Advertisement

ಮಹಾದಾಯಿ : ರಾಜ್ಯ ಬಂದ್‌ ಆಂಶಿಕ

06:35 AM Jan 26, 2018 | Karthik A |

ಬೆಂಗಳೂರು: ಕಳಸಾ-ಬಂಡೂರಿ ನಾಲಾ ಯೋಜನೆಗಾಗಿ ನಡೆದ ಈ ವರ್ಷದ ಮೊದಲ ಬಂದ್‌ಗೆ ರಾಜ್ಯದಲ್ಲಿ ಆಂಶಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷಗಳ ಬೇಡಿಕೆಯಾದ ಮಹಾ ದಾಯಿ ವಿವಾದ ಇತ್ಯರ್ಥಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿದ ಬಂದ್‌ ಕರೆಗೆ ಕರಾವಳಿ, ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು, ಹುಬ್ಬಳ್ಳಿ  ಸಹಿತ ಕೆಲವು ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಇತ್ತು.

Advertisement

ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಂದ್‌ ರಾಜ್ಯಾದ್ಯಂತ ಬಹುತೇಕ ಶಾಂತಿಯುತವಾಗಿತ್ತು. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ಗದಗ, ಹಾವೇರಿಯಲ್ಲಿ ಬಂದ್‌ ಯಶಸ್ವಿಯಾಗಿದ್ದರೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜಾಪುರ, ಬೀದರ್‌, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಪ್ಪಳದಲ್ಲಿ ಬಂದ್‌ ನೀರಸವಾಗಿತ್ತು. ಬಂದ್‌ ಸಂದರ್ಭದಲ್ಲೇ  ಮೈಸೂರಿನಲ್ಲಿ ನಡೆದ ಪರಿವರ್ತನ ಯಾತ್ರೆಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭರ್ಜರಿ ಭಾಷಣ ಮಾಡಿ ಹೋಗಿದ್ದಾರೆ. ಆದರೆ, ಮಹಾದಾಯಿ ಬಗ್ಗೆ ಚಕಾರ ಎತ್ತಲಿಲ್ಲ.


ಕನ್ನಡಪರ ಸಂಘಟನೆಗಳು ರೈಲು ಹಾಗೂ ರಸ್ತೆ ತಡೆ, ಧರಣಿ ಮೂಲಕ ತಮ್ಮ ಆಕ್ರೋಶ ಹೊರ ಹಾಕಿವೆ. ಸಾವಿರಾರು ಕಾರ್ಯಕರ್ತರು ಬೃಹತ್‌ ಮೆರವಣಿಗೆ ನಡೆಸಿ ಮಹಾದಾಯಿ ವಿಚಾರದಲ್ಲಿ ತತ್‌ಕ್ಷಣ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ಚಲನಚಿತ್ರ ಪ್ರದರ್ಶನ, ಚಿತ್ರೀಕರಣ ಸಹಿತ ಇಡೀ ಚಿತ್ರೋದ್ಯಮ ಸ್ಥಗಿತ ಗೊಂಡಿತ್ತು. ಮುನ್ನೆಚ್ಚರಿಕೆಯಾಗಿ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಕೆಲವೆಡೆ ಜನಜೀವನ ಅಸ್ತವ್ಯಸ್ತ ಗೊಂಡಿತ್ತು¤.  ಸಂಜೆ ಸಂಚಾರ ಪುನರಾರಂಭಗೊಂಡು ಎಲ್ಲೆಡೆ ಜನಜೀವನ ಸಹಜ ಸ್ಥಿತಿಗೆ ಮರಳಿತು.

ಏಳನೇ ಬಂದ್‌: ಮಹಾದಾಯಿ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಏಳನೇ ಬಂದ್‌ ಇದು.  ಈ ಹಿಂದೆ ಆರು ಬಾರಿ ಕರ್ನಾಟಕ ಬಂದ್‌ ಆಗಿದೆ. ಉಳಿದಂತೆ ಹುಬ್ಬಳ್ಳಿ-ಧಾರವಾಡ ಸಹಿತ ಆ ಭಾಗದಲ್ಲಿ ಜಿಲ್ಲಾ ಬಂದ್‌ಗಳು ಸಾಕಷ್ಟು ಬಾರಿ ಆಗಿವೆ.


Advertisement

Udayavani is now on Telegram. Click here to join our channel and stay updated with the latest news.

Next