Advertisement

ನಮಗೆ ಸ್ಪರ್ಧೆ ಎದುರಾಗುತ್ತದೆ ಎಂದೇನೂ ಅನಿಸುವುದಿಲ್ಲ!

10:15 PM Jan 14, 2017 | |

ಮುಂಬರುವ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸತತ ತೃತೀಯ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ ಶಿರೋಮಣಿ ಅಕಾಲಿ ದಳ – ಬಿಜೆಪಿ ಮೈತ್ರಿಕೂಟ. ಹಾಲಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಸುಖ್‌ಬೀರ್‌ ಸಿಂಗ್‌ ಬಾದಲ್‌, ರೀಡಿಫ್ ಡಾಟ್‌ ಕಾಮ್‌ಗೆ ನೀಡಿರುವ ಸಂದರ್ಶನದಲ್ಲಿ ಕಾಂಗ್ರೆಸನ್ನು ತ್ಯಾಜ್ಯ ವಿಲೇವಾರಿ ಕಂಪೆನಿಗೆ ಹೋಲಿಸಿದ್ದಾರೆ, ಆಪ್‌ನಿಂದ ಸ್ಪರ್ಧೆಯೇ ಇಲ್ಲ ಎಂದಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Advertisement

ಚಂಡೀಗಢ ಮುನಿಸಿಪಲ್‌ ಚುನಾವಣೆ ಫ‌ಲಿತಾಂಶ ಗಮನಿಸಿ ಹೇಳುವುದಾದರೆ ಉನ್ನತ ಮೌಲ್ಯದ ನೋಟು ರದ್ದತಿ ಶಿರೋಮಣಿ ಅಕಾಲಿ ದಳ – ಬಿಜೆಪಿ ಮೈತ್ರಿಕೂಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ ಅಲ್ಲವೆ?
       ಚಂಡೀಗಢ ಮುನಿಸಿಪಲ್‌ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ- ಬಿಜೆಪಿ ಮೈತ್ರಿಕೂಟದ ಗೆಲುವು ಕಪ್ಪುಹಣ ಮತ್ತು ಭ್ರಷ್ಟಾಚಾರಗಳ ವಿರುದ್ಧ ಪ್ರಧಾನಿ ಮೋದಿ ಇರಿಸಿರುವ ಹೆಜ್ಜೆಗಳನ್ನು ಹೀಗೆಳೆಯುತ್ತಿರುವವರ ಕಪಾಳಮೋಕ್ಷ ಮಾಡಿದಂತಿದೆ. ಉತ್ತಮ ಆಡಳಿತವನ್ನು ಪ್ರಜೆಗಳು ಬೆಂಬಲಿಸುತ್ತಾರೆ ಮತ್ತು ಜನಸಾಮಾನ್ಯರ ನಡುವೆ ಈ ಸರಕಾರದ ಬಗ್ಗೆ ಮೆಚ್ಚುಗೆ ಇರುವುದಕ್ಕೆ ಸಾಕ್ಷಿಯೂ ಆಗಿದೆ.  

ಆಪ್‌ ಮತ್ತು ಕಾಂಗ್ರೆಸ್‌ – ಇವರಡರ ನಡುವೆ ನೀವು ಯಾರನ್ನು ಪ್ರಬಲ ಎದುರಾಳಿ ಎಂದು ಭಾವಿಸುತ್ತೀರಿ? 
        ನಮಗೆ ಸ್ಪರ್ಧೆ ಇದೆ ಎಂದೇ ನಾನು ಭಾವಿಸುವುದಿಲ್ಲ.ಶಿರೋಮಣಿ ಅಕಾಲಿ ದಳ ಜನಸಾಮಾನ್ಯರ ಪಕ್ಷ. ಕಳೆದ ಒಂಬತ್ತು ವರ್ಷಗಳಿಂದ ಉತ್ತಮ ಆಡಳಿತ ನೀಡುವುದಕ್ಕಾಗಿ ಶಕ್ತಿ ಮೀರಿ ಶ್ರಮಿಸಿದ್ದೇವೆ. ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಬದ್ಧರಾಗಿ ಕೆಲಸ ಮಾಡಿದ್ದರಿಂದಲೇ ಮತದಾರರು ನಮ್ಮನ್ನು ಎರಡು ಬಾರಿ ಆರಿಸಿದರು. ಮೂರನೇ ಬಾರಿಗೂ ನಾವು ಗೆಲ್ಲುವ ವಿಶ್ವಾಸ ನನಗಿದೆ. ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷ ಸಹಿತ ನಮ್ಮ ಎದುರಾಳಿಗಳಿಗೆ ಒಂದು ಸ್ಪಷ್ಟ ಅಜೆಂಡಾವೇ ಇಲ್ಲ. ರಾಜಕೀಯ ಆಟಗಳನ್ನು ಮಾತ್ರ ಅವರು ಆಡುತ್ತಿದ್ದಾರೆ. ನಾವು ಈಗಾಗಲೇ ಅಭ್ಯರ್ಥಿಗಳನ್ನು ಆರಿಸಿ ಟಿಕೆಟ್‌ ನೀಡಿಯಾಗಿದೆ, ಪ್ರಚಾರವನ್ನೂ ಆರಂಭಿಸಿದ್ದೇವೆ. ನಾವು ತಿರಸ್ಕರಿಸಿದ ನಾಯಕರನ್ನು ಕಾಂಗ್ರೆಸ್‌ ತನ್ನೊಳಗೆ ಸೇರಿಸಿಕೊಂಡು ತಾಜ್ಯ ವಿಲೇವಾರಿ ಕಂಪೆನಿಯಂತಾಗಿದೆ. ಆಂತರಿಕ ತಿಕ್ಕಾಟ ಆ ಪಕ್ಷವನ್ನು ಛಿದ್ರಗೊಳಿಸಿದೆ. ಆಪ್‌ ಬಗ್ಗೆ ಏನೂ ಹೇಳದಿರುವುದೇ ಒಳ್ಳೆಯದು.    

ಆಪ್‌ ಈ ಬಾರಿ ಸ್ಪರ್ಧೆಗಿಳಿದಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ತ್ರಿಕೋನ ಸ್ಪರ್ಧೆಯಲ್ಲಿ ಯಾರು ಮೇಲುಗೈ ಹೊಂದಿದ್ದಾರೆ? 
        ನಾನಂತೂ ಇದನ್ನು ತ್ರಿಕೋನ ಸ್ಪರ್ಧೆ ಎಂದು ಪರಿಗಣಿಸಿಲ್ಲ. ಆಪ್‌ನಿಂದ ಸ್ಪರ್ಧೆ ಎದುರಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಸ್ಪರ್ಧೆಯೇನಿದ್ದರೂ ನಮ್ಮ ಮತ್ತು ಕಾಂಗ್ರೆಸ್‌ ನಡುವೆ. ಹಾಗೆ ನೋಡಿದರೆ ಆಪ್‌ ಒಂದು ರಾಜಕೀಯ ಪಕ್ಷವೇ ಅಲ್ಲ. ಮಿತಿಮೀರಿದ ಪ್ರಚಾರದ ಮೂಲಕ ಸೃಷ್ಟಿಯಾದ ಒಂದು ಚಳವಳಿ ಅಷ್ಟೇ. ಈಗಾಗಲೇ ಅದು ತನ್ನ ಅಳತೆಗಿಂತ ಹೆಚ್ಚು ಊದಿಬಿಟ್ಟಿದೆ, ಇನ್ನೀಗ ಅದು ಠುಸ್ಸೆನ್ನುವುದಷ್ಟೇ ಬಾಕಿ. ನಾಳೆ ದಿಲ್ಲಿಯಲ್ಲಿ ಚುನಾವಣೆಯಾಗಲಿ; ಆಪ್‌ ಒಂದೂ ಸ್ಥಾನ ಗೆಲ್ಲಲಾರದು. 

ಯಾರ ಬಗ್ಗೆ ನಿಮಗೆ ಹೆಚ್ಚು ಅಂಜಿಕೆ – ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅಥವಾ ಅರವಿಂದ ಕೇಜ್ರಿವಾಲ್‌?
        ಶಿರೋಮಣಿ ಅಕಾಲಿ ದಳ ಕಳೆದ ಒಂದು ದಶಕದಿಂದ ಪಂಜಾಬಿನ ಅಭಿವೃದ್ಧಿ, ಜನಕಲ್ಯಾಣಕ್ಕಾಗಿ ಶಕ್ತಿಮೀರಿ ದುಡಿದಿದೆ. ನಾವು ಏನನ್ನು ಭರವಸೆ ನೀಡಿದ್ದೆವೋ ಅದನ್ನು ಸಾಕಾರಗೊಳಿಸಿದ್ದೇವೆ. ಶಿರೋಮಣಿ ಅಕಾಲಿದಳ – ಬಿಜೆಪಿ ಮೈತ್ರಿಕೂಟ ಸರಕಾರ ಆರಂಭಿಸಿದ ಅಭಿವೃದ್ಧಿ ಕ್ರಮಗಳಿಂದಾಗಿ ಇಂದು ಪಂಜಾಬ್‌ ಪ್ರಗತಿಯ ನೆಗೆಹಲಗೆಯ ಮೇಲೆ ನಿಂತಿದೆ. ದೇಶದ ನಂ. ರಾಜ್ಯವಾಗುವ ಹಾದಿಯಲ್ಲಿರುವುದಷ್ಟೇ ಅಲ್ಲದೆ, ಅತ್ಯಂತ ಶಾಂತಿ – ಸಮೃದ್ಧಿ, ಸೌಹಾರ್ದ ಮತ್ತು ಸಾಮಾಜಿಕ ಸಮಾನತೆಯುಳ್ಳ ರಾಜ್ಯವಾಗಿಯೂ ಬೆಳೆದಿದೆ. 

Advertisement

ದಿಲ್ಲಿಯ ವೈಫ‌ಲ್ಯ ಮತ್ತು ಸಟ್ಲೆಜ್‌ – ಯಮುನಾ ನದಿ ಜೋಡಣೆ ಕಾಲುವೆ ವಿಚಾರದಲ್ಲಿ ಯು ಟರ್ನ್ ಹೊಡೆದಿದ್ದರಿಂದಾಗಿ ಅರವಿಂದ ಕೇಜ್ರಿವಾಲ್‌ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಇತ್ತ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ವಾಸ್ತವ ಏನೆಂದೇ ಗೊತ್ತಿಲ್ಲ. ತನ್ನ ಇಮೇಜ್‌ ಮ್ಯಾನೇಜರ್‌ಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ ಅಷ್ಟೇ. ರೈತರ ಸಾಲಗಳನ್ನು ಮನ್ನಾ ಮಾಡುತ್ತೇವೆ ಎಂದರು, ಆ ಬಳಿಕ ಈಗ ಪ್ರಧಾನಿ ಬಳಿಗೆ ಹೋಗಿ ಮನ್ನಾ ಮಾಡುವಂತೆ ಬೇಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಸಂಪನ್ಮೂಲ ಸಂಗ್ರಹ ಕಾಂಗ್ರೆಸ್‌ನಿಂದ ಅಸಾಧ್ಯ ಎಂಬುದನ್ನು ಅದರ ಚರಿತ್ರೆಯೇ ಹೇಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಮರೀಂದರ್‌ ಸಾಲ ಮನ್ನಾ, ಉಚಿತ ಸ್ಮಾರ್ಟ್‌ ಫೋನ್‌, ನಿರುದ್ಯೋಗ ಭತ್ತೆಯಂತಹ ಭರವಸೆಗಳನ್ನು ಹೇಗೆ ಈಡೇರಿಸುತ್ತಾರೆ? 

ನಿಮ್ಮ ಕ್ಷೇತ್ರ ಜಲಾಲಾಬಾದ್‌ನಲ್ಲಿ ಆಪ್‌ ತನ್ನ ಸಂಸದ ಭಗವಂತ್‌ ಮಾನ್‌ ಅವರನ್ನು ಕಣಕ್ಕಿಳಿಸಿದೆಯಲ್ಲ… 
       ನಮ್ಮ ಪಕ್ಷದಲ್ಲಿ ತಮಾಶೆ, ವಿನೋದಗಳ ಕೊರತೆ ಇತ್ತು; ಭಗವಂತ್‌ ಸ್ಪರ್ಧೆ ಅದಕ್ಕೆ ಒಳ್ಳೆಯ ಸರಕಾಗಿದೆ. ಗಂಭೀರವಾಗಿ ಹೇಳುವುದಿದ್ದರೆ, ಭಗವಂತ್‌ ಮಾನ್‌ ಅವರ ಸ್ಪರ್ಧೆಯಿಂದ ಚುನಾವಣೆಯ ಸಾಧ್ಯಾಸಾಧ್ಯತೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗದು. ಹಳೆಯ, ಮಾಸಲು, ಸವಕಲು ನಾಣ್ಯಗಳನ್ನು ಚಲಾಯಿಸುವ ಮೂಲಕ ಆಪ್‌ ರಾಜಕಾರಣ ಎಂಬುದನ್ನು ವಿದೂಷಕರ ಗಂಭೀರ ಆಟವಾಗಿ ಬದಲಾಯಿಸಿಬಿಟ್ಟಿದೆ! ದೊಡ್ಡ ದೊಡ್ಡ ಭರವಸೆಗಳನ್ನು ಕೊಟ್ಟು ಏನನ್ನೂ ಈಡೇರಿಸದೆ ಇರುವುದರಲ್ಲಿ ಆತ ನಿಸ್ಸೀಮ. ಸ್ವಪಕ್ಷೀಯರ ಸಹಿತ ಎಲ್ಲ ಸಂಸದರ ಹಾಲಿ ಸಂಸದನೊಬ್ಬನ ವಿರುದ್ಧ ದೂರು ಕೊಡುವುದನ್ನು ನಮ್ಮ ಸಂಸತ್ತಿನ ಇತಿಹಾಸದಲ್ಲಿ ನೋಡಿದ್ದೀರಾ? ಸಂಗ್ರೂರ್‌ನಿಂದ ಆಯ್ಕೆಯಾದ ಭಗವಂತ್‌ ಮಾನ್‌ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿ ಸಂಸತ್ತಿನ ಭದ್ರತೆಗೆ ಅಪಾಯ ತಂದವರು. 

ಶಿರೋಮಣಿ ಅಕಾಲಿ ದಳ ಹ್ಯಾಟ್ರಿಕ್‌ ಗೆಲುವು ಸಾಧಿಸುತ್ತದೆ ಎಂದು ಪ್ರತಿಪಾದಿಸುತ್ತೀರಿ. ಇದಕ್ಕೆ ಕಾರಣವಾಗುತ್ತದೆ ಎಂದು ನೀವು ಭಾವಿಸುವ ಮೂರು ಪ್ರಾಮುಖ್ಯ ಕಾರಣಗಳನ್ನು ಹೇಳುತ್ತೀರಾ?  
       ಅಭಿವೃದ್ಧಿ, ಅಭಿವೃದ್ಧಿ ಮತ್ತು ಇನ್ನಷ್ಟು ಅಭಿವೃದ್ಧಿಯ ಅಜೆಂಡಾ ಇರಿಸಿಕೊಂಡು ರಾಜ್ಯದ ಭವಿಷ್ಯಕ್ಕಾಗಿ ಕಠಿನವಾಗಿ ಶ್ರಮಿಸಿದ್ದೇವೆ. ಇದರ ಫ‌ಲವಾಗಿ ಹ್ಯಾಟ್ರಿಕ್‌ ವಿಜಯ ನಮ್ಮದಾಗುತ್ತದೆ ಎಂಬ ಅಮಿತ ವಿಶ್ವಾಸ ನಮ್ಮದು. ಸತತ ದ್ವಿತೀಯ ಅವಧಿಗೆ ಅಧಿಕಾರ ಹಿಡಿಯುವ ಮೂಲಕ ಶಿರೋಮಣಿ ಅಕಾಲಿ ದಳ – ಬಿಜೆಪಿ ಮೈತ್ರಿಕೂಟ ಪಂಜಾಬ್‌ನಲ್ಲಿ ದಾಖಲೆ ಸ್ಥಾಪಿಸಿದೆ. ಆಡಳಿತಾರೂಢ ಪಕ್ಷ ಅಥವಾ ಮೈತ್ರಿಕೂಟ ಮತ್ತೆ ಗೆದ್ದ ಉದಾಹರಣೆಗೆ ರಾಜ್ಯದ ಇತಿಹಾಸದಲ್ಲಿ ಇನ್ನೊಂದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪಂಜಾಬ್‌ ಸರ್ವತೋಮುಖ ಪ್ರಗತಿ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧಿಸಿದೆ.  

ಇನ್ನಿತರ ಕಾರಣಗಳನ್ನು ಹೇಳುವುದಾದರೆ, ದೇಶದಲ್ಲಿಯೇ ವಿದ್ಯುತ್ಛಕ್ತಿಯನ್ನು ಬಳಕೆಗಿಂತ ಹೆಚ್ಚುವರಿ ಉತ್ಪಾದಿಸುವ ರಾಜ್ಯ ಪಂಜಾಬ್‌! ನಮ್ಮ ಸರಕಾರದ ಜನಕಲ್ಯಾಣ ಯೋಜನೆಗಳು ಇತರ ರಾಜ್ಯಗಳಿಗೂ ಮಾದರಿಯಾಗಿವೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕ್ರಾಂತಿ, ಇ- ಆಡಳಿತ ಹೀಗೆ ನಮ್ಮ ಸಾಧನೆ ಮುಂದುವರಿಯುತ್ತದೆ. ಎಷ್ಟೋ ಕಾರಣ, ಉದಾಹರಣೆಗಳನ್ನು ಕೊಡಬಹುದು, ಆದರೆ ಇನ್ನಷ್ಟು ಅಭಿವೃದ್ಧಿಯ ಕೆಲಸಗಳು ಉಳಿದಿವೆ. ದಾಖಲೆಯ ಮೂರನೇ ಅವಧಿಯಲ್ಲಿ ಅವನ್ನೆಲ್ಲ ಸಾಧಿಸುವ ಮೂಲಕ ಪಂಜಾಬನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ವಿಶ್ವಾಸ ನಮ್ಮದು. 

ಅಕಾಲಿ ದಳ ಬಹುಮತ ಪಡೆಯುತ್ತದೆ ಎಂದೇ ಹೇಳುತ್ತಿದ್ದೀರಿ. ಕಾಂಗ್ರೆಸ್‌ 35-40 ಮತ್ತು ಆಪ್‌ 9 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂಬುದು ನಿಮ್ಮ ಪ್ರತಿಪಾದನೆ. ಅದು ಹುಸಿಯಾದರೆ?
      ಮಾತಿಗಿಂತ ಕಾರ್ಯ ಹೆಚ್ಚು ಪ್ರಭಾವಶಾಲಿ. ನಮ್ಮ ಉದ್ದೇಶ ಹಾಗೂ ಪಂಜಾಬಿಗರ ಕಲ್ಯಾಣ ಮತ್ತು ರಾಜ್ಯದ ಅಭಿವೃದ್ಧಿಗೆ ನಮ್ಮ ಬದ್ಧತೆಯ ಬಗ್ಗೆ ಕಳೆದ ಎರಡು ಅವಧಿಗಳಲ್ಲಿ ನಾವು ನೀಡಿದ ಆಡಳಿತ ಸಾಕಷ್ಟನ್ನು ಹೇಳುತ್ತದೆ. ಶಿರೋಮಣಿ ಅಕಾಲಿ ದಳ 95 ವರ್ಷಗಳಷ್ಟು ಹಳೆಯದಾದ ಪಕ್ಷ, ಪಂಜಾಬ್‌, ಪಂಜಾಬಿಗರ ಪರವಾಗಿ ಧ್ವನಿಯೆತ್ತುವ ಪಕ್ಷ ಇದೊಂದೇ. ನಮ್ಮ ವಿರೋಧಿಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ, ಪಂಜಾಬ್‌ನ ಶ್ರೇಯೋಭಿವೃದ್ಧಿಗಾಗಿ ಸದಾ ದುಡಿದಿದ್ದೇವೆ, ದುಡಿಯುತ್ತೇವೆ. ಆದರೆ, ನಮ್ಮ ವಿರೋಧಿಗಳು ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಯಾರು ತಮಗಾಗಿ ಮತ್ತು ತಮ್ಮ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂದು ತಿಳಿದುಕೊಳ್ಳುವಷ್ಟು ಬುದ್ಧಿವಂತರು ಮತ್ತು ವಿವೇಕಿಗಳು ಪಂಜಾಬಿಗರು.

ಮಾಜಿ ಬಿಜೆಪಿ ಸಂಸದ ನವಜೋತ್‌ ಸಿಂಗ್‌ ಸಿಧು ಅಮೃತ್‌ಸರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆಯಿದೆಯಲ್ಲ…
     ರಾಜಕಾರಣದಲ್ಲಿ ವಿಶ್ವಾಸಾರ್ಹತೆ ಬಹಳ ಮುಖ್ಯ. ಸಿಧುಗೆ ವಿಶ್ವಾಸಾರ್ಹತೆ ಎಂಬುದೇ ಇಲ್ಲ. ಕಾಂಗ್ರೆಸ್‌ ಮತ್ತು ಆಪ್‌ ನಡುವೆ ಚೌಕಾಶಿ ಮಾಡುವ ಮೂಲಕ ತಾನೇನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದೇ ಅಪ್ರಸ್ತುತ.

– ಸುಖ್‌ಬೀರ್‌ ಸಿಂಗ್‌ ಬಾದಲ್‌ 
ಪಂಜಾಬ್‌ ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next