿ.ಬಸವರಾಜು ಒಂದಷ್ಟು ಲಿಂಗಾಯತರ ಮತ ಸೆಳೆಯುವ ಭಯ ಕಾಡುತ್ತಿದೆ. ಶಿವಲಿಂಗೇಗೌಡ ಅವರನ್ನು ಮಣಿಸಲೇಬೇಕು ಎಂಬ ದಳಪತಿಗಳ ಶಪಥಕ್ಕೆ ಅಭಿವೃದ್ಧಿಯ ಮಂತ್ರ ಪಠಿಸುತ್ತಾ ಶಿವಲಿಂಗೇಗೌಡ ಸೆಣಸಾಟ ನಡೆಸಿದ್ದಾರೆ.

ಶ್ರವಣಬೆಳಗೊಳ

ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲಿದ್ದ ಜೆಡಿಎಸ್‌ ಶಾಸಕ ಸಿ.ಎನ್‌. ಬಾಲಕೃಷ್ಣ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರಿಷತ್‌ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರಿಂದ ಅನಿರೀಕ್ಷಿತ ಪೈಪೋಟಿ ಎದುರಿಸುತ್ತಿದ್ದಾರೆ. ಸಿ.ಎನ್‌ ಬಾಲಕೃಷ್ಣ – ಎಂ.ಎ.ಗೋಪಾಲಸ್ವಾಮಿ ನೇರ ಹಣಾಹಣಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿರುವ ಸಿ.ಎನ್‌. ಬಾಲಕೃಷ್ಣ ಅವರು ಏತ ನೀರಾವರಿಗಳ ಮೂಲಕ ಕ್ಷೇತ್ರದ ಬಹುಪಾಲು ಕೆರೆಗಳನ್ನು ತುಂಬಿಸಿದ್ದು, ಇವು ತಮ್ಮನ್ನು ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸಿಗರು ಒಗ್ಗಟ್ಟಾಗಿರುವುದು ಗೋಪಾಲಸ್ವಾಮಿ ಅವರಿಗೆ ಪ್ಲಸ್‌ ಆಗಿದೆ. ಬಿಜೆಪಿ ಅಭ್ಯರ್ಥಿ ಸಿ.ಆರ್‌. ಚಿದಾನಂದ ಕಣದಲ್ಲಿದ್ದಾರೆ. ಆದರೆ ಜೆಡಿಎಸ್‌ -ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ ಎನ್ನಲಾಗುತ್ತಿದೆ.

Advertisement

 ಹೊಳೆನರಸೀಪುರ

ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಎದುರಾಳಿ ಕಾಂಗ್ರೆಸ್‌ನ ಶ್ರೇಯಸ್‌ ಎಂ.ಪಟೇಲ್‌. ದೇವೇಗೌಡರ ಕುಟುಂಬದ ಸಾಂಪ್ರದಾಯಿಕ ರಾಜಕೀಯ ವೈರಿ ದಿ| ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್‌ ಎಂ. ಪಟೇಲ್‌ ಮೊದಲ ಬಾರಿ ವಿಧಾನಸಭಾ ರಣಕಣ ಪ್ರವೇಶಿಸಿದ್ದಾರೆ. ಅವರ ತಾಯಿ ಅನುಪಮಾ ಮಹೇಶ್‌ ಎರಡು ಬಾರಿ ರೇವಣ್ಣ ಅವರೆ ದುರು ಸೋಲು ಕಂಡಿದ್ದವರು. ಈ ಬಾರಿ ಮಗನನ್ನು ಸ್ಪರ್ಧೆಗಿಳಿಸಿದ್ದಾರೆ ಈಗಾಗಲೇ 5 ಬಾರಿ ವಿಧಾನಸಭೆಯಲ್ಲಿ ಹೊಳೆನರಸೀಪುರ ಪ್ರತಿನಿಧಿಸಿರುವ ರೇವಣ್ಣ ಅವರಿಗೆ ತಮ್ಮ ಕುಟುಂಬವೇ ಬೆನ್ನಿಗೆ ನಿಂತಿದೆ. ರೇವಣ್ಣನವರ ಕೆಲವು ಆಪ್ತರು ಚುನಾವಣೆ ಹೊಸ್ತಿಲಿನಲ್ಲಿ ಕಾಂಗ್ರೆಸ್‌ಗೆ ಸೇರಿಕೊಂಡಿರುವುದು ರೇವಣ್ಣ ಅವರಿಗೆ ತುಸು ಆತಂಕ ಸೃಷ್ಟಿಸಿದೆ. ಶ್ರೇಯಸ್‌ ಎಂ.ಪಟೇಲ್‌ ಜತೆಗೆ ಜಿ. ದೇವರಾಜೇಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಭಿವೃದ್ಧಿ ಕಾರ್ಯಗಳು, ಕಾರ್ಯಕರ್ತರ ಪಡೆ ತಮ್ಮನ್ನು ಗೆಲ್ಲಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರೇವಣ್ಣ.

ಹಾಸನ

ಹಾಸನದಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ ನೇರ ಹಣಾಹಣಿ. ಬಿಜೆಪಿಯಿಂದ ಶಾಸಕ ಪ್ರೀತಂ ಗೌಡ ಕಣದಲ್ಲಿದ್ದರೆ, ಜೆಡಿಎಸ್‌ನಿಂದ ಎಚ್‌.ಪಿ.ಸ್ವರೂಪ್‌ ಸ್ಪರ್ಧೆಯಲ್ಲಿದ್ದಾರೆ. ಈ ಚುನಾವಣೆಯನ್ನು ದೊಡ್ಡಗೌಡರ ಕುಟುಂಬ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಸ್ವರೂಪ್‌ ಗೆಲುವಿಗಾಗಿ ಶ್ರಮಿಸುತ್ತಿದೆ. ಇನ್ನು ಬಿಜೆಪಿ ಶಾಸಕ ಪ್ರೀತಂ ಗೌಡ, ಕಳೆದ ಮೂರುವರೆ ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಮತ ಕೇಳುತ್ತಿದ್ದಾರೆ. ಜೆಡಿಎಸ್‌ನವರು ಹಿಂದೆ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಿ ಜನರಿಗೆ ಹಂಚುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಹಾಗೂ ಎಎಪಿ ಅಭ್ಯರ್ಥಿ ಅಗಿಲೆ ಯೋಗೀಶ್‌ ಕಣದಲ್ಲಿದ್ದಾರೆ.

 ಅರಕಲಗೂಡು

ಬಿಜೆಪಿ ತೊರೆದ ಮಾಜಿ ಸಚಿವ ಎ.ಮಂಜು ಜೆಡಿಎಸ್‌ ಅಭ್ಯರ್ಥಿ ಯಾದ ಅನಂತರ ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಬಿಜೆಪಿ ಸೇರಿದರೂ ಟಿಕೆಟ್‌ ನಿರಾಕರಿಸಿ ಚುನಾವಣೆಯಿಂದ ದೂರ ಉಳಿದಿ ದ್ದಾರೆ. 2ನೇ ಬಾರಿ ಬಿಜೆಪಿಯಿಂದ ಸ್ಪರ್ಧೆಗಿಳಿದಿರುವ ಯೋಗ ರಮೇಶ್‌ ಪರ ಎ.ಟಿ.ರಾಮಸ್ವಾಮಿ ಪ್ರಚಾರಕ್ಕಿಳಿದಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿರುವ ಎಂ.ಟಿ.ಕೃಷ್ಣೇಗೌಡರ ಬಂಡಾಯ ಸ್ಪರ್ಧೆ ಯಿಂದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಧರ ಗೌಡ ಕಂಗಾಲಾಗಿದ್ದಾರೆ. ಕಾಂಗ್ರೆಸಿನ ಒಡಕಿನಿಂದ ಎ.ಮಂಜು ಲಾಭ ನಿರೀಕ್ಷಿಸಿದ್ದರೂ ಪಕ್ಷೇತರ ರಾಗಿರುವ ಎಂ.ಟಿ.ಕೃಷ್ಣೇಗೌಡ ಅವರ ಪ್ರಬಲ ಸ್ಪರ್ಧೆ ಹಾಗೂ ಬಿಜೆಪಿ ಅಭ್ಯರ್ಥಿ ಪರ ಎ.ಟಿ.ರಾಮಸ್ವಾಮಿ ಅವರು ಅಖಾಡಕ್ಕಿಳಿ ದಿರುವುದು ತುಸು ಭಯ ಸೃಷ್ಟಿಸಿದೆ .

 ಸಕಲೇಶಪುರ(ಎಸ್‌ಸಿ)

ಹ್ಯಾಟ್ರಿಕ್‌ ಗೆಲುವಿನ ದಾಖಲೆ ನಿರ್ಮಿಸಿ ಸತತ 4ನೇ ಗೆಲುವಿನ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಜೆಡಿಎಸ್‌ನ ಎಚ್‌.ಕೆ. ಕುಮಾರಸ್ವಾಮಿಗೆ ಬಿಜೆಪಿಯ ಸಿಮೆಂಟ್‌ ಮಂಜು ಹಾಗೂ ಕಾಂಗ್ರೆಸ್‌ನ ಮುರಳಿ ಮೋಹನ್‌ ಅವರು ಎದುರಾಳಿಗಳು. ಸಿಮೆಂಟ್‌ ಮಂಜು ಅಬ್ಬರದ ಪ್ರಚಾರ ಮಾಡುತ್ತಿದ್ದು, ಕ್ಷೇತ್ರದ ಲಿಂಗಾಯತ, ಒಕ್ಕಲಿಗ ಮತದಾರರ ಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಆನೇಕಲ್‌ನ ಮುರುಳಿ ಮೋಹನ್‌ ಹೊರ ಜಿಲ್ಲೆಯ ವರೆಂಬ ಆನುಮಾನ ಸ್ಥಳೀಯರನ್ನು ಆವರಿಸಿದೆ. ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ ಎಂಬ ಆರೋಪ ಹಾಲಿ ಶಾಸಕರ ಮೇಲಿದೆ. ಜೆಡಿಎಸ್‌ ಕಾರ್ಯಕರ್ತರ ಪಡೆ, ದಳಪತಿಗಳ ಸಹಕಾರವೇ ತಮಗೆ ಪ್ಲಸ್‌ ಆಗಬಹುದು ಎಂಬುದು ಎಚ್‌.ಕೆ.ಕುಮಾರಸ್ವಾಮಿ ಅವರ ನಿರೀಕ್ಷೆಯಾಗಿದೆ.

  ಬೇಲೂರು

ಕಳೆದ ಬಾರಿ ಗೆದ್ದು ಈಗ 3ನೇ ಬಾರಿ ಸ್ಪರ್ಧೆಗಿಳಿದಿರುವ ಜೆಡಿಎಸ್‌ ಶಾಸಕ ಕೆ.ಎಸ್‌ಲಿಂಗೇಶ್‌ಗೆ ಬಿಜೆಪಿಯ ಎಚ್‌.ಕೆ.ಸುರೇಶ್‌,

ಕಾಂಗ್ರೆಸ್‌ನ ಬಿ.ಶಿವರಾಮು ಸ್ಪರ್ಧೆ ನೀಡುತ್ತಿದ್ದಾರೆ. ಕಳೆದ ಬಾರಿ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌.ಕೆ.ಸುರೇಶ್‌ ಹವಣಿಸುತ್ತಿದ್ದಾರೆ. ಬಿ.ಶಿವರಾಮು ಅವರು ಇದು ತಮ್ಮ ಕೊನೇ ಚುನಾವಣೆ ಎಂದೇ ಮತ ಯಾಚನೆ ಮಾಡುತ್ತಿದ್ದಾರೆ.  ಎಚ್‌.ಕೆ.ಸುರೇಶ್‌ ಮತ್ತು ಬಿ.ಶಿವರಾಮು ಕ್ಷೇತ್ರದ ಹೊರಗಿನ ಒಕ್ಕಲಿಗರು. ಕೆ.ಎಸ್‌.ಲಿಂಗೇಶ್‌ ಕ್ಷೇತ್ರದವರೇ ಆಗಿದ್ದು, ಲಿಂಗಾಯತ ಸಮುದಾಯಕ್ಕೆ ಸೇರಿದವರು.ಜೆಡಿಎಸ್‌ನ ಮತ ಬ್ಯಾಂಕ್‌ ಮತ್ತು ಲಿಂಗಾಯತರ ಬೆಂಬಲವನ್ನು ಲಿಂಗೇಶ್‌ ನಂಬಿದ್ದಾರೆ. ಅಲ್ಪಸಂಖ್ಯಾಕ‌ರು , ಒಕ್ಕಲಿಗರು, ಎಸ್ಸಿ, ಎಸ್ಟಿ. ಒಂದಷ್ಟು ಲಿಂಗಾಯತರ ಮತಗಳ ಮೇಲೆ ಬಿ.ಶಿವರಾಮು ಕಣ್ಣಿಟ್ಟಿದ್ದಾರೆ. ಎಚ್‌.ಕೆ.ಸುರೇಶ್‌ ಬಿಜೆಪಿಯ ಬಲ ಹಾಗೂ ಎಲ್ಲ ಜನವರ್ಗಗಳ ಬೆಂಬಲ ನಿರೀಕ್ಷಿಸಿದ್ದಾರೆ.

~ ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next