Advertisement

ನನಸಾಗಲಿ ಕಾಮನ್‌ಮ್ಯಾನ್‌ ಕನಸು!

12:02 PM Jul 02, 2019 | Sriram |

ಪ್ರಧಾನಿಯವರ 2020ರ ದೂರದೃಷ್ಟಿಯ ಕನಸನ್ನು ಸಾಕಾರಗೊಳಿಸುವಲ್ಲಿ ಈ ಬಾರಿಯ ಬಜೆಟ್‌ ನಿರ್ಣಾಯಕ ಪಾತ್ರ ವಹಿಸಿರುವುದು ಒಂದು ವಿಶೇಷ. ಈ ಸಲ ಮೊದಲ ಬಾರಿ ಮಹಿಳಾ ಹಣಕಾಸು ಸಚಿವೆ ಬಜೆಟ್‌ ಮಂಡಿಸುತ್ತಿರುವುದು ಎರಡನೇ ವಿಶೇಷ. ಇವೆಲ್ಲಾ ವಿಶೇಷಗಳ ನಡುವೆ ಶ್ರೀಸಾಮಾನ್ಯ ಕಳೆದುಹೋಗಬಾರದು. “ನೆವರ್‌ ಅಂಡರ್‌ ಎಸ್ಟಿಮೇಟ್‌ ದಿ ಪವರ್‌ ಆಫ್ ಕಾಮನ್‌ಮ್ಯಾನ್‌'(ಶ್ರೀಸಾಮಾನ್ಯನ ತಾಕತ್ತನ್ನು ಯಾವತ್ತೂ ನಿರ್ಲಕ್ಷಿಸದಿರಿ) ಎನ್ನುವುದು ಜನಪ್ರಿಯ ಸಿನಿಮಾವೊಂದರ ಸಂಭಾಷಣೆ. ಈ ಬಾರಿಯ ಬಜೆಟ್‌ನಲ್ಲಿ ಶ್ರೀಸಾಮಾನ್ಯ ಏನೇನು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾನೆ ಎನ್ನುವುದರ ಕುರಿತು ಈ ಬರಹ.

Advertisement

“ನೆವರ್‌ ಅಂಡರ್‌ ಎಸ್ಟಿಮೇಟ್‌ ದಿ ಪವರ್‌ ಆಫ್ ಕಾಮನ್‌ಮ್ಯಾನ್‌'(ಶ್ರೀಸಾಮಾನ್ಯನ ತಾಕತ್ತನ್ನು ಯಾವತ್ತೂ ನಿರ್ಲಕ್ಷಿಸದಿರಿ) ಎನ್ನುವುದು ಜನಪ್ರಿಯ ಸಿನಿಮಾವೊಂದರ ಸಂಭಾಷಣೆ. ಎರಡು ಸಂದರ್ಭಗಳಲ್ಲಿ ಈ ಮಾತಿಗೆ ಸಿಗುವ ಪ್ರಾಶಸ್ತ್ಯದಿಂದ ಅದರ ಹಿಂದಿರುವ ಮಹತ್ವವನ್ನು ನಾವು ತಿಳಿದುಕೊಳ್ಳಬಹುದು. ಮೊದಲನೆಯದು ಚುನಾವಣಾ ಸಂದರ್ಭ, ಎರಡನೆಯದು ಬಜೆಟ್‌ ಮಂಡಿಸುವ ಸಂದರ್ಭ! ಮೊದಲನೆಯದಾಗಿ, ಇದೇ ಪ್ರಥಮ ಬಾರಿ ಮಹಿಳಾ ಹಣಕಾಸು ಸಚಿವೆಯೊಬ್ಬರು ಮಂಡಿಸುತ್ತಿರುವ ಬಜೆಟ್‌ ಇದಾಗಿರುವುದು ಜನರಲ್ಲಿ ಕುತೂಹಲವನ್ನು ಮೂಡಿಸಿದೆ. ಚುನಾವಣೆಯಲ್ಲಿ ಭರ್ಜರಿ ಗೆಲುವು ನೀಡಿ ಅಧಿಕಾರಕ್ಕೆ ತಂದ ಜನತೆಗೆ ಸರ್ಕಾರ ಏನೇನು ನೀಡಬಹುದು ಎನ್ನುವುದು ಇನ್ನೊಂದು ಬಗೆಯ ಕಾತರವನ್ನು ಹೆಚ್ಚಿಸಿದೆ.

ಯುವಜನತೆಯೇ ದೇಶದ ಭವಿಷ್ಯ
ಭಾರತ ಎಂದಿನಿಂದಲೂ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ನಿರುದ್ಯೋಗ. ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಬಡತನ ನಿರ್ಮೂಲನೆ, ಪ್ರತಿಯೊಂದು ಸರ್ಕಾರದ ಗುರುತರವಾದ ಜವಾಬ್ದಾರಿ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದಂತೆ ಪ್ರತಿಯೊಬ್ಬರಿಗೂ ಬಜೆಟ್‌ನಲ್ಲಿ ಪ್ರಾಮುಖ್ಯತೆ ದೊರೆಯಬೇಕಾದ ಅಗತ್ಯವಿದೆ. ಪ್ರತಿಯೊಬ್ಬ ಭಾರತೀಯನೂ ಮೂಲಭೂತ ಸೌಕರ್ಯಗಳಾದ ಆಹಾರ, ಬಟ್ಟೆ, ಸೂರು ಇವು ಮೂರರ ಜೊತೆಗೆ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯವನ್ನು ಹೊಂದಬೇಕು. ಈ ಸೌಕರ್ಯಗಳನ್ನು ಜನಸಾಮಾನ್ಯನ ಬಳಿ ತಲುಪಿಸಬೇಕಾದ ಹೊಣೆ ಸರ್ಕಾರದ್ದು.

ದೇಶದ ಜನಸಂಖ್ಯೆಯಲ್ಲಿ ಶೇ. 50ಕ್ಕೂ ಹೆಚ್ಚಿನವರು 25 ವಯಸ್ಸಿನ ಕೆಳಗಿನವರು ಎನ್ನುವುದು ಗಮನಾರ್ಹ ಸಂಗತಿ. ಮೋದಿಯವರ ಮೇಲೆ ಭರವಸೆ ಇಟ್ಟು ಮತ ಹಾಕಿದವರಲ್ಲಿ ಈ ಬಾಗದ ಪಾಲು ಅಧಿಕವಿದೆ. ಅಲ್ಲದೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಉದ್ಯೋಗ ಸೃಷ್ಟಿಯ ವಿಚಾರವಾಗಿ ಅನೇಕ ಚಿಂತನ ಮಂಥನ, ವಿವಾದಗಳು ದಿನಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಏರ್ಪಟ್ಟಿದ್ದವು. ಹಾಗಾಗಿ ಈ ಬಾರಿ ಉದ್ಯೋಗ ಸೃಷ್ಟಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

ಅದಕ್ಕಿಂತ ಮಿಗಿಲಾಗಿ ಸ್ವಉದ್ಯೋಗ ಮತ್ತು ಸ್ಟಾರ್ಟಪ್‌ಗ್ಳಿಗೆ ಉತ್ತೇಜನ ನೀಡುವ ಸಲುವಾಗಿ 50,000 ಸ್ಟಾರ್ಟಪ್‌ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತೇವೆ ಎಂಬ ಭರವಸೆಯನ್ನು ಆಡಳಿತ ಪಕ್ಷ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ವಿಚಾರವಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಯಲು ಯುವಜನತೆ ಕಾದು ಕುಳಿತಿದೆ. ಸ್ಟಾರ್ಟಪ್‌ಗ್ಳಿಗೆ ನೆರವು ನೀಡುವುದು ಉದ್ಯೋಗ ಸೃಷ್ಟಿಯ ಭಾಗವೂ ಆಗಿರುವುದರಿಂದ ಸಚಿವೆಯ ಬಜೆಟ್‌ನಲ್ಲಿ ಈ ಕುರಿತು ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದಾಗಿದೆ.

Advertisement

ಸ್ಮಾರ್ಟ್‌ ನಿಬಂಧನೆಗಳು
ಯಾವುದೇ ದೇಶದ ಆರ್ಥಿಕತೆಯನ್ನು ಗಮನಿಸಿದರೆ ನಿಬಂಧನೆಗಳು ಅದರ ಪ್ರಮುಖ ಭಾಗವಾಗಿರುವುದು ಕಂಡುಬರುತ್ತದೆ. ದೇಶದ ಉನ್ನತಿಯನ್ನು, ಬೆಳವಣಿಗೆಯಲ್ಲಿ ಆಯಾ ಸರ್ಕಾರದ ನಿಬಂಧನೆಗಳು ಅತ್ಯಂತ ಗಮನಾರ್ಹ ಕಾಣಿಕೆಯನ್ನು ಸಲ್ಲಿಸುತ್ತವೆ. ನಿಬಂಧನೆಗಳು ಗ್ರಾಹಕ ಮತ್ತು ವ್ಯಾವಹಾರಿಕ ಸಮೂಹದ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತದೆ. ನಿಬಂಧಕರು ಅವೆರಡರ ನಡುವೆ ಸಮತೋಲನ ಕಾಪಾಡಿಕೊಳ್ಳುವಲ್ಲಿ ಅವರ ಜಾಣ್ಮೆ ಇರುತ್ತದೆ. ಹೀಗಾಗಿ ನಿಬಂಧಕರು ಪಕ್ಷಪಾತಿಗಳಾಗಿರದೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿರುತ್ತದೆ. ಭಾರತವನ್ನು ಸ್ಮಾರ್ಟ್‌ ಆಗಿಸಲು ಹೊರಟಿಸುವ ಮೋದಿ ಸರ್ಕಾರದ ಬಟೆಟ್‌ನಲ್ಲಿ ಮಂಡಿಸಲ್ಪಡುವ ನಿಬಂಧನೆಗಳಲ್ಲಿ ಸ್ಮಾರ್ಟ್‌ನೆಸ್‌ಅನ್ನು ಜನಸಾಮಾನ್ಯ ನಿರೀಕ್ಷಿಸುತ್ತಿದ್ದಾನೆ.

ತೆರಿಗೆ ಸುಧಾರಣೆ
ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಜಾರಿಗೆ ತಂದಿದ್ದ ಜಿಎಸ್‌ಟಿ ಕಾನೂನು, ತನ್ನ ಯಶಸ್ವಿ ಸುಧಾರಣಾ ಕ್ರಮಗಳಲ್ಲೊಂದು ಎಂದು ಪ್ರತಿಬಿಂಬಿಸುತ್ತಾ ಬಂದಿತ್ತು. ಈ ಬಾರಿ ಜಿಎಸ್‌ಟಿಯ ಸುಧಾರಿತ ಆವೃತ್ತಿಯ ನಿಬಂಧನೆಯನ್ನು ಸರ್ಕಾರದಿಂದ ನಿರೀಕ್ಷಿಸಬಹುದಾಗಿದೆ. ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಎರಡೂ ತೆರಿಗೆಯ ಮರುಪಾವತಿಯ ವಿಚಾರದಲ್ಲಿ ಇನ್ನಷ್ಟು ತ್ವರಿತವಾಗಿ ಟ್ರ್ಯಾಕ್‌ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾದ ಅಗತ್ಯವಿದೆ. ಇದರಿಂದ ಹೂಡಿಕೆಗಳು ನಿಂತ ನೀರಾಗುವ ಅಪಾಯವನ್ನು ತಪ್ಪಿಸಬಹುದಾಗಿದೆ. ರಫ‌ುrದಾರರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಇದು ಸಾಧ್ಯ.

“ನೇರ ತೆರಿಗೆ ಸುಧಾರಣೆ'(Direct tax reform)ಯನ್ನು ಈ ಬಾರಿಯ ಮೋದಿಯವರ ಎರಡನೇ ಆವಧಿಯ ಬಜೆಟ್‌ನಿಂದ ನಿರೀಕ್ಷಿಸಬಹುದಾಗಿದೆ. ತೆರಿಗೆ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸುಲಭವಾಗಿಸುವಲ್ಲಿ ಮತ್ತು ಪಾರದರ್ಶಕತೆ ತರುವಲ್ಲಿ Direct tax reform ಪ್ರಮುಖ ಪಾತ್ರ ವಹಿಸಲಿದೆ.

ಸಮಾನತೆಯೇ ಮೂಲಮಂತ್ರವಾಗಲಿ
ಸಮಾಜದಲ್ಲಿ ಆದಾಯ, ಸಂಪತ್ತಿನ ವಿಚಾರದಲ್ಲಿನ ಅಸಮಾನತೆಯನ್ನು ಹೋಗಲಾಡಿಸಬೇಕಾದ ಜರೂರತ್ತಿದೆ. ಆರ್ಥಿಕ ಆಭಿವೃದ್ದಿಗೆ ಉದ್ಯಮ ಕ್ಷೇತ್ರದ ಬೆಳವಣಿಗೆ ಅತ್ಯಗತ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಸರ್ಕಾರ ಕಳೆದ ಅವಧಿಯಲ್ಲಿಯೂ ಉದ್ಯಮ ಕ್ಷೇತ್ರಕ್ಕೆ ಗಣನೀಯ ಸೌಲಭ್ಯ ಸೌಕರ್ಯಗಳನ್ನು ನೀಡಿದೆ. ಆದರೆ ಅದರ ಜೊತೆಜೊತೆಗೇ ಆರ್ಥಿಕವಾಗಿ ಹಿಂದುಳಿದ ಜನರ ಅಭಿವೃದ್ಧಿಗಾಗಿ ಯೋಜನೆಗಳನ್ನು ಕೈಗೊಳ್ಳಬೇಕಾದ ಜರೂರತ್ತಿದೆ. ಆರ್ಥಿಕ ಸಮಾನತೆಯನ್ನು ಸಾಧಿಸುವ ಸಲುವಾಗಿ ಆ ವರ್ಗದವರಿಗಾಗಿ ಸರ್ಕಾರ ತೆರಿಗೆ ವಿನಾಯಿತಿ, ಸಬ್ಸಿಡಿ ಸೌಲಭ್ಯಗಳನ್ನು ನೀಡಬೇಕು. ಆರ್ಥಿಕ ಪ್ರಗತಿಯೊಂದೇ ಸರ್ಕಾರದ ಮೂಲಮಂತ್ರವಾಗಬಾರದು. ಯಾವುದೇ ಸಂಪತ್ತು ಸಮಾಜದಲ್ಲಿ ಸಮಾನವಾಗಿ ಹಂಚಿಕೆಯಾಗುವ ರೀತಿ ಬಜೆಟ್‌ ರೂಪಿತವಾಗಿರಬೇಕು.

ಕಟ್ಟ ಕಡೆಯದಾಗಿ ಹೇಳಬೇಕೆಂದರೆ, ನೆಲದ ಮೇಲೆ ಚಾಪೆ ಹಾಸಿಕೊಂಡು ಅಲ್ಯುಮಿನಿಯಂ ತಟ್ಟೆಯಲ್ಲಿ ಅನ್ನ ಉಣ್ಣುವವನಿಗೂ, ಎ.ಸಿ ರೂಮಿನಲ್ಲಿ ಕೂತು ದುಬಾರಿ ಬೋರೋಸಿಲ್‌ ಪ್ಲೇಟ್‌ನಲ್ಲಿ ಉಣ್ಣುವವನಿಗೂ ಒಂದೇ ರೀತಿಯ ಟ್ರೀಟ್‌ಮೆಂಟ್‌ ಸಿಗಬೇಕು.

-ಹವನ

Advertisement

Udayavani is now on Telegram. Click here to join our channel and stay updated with the latest news.

Next