Advertisement

ಜಂಬೂಸವಾರಿ ನೋಡಲು ಸುವರ್ಣರಥದಲ್ಲಿ ಹೋಗಿಬನ್ನಿ

12:37 PM Sep 02, 2017 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಹಾಗೂ ಮೈಸೂರು ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಐಷಾರಾಮಿ ಪ್ರವಾಸ ಬಯಸುವವರಿಗಾಗಿ ಸುವರ್ಣ ರಥ (ಗೋಲ್ಡನ್‌ ಚಾರಿಯೇಟ್‌) ವಿಶೇಷ ಪ್ಯಾಕೇಜ್‌ ಆಯೋಜಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಸಂಯುಕ್ತಾಶ್ರಯದಲ್ಲಿ ಸೆ.29ರಿಂದ ಅ.1ರವರೆಗೆ ಒಂದು ಹಗಲು, ಎರಡು ರಾತ್ರಿ ದಸರಾ ಪ್ರವಾಸದ ಪ್ಯಾಕೇಜ್‌ ರೂಪಿಸಲಾಗಿದೆ.

Advertisement

ಸೆ.29ಕ್ಕೆ ರೈಲು ಪ್ರಯಾಣ: ಈ ಪ್ಯಾಕೇಜ್‌ನಡಿ ಭಾರತೀಯ ಪ್ರಜೆಗಳಿಗೆ ಒಬ್ಬರು ಮತ್ತು ಇಬ್ಬರಿಗೆ 50 ಸಾವಿರ ರೂ., ಮೂವರಿಗೆ 75 ಸಾವಿರ ರೂ., ವಿದೇಶಿ ಪ್ರಜೆಗಳಿಗೆ 80 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಸೆ.29ರಂದು ರಾತ್ರಿ 8.30ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿರುವ ಸುವರ್ಣರಥ, ಮರು ದಿನ ಮುಂಜಾನೆ ಮೈಸೂರು ರೈಲು ನಿಲ್ದಾಣ ತಲುಪಲಿದೆ.

ಅ.1ರಂದು ಮುಂಜಾನೆ ಮೈಸೂರಿನಿಂದ ಹೊರಟು ಬೆಳಗ್ಗೆ 7ಗಂಟೆಗೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಸೆ.29ರಂದು ಪ್ರವಾಸಿಗರನ್ನು ಬೆಂಗಳೂರಿನ ಪಂಚತಾರಾ ಹೋಟೆಲ್‌ನಿಂದ ಹವಾನಿಯಂತ್ರಿತ ಬಸ್‌ನಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಕರೆತಂದು, ಮೈಸೂರು ಶೈಲಿಯ ಸಾಂಪ್ರದಾಯಿಕ ಸ್ವಾಗತ ಕೋರಿ ಅವರನ್ನು ಸುವರ್ಣರಥ ಹತ್ತಿಸಿಕೊಳ್ಳಲಾಗುವುದು.

ಸುವರ್ಣ ರಥದಲ್ಲಿ ಏನೇನಿದೆ: ಐಷಾರಾಮಿಯಾಗಿ ತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವಂತೆ ಅನುಭವ ನೀಡುವ ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ಎನಿಸಿರುವ ಸುವರ್ಣರಥದಲ್ಲಿ ಒಟ್ಟು 18 ಭೋಗಿಗಳಲ್ಲಿ 40 ಕ್ಯಾಬಿನ್‌ಗಳಿದ್ದು, 80 ಜನರು ಪ್ರಯಾಣ ಮಾಡಬಹುದಾಗಿದೆ.ರೈಲು ಗಾಡಿಯ ಹೊರ ಮತ್ತು ಒಳಾಂಗಣ ವಿನ್ಯಾಸವನ್ನು ಪಂಚತಾರ ಹೋಟೆಲ್‌ ಮಾದರಿಯಲ್ಲಿ ರೂಪಿಸಲಾಗಿದ್ದು, ಗಾಲಿಗಳ ಮೇಲೆ ಚಲಿಸುತ್ತಿದ್ದರೂ ಪ್ರವಾಸಿಗರಿಗೆ ತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ, ವಿಭಿನ್ನ ತಿಂಡಿ-ತಿನಿಸುಗಳ ರಸದೌತಣವನ್ನು ಸವಿಯಬಹುದು.

ರೈಲು ಭೋಗಿಯ ಕ್ಯಾಬಿನ್‌ನಲ್ಲಿ ಎಲ್‌ಸಿಡಿ ಟಿವಿ ಸ್ಕ್ರೀನ್‌, ದೂರವಾಣಿ, ಚಿಕ್ಕದಾದ ಕಪ್‌ಬೋರ್ಡ್‌, ಸೇಫ್ ಡಿಪಾಸಿಟ್‌ ಬಾಕ್ಸ್‌, ಬಾರ್‌ ಲಾಂಜ್‌, ಸ್ಪಾ, ಜಿಮ್‌ ಸೌಲಭ್ಯವೂ ಇದೆ. ಸೆ.29ರ ರಾತ್ರಿ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ ಮೈಸೂರು ತಲುಪಿದ ನಂತರ ಸುವರ್ಣರಥದಲ್ಲಿಯೇ ಬೆಳಗಿನ ಉಪಾಹಾರ ಒದಗಿಸಿ, ಕೆಎಸ್‌ಟಿಡಿಸಿಯ ಹವಾನಿಯಂತ್ರಿತ ಬಸ್‌ಗಳಲ್ಲಿ ಕರೆದೊಯ್ದು ನುರಿತ ಮಾರ್ಗದರ್ಶಕರೊಂದಿಗೆ ಶ್ರೀರಂಗಪಟ್ಟಣದ ಪಾರಂಪರಿಕ ತಾಣಗಳಾದ ಟಿಪ್ಪುಕೋಟೆ,

Advertisement

-ದರಿಯಾ ದೌಲತ್‌, ರಂಗನತಿಟ್ಟು ಪಕ್ಷಿಧಾಮ ವೀಕ್ಷಣೆ ನಂತರ ಮೈಸೂರಿಗೆ ಬಂದು ಹೋಟೆಲ್‌ ಲಲಿತ್‌ಮಹಲ್‌ ಪ್ಯಾಲೇಸ್‌ನಲ್ಲಿ ಮಧ್ಯಾಹ್ನದ ಭೂರಿ ಭೋಜನದೊಂದಿಗೆ ಸತ್ಕರಿಸಿ ನಂತರ ಜಾನಪದ ವಸ್ತು ಸಂಗ್ರಹಾಲಯ, ಜಯಲಕ್ಷ್ಮೀ ವಿಲಾಸ ಅರಮನೆ ವೀಕ್ಷಣೆ ನಂತರ ಮೈಸೂರು ಅರಮನೆಗೆ ಬಂದು ದಸರಾ ಗೋಲ್ಡ್‌ಪಾಸ್‌ ಮೂಲಕ ಜಂಬೂಸವಾರಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. 

ನಂತರ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು, ಅರಮನೆ ಮುಂಭಾಗದ ಮುಖ್ಯವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಯೊಂದಿಗೆ ಸಾಂಸ್ಕೃತಿಕ ನಗರಿಯ ಐಸಿರಿಯನ್ನು ಕಣ್ತುಂಬಿಕೊಂಡ ನಂತರ ಗಾಲಿಗಳ ಮೇಲಿನ ಅರಮನೆ ಸುವರ್ಣರಥಕ್ಕೆ ಕರೆದೊಯ್ದು ರಾತ್ರಿಯ ಭೋಜನದ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದು, ಮರುದಿನ ಬೆಳಗ್ಗೆ 7ಗಂಟೆಗೆ ಸುವರ್ಣರಥ ರೈಲು ಯಶವಂತಪುರ ರೈಲು ನಿಲ್ದಾಣ ತಲುಪುವುದರೊಂದಿಗೆ ದಸರಾ ಪ್ಯಾಕೇಜ್‌ ಪ್ರವಾಸ ಮುಕ್ತಾಯಗೊಳ್ಳಲಿದೆ. ಸುವರ್ಣರಥದಲ್ಲಿ ಪ್ರಯಾಣಿಸಿ ಮೈಸೂರು ದಸರೆಯ ವಿಶೇಷ ಅನುಭವ ಪಡೆಯಲಿಚ್ಚಿಸುವ ಪ್ರವಾಸಿಗರು ಆನ್‌ಲೈನ್‌ ಅಥವಾ ಕೆಎಸ್‌ಟಿಡಿಸಿ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಸೀಟು ಕಾದಿರಿಸಬಹುದು.

ಈ ಬಾರಿ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರು ದಸರಾ ಬಗ್ಗೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಗೋಲ್ಡನ್‌ ಚಾರಿಯೇಟ್‌ ಪ್ರವಾಸಿ ಪ್ಯಾಕೇಜ್‌ ದುಬಾರಿ ಇತ್ತು, ಈ ವರ್ಷ ಕಡಿಮೆ ಮಾಡಿದ್ದೇವೆ. ಜತೆಗೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದಲೂ ಮೈಸೂರಿಗೆ ಪ್ರವಾಸಿ ಪ್ಯಾಕೇಜ್‌ ಆಯೋಜಿಸಲಾಗುತ್ತಿದೆ.
-ಪ್ರಿಯಾಂಕ್‌ ಖರ್ಗೆ, ಪ್ರವಾಸೋದ್ಯಮ ಸಚಿವ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next