Advertisement

ಬನ್ನಿ ಒಮ್ಮೆ ಹಳ್ಳಿಗಳತ್ತ ಸುತ್ತು ಹಾಕಿ ಬರೋಣ

05:59 PM Jul 21, 2018 | |

ನಗರವೆಂಬ ದಂತಗೋಪುರದಿಂದ ಹೊರಗೆ ಬರುವುದು ಹೇಗೆ ಎಂಬ ಪ್ರಶ್ನೆ ಇಂದು ಎಲ್ಲರನ್ನೂ ಕಾಡುತ್ತಿರುವಂಥದ್ದು. ಅದಕ್ಕೆ ನಮಗೆ ಹಳ್ಳಿಗಳಲ್ಲಿ ಉತ್ತರವಿದೆ. ಅದನ್ನು ಹುಡುಕಿಕೊಳ್ಳಬೇಕಷ್ಟೆ.

Advertisement

ನಗರವಾಸಿಗಳಾದ ನಮಗೆ ಗಾಜಿನ ಅರಮನೆಯಲ್ಲಿ ವಾಸಿಸುವವರೆಂಬ ಅಪವಾದವೂ ಇದೆ. ನಾವು ಸಾಮಾನ್ಯವಾಗಿ ಗಾಜಿನಮನೆ ಎಂಬ ಉಪಮೆಯನ್ನು ಬಳಸುವುದು ರಾಜಕೀಯ ಆರೋಪ- ಪ್ರತ್ಯಾರೋಪಗಳಲ್ಲಿ. ಒಂದು ಪಕ್ಷದವ ಮತ್ತೂಂದು ಪಕ್ಷದವನ ಬಗ್ಗೆ ಆರೋಪ ಮಾಡಿದಾಗ, “ಗಾಜಿನ ಅರಮನೆಯಲ್ಲಿರುವವರು ನೀವು ಎಚ್ಚರಿಕೆಯಿಂದ ಮಾತನಾಡಿ. ಗಾಜಿನ ಮನೆಯಲ್ಲಿದ್ದು ಕಲ್ಲು ಎಸೆಯುವ ಕೆಲಸ ಮಾಡಬೇಡಿ’ ಎನ್ನುವುದುಂಟು. ಅಂದರೆ, ಗಾಜಿನ ಮನೆಯಿಂದ ಹೊರಗೆ ಕಲ್ಲು ಎಸೆದರೆ ಅದಕ್ಕೆ ಪ್ರತಿಯಾಗಿ ಕಲ್ಲು ಚಿಮ್ಮಿದರೆ ಇಡೀ ಗಾಜಿನ ಮನೆಯೇ ಪುಡಿಯಾದೀತು ಎಂಬ ಎಚ್ಚರಿಕೆಯ ಮಾತು. ಏನೇ ಇದ್ದರೂ ಇದು ನೇತ್ಯಾತ್ಮಕ ನೆಲೆಯಲ್ಲೇ ಬಳಸುವಂಥದ್ದು. 

ಇನ್ನು ದಂತ ಗೋಪುರದಲ್ಲಿರಬೇಡಿ ಎಂಬ ಮಾತನ್ನೂ ಬಳಸುವುದುಂಟು. ಇದೂ ನಗರದವರಿಗೇ ಹೆಚ್ಚು. ಕೆಲವೊಮ್ಮೆ ನಮ್ಮ ಎಸಿ ಕ್ಯಾಬಿನ್‌ಗಳಲ್ಲಿ ಬಂಧಿಯಾಗಿರುವ ಉನ್ನತೋನ್ನತ ಅಧಿಕಾರಿಗಳಿಗೂ ಅನ್ವಯಿಸುವುದುಂಟು. ಇದರರ್ಥವೂ ಒಂದು ನೆಲೆಯಲ್ಲೇ ನೇತ್ಯಾತ್ಮಕವೇ. “ದಂತಗೋಪುರ’ದಲ್ಲಿರುವವರಿಗೆ ಆ ಒಳಗಿನ ಪ್ರಪಂಚ ಬಿಟ್ಟರೆ ಹೊರಗಿನದ್ದೇನೂ ತಿಳಿಯದು ಎಂಬುದೇ ಅರ್ಥ. ಇಂಥ ಇನ್ನೂ ಹಲವು ಉಪಮೆಗಳಿವೆ ನಗರವಾಸಿಗಳ ಕುರಿತಾಗಿ. ಒಂದೊಂದೂ ಪ್ರತ್ಯೇಕ ನೆಲೆಯಲ್ಲಿ ಉಲ್ಲೇಖೀತಗೊಂಡರೂ ಕೊಡುವ ಅರ್ಥ ಸಮಾನವಾದುದೇ.

ಎಲ್ಲಿಂದ ಕಲಿಯಬೇಕು?
ಇಂಥದೊಂದು ಉಪಮೆಯನ್ನು ಪ್ರಸ್ತಾಪಿಸಿದ್ದು ಏಕೆಂದರೆ, ನಗರವಾಸಿಗಳಾದ ನಾವು ತುಂಬಿದ ಟ್ರಾಫಿಕ್‌ನಲ್ಲಿ ನುಗ್ಗಿ ಮುಂದಕ್ಕೆ ಹೋಗುವಾಗ ನಮ್ಮ ವಾಹನ ಮತಾöರಿಗೋ ತಾಗಿದಾಗ, ಅವನು ಸಿಟ್ಟುಗೊಳ್ಳದಿರಲೆಂದು ತೋರುವ ನಗೆಗೆ, ಎಲ್ಲಾದರೂ ಯಾರಾದರೂ ಎದುರು ಸಿಕ್ಕರೆ ಪ್ರತಿಯಾಗಿ ತೋರುವ ಅಪರಿಚಿತ ನಗೆಗೆ-ಇಂಥವುಗಳಿಗಷ್ಟೇ ನಮ್ಮ ನಗುವನ್ನು ಖರ್ಚು ಮಾಡಿಕೊಳ್ಳುತ್ತೇವೆ. ಇಷ್ಟು ಬಿಟ್ಟರೆ ನಮ್ಮ ನಗುವನ್ನು ಖರ್ಚು ಮಾಡಿಕೊಳ್ಳುವುದೇ ಕಡಿಮೆ. ಒಂದು ಶಿಷ್ಟಾಚಾರದ ನಗುವಿನಿಂದ ಸಿಗುವಂಥದ್ದಾಗಲೀ, ಸಾಧಿಸುವಂಥದ್ದಾಗಲೀ ಏನೂ ಇಲ್ಲ ಎಂಬುದು ಅತ್ಯಂತ ಸ್ಪಷ್ಟ. 

ಅದೇ ನಾವು ಹಳ್ಳಿಗಳಿಗೆ ಹೋಗೋಣ. ಎಲ್ಲ ಹಳ್ಳಿಗಳೂ ನಗರಗಳಾಗಿ ಬದಲಾವಣೆಗೊಳ್ಳುತ್ತಿವೆ ಎಂಬುದು ಸಾಮಾನ್ಯವಾದ ಮಾತು. ಆದರೂ ನಗರಗಳಲ್ಲಿ ಇರುವವರಿಗೆ ಹಳ್ಳಿಗಳು ಇಂದಿಗೂ ಖುಷಿ ಕೊಡುವ ತಾಣಗಳಾಗಿ ಉಳಿದಿರುವುದೂ ಇಂಥದ್ದೇ ಕಾರಣಗಳಿಗಾಗಿ. ಉದಾಹರಣೆಗೆ, ಒಂದು ಹಳ್ಳಿಯಲ್ಲಿರುವ ಯಾರದೋ ಒಬ್ಬರ ಮನೆಗೆ ಹೋದವೆನ್ನಿ. ಇಡೀ ಊರಿನಲ್ಲೇ ಕುತೂಹಲ ಬಂದು ಕುಣಿಯುತ್ತಿರುತ್ತದೆ. ರಾತ್ರಿ ಊಟವಾದ ಮೇಲೋ, ಬೆಳಗ್ಗೆಯೋ ಒಂದು ಸಣ್ಣ ವಾಕ್‌ ಹೊರಟರೆಂದು ಕೊಳ್ಳಿ. ಎದುರಿಗೆ ಸಿಕ್ಕವರು ಸಹಜವಾಗಿ ಮುಗುಳ್ನಗುತ್ತಾ, “ಯಾವೂರಪ್ಪಾ?’ ಎಂದು ಕೇಳುತ್ತಾರೆ. ಊರು ಹೇಳಿದ ಮೇಲೆ, “ಯಾರ ಮನೆಗೆ ಬಂದದ್ದು?’ ಎಂಬುದು ಎರಡನೇ ಪ್ರಶ್ನೆ. ಯಾರ ಮನೆಗೆ ಬಂದದ್ದೂ ಎಂದ ಮೇಲೆ, ಮತ್ತೂಂದು ಪ್ರಶ್ನೆ. ಆದರೆ, ಇವೆಲ್ಲವೂ ಯಾವುದೂ ಅಪರಿಚಿತ ನೆಲೆಯಲ್ಲಿರುವುದಿಲ್ಲ, ಬದಲಾಗಿ ಪರಿಚಯ ಮಾಡಿಕೊಳ್ಳುವ ಮನುಷ್ಯ ಸಹಜ ತವಕದಿಂದ ಕೂಡಿರುತ್ತದೆ. ಈ ಭಾವನೆಯನ್ನು ನೀವು ಭಾರತದ ಯಾವುದೇ ಹಳ್ಳಿಗೆ ಹೊಂದಿಸಿ ನೋಡಬಹುದು. ಎಲ್ಲೇ ಹೋದರೂ ಇದೇ.

Advertisement

ಮೂರು ವರ್ಷಗಳ ಹಿಂದಿನ ಮಾತು. ಒರಿಸ್ಸಾದ ಒಂದು ಹಳ್ಳಿಗೆ ಹೋಗಿದ್ದೆ. ಅಲ್ಲಿ ಯಾವುದೋ ಒಂದು ಯೋಜನೆಯ ಅಧ್ಯಯನಕ್ಕೆಂದು ಹೋಗಿದ್ದೆವು. ಸಂಜೆಯಾದಾಗ ಹಳ್ಳಿ ಸುತ್ತು ಹಾಕಲೆಂದು ಹೊರಟೆ. ಒಂದು ಅಂಗಡಿ ಬಳಿ ನಿಂತು ಹಳ್ಳಿಯ ಪೂರ್ವಾಪರ ತಿಳಿದುಕೊಂಡೆ. ಅತ್ತ ಕಡೆಯಿಂದಲೂ ಹತ್ತಾರು ಪ್ರಶ್ನೆಗಳು ಬಂದವು. ಈ ಪರಸ್ಪರ ವಿಚಾರಗಳ ಕೊಡುಕೊಳ್ಳುವಿಕೆಯಲ್ಲಿ ನಮ್ಮ ಬೆಂಗಳೂರು ಬಂದಿತು, ಅವರ ಭುವನೇಶ್ವರವೂ ಬಂದಿತು. ಎಲ್ಲ ಮುಗಿಯುವಷ್ಟರಲ್ಲಿ ಬರೋಬ್ಬರಿ ಅರ್ಧ ಗಂಟೆ ಕಳೆದಿರಬಹುದು. ಅಷ್ಟರಲ್ಲಾಗಲೇ ನಮ್ಮೊಳಗೆ ಎಂಥದೊಂದು ಬಂಧ ನಿರ್ಮಾಣವಾಗಿತ್ತೆಂದರೆ, ಆತ “ಅಣ್ಣಾ, ಯಾವತ್ತು ಹೋಗುವುದು? ಮೂರು ದಿನ ಇದ್ದರೆ ಊರಿನ ಜಾತ್ರೆ ಇದೆ ನೋಡಿಕೊಂಡು ಹೋಗಿ’ ಎಂದು ಹೇಳಿದ. ನನಗೆ ತೀರಾ ವಿಚಿತ್ರವೆನಿಸಿತು. ಇಂಥದ್ದೇ ಒಂದು ಅನುಭವ ಮಧ್ಯ ಪ್ರದೇಶದ ಒಂದು ಹಳ್ಳಿಗೆ ಹೋದಾಗಲೂ ಆಗಿದೆ. ಇನ್ನು ನಮ್ಮ ದಕ್ಷಿಣ ಭಾರತದ ಹಳ್ಳಿಗಳೂ ಈ ವಿಷಯದಲ್ಲೇನು ಹಿಂದಿಲ್ಲ. 

ನಗರದಲ್ಲಿ ಇದು ಸಾಧ್ಯವೇ?
ಈ ಪ್ರಶ್ನೆ ಸದಾ ನನ್ನನ್ನು ಕಾಡುವಂಥದ್ದು. ಹಳ್ಳಿಯಲ್ಲಿ ಅರ್ಧ ಗಂಟೆಯಲ್ಲಿ ರೂಪುಗೊಳ್ಳುವ ಬಾಂಧವ್ಯ ನಗರದಲ್ಲಿ ಅರವತ್ತು ವರ್ಷಗಳಾದರೂ ಏಕೆ ನಿರ್ಮಾಣವಾಗುವುದಿಲ್ಲ? ಇದಕ್ಕೆ ಸಮರ್ಪಕವಾದ ಉತ್ತರ ಕೂಡಲೇ ಸಿಗದು. ನಾವು ಯಂತ್ರಗಳ ಮಧ್ಯೆ ಯಂತ್ರಗಳಂತಾಗಿ ದುಡಿಯುತ್ತಿದ್ದೇವೆ. ನಮ್ಮ ಎಲ್ಲ ಸಹಜ ಸ್ವಭಾವಕ್ಕೂ ಯಾಂತ್ರಿಕತೆಯ ಲೇಪನವಾಗಿದೆ. ನಮಗೆ ಸಿಸಿ ಕೆಮರಾಗಳ ಮೇಲೆ ಇರುವಷ್ಟು ವಿಶ್ವಾಸ ಪಕ್ಕದ ಮನೆಗಳವರ ಮೇಲಿಲ್ಲ. ಅವರನ್ನು ಹತ್ತಿರ ಕರೆದುಕೊಳ್ಳಲೂ ತಯಾರಿಲ್ಲ, ಇಲ್ಲವೇ ಸಮಯವಿಲ್ಲ.

ಕಾಲನಿಯಲ್ಲಿ ಬದುಕುವ ಪರಿ
ಕಾಲನಿಯಲ್ಲಿ ಬದುಕುವ ಪರಿ ಈ ದೃಷ್ಟಿಯಲ್ಲಿ ಸ್ವಲ್ಪ ಪರವಾಗಿಲ್ಲ. ಕೊನೇ ಪಕ್ಷ ಇಲ್ಲಿ ಆಯಾ ಕಾಲನಿಯ ಒಂದು ಗಲ್ಲಿಯಲ್ಲಿರುವ 20 ಮನೆಗಳ ಮಧ್ಯೆಯಾದರೂ ಬಾಂಧವ್ಯದ ಸೇತು ಬಂಧ ನಿರ್ಮಾಣವಾಗಿರುತ್ತದೆ. ಈ ಮನೆಯವರು ಯಾವುದೋ ಒಂದು ಕಾರಣಕ್ಕೆ ಆ ಮನೆಗೆ ಹೋಗುತ್ತಾರೆ. ಗಲ್ಲಿಯ ಕೊನೆ ಮನೆಯ ಮಹಿಳೆಯೂ ಮೊದಲ ಮನೆಯ ಮಹಿಳೆಯೂ ಆಗಾಗ್ಗೆ ಒಟ್ಟಿಗೇ ಮಾರುಕಟ್ಟೆಗೆ ಹೋಗುತ್ತಾರೆ. ತಮ್ಮ ಮನೆಯಲ್ಲಿನ ಪದಾರ್ಥಗಳನ್ನು ಹಂಚಿಕೊಳ್ಳುತ್ತಾರೆ. ತಮಗನ್ನಿಸಿದ್ದನ್ನು ಹಂಚಿಕೊಳ್ಳುತ್ತಾರೆ. ಒಟ್ಟೂ ದುಃಖವನ್ನು ಕಳೆಯುವ, ಸುಖವನ್ನು ಹಂಚಿಕೊಳ್ಳುವ ಎನ್ನುವುದಕ್ಕಿಂತ ಹೆಚ್ಚು ಮಾನವೀಯವಾಗಿ ಬದುಕಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇಂಥ ನಡವಳಿಕೆಯೂ ಇತ್ತೀಚೆಗೆ ನಗರಗಳಲ್ಲಿ ಕಾಣೆಯಾಗುತ್ತಿರುವುದು ಕಟು ವಾಸ್ತವ. 

ನಮ್ಮನ್ನು ನಾವು ಸುಧಾರಿಸಿಕೊಳ್ಳಬಹುದೇ?
ಸುಧಾರಿಸಿಕೊಳ್ಳುವುದು ಎಂದರೆ ನಮ್ಮೊಳಗಿನ ಕತ್ತಲನ್ನು ನಿವಾರಿಸಿಕೊಳ್ಳಲು ಸಣ್ಣದೊಂದು ದೀಪವನ್ನು ಹಚ್ಚಿಕೊಳ್ಳುವುದು. ನಗರಗಳಲ್ಲಿ ಬದುಕುವ ನಾವು ಸಣ್ಣದೊಂದು ಅನಾಥ ಭಾವವೆನ್ನುವ ಗುಡ್ಡ ದಾಟಲೋ, ಅನಾಮಿಕರಂತೆ ಬದುಕುವ ಕ್ರಮದ ಬೇಲಿಯನ್ನು ದಾಟಲೋ ಸಣ್ಣದೊಂದು ದೀವಿಗೆಯನ್ನು ಹಚ್ಚಿಕೊಳ್ಳಬೇಕು. ಅದು ಬಾಂಧವ್ಯದ ದೀಪವೇ. ಇದಕ್ಕೆ ಬಹಳ ಕಸರತ್ತು ಮಾಡಬೇಕಾದದ್ದೇನೂ ಇಲ್ಲ. ಸಣ್ಣದಾಗಿ ನಮ್ಮ ಗಲ್ಲಿಯ ನಡುವಿನ ಒಂದಿಷ್ಟು ಮಂದಿ ವಾರಕ್ಕೊಮ್ಮೆಯಾದರೂ ಅರ್ಧ ಗಂಟೆ ಕುಳಿತು ಚರ್ಚಿಸುವುದನ್ನು ರೂಢಿಸಿಕೊಳ್ಳಬೇಕು. ಚರ್ಚೆ ಯಾವ ವಿಷಯದ್ದೇ ಆಗಲಿ, ಅದು ರಾಜಕೀಯವೂ ಅಲ್ಲ, ಆರ್ಥಿಕ ವಿಚಾರವೂ ಅಲ್ಲ. ಹಾಗೆಯೇ ನಮ್ಮ ಬದುಕಿನ ಮಾತು ಎಂದುಕೊಳ್ಳೋಣ. ಆಗ ನೋಡಿ ದೀವಿಗೆಯ ಬೆಳಕಿನಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಬಹುದು.

ಹಲವು ಬಾರಿ ನಾವು ಆಲೋಚಿಸುವುದು ದೊಡ್ಡದೊಂದು ಸಾಧನೆ ದಿಢೀರ್‌ ಆಗಬೇಕೆಂಬ ರೀತಿಯಲ್ಲಿ. ಅದು ದೋಷಪೂರ್ಣವಷ್ಟೇ ಅಲ್ಲ, ಕಾರ್ಯ ಸಾಧ್ಯವಾಗದ್ದೂ ಸಹ. ಅದರ ಬದಲು ಚೀನಿ ಗಾದೆಯಂತೆಯೇ ಪ್ರತಿ ದೊಡ್ಡ ಪ್ರಯಾಣವೂ ಒಂದು ಹೆಜ್ಜೆಯಿಂದ ಆರಂಭವಾಗುತ್ತದೆ ಎಂಬಂತೆಯೇ ಮೊದಲಿಗೆ ನಾವೇ ನಾಲ್ಕೈದು ಮಂದಿ ಕುಳಿತು ಚರ್ಚಿಸುವುದನ್ನು ಕಲಿಯಬೇಕು. ಬಳಿಕ ಅದಕ್ಕೆ ಉಳಿದವರನ್ನೂ ಸೇರಿಸಿಕೊಳ್ಳುವ ಮನೋ ವೈಶಾಲ್ಯವನ್ನು ರೂಢಿಸಿಕೊಳ್ಳಬೇಕು. ದಿನೇ ದಿನೆ ಗುಂಪು ದೊಡ್ಡದಾಗುತ್ತಾ ಹೋಗುತ್ತದೆ. ಖುಷಿ ಹಂಚಿಕೊಳ್ಳುವ ವೇದಿಕೆಯಾಗಿ ಮಾರ್ಪಡುತ್ತದೆ. ನಮ್ಮ ತಲೆಯ ಭಾರ ಇಳಿದು ಹಗುರಾಗುತ್ತಾ ತೊಡಗಿದಂತೆ ನಮಗರಿವಿಲ್ಲದೇ ಬೇಲಿಯನ್ನೂ ದಾಟಿರುತ್ತೇವೆ, ಗುಡ್ಡವನ್ನೂ ಇಳಿದಿರುತ್ತೇವೆ. 

ಖಂಡಿತಾ, ಹಳ್ಳಿಯವರು ಬದುಕುತ್ತಿರುವುದು ಹೀಗೆಯೇ. ಅವರಿಗೆ ಏಕೆ ಅನಾಥ ಭಾವ ಕಾಡುವುದಿಲ್ಲವೆಂದರೆ, ಅವರಿಗೆ ಇಡೀ ಹಳ್ಳಿಯವರು ಒಂದೇ. ಅದರಲ್ಲಿ ಅಪರಿಚಿತತೆಯ ಸೋಂಕೇ ಇಲ್ಲ. 

ಇಂಥದೊಂದು ಔಷಧವನ್ನು ನಗರವಾಸಿಗಳಾದ ನಾವು ಸೇವಿಸಬಹುದೇ ಎಂಬುದು ದೊಡ್ಡ ಪ್ರಶ್ನೆಯೇ. ಆದರೆ ಸಾಧ್ಯವಿದೆ. ನಮ್ಮ ಬದುಕಿನ ಪಯಣ ಇನ್ನಷ್ಟು ಖುಷಿಯಿಂದ ಕೂಡಿರಬೇಕೆಂದರೆ ಹೊಸತಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಅದುವೇ ಬದುಕೂ ಸಹ.

Advertisement

Udayavani is now on Telegram. Click here to join our channel and stay updated with the latest news.

Next