Advertisement

Kota ಸಮಗ್ರ ಕನ್ನಡಾಭಿವೃದ್ಧಿ ಕಾನೂನು: ಡಾ| ಜೋಷಿ ಆಗ್ರಹ

11:40 PM Dec 05, 2023 | Team Udayavani |

ಕೋಟ: ಕನ್ನಡ ಮಾಧ್ಯಮ ಶಾಲೆಗಳು ಉಳಿದರೆ ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳು ಮುಚ್ಚಬಾರದು. ಶಿಕ್ಷಣ, ವ್ಯಾಪಾರ, ಉದ್ಯಮ, ನ್ಯಾಯಾಲಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಬಳಕೆ ಹೆಚ್ಚಳಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್‌ ಮನವಿಯಂತೆ ರಚಿಸಲಾದ ಸಮಗ್ರ ಕನ್ನಡಾಭಿವೃದ್ಧಿ ಕಾನೂನನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಕಸಾಪ ರಾಜ್ಯಾಧ್ಯಕ್ಷ ಡಾ| ಮಹೇಶ ಜೋಷಿ ಸರಕಾರವನ್ನು ಆಗ್ರಹಿಸಿದರು.

Advertisement

ಅವರು ಮಂಗಳವಾರ ಕೋಟ ವಿವೇಕ ವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಆಶ್ರಯದಲ್ಲಿ, ವಿವೇಕ ವಿದ್ಯಾಸಂಸ್ಥೆ ಸಹಕಾರದಲ್ಲಿ ಜರಗಿದ 16ನೇ ಕನ್ನಡ ಸಾಹಿತ್ಯ ಸಮ್ಮೇಳನ “ಅನುಸಂಧಾನ’ವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕನ್ನಡ ಭವನ
ಭಕ್ತ ಕನಕದಾಸರು, ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು, ಸಂತ ಶಿಶುನಾಳ ಶರೀಫರ ಸಹಿತ ಮಹಾತ್ಮರು ಕನ್ನಡ ಭಾಷೆಯಲ್ಲಿ ವಚನ, ಕೀರ್ತನೆಗಳ ಮೂಲಕ ದೇವರನ್ನು ಒಲಿಸಿಕೊಂಡವರು. ಕನ್ನಡ ಭಾಷೆಗೆ ಅಂತಹ ಶಕ್ತಿ ಇದೆ. ಕರಾವಳಿಯಲ್ಲಿ ಶುದ್ಧ ಕನ್ನಡ ಬಳಕೆಯಲ್ಲಿದೆ. ಸಾಹಿತ್ಯಕ್ಕೆ ಈ ಭಾಗದ ಕೊಡುಗೆ ಅಪಾರ. ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಇದಕ್ಕಾಗಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳನ್ನಾಡಿ, ನಿಷ್ಕಲ್ಮಶ ಮನಸ್ಸು, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನದಿಂದ ಕನ್ನಡ ಕಾರ್ಯಕ್ರಮ ನಡೆಯಲಿದೆ. ಪ್ರಾದೇಶಿಕ, ಸಾಮಾಜಿಕ, ಪ್ರತಿಭಾ ನ್ಯಾಯಕ್ಕೆ ಈ ಸಮ್ಮೇಳನದಲ್ಲಿ ಅವಕಾಶ ನೀಡಲಾಗಿದೆ ಎಂದರು.

ಕೋಟ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಪುಸ್ತಕ ಮಳಿಗೆಗೆ ಚಾಲನೆ ನೀಡಿದರು. ಹೊರನಾಡ ಕನ್ನಡಿಗ ಹಾಗೂ ವಿದ್ವಾಂಸ ಸಂಶೋಧಕ ಬಾಬು ಶಿವ ಪೂಜಾರಿ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಹಿಂದಿನ ಸಮ್ಮೇಳನಾಧ್ಯಕ್ಷ, ಹಿರಿಯ ಸಂಶೋಧಕ ಎ.ವಿ. ನಾವಡ ಮಾತನಾಡಿದರು.

Advertisement

ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ, ಉದ್ಯಮಿ ಆನಂದ ಕುಂದರ್‌, ದ.ಕ. ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸ. ನಿರ್ದೇಶಕಿ ಪೂರ್ಣಿಮಾ, ಕೋಟ ಪ.ಪೂ. ಪ್ರಾಂಶುಪಾಲ ಜಗದೀಶ ನಾವಡ, ಕಸಾಪ ತಾಲೂಕು ಅಧ್ಯಕ್ಷರಾದ ರಾಮಚಂದ್ರ ಐತಾಳ, ರವಿರಾಜ್‌ ಎಚ್‌., ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪುಂಡಲೀಕ ಮರಾಠೆ, ಶ್ರೀನಿವಾಸ ಭಂಡಾರಿ, ಡಾ| ಉಮೇಶ ಪುತ್ರನ್‌, ಡಾ| ರಘು ನಾಯ್ಕ ಮೊದಲಾದವರಿದ್ದರು.

ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ನರೇಂದ್ರ ಕುಮಾರ ಕೋಟ ನಿರೂಪಿಸಿದರು. ಸಾಹಿತಿ ಗೋಪಾಲ ತ್ರಾಸಿ ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು. ಸತೀಶ ವಡ್ಡರ್ಸೆ ವಂದಿಸಿದರು.

ಶಿಕ್ಷಕರಿಗೆ ಅನ್ಯ ಜವಾಬ್ದಾರಿ ನೀಡದಿರಿ
ಶಿಕ್ಷಕರನ್ನು ಸರಕಾರಿ ಕೆಲಸಗಳಿಗೆ, ಚುನಾವಣೆಗಳಿಗೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಶಿಕ್ಷಕರಿರುವುದು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಹೊರತು ಬಿಸಿಯೂಟ, ಚುನಾವಣೆ ವ್ಯವಸ್ಥೆಯನ್ನು ನೋಡಿಕೊಳ್ಳುವುದಕ್ಕಲ್ಲ. ಆ ಜವಾಬ್ದಾರಿಗೆ ಪ್ರತ್ಯೇಕ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ ಅಭಿಪ್ರಾಯಪಟ್ಟರು.

ಪ್ರಾಜ್ಞರ ಸಮಿತಿ
ಕನ್ನಡ ಶಾಲೆಗಳ ದುಸ್ಥಿತಿಯ ನಿಜ ಕಾರಣಗಳನ್ನು ಪ್ರಾಜ್ಞರ ಸಮಿತಿ ಮೂಲಕ ಕಂಡುಹಿಡಿದು ಅವುಗಳ ಪರಿಹಾರದ ಮಾರ್ಗಗಳನ್ನು ಹುಡುಕ ಬೇಕಾಗಿದೆ. ಆಂಗ್ಲ ಮಾಧ್ಯಮದ ಶಾಲೆಗಳಲ್ಲಿದ್ದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಕನ್ನಡ ಸರಕಾರಿ ಶಾಲೆಗಳಲ್ಲಿ ಅಳವಡಿಸಬೇಕು ಎಂದರು.

ಮಂಡ್ಯ ಜಿಲ್ಲೆ: ಶೀಘ್ರ
ಅಖಿಲ ಭಾರತ ಕನ್ನಡ
ಸಾಹಿತ್ಯ ಸಮ್ಮೇಳನ
ಕೋಟ: ಅಖಿಲ ಭಾರತ ಮಟ್ಟದ 87ನೇ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ನಡೆಯಬೇಕಿದೆ. ಆದರೆ ಮಂಡ್ಯದಲ್ಲಿ ಬರ ಘೋಷಣೆಯಾಗಿ ರುವುದರಿಂದ, ಕಾವೇರಿ ನೀರಿನ ವಿಚಾರದಲ್ಲಿ ಸಮಸ್ಯೆ ಇರುವುದರಿಂದ ಸಮ್ಮೇಳನದ ಮೂಲಕ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು. ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆ ಮಂಡ್ಯದ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಿ 2024ರ ಆರಂಭದಲ್ಲೇ ಸಮ್ಮೇಳನ ನಡೆಸಲು ತಯಾರಿ ನಡೆಸುತ್ತೇವೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ| ಮಹೇಶ್‌ ಜೋಷಿ ಮಂಗಳವಾರ ಕೋಟದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕನ್ನಡ ಶಾಲೆಗಾಗಿ ಹೊಸ ಹೋರಾಟ
ಕನ್ನಡ ಶಾಲೆಗಳ ಉಳಿವಿಗಾಗಿ ಶಾಲೆಗಳ ಮೂಲಸೌಕರ್ಯ ಬಲಗೊಳ್ಳಬೇಕು. ಇದಕ್ಕಾಗಿ ಈಗಾಗಲೇ ನಾಡಿನ ಖ್ಯಾತ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಮಠಾಧೀಶರು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಚಿಂತಕರ ಸಭೆ ಕರೆಯಲಾಗಿದೆ. ಅವರೊಂದಿಗೆ ಚರ್ಚಿಸಿ ಹೋರಾಟದ ರೂಪರೇಖೆ ನಿರ್ಧರಿಸಲಾಗುವುದು ಮತ್ತು ಶಾಲೆಗಳ ದುಃಸ್ಥಿತಿ ಸುಧಾರಣೆಗಾಗಿ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next