Advertisement

“ಸರ್ವಶ್ರೇಷ್ಠ ಸಂಸದ’ಗೌರವಕ್ಕೆ ಪಾತ್ರರಾದ ಸಂಸದ ಗೋಪಾಲ್‌ ಶೆಟ್ಟಿ ಅವರಿಗೆ ಅಭಿನಂದನೆ

07:58 PM Jan 01, 2021 | Team Udayavani |

ಮುಂಬಯಿ, ಡಿ. 31: ಮಹಾರಾಷ್ಟ್ರ ಉತ್ತರ ಮುಂಬಯಿ ಕ್ಷೇತ್ರದ ಸಂಸದ ಗೋಪಾಲ್‌ ಶೆಟ್ಟಿ ಅವರು “ಸರ್ವಶ್ರೇಷ್ಠ ಸಂಸದ’ರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ದೇಶದ ಒಟ್ಟು 539 ಸಂಸದರ ಸಾಧನೆಗಳ ಪರಾಮರ್ಶೆಯಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಮತ್ತೂಮ್ಮೆ ಗೋಪಾಲ್‌ ಶೆಟ್ಟಿ ಅವರು ಈ ಸಾಧನೆ ಮಾಡಿದ್ದಾರೆ.

Advertisement

ಅವರನ್ನು ಉತ್ತರ ಮುಂಬಯಿ ಬಿಜೆಪಿ ಘಟಕ, ಬಂಟರ ಸಂಘ ಮುಂಬಯಿ ಹಾಗೂ ಹೊಟೇಲಿಗರ ಸಂಘಟನೆ ಆಹಾರ್‌ ವತಿಯಿಂದ ಅವರ ಕಚೇರಿಯಲ್ಲಿ ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಅಭಿನಂದಿಸಲಾಯಿತು. ಉತ್ತರ ಮುಂಬಯಿ ಕ್ಷೇತ್ರದಿಂದ ಬಿಜೆಪಿಯಲ್ಲಿ ದಾಖಲೆ ಮತಗಳಿಂದ ಸತತ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ಅವರು ಎರಡನೇ ಬಾರಿ ಸಂಸದರ ನಿಧಿಯಿಂದ ಅಧಿಕ ಮೊತ್ತದ ಅನುದಾನವನ್ನು ತಮ್ಮ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿಪರ ಯೋಜನೆಗಳಿಗಾಗಿ ಬಳಸಿಕೊಂಡಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲೂ ಅವರು ತಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ಸಂಸತ್ತಿನಲ್ಲಿ ಹಾಜರಾತಿ, ಕ್ಷೇತ್ರದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ, ವಿವಿಧ ವಿಷಯಗಳ ಚರ್ಚೆಯಲ್ಲಿ ಭಾಗವಹಿಸುವಿಕೆ ಇನ್ನಿತರ ವಿಷಯಗಳಲ್ಲಿ ಖಾಸಗಿ ಮಸೂದೆ ಮಂಡನೆ ಮೂಲಕ ಅವರ ಸಾಧನೆಗಳನ್ನು ಕ್ರೋಡೀಕರಿಸಿದಾಗ ಇತರ ಸಂಸದರಿಗಿಂತ ಹೆಚ್ಚಿನ ಅಂಕಗಳನ್ನು ಪಡೆದು ಅವರು ಸರ್ವಶ್ರೇಷ್ಠ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಂಸದೀಯ ವ್ಯವಹಾರ ಪೋರ್ಟಲ್‌ ಸಮೀಕ್ಷೆಯ ಪ್ರಕಾರ ಸಂಸದ ಗೋಪಾಲ್‌ ಶೆಟ್ಟಿ ಅವರ ಸಂಸತ್ತಿನಲ್ಲಿ ವೈಯಕ್ತಿಕ ಸಾಧನೆ ಅಗ್ರಸ್ಥಾನದಲ್ಲಿದೆ.

ಲೋಕಸಭಾ ಕ್ಷೇತ್ರದಲ್ಲಿ ಉಪಸ್ಥಿತರಿದ್ದು ಜನಸಾಮಾನ್ಯರ ಸಂಪರ್ಕಕಕ್ಕೆ ಸುಲಭವಾಗಿ ಲಭ್ಯವಾಗುವುದು, ಕ್ಷೇತ್ರದ ಸಮಸ್ಯೆಗಳ ಬಗೆಗಿನ ಗಂಭೀರತೆ, ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದನೆ, ಸಮಸ್ಯೆಗಳ ಶೀಘ್ರ ಪರಿಹಾರ ಜತೆಗೆ ಜನತೆಯಲ್ಲಿರುವ ತಮ್ಮ ಬಗೆಗಿನ ಉತ್ತಮ ಅಭಿಪ್ರಾಯಗಳನ್ನು ಉಳಿಸಿಕೊಂಡಿರುವ ಎಲ್ಲ ಪ್ರಕಾರಗಳ ಸಮೀಕ್ಷೆಗಳಲ್ಲೂ ಗೋಪಾಲ್‌ ಶೆಟ್ಟಿ ಅವರು ದೇಶಾದ್ಯಂತದ ಇತರ ಸಂಸದರಿಗಿಂತ ಮೊದಲ ಸ್ಥಾನದಲಿದ್ದಾರೆ.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲೂ ಸಂಸದ ಗೋಪಾಲ್‌ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವಕ ಎರ್ಮಾಳ್‌ ಹರೀಶ್‌ ಶೆಟ್ಟಿ ಅವರು ದಿನಂಪ್ರತಿ ಸಾವಿರಾರು ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಿರುವುದು ಉಲ್ಲೇಖನೀಯ ಅಂಶವಾಗಿದೆ. ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಗೋಪಾಲ್‌ ಶೆಟ್ಟಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಅಭಿನಂದಿಸಿದ್ದರು.

Advertisement

ಮರಾಠಿ ಮಣ್ಣಿನಲ್ಲಿ ಕನ್ನಡಿಗ ಸಂಸದರೊಬ್ಬರ ಸಾಧನೆಯನ್ನು ಉತ್ತರ ಮುಂಬಯಿ ಬಿಜೆಪಿ ಘಟಕದ ಮುಂದಾಳು, ಸಂಘಟಕ, ಸಮಾಜ ಸೇವಕ ಎರ್ಮಾಳ್‌ ಹರೀಶ್‌ ಶೆಟ್ಟಿ, ಬಂಟರ ಸಂಘ ನೂತನ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಹೊಟೇಲಿಗರ ಸಂಘಟನೆ ಆಹಾರ್‌ನ ಡಾ| ಸತೀಶ್‌ ಶೆಟ್ಟಿ ಸಹಿತ ತುಳು, ಕನ್ನಡಿಗರು ಶ್ಲಾಘಿಸಿ ಗೋಪಾಲ್‌ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.

ಇದು ನನ್ನ ಕ್ಷೇತ್ರದ ಜನತೆ ನನಗೆ ನೀಡುತ್ತಿರುವ ಸಹಕಾರ, ಪ್ರೋತ್ಸಾಹದಿಂದ ಸಾಧ್ಯವಾಗಿದೆ. ನಿಮ್ಮೆಲ್ಲರ ಪ್ರೀತ್ಯಾದರಗಳಿಗೆ ಅಭಾರಿಯಾಗಿದ್ದೇನೆ. ನನ್ನನ್ನು ಜನರೇ ಅವರ ಸೇವೆಗಾಗಿ ಆಯ್ಕೆ ಮಾಡಿದ್ದಾರೆ. ಅವರ ಸೇವೆ ಮಾಡುವುದು ನನ್ನ ಧರ್ಮ. ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲೂ ನನ್ನ ಜನಸೇವೆ ಮುಂದುವರಿಯಲಿದೆ. ಸಮಸ್ಯೆಗಳನ್ನು ಜನತೆ ಮುಕ್ತವಾಗಿ ನನ್ನೊಂದಿಗೆ ಹಂಚಿಕೊಂಡಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ನಿಮ್ಮೆಲ್ಲರ ಅಭಿಮಾನ, ಪ್ರೀತಿ ಇದೇ ರೀತಿಯಲ್ಲಿ ಮುಂದುವರಿಯಲಿ.ಗೋಪಾಲ್‌ ಶೆಟ್ಟಿ, ಸಂಸದರು, ಉತ್ತರ ಮುಂಬಯಿ

ಸಂಸದ ಗೋಪಾಲ್‌ ಶೆಟ್ಟಿ ಅವರು ತುಳು, ಕನ್ನಡಿಗರ ಹೆಮ್ಮೆ. ಎರಡನೇ ಬಾರಿ ಅವರು ಸರ್ವಶ್ರೇಷ್ಠ ಸಂಸದರಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿಯಾಗಿದೆ. ಅವರ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ ಸದಾ ಇರಲಿ. ಉತ್ತರ ಮುಂಬಯಿಯ ಎಲ್ಲರ ಕಷ್ಟ, ಸುಖಗಳಿಗೆ ತತ್‌ಕ್ಷಣ ಸ್ಪಂದಿಸುತ್ತಿರುವ ಸಂಸದರು ಜಾತಿಯನ್ನು ಮೀರಿ ಬೆಳೆದವರು. ಅವರನ್ನು ಎಲ್ಲ ಜಾತಿ, ಧರ್ಮದವರು ಪ್ರೀತಿ, ಗೌರವಗಳಿಂದ ಕಾಣುತ್ತಿದ್ದಾರೆ. ಅವರಿಗೆ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿಯನ್ನು ದೇವರು ಕರುಣಿಸಲಿ. ಎರ್ಮಾಳ್‌ ಹರೀಶ್‌ ಶೆಟ್ಟಿ  ಪದಾಧಿಕಾರಿ, ಉತ್ತರ ಮುಂಬಯಿ ಬಿಜೆಪಿ ಘಟಕ

Advertisement

Udayavani is now on Telegram. Click here to join our channel and stay updated with the latest news.

Next