Advertisement

ಮೈಸೂರು ಅಸೋಸಿಯೇಶನ್‌ ಮತ್ತುಕರ್ನಾಟಕ ಸಂಘದಿಂದ ಶ್ರದ್ಧಾಂಜಲಿ ಸಭೆ

12:33 PM May 09, 2019 | Vishnu Das |

ಮುಂಬಯಿ: ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಕವಿ ನಾಡೋಜ ಡಾ| ಬಿ. ಎ. ಸನದಿ, ರಂಗಕರ್ಮಿ ಶ್ರೀಪತಿ ಬಲ್ಲಾಳ ಹಾಗೂ ಕತೆಗಾರ್ತಿ ತುಳಸಿ ವೇಣುಗೋಪಾಲ್‌ ಅವರು ಇತ್ತೀಚೆಗೆ ವಿಧಿವಶರಾಗಿದ್ದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಎ. 28ರಂದು ಮೈಸೂರು ಅಸೋಸಿಯೇಶನ್‌ನಲ್ಲಿ ಜರಗಿತು.

Advertisement

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ, ಮೈಸೂರು ಅಸೋಸಿ ಯೇಶನ್‌ ಮತ್ತು ಕರ್ನಾಟಕ ಸಂಘ ಮುಂಬಯಿ ವತಿಯಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ವಿದುಷಿ ಶ್ಯಾಮಲಾ ರಾಧೇಶ್‌ ಸನದಿಯವರ ಎರಡು ಕವನಗಳನ್ನು ಹಾಡಿದರು. ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿಯವರು ನುಡಿ ನಮನ ಸಲ್ಲಿಸಿ, ನಾವು ಮನುಷ್ಯರನ್ನು ಗುರುತಿಸುವುದು ಹೃದಯದ ಬೆಸುಗೆಯಿಂದ, ಮಾತುಗಳಿಂದಲ್ಲ, ಸೇವೆಯಿಂದ. ಸನದಿಯವರು ಕನ್ನಡ ನಾಡು ನುಡಿಯ ಸೇವೆ ಮಾಡಿದ ಮಹತ್ವದ ಸಾಹಿತಿ. ಕನ್ನಡದ ಜನ ನನಗೆ ಬೇಕಾದವರು ಎಂದು ನಂಬಿದವರು. ಶ್ರೀಪತಿ ಬಲ್ಲಾಳರು ಮುಂಬಯಿಯ ನಾಟಕ ಕ್ಷೇತ್ರವನ್ನು ಬೆಳೆಸಿದರು. ಕರ್ನಾಟಕ ಸಂಘವನ್ನು ಚಟುವಟಿಕೆಯ ಕೇಂದ್ರವಾಗಿ ಬೆಳೆಸಿದರು. ತುಳಸಿಯವರು ಕನ್ನಡದ ಸೃಜನಶೀಲ ಕತೆಗಾರ್ತಿ ಎಂದರು.

ಹಿರಿಯ ರಂಗ ಕರ್ಮಿ, ಸಂಘಟಕ ಕೆ. ಮಂಜುನಾಥಯ್ಯ ಅವರು ಮಾತನಾಡಿ, ಶ್ರೀಪತಿ ಬಲ್ಲಾಳರವರದ್ದು ಬಹುಮುಖ ವ್ಯಕ್ತಿತ್ವ. ಛಲದಿಂದ ನಾಟಕ ಆಡುತ್ತಿದ್ದರು. ತನ್ನ ಇಡಿ ಸಂಸಾರವನ್ನು ನಾಟಕರಂಗದಲ್ಲಿ ತೊಡಗಿಸಿಕೊಂಡವರು. ಸಂಘದ ಪ್ರಮುಖ ಮುಖವಾಗಿದ್ದರು. ಸನದಿಯವರು ಮುಂಬಯಿಯ ಎಲ್ಲ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಎಲ್ಲರಿಗೆ ಪ್ರೀತಿ ಹಂಚಿದರು. ಎನ್‌. ಕೆ. ಇ. ಎಸ್‌. ಶಿಕ್ಷಣ ಸಂಸ್ಥೆಯಲ್ಲಿಯೂ ಸೇವೆ ಮಾಡಿದರು. ಮುಂಬಯಿಯ ಕನ್ನಡಿಗರು ಹೆಮ್ಮೆ ಪಡುವ ಸಾಹಿತಿ ಎಂದು ನುಡಿ ನಮನ ಅರ್ಪಿಸಿದರು.

ರಂಗ ನಿರ್ದೇಶಕ ಡಾ| ಬಿ. ಆರ್‌. ಮಂಜುನಾಥ್‌ ಅವರು ಬಲ್ಲಾಳರ ರಂಗ ಚಟುವಟಿಕೆಗಳನ್ನು ನೆನಪಿಸುತ್ತಾ, ಆ ಕಾಲದಲ್ಲಿ ನಾಟಕದ ಗುಣಮಟ್ಟದಲ್ಲಿ ನಮ್ಮಲ್ಲಿ ಆರೋಗ್ಯಕರ ಸ್ಪರ್ಧೆ ಇರುತ್ತಿತ್ತು. ಬಲ್ಲಾಳರು ಉತ್ತಮ ನಟ, ನಿರ್ದೇಶಕ ಹಾಗೂ ಗಾಯಕರಾಗಿದ್ದರು. 60, 70 ಹಾಗೂ 80 ರ ದಶಕದಲ್ಲಿ ಮುಂಬಯಿಯಲ್ಲಿ ಚಿನ್ನದ ದಶಕವಾಗಿತ್ತು. ಎಲ್ಲರೂ ಕನ್ನಡತನವನ್ನು ಹೆಚ್ಚಿಸಬೇಕೆಂದು ದುಡಿಯುತ್ತಿದ್ದರು. ಅವರ ತಂಡದಲ್ಲಿ ಸಾಂಸಾರಿಕ ಒಳಗೊಳ್ಳುವಿಕೆಯಿತ್ತು ಎಂದು ಸನದಿಯವರನ್ನು ನೆನಪಿಸುತ್ತಾ ಅವರ ಭುವಿ ಬಾನಂಗಳ ನಡುವಿನ ಬಯಲಿಗೆ ಎಂಬ ಕವಿತೆ ಹಾಡಿದರು.

ಕನ್ನಡ ಕಲಾಕ್ಷೇತ್ರದ ಅಧ್ಯಕ್ಷರಾದ ಬಿ. ಬಾಲಚಂದ್ರರಾವ್‌ ಅವರು ಮಾತನಾಡಿ, ಸನದಿಯವರು ಇತ್ತೀಚೆಗೆ ಸಮ್ಮಾನಿಸಿಕೊಂಡ ಸಂದರ್ಭವನ್ನು ನೆನಪಿಸಿಕೊಂಡರು. ಶ್ರೀಪತಿ ಬಲ್ಲಾಳರು ಉತ್ತಮ ನಿರ್ದೇಶಕರು. ಅವರ ನಾಟಕಗಳಲ್ಲಿ ಅಭಿನಯಿಸಿದ್ದು ನನ್ನ ಭಾಗ್ಯ. ಅವರು ಉತ್ತಮ ಮನುಷ್ಯರಾಗಿ ಮಾರ್ಗದರ್ಶಕರಾಗಿದ್ದರು ಎಂದು ನುಡಿದರು.

Advertisement

ಶಿಕ್ಷಣ ತಜ್ಞ ಡಾ| ಎಸ್‌. ಕೆ. ಭವಾನಿ ಮಾತನಾಡಿ, ಬಿ. ಎ. ಸನದಿಯವರು ಮಾನವೀಯತೆಯ ಬಗ್ಗೆ ಬರೆದ ಮಹತ್ವದ ಕವಿ ಎಂದು ಅವರ ಸಾಧನೆಗಳ ಬಗ್ಗೆ ಮೆಲುಕು ಹಾಕಿದರು. ಕವಿ ವಿ. ಎಸ್‌. ಶ್ಯಾನ್‌ಭಾಗ ಅವರು ಮಾತನಾಡಿ, ಸನದಿಯವರು ಮುಂಬಯಿಯ ಮಾಸ್ತಿ ಇದ್ದ ಹಾಗೆ ಅವರ ನಿಜವಾದವ್ಯಕ್ತಿತ್ವ ಇರುವುದು ಹುರಿದುಂಬಿಸುವಿಕೆಯಲ್ಲಿ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಎಂ. ಎಂ. ಕೋರಿಯವರು ಮಾತನಾಡಿ, ಬಸವೇಶ್ವರ ಫಿಲಾಸಿಪಿಕಲ್‌ ಸೊಸೈಟಿ ಮತ್ತು ಕರ್ನಾಟಕ ಸಂಘದಲ್ಲಿರುವಾಗ ಸನದಿಯವರ ಒಡನಾಟವನ್ನು ನೆನಪಿಸಿಕೊಂಡರು. ರಂಗ ಕಲಾವಿದ ಮೋಹನ್‌ ಮಾರ್ನಾಡ್‌ ಅವರು ತನಗೆ ಸನದಿಯವರು ನೀಡಿದ ಪ್ರೋತ್ಸಾಹ ಅನನ್ಯವಾದದ್ದು. ಅವರು ನೀಡಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಲ್ಲದೆ ಬಲ್ಲಾಳರು ನನ್ನಂತಹ ಕಲಾವಿದರನ್ನು ಪ್ರೋತ್ಸಾಹಿಸಿದ್ದರಿಂದ ನಾನು ಈ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು ಎಂದು ಸನದಿಯವರ ಕವನ ವಾಚಿಸಿದರು.

ಅರವಿಂದ ಬಲ್ಲಾಳರು ಮಾತನಾಡಿ, ತನ್ನ ಚಿಕ್ಕಪ್ಪನ ಜತೆಗಿನ ಕೌಟುಂಬಿಕ ಹಾಗೂ ರಂಗಭೂಮಿಯ ಒಡನಾಟವನ್ನು ವಿವರಿಸಿದರು. ಕತೆಗಾರ ರಾಜೀವ ನಾಯಕ ಅವರು ಸನದಿಯವರ ತುಳಸಿಕಟ್ಟೆ ಕವನದ ಮೂಲಕ ಸನದಿಯವರ ಸಾಹಿತ್ಯದ ಮಾನವೀಯ ಮುಖವನ್ನು ಪರಿಚಯಿಸಿದರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಕಾರ್ಯಕ್ರಮ ನಿರೂಪಿಸಿದರು. ಮೌನಾಚರಣೆಯ ಮೂಲಕ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next