Advertisement

ಕಲ್ಲೆಸೆವ ಕ್ರಿಮಿನಲ್‌ಗ‌ಳಿಗೆ ಅನುಕಂಪ

09:56 AM May 14, 2018 | Team Udayavani |

ನಾವಿಲ್ಲಿ ಬೆಣಚುಕಲ್ಲುಗಳ ಬಗ್ಗೆ ಮಾತನಾಡುತ್ತಿಲ್ಲ, ಪ್ರತಿಭಟನೆಯ ಹೆಸರಲ್ಲಿ ಇವರೆಲ್ಲ ಇಟ್ಟಿಗೆಗಳು, ದೊಡ್ಡ ಕಲ್ಲುಗಳು ಮತ್ತು ಕೈಗೆ ಸಿಕ್ಕಿದ್ದನ್ನೆಲ್ಲ ಎಸೆಯುತ್ತಾರೆ. ಚಾಕು ಎಸೆದಾಗ ಅದು ಹೇಗೆ ವ್ಯಕ್ತಿಯ ಪ್ರಾಣ ತೆಗೆಯಬಲ್ಲದೋ, ಹಾಗೆಯೇ ಕಲ್ಲೂ ಪ್ರಾಣ ತೆಗೆಯಬಹುದು. ಅಮಾಯಕನಿಗೆ ಚಾಕು ಹಾಕುವವನು ಅಪರಾಧಿಯಾದರೆ ಕಲ್ಲು ಎಸೆಯುವವನ ವಿಷಯದಲ್ಲೇಕೆ ಮಾತು ಬದಲಾಗಿಬಿಡುತ್ತದೆ?

Advertisement

ಸುಮ್ಮನೇ ಹೀಗೊಂದು ಸುದ್ದಿಯನ್ನು ಊಹಿಸಿಕೊಳ್ಳಿ: “”ಗುಜರಾತ್‌ನ ಯುವಕರ ಗುಂಪೊಂದು ಮುಸ್ಲಿಂ ಪ್ರದೇಶಕ್ಕೆ ನುಗ್ಗಿ, ಅಲ್ಲಿ ಹಲವರನ್ನು ತೀವ್ರವಾಗಿ ಗಾಯಗೊಳಿಸಿದೆ” ಅಥವಾ “”ಉತ್ತರ ಪ್ರದೇಶದಲ್ಲಿ ದಂಗೆಕೋರರ ಗುಂಪೊಂದು ದಲಿತರ ಮೇಲೆ ಕಲ್ಲೆಸೆದು ಹಲವು ಸಾವುಗಳಿಗೆ ಕಾರಣವಾಗಿದೆ”

ಈ ಸುದ್ದಿ ಓದಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಹೀಗೆ ಕಲ್ಲೆಸೆದವರನ್ನು ಕ್ರಿಮಿನಲ್‌ಗ‌ಳೆಂದು ಪರಿಗಣಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದೇ ಬಯಸುತ್ತೀರಿ ತಾನೆ?

ಈಗ ಈ ಸುದ್ದಿ ಓದಿ: ಕಾಶ್ಮೀರದಲ್ಲಿ ಕೆಲವರು ಸಿಆರ್‌ಪಿಎಫ್ ಜೀಪಿನತ್ತ ಕಲ್ಲೆಸೆಯುತ್ತಾರೆ. ಡ್ರೈವರ್‌ನ ನಿಯಂತ್ರಣ ತಪ್ಪುತ್ತದೆ. ಪರಿಣಾಮವಾಗಿ ನಮ್ಮ ಇಬ್ಬರು ಸೈನಿಕರು ಸಾವನ್ನಪ್ಪುತ್ತಾರೆ. ಇನ್ನೊಂದು ಘಟನೆಯಲ್ಲಿ, ಕಾಶ್ಮೀರಿಗಳ ಮತ್ತೂಂದು ಗುಂಪು ಎಸೆದ ಕಲ್ಲು ತಾಗಿ ಚೆನ್ನೈ ಮೂಲದ ಪ್ರವಾಸಿಗನೊಬ್ಬ ಸಾವನ್ನಪ್ಪು ತ್ತಾನೆ. ಇವೆರಡೂ ಘಟನೆಗಳು ಇತ್ತೀಚೆಗಷ್ಟೇ ನಡೆದಿವೆ. ಹಾಗಿದ್ದರೆ ಕಲ್ಲು ತೂರಿದವರಿಗೆ ಏನು ಮಾಡಬೇಕು ಎಂದು ಬಯಸುತ್ತೀರಿ? ಅವರಿಗೆ ಶಿಕ್ಷೆಯಾಗಬೇಕೋ ಅಥವಾ ಅವರ ವಿಷಯದಲ್ಲಿ ಬೇರೆ ರೀತಿಯಲ್ಲೇ ನಡೆದುಕೊಳ್ಳಬೇಕೋ?

ಸತ್ಯವೇನೆಂದರೆ, ಬೇರೆ ರೀತಿಯಲ್ಲೇ ನಡೆದುಕೊಳ್ಳಲಾಗುತ್ತಿದೆ. 2017ರ ಉತ್ತರಾರ್ಧದಲ್ಲಿ ಕಾಶ್ಮೀರದ ಪಿಡಿಪಿ-ಬಿಜೆಪಿ ಸರ್ಕಾರ ಕಲ್ಲೆಸೆಯುವವರ ಮೇಲಿನ ಸುಮಾರು 9,000 ಪ್ರಕರಣಗಳನ್ನು ಕೈಬಿಟ್ಟಿದೆ. ಇವರೆಲ್ಲ “ಹಾದಿತಪ್ಪಿದ’ ಯುವಕರು, ಇವರೊಂದಿಗೆ ಮಾತುಕತೆಯಲ್ಲಿ ತೊಡಗಬೇಕು ಮತ್ತು ಕೌನ್ಸೆಲಿಂಗ್‌ ಕೊಡಬೇಕು ಎಂಬ ತರ್ಕವನ್ನು ಮುಂದಿಡಲಾಯಿತು. ಇದು ಬಹಳ ಪರೋಪ ಕಾರಿ ನಡೆ ಎಂದೆನಿಸುವುದಿಲ್ಲವೇ? ಸುಮ್ಮನೆ ಯೋಚಿಸಿ ನೋಡಿ, ಇದೇ ವಾದ/ತರ್ಕವನ್ನು ದೇಶದ ಇತರೆ ರಾಜ್ಯಗಳಲ್ಲಿ ನಡೆಯುವ ದೊಂಬಿಗಳಿಗೆ ಏಕೆ ಅನ್ವಯಿಸುವುದಿಲ್ಲ? ಅಥವಾ ಇದೇ ತರ್ಕ ಇತರೆ ಅಪರಾಧಿಗಳಿಗೆ ಏಕೆ ಲಾಗೂ ಆಗುವುದಿಲ್ಲ? ಮುಸಲ್ಮಾನರು ಅಥವಾ ದಲಿತರ ಮೇಲೆ ಹಲ್ಲೆ ಮಾಡುವ ವ್ಯಕ್ತಿ ಕೂಡ “ಹಾದಿತಪ್ಪಿದ’ವನಲ್ಲವೇ? ಹಾಗಿದ್ದರೆ ಹೆಣ್ಣುಮಕ್ಕಳಿಗೆ ತೊಂದರೆ ಕೊಡುವವರಿಗೆ ನಾವೇಕೆ ಕೌನ್ಸೆಲಿಂಗ್‌ ಕೊಡುವುದಿಲ್ಲ? ಅವರೂ ಹಾದಿ ತಪ್ಪಿರುತ್ತಾರಲ್ಲವೇ?

Advertisement

ಆದರೆ ಇಷ್ಟು ಪ್ರಮಾಣದ ಪ್ರಕರಣಗಳನ್ನು ಹಿಂತೆಗೆದು ಕೊಂಡರೂ ಕಲ್ಲು ತೂರಾಟವೇನೂ ನಿಂತಿಲ್ಲ. ಈಗ ಕಲ್ಲೇಟು ನಮ್ಮ ಸೈನಿಕರಿಗಷ್ಟೇ ಅಲ್ಲ, ಶಾಲಾ ಮಕ್ಕಳ ವಾಹನಗಳಿಗೆ ಮತ್ತು ಪ್ರವಾಸಿಗರಿಗೆ(ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬಿವರು) ಬೀಳಲಾರಂಭಿಸಿವೆ. ಆದರೆ ಪ್ರತಿ ಬಾರಿಯೂ ಸರ್ಕಾರ ಏನು ಮಾಡ ಬೇಕೋ ತೋಚದೆ “ಎಲ್ಲದಕ್ಕೂ ಹಿಂಸೆ ಪರಿಹಾರವಲ್ಲ’ ಎಂಬ ಕ್ಲೀಷೆಯ ಹೇಳಿಕೆ ಕೊಡುತ್ತದೆ. ಈಗಂತೂ ಸ್ಥಳೀಯರೂ ಕಲ್ಲು ತೂರಾಟಕ್ಕೆ ತುತ್ತಾಗುತ್ತಿದ್ದಾರೆ. ಪದೇ ಪದೆ ನಡೆಯುತ್ತಿರುವ ಈ ಹಿಂಸಾತ್ಮಕ ಘಟನೆಗಳ ಎದುರು ನಾವೇಕೆ ಈ ಪರಿ ಅಸಹಾಯಕರಾಗಿಬಿಟ್ಟಿದ್ದೇವೆ? 

ಈ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ, ಈ “ಕಲ್ಲೆಸೆತ’ದ ಮೂಲವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಯಾವಾಗ ಪ್ಯಾಲೆಸ್ತೀನಿಯರು ಇಸ್ರೇಲಿಗಳ ಆಕ್ರಮಣವನ್ನು ವಿರೋಧಿಸಲು “ಇಂತಿಫಾದಾ’ ಎನ್ನುವ ಪ್ರತಿಭಟನೆ ನಡೆಸಿದರೋ, ಆಗ ಪ್ಯಾಲೆಸ್ತೀನ್‌ ಯುವಕರಲ್ಲಿ “ಕಲ್ಲು ತೂರಾಟ’ ಪ್ರಖ್ಯಾತ ವಾಯಿತು. ಇಸ್ರೇಲಿನ ಭದ್ರತಾ ಪಡೆಗಳು ಮತ್ತು ಪ್ಯಾಲಸ್ತೀನಿಯರ ನಡುವಿದ್ದ ಬೃಹತ್‌ ಶಕ್ತಿಯ ಅಂತರವನ್ನು ಪರಿಗಣಿಸಿದಾಗ, ಪ್ಯಾಲಸ್ತೀನಿಯರೆಲ್ಲ “ಕಲ್ಲು ತೂರಾಟವನ್ನು’ ವೀರಾವೇಶದ ಪ್ರತಿರೋಧ ಎಂದು ಭಾವಿಸಿದರು. ಆಗ ಪಾಶ್ಚಾತ್ಯ ಮಾಧ್ಯಮಗಳೂ ಪ್ಯಾಲಸ್ತೀನಿಯರ ಪರವಾಗಿ ನಿಂತುಬಿಟ್ಟವು. ತಾವು ಅಲ್ಪಸಂಖ್ಯಾತರು ಮತ್ತು ಇಸ್ರೇಲ್‌ನ ಸೇನಾ ಶಕ್ತಿಯ ಮುಂದೆ ದುರ್ಬಲರು ಎಂಬ ಕಾರಣಕ್ಕೆ ಅನುಕಂಪ ಗಿಟ್ಟಿಸುವ ಆದರ್ಶ ಸ್ಥಿತಿಯಲ್ಲಿದ್ದರು ಪ್ಯಾಲಸ್ತೀನಿಯರು. 

ಕಲ್ಲು ತೂರುವುದು ಪ್ಯಾಲಸ್ತೀನಿಯರ ಪಾಲಿಗೆ ಇಸ್ರೇಲಿನ ಹೆಲಿಕಾಪ್ಟರ್‌ಗಳು, ಟ್ಯಾಂಕ್‌ಗಳು ಮತ್ತು ಮಷೀನ್‌ಗನ್‌ಗಳ ವಿರುದ್ಧ ಎದೆಯುಬ್ಬಿಸಿ ನಿಲ್ಲುವ ಸಾಹಸಮಯ ಮುದ್ರೆಯಾಗಿತ್ತು. ಅದೆಲ್ಲ ಸರಿ, ಆದರೆ ಮುಖ್ಯ ಸಮಸ್ಯೆಯೆಂದರೆ ಈ ಕಲ್ಲುಗಳು ನಿಜಕ್ಕೂ ಗಂಭೀರ ಹಾನಿ ಮಾಡಬಲ್ಲವು. ನಾವಿಲ್ಲಿ ಬೆಣಚುಕಲ್ಲುಗಳ ಬಗ್ಗೆ ಮಾತನಾಡುತ್ತಿಲ್ಲ ಸ್ವಾಮಿ, ಪ್ರತಿಭಟನೆಯ ಹೆಸರಲ್ಲಿ ಇವರೆಲ್ಲ ಇಟ್ಟಿಗೆಗಳು, ದೊಡ್ಡ ಕಲ್ಲುಗಳು ಮತ್ತು ಕೈಗೆ ಸಿಕ್ಕಿದ್ದನ್ನೆಲ್ಲ ಎಸೆಯುತ್ತಾರೆ. ಹೇಗೆ ಒಂದು ಚಾಕು ಎಸೆದಾಗ ಅದು ವ್ಯಕ್ತಿಯೊಬ್ಬನ ಪ್ರಾಣ ತೆಗೆಯಬಲ್ಲದೋ ಅದೇ ರೀತಿಯಲ್ಲೇ ವೇಗದಿಂದ ಸಾಗಿಬರುವ 2 ಕಿಲೋ ತೂಕದ ಕಲ್ಲೊಂದು ಬಡಿದರೆ ಪ್ರಾಣಪಕ್ಷಿಯೇ ಹಾರಿಹೋಗಬಹುದು. ಒಬ್ಬ ಅಮಾಯಕ ವ್ಯಕ್ತಿಗೆ ಚಾಕು ಚುಚ್ಚುವವನನ್ನು ಅಪರಾಧಿ ಎನ್ನುತ್ತೀರೋ ಇಲ್ಲವೋ? ಹಾಗಿದ್ದರೆ ಕಲ್ಲು ಎಸೆಯುವವನ ವಿಷಯದಲ್ಲೇಕೆ ಮಾತು ಬದಲಾಗಿಬಿಡುತ್ತದೆ? 

ಕಲ್ಲು ತೂರಾಟವನ್ನು ರೊಮ್ಯಾಂಟಿಸೈಸ್‌ ಮಾಡಿದ್ದರಿಂದಾಗಿಯೇ ಪ್ಯಾಲಸ್ತೀನಿಯರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಶಾಂತಿಯುತ ಪ್ರತಿಭಟನೆಗಳೇ ಬೇರೆ. ಕಲ್ಲೆಸೆದು ಪ್ರತಿಭಟಿಸುತ್ತೀವಿ ಎನ್ನುವುದೇ ಬೇರೆ, ಏಕೆಂದರೆ ಈ ಮಾರ್ಗ ಜೀವವನ್ನೇ ತೆಗೆದುಬಿಡಬಹುದು. ಇದೇ ಕಾರಣದಿಂದಲೇ ಇಸ್ರೇಲಿ ಸರ್ಕಾರ, ಅಗತ್ಯ ಬಿದ್ದರೆ ಕಲ್ಲು ತೂರಾಟಗಾರರ ಮೇಲೆ ಗುಂಡು ಹಾರಿಸುವ ಅನುಮತಿಯನ್ನು ಸೇನೆಗೆ ಕೊಟ್ಟುಬಿಟ್ಟಿತು. ಇದರಿಂದಾಗಿ ಹಿಂಸಾ ಘಟನೆಗಳು ಇನ್ನಷ್ಟು ಹೆಚ್ಚಿದವು. ಕೇವಲ ಅನುಮಾನದ ಮೇಲೆಯೇ ಇಸ್ರೇಲಿ ಸೈನಿಕರು ಕೆಲವೊಮ್ಮೆ ಪ್ಯಾಲೆಸ್ತೀನಿಯರನ್ನು ಶೂಟ್‌ ಮಾಡತೊಡಗಿದರು. ಹೀಗಾಗಿ, ಇಂಥ ತೀವ್ರ ಪ್ರತಿಕ್ರಿಯೆಯನ್ನು ಕಾಶ್ಮೀರ ಕಣಿವೆಯಲ್ಲಿ ಅನ್ವಯಿಸುವುದು ಸರಿಯಲ್ಲ, ಏಕೆಂದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. 

ಕಾಶ್ಮೀರದ ಹಲವು ಭಾಗಗಳಲ್ಲಿ ಮತ್ತು ಕೆಲವು ಎಡಪಂಥೀಯ-ಪ್ರಗತಿಪರ ಹಿರಿಯ ಪತ್ರಕರ್ತರ ವಲಯದಲ್ಲಿ ಇಂದಿಗೂ ಕಲ್ಲು ತೂರುವುದನ್ನು ರೊಮ್ಯಾಂಟಿಕ್‌ ಆಗಿಯೂ, ಧೀರೋದಾತ್ತ ನಡೆಯಾಗಿಯೂ ನೋಡಲಾಗುತ್ತದೆ. ಹೀಗಾಗಿ ಕಲ್ಲು ತೂರುವವರು ಅಸಹಾಯಕರು ಅವರಿಗೆ ಅನುಕಂಪದ ಅಗತ್ಯವಿದೆ ಎನ್ನುವಂತೆ ಭಾವಿಸಲಾಗುತ್ತದೆ. “”ಅಯ್ಯೋ, ಅವರೆಲ್ಲ ಅಸಮಾಧಾನಗೊಂಡಿರುವ ಮಕ್ಕಳಷ್ಟೇ, ಅವರಿಗೆ ನಾವು ಸಮಾಧಾನ ಮಾಡಬೇಕು” ಎನ್ನುತ್ತಾರೆ ಇವರೆಲ್ಲ. 

ಹಾಗಿದ್ದರೆ, ಎಲ್ಲಾ ಕ್ರಿಮಿನಲ್‌ಗ‌ಳಿಗೂ ಒಂದಲ್ಲ ಒಂದು ವಿಷಯದಲ್ಲಿ ಅಸಮಾಧಾನವಿದ್ದೇ ಇರುತ್ತದೆ. ಇವರಲ್ಲಿ ಯಾರಿಗೆ ಸಮಾಧಾನ ಮಾಡಬೇಕು ಮತ್ತು ಯಾರನ್ನು ಶಿಕ್ಷಿಸಬೇಕು? ಈ ವಿಷಯದಲ್ಲಿ ಎಲ್ಲಿ ಗೆರೆ ಎಳೆಯಬೇಕು? ಸತ್ಯವೇನೆಂದರೆ ಈ ಕಲ್ಲು ತೂರುವವರು ಮುಸಲ್ಮಾನರು ಎಂಬ ಕಾರಣಕ್ಕಾಗಿ ರಾಜಕೀಯವೂ ಕ್ಲಿಷ್ಟವಾಗಿಬಿಡುತ್ತಿದೆ.

ಕಾಂಗ್ರೆಸ್‌ ಪಕ್ಷ ತಾನು ಮುಸಲ್ಮಾನರ ಪರ ಎಂದು ಬಿಂಬಿಸಿ ಕೊಳ್ಳಲು ಪ್ರಯತ್ನಿಸುತ್ತದೆ. ಹೀಗಾಗಿ, ಕಲ್ಲು ತೂರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅದು ಹೇಳುವುದಿಲ್ಲ. ಬಿಜೆಪಿಗೆ ತಾನು “ಮುಸಲ್ಮಾನ ವಿರೋಧಿ ಪಕ್ಷ’ ಎಂದು ಕಾಣಿಸಿ ಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಈ ವಿಷಯದಲ್ಲಿ ಯಾರಿಗೂ ನಿಷ್ಠುರವಾಗುವುದು ಬೇಕಿಲ್ಲ!

ಆದರೆ ನಾವು ಈ ವಿಷಯವನ್ನು ಧಾರ್ಮಿಕ ಅಥವಾ ಪ್ರಗತಿಪರ ಕನ್ನಡಕದ ಮೂಲಕ ನೋಡಲೇಬಾರದು. ಇದನ್ನು ಅಮಾಯಕ ಜನರು ಮತ್ತು ಭದ್ರತಾಪಡೆಗಳ ಮೇಲಿನ ಹಿಂಸಾತ್ಮಕ ದಾಳಿಯೆಂದೇ ಪರಿಗಣಿಸಬೇಕು. ಇಲ್ಲದಿದ್ದರೆ ಈ ಸಮಸ್ಯೆಗೆ ನಮಗೆ ಪರಿಹಾರ ಸಿಗುವುದೇ ಇಲ್ಲ. ನಮ್ಮ ಕಣ್ಣೆದುರೇ ಸಾವಿರಾರು ಜನ ಗಾಯಗೊಳ್ಳುತ್ತಾರೆ, ನೂರಾರು ಜನ ಸಾವನ್ನಪ್ಪುತ್ತಾರೆ, ಕಾಶ್ಮೀರದ ಪ್ರವಾಸೋದ್ಯಮ ನಿಂತೇ ಹೋಗುತ್ತದೆ, ಲಕ್ಷಾಂತರ ಜನರಲ್ಲಿ ಕಾಶ್ಮೀರವೆಂದರೆ ಭಯ ಹುಟ್ಟಿಕೊಳ್ಳುತ್ತದೆ. 

ಇತ್ತೀಚಿನ ಕಹಿ ಘಟನೆಗಳು ಕಲ್ಲು ತೂರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯನ್ನು ಪದೇ ಪದೆ ಸಾರುತ್ತಿವೆ. ಈ ರೀತಿಯ ಕಾನೂನುಗಳು ಬಂದರೆ ಅದರ ದುರುಪಯೋಗ ವಾಗಬಹುದು ಎನ್ನುವುದು ಸತ್ಯವಾದರೂ ಬೇರೆ ದಾರಿಯೇನಿದೆ? ನಿಶ್ಚಿತವಾಗಿಯೂ ಹಾದಿತಪ್ಪಿದ ಹುಡುಗರ ಬಗ್ಗೆ ನಾವು ಸಹಾನು ಭೂತಿ ತೋರಿಸೋಣ. ಅವರ ಜೀವನದಲ್ಲಿ ಎದುರಾಗಿರುವ ಕಷ್ಟಗಳಿಗೆ ಸಂವೇದನೆ ತೋರಿಸೋಣ. ಅವರ ಪರಿಸ್ಥಿತಿಯ ಬಗ್ಗೆ ಪುಸ್ತಕಗಳನ್ನು, ಹಾಡುಗಳನ್ನು, ಲೇಖನಗಳನ್ನು ಬರೆಯೋಣ, ಸಿನೆಮಾ ಮಾಡೋಣ. ಆದರೆ, ಯಾವಾಗ ಈ ಹಾದಿ ತಪ್ಪಿದವರು “ಕಲ್ಲು’ ಕೈಗೆತ್ತಿಕೊಳ್ಳುತ್ತಾರೋ, ಆಗ ಅವರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದೇ ಅರ್ಥ. 

ಕಲ್ಲು ತೂರಾಟದಂಥ ಅಪಾಯಕಾರಿ ಪ್ರತಿಭಟನಾಸ್ತ್ರವು ಅಮಾಯಕ ಪ್ರವಾಸಿಗರ, ಸೈನಿಕರ ಪ್ರಾಣ ತೆಗೆಯುತ್ತದೆ, ಅರ್ಥ ವéವಸ್ಥೆಗೆ ಹಾನಿ ಮಾಡುತ್ತದೆ ಎಂದಾದರೆ ಅದೊಂದು ಗಂಭೀರ ಅಪರಾಧವೇ ಸರಿ. ಹಾಗೆಂದು ಕಾಶ್ಮೀರಿಗಳ ಮಾತನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಹೇಳುತ್ತಿಲ್ಲ. ಆ ಪ್ರಯತ್ನವನ್ನು ಮುಂದು ವರಿಸಬೇಕು ಆದರೆ, ಯಾವಾಗ ಅಲ್ಲಿನ ಯುವಕರು ಹಿಂಸೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅಲ್ಲಿಗೇ ನಮ್ಮ ಸಹಾನುಭೂತಿ ನಿಲ್ಲಬೇಕು. ಬಂದೂಕಿನ ಮೂಲಕವಾಗಲಿ, ಚಾಕುವಿನ ಮೂಲಕ ವಾಗಲಿ ಅಥವಾ ಕಲ್ಲಿನ ಮೂಲಕವಾಗಲಿ… ಯಾರಿಗೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಇಲ್ಲವೇ ಇಲ್ಲ. 
(ಮೂಲ: ದೈನಿಕ್‌ ಭಾಸ್ಕರ್‌)

– ಚೇತನ್‌ ಭಗತ್‌

Advertisement

Udayavani is now on Telegram. Click here to join our channel and stay updated with the latest news.

Next