ಬೆಂಗಳೂರು : ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆಮ್ಮದಿ ನೀಡುವ ಯೋಜನೆಯನ್ನು ನಾವು ಘೋಷಿಸುತ್ತಿದ್ದೇವೆ.ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ.ಇದು ಕಾಂಗ್ರೆಸ್ ಗ್ಯಾರಂಟಿ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪೂರ್ವ ಭರವಸೆ ನೀಡಿದೆ.
”ಕಾಂಗ್ರೆಸ್ ಗ್ಯಾರಂಟಿ ನಂ.1 ‘ಗೃಹಜ್ಯೋತಿ’ ಯೋಜನೆ! ಬಿಜೆಪಿ ಸರ್ಕಾರದ ದುರಾಡಳಿತದಿಂದ, ಬೆಲೆಯೇರಿಕೆಯಿಂದ ದುಬಾರಿಯಾಗಿರುವ ಜನರ ಜೀವನ ನಿರ್ವಹಣೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷವು ಮೊದಲ ಭರವಸೆಯನ್ನು ಇಂದು ಘೋಷಿಸುತ್ತಿದೆ. ಪ್ರತಿ ಮನೆಗೆ, ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ – ಇದು ಕಾಂಗ್ರೆಸ್ ಭರವಸೆ” ಜನತೆಗೆ ಮೊದಲ ಆಶ್ವಾಸನೆಯನ್ನು ನೀಡಿ ಮತದಾರರ ಗಮನ ಸೆಳೆಯುವ ಯತ್ನ ಮಾಡಿದೆ.
”ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ ಕರ್ನಾಟಕ, ಇದು ಕಾಂಗ್ರೆಸ್ನ ಸದಾಶಯ. 2022ರ ಒಂದೇ ವರ್ಷದ ಅವಧಿಯಲ್ಲಿ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ ಬಿಜೆಪಿ ಸರ್ಕಾರ 4 ವರ್ಷದಲ್ಲಿ 8ಕ್ಕೂ ಹೆಚ್ಚು ಬಾರಿ ದರ ಏರಿಸಿದೆ. ಮುಂದಿನ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಬೆಳಕಾಗಲಿದೆ” ಎಂದು ಟ್ವೀಟ್ ಮಾಡಿದೆ.
”ಕೋವಿಡ್, ಲಾಕ್ಡೌನ್, ನೋಟ್ ಬ್ಯಾನ್, ಜಿಎಸ್ ಟಿ , ಬೆಲೆ ಏರಿಕೆಯಂತಹ ಅಮಾನವೀಯ ಕ್ರಮಗಳಿಂದ ಜನರ ಬದುಕು ಭಾರವಾಗಿದೆ. ಜನರ ದುಡಿಮೆ ಹಸಿವು ನೀಗಿಸಲು ಸಾಲದಾಗಿರುವಾಗ 200 ಯೂನಿಟ್ ಉಚಿತ ವಿದ್ಯುತ್ತಿನ ಗೃಹಜ್ಯೋತಿ ಘೋಷಣೆಯು ಜನಸಾಮಾನ್ಯರ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ.ಕಾಂಗ್ರೆಸ್ ಎಂದೂ ಜನಪರ” ಎಂದು ಹೇಳಿಕೊಂಡಿದೆ.