Advertisement

ಅವಳಿ ಚಿನ್ನಕ್ಕೆ ಮುತ್ತಿಟ್ಟ ಋತ್ವಿಕ್‌, ವಿಶ್ವನಾಥ ಗಾಣಿಗ

11:36 PM Sep 18, 2019 | Sriram |

ಮಂಗಳೂರು/ಕುಂದಾಪುರ: ಕೆನಡಾದ ಸೇಂಟ್‌ ಜೋನ್ಸ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಅಂತಾರಾಷ್ಟ್ರೀಯ ಬೆಂಚ್‌ ಪ್ರಸ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಋತ್ವಿಕ್‌ ಅಲೆವೂರಾಯ ಕೆ.ವಿ. ಮತ್ತು ಕುಂದಾಪುರದ ವಿಶ್ವನಾಥ ಗಾಣಿಗ ಅವಳಿ ಚಿನ್ನದೊಂದಿಗೆ ಸಂಭ್ರಮಿಸಿದ್ದಾರೆ. ವಿಶ್ವನಾಥ ಗಾಣಿಗ 2 ಬೆಳ್ಳಿ ಪದಕಗಳನ್ನೂ ಗೆಲ್ಲುವ ಜತೆಗೆ ಡೆಡ್‌ ಲಿಫ್ಟ್ನಲ್ಲಿ ನೂತನ ದಾಖಲೆ ಬರೆದದ್ದು ವಿಶೇಷವಾಗಿತ್ತು.

Advertisement

ಮಂಗಳೂರಿನ ಕದ್ರಿಯ ಋತ್ವಿಕ್‌ 83 ಕೆ.ಜಿ. ಸಬ್‌ ಜೂನಿಯರ್‌ ವಿಭಾಗದಲ್ಲಿ ಕ್ಲಾಸಿಕ್‌ ಮತ್ತು ಎಕ್ವಿಪ್ಡ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು.

ಡೆಡ್‌ ಲಿಫ್ಟ್ನಲ್ಲಿ ದಾಖಲೆ
ಕುಂದಾಪುರ ತಾಲೂಕಿನ ದೇವಲ್ಕುಂದ ನಿವಾಸಿಯಾಗಿರುವ ವಿಶ್ವನಾಥ ಗಾಣಿಗ ಡೆಡ್‌ ಲಿಫ್ಟ್ನಲ್ಲಿ 327.5 ಕೆಜಿ ತೂಕವೆತ್ತಿ 2011ರಲ್ಲಿ ಇಂಗ್ಲೆಂಡಿನ ಸ್ಟೀಫ‌ನ್‌ ಮ್ಯಾನ್ಯುವೆಲ್‌ ನಿರ್ಮಿಸಿದ್ದ 315 ಕೆ.ಜಿ. ದಾಖಲೆಯನ್ನು ಭಾರೀ ಅಂತರದಿಂದ ತಮ್ಮದಾಗಿಸಿಕೊಂಡರು. ಸ್ನ್ಯಾಚ್‌ನಲ್ಲಿ 295.1 ಕೆಜಿ, ಬೆಂಚ್‌ಪ್ರಸ್‌ನಲ್ಲಿ 180 ಕೆಜಿ ಭಾರವೆತ್ತಿ 2 ಬೆಳ್ಳಿ ಪದಕವನ್ನೂ ಗೆದ್ದರು. ಒಟ್ಟಾರೆ 802.5 ಕೆಜಿ ಸಾಧನೆಯೊಂದಿಗೆ ಚಿನ್ನ ಜಯಿಸಿದ್ದು ಇವರ ಹೆಗ್ಗಳಿಕೆ.

ದೂರವಾಣಿ ಮೂಲಕ “ಉದಯವಾಣಿ’ ಜತೆ ಮಾತಾಡಿದ ವಿಶ್ವನಾಥ ಗಾಣಿಗ, “ಕಳೆದ 6-7 ತಿಂಗಳಿಂದ ಸತತ ತರಬೇತಿ ಪಡೆದಿದ್ದೆ. ಇದಕ್ಕೆ ಸಿಕ್ಕಿದ ಫ‌ಲವಿದು. ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಇಷ್ಟೆಲ್ಲ ಪರಿಶ್ರಮ ಪಡುವ ನಮ್ಮಂಥ ಕ್ರೀಡಾಪಟುಗಳಿಗೆ ಸರಕಾರ ನೆರವು ನೀಡಲಿ…’ ಎಂದರು.

ಎಂಜಿನಿಯರಿಂಗ್‌ ವಿದ್ಯಾರ್ಥಿ
ಬಾಲ್ಯದಲ್ಲಿಯೇ ಕ್ರೀಡಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಋತ್ವಿಕ್‌ ಅಲೆವೂರಾಯ ಅವರು ಈಗಾಗಲೇ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪವರ್‌ ಲಿಫ್ಟ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರದೀಪ್‌ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಸಿವಿಲ್‌ ಎಂಜಿನಿರಿಂಗ್‌ ಕಲಿಯುತ್ತಿದ್ದಾರೆ.

Advertisement

ಋತ್ವಿಕ್‌ ಕಳೆದ ವರ್ಷ ಸ್ಕೌಟ್‌ನಲ್ಲಿ ಭಾರತೀಯ ಯೂತ್‌ ಅಂಬಾಸಿಡರ್‌ ಆಗಿ ಜಪಾನ್‌ಗೆ ತೆರಳಿದ್ದರು. ಋತ್ವಿಕ್‌ ಅವರಿಗೆ ಈ ಕ್ಷೇತ್ರದಲ್ಲಿ ಇಷ್ಟೊಂದು ಆಸಕ್ತಿ ಹುಟ್ಟಲು ಕಾರಣ ಅವರ ತಾಯಿ ದೀಪಾ. ಅವರು ಕೂಡ ಪವರ್‌ ಲಿಫ್ಟಿಂಗ್‌ನಲ್ಲಿ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದಾರೆ.

“ಮಗನ ಮೇಲೆ ವಿಶ್ವಾಸ ಇತ್ತು’
ಋತ್ವಿಕ್‌ ಅವರ ತಂದೆ ವಾಸುದೇವ ಭಟ್‌ ಕುಂಜತ್ತೋಡಿ ಅವರು “ಉದಯ ವಾಣಿ’ಗೆ ಪ್ರತಿಕ್ರಿಯಿಸಿ, “ಮಗ ಪದಕ ಗೆಲ್ಲುತ್ತಾನೆ ಎಂಬ ವಿಶ್ವಾಸ ಇತ್ತು. ಅದರಲ್ಲೂ ಚಿನ್ನದ ಪದಕ ಪಡೆದದ್ದು ತುಂಬ ಸಂತೋಷವಾಗಿದೆ. ಈ ಹಿಂದೆ 93 ಕೆ.ಜಿ. ಇದ್ದ ತೂಕ 83 ಕೆ.ಜಿ.ಗೆ ಇಳಿ ಸಲು ವರ್ಕ್‌ಔಟ್‌ಗಾಗಿ ಹಗಲು-ರಾತ್ರಿ ಕಷ್ಟಪಡುತ್ತಿದ್ದ’ ಎಂದು ತಿಳಿಸಿದ್ದಾರೆ. ಋತ್ವಿಕ್‌ ಅವರು ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

ಮಂಗಳವಾರ ಮಂಗಳೂರಿನ ಪ್ರದೀಪ್‌ ಕುಮಾರ್‌ ಆಚಾರ್ಯ ಕೂಡ ಚಿನ್ನ ಜಯಿಸಿದ್ದರು. ಇದರೊಂದಿಗೆ ಕೆನಡಾಕ್ಕೆ ತೆರಳಿದ ರಾಜ್ಯದ ಮೂವರೂ ಬಂಗಾರದೊಂದಿಗೆ ಮಿನುಗಿದ್ದು ವಿಶೇಷ. ಇವರೆಲ್ಲರೂ ಕರಾವಳಿಯವರೆಂಬುದು ಹೆಮ್ಮೆಯ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next