Advertisement

ಕಣಿಯೂರು-ಪದ್ಮುಂಜ ರಸ್ತೆ ಬಿರುಕಿಗೆ ಕಾಂಕ್ರೀಟ್‌

04:25 PM Jun 07, 2018 | |

ಬೆಳ್ತಂಗಡಿ : ರಸ್ತೆ ಕಾಮಗಾರಿ ಮುಗಿದಿದೆ. ಉದ್ಘಾಟನೆಗೆ ಇನ್ನೇನು ಕೆಲವು ದಿನಗಳಿರಬೇಕು ಎನ್ನುವಷ್ಟರಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಮಳೆಯಿಂದಾಗಿ ರಸ್ತೆಯಲ್ಲಿ ಬಿರುಕು ಕಂಡುಬಂದು ಕುಸಿತ ಭೀತಿ ಎದುರಾಗಿತ್ತು. ಇದೀಗ ರಸ್ತೆ ಬಿರುಕಿಗೆ ಕಾಂಕ್ರೀಟ್‌ ಹಾಕಿ ಕ್ರಮ ಕೈಗೊಳ್ಳಲಾಗಿದೆ.

Advertisement

ರಸ್ತೆಯೇ ಇಲ್ಲದ ಊರಲ್ಲಿ ಜನತೆ ಸೇರಿಕೊಂಡು ಖಾಸಗಿಯವರಿಗೆ ಸುಮಾರು ಸುಮಾರು 15.50 ಲಕ್ಷ ರೂ. ನೀಡಿ ಜಮೀನು ಖರೀದಿಸಿದ್ದರು. ರಸ್ತೆ ನಿರ್ಮಾಣಕ್ಕೆ ಸರಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಣಿಯೂರಿನಿಂದ ನೆಕ್ಕಿಲುವರೆಗಿನ 2.5 ಕಿ.ಮೀ.ಗೆ 1.99 ಕೋಟಿ ರೂ. ಅನು ದಾನ ಬಿಡುಗಡೆ ಮಾಡಿ ಡಾಮರು ಕಾಮಗಾರಿ ನಡೆದಿತ್ತು. ಆದರೆ ಇತ್ತೀಚೆಗೆ ಸುರಿದ ಮಳೆಗೆ ನೀರು ಹರಿದು ಹಾಗೂ ವಾಹನಗಳು ಹೋದ ಪರಿಣಾಮ ಜಾಜಿಬೆಟ್ಟು ಬಳಿ ರಸ್ತೆಯಲ್ಲಿ ಬಿರುಕು ಕಂಡುಬಂದಿತ್ತು.

ರಸ್ತೆ ಕನಸು ಸಾಕಾರ
ಸುಮಾರು 300ಕ್ಕಿಂತಲೂ ಹೆಚ್ಚು ಸಾರ್ವಜನಿಕರು ಪಕ್ಷಾತೀತವಾಗಿ ಶ್ರಮಿಸಿದ ಪರಿಣಾಮ 3 ವರ್ಷಗಳಲ್ಲೇ ರಸ್ತೆ ನಿರ್ಮಾಣ ಕನಸು ಸಾಕಾರಗೊಂಡಿತ್ತು. ರಸ್ತೆಯಿಂದ ಬಂಡಸಾಲೆ, ಪಿಲಿಕುಡೇಲು, ತಾರಿದಡಿ ಎಂಬ ಮೂರು ಕಾಲುದಾರಿಗಳ ಮೂಲಕ ಜನತೆ ಕಣಿಯೂರು – ಪದ್ಮುಂಜ ಜನತೆ ಸಂಪರ್ಕ ಸಾಧಿಸುತ್ತಿದ್ದಾರೆ. ರಸ್ತೆ ಬಿರುಕಿಗೆ ಕಾಂಕ್ರೀಟ್‌ ಹಾಕಲಾಗಿದ್ದು, ಆತಂಕವಿಲ್ಲ ಎಂದು ಯೋಜನಾ ವಿಭಾಗದ ಸ. ಎಂಜಿನಿಯರ್‌ ಉದಯ್‌ ಕುಮಾರ್‌ ತಿಳಿಸಿದ್ದಾರೆ.

ಬಿರುಕಿಗೆ ಕಾಂಕ್ರೀಟ್‌
ಕಾಮಗಾರಿ ನಡೆಸಿದ ಖಾಸಗಿಯವರ ಜಾಗದಲ್ಲಿ ರಸ್ತೆಯಲ್ಲಿ ಬಿರುಕು ಕಂಡುಬಂದಿದೆ. ರಸ್ತೆ ಎತ್ತರಿಸಲು ಮಣ್ಣು ಹಾಕಲಾಗಿದ್ದು, ಮಳೆ ನೀರು ಹೆಚ್ಚಾಗಿ ಹರಿದು ಬಂದ ಕಾರಣ ಬಿರುಕು ಬಿದ್ದಿದೆ ಎನ್ನಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ನೀಡಿ ಪರಿಶೀಲಿಸಿದ್ದು, ಬಿರುಕಿಗೆ ಕಾಂಕ್ರೀಟ್‌ ಹಾಕಲಾಗಿದೆ.

ಕಾಂಕ್ರೀಟ್‌ ವಾಲ್‌ ಶೀಘ್ರ ನಿರ್ಮಾಣ
ರಸ್ತೆ ಆಳದಲ್ಲಿದ್ದುದರಿಂದ ಮಣ್ಣು ಹಾಕಿ ಎತ್ತರಿಸಲಾಗಿತ್ತು. ಇದರಿಂದ ಸಮಸ್ಯೆಯಾಗಿದೆ. ನೀರು ಹರಿದುಹೋಗಲು ಕಾಂಕ್ರೀಟ್‌ ವಾಲ್‌ಗ‌ಳನ್ನು ನಿರ್ಮಿಸುವ ಕಾರ್ಯ ಮಳೆ ನಿಂತ ಕೂಡಲೇ ಮಾಡಲಾಗುತ್ತದೆ. ಬಿರುಕು ಸರಿಪಡಿಸಲಾಗಿದೆ. ಸೂಕ್ತ ನಿರ್ವಹಣೆಯನ್ನೂ ಮಾಡಲಾಗಿದೆ. 5 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿರುವುದರಿಂದ ಕ್ರಮ ಕೈಗೊಳ್ಳಲಾಗುತ್ತದೆ.
– ಉದಯ್‌ ಕುಮಾರ್‌
ಯೋಜನಾ ವಿಭಾಗದ ಸಹಾಯಕ
ಎಂಜಿನಿಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next