Advertisement

ಕಲರ್‌ಫ‌ುಲ್‌ ಆಗಿ ನಡೆಯಿತು ಅಮೂಲ್ಯ-ಜಗದೀಶ್‌ ನಿಶ್ಚಿತಾರ್ಥ

11:48 AM Mar 07, 2017 | |

ಬೆಂಗಳೂರು: ನಟಿ ಅಮೂಲ್ಯ ಅವರ ನಿಶ್ಚಿತಾರ್ಥ ಜಗದೀಶ್‌ ಅವರೊಂದಿಗೆ ಸೋಮವಾರ ಶ್ರೀ ಸಾಯಿ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಜಗದೀಶ್‌ಗೆ ಅಮೂಲ್ಯ ವಜ್ರದ ಉಂಗುರು ತೊಡಿಸಿದರೆ, ಅಮೂಲ್ಯಗೆ ಜಗದೀಶ್‌ ಸಾಲಿಟೇರ್‌ ಉಂಗುರ ತೊಡಿಸಿದರು. ಹೈಡ್ರಾಲಿಕ್‌ ಲಿಫ್ಟ್ ಮೂಲಕ ವೇದಿಕೆಗೆ ಬಂದ ಜೋಡಿ “ಎ’ ಮತ್ತು “ಜೆ’ ಎಂದು ವಿಶೇಷವಾಗಿ ಡಿಸೈನ್‌ ಮಾಡಿದ್ದ ಕೇಕ್‌ ಕತ್ತರಿಸಿದರು. 

Advertisement

“ಪಿಂಕ್‌ ಅಂಡ್‌ ವೈಟ್‌’ ಥೀಮ್‌ನಲ್ಲಿ ನಿಶ್ಚಿತಾರ್ಥ ಕಾನ್ಸೆಪ್ಟ್ ಮಾಡಿದ್ದು, ಅದರಂತೆ ಅದೇ ಬಣ್ಣದ ಹೂಗಳಿಂದ ವೇದಿಕೆಯನ್ನು ಅಲಂಕರಿಸಲಾಗಿತ್ತು. ಸಾಂಪ್ರದಾಯಿಕ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಅಮೂಲ್ಯ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಸ್ಯಾಕೊಫೋನ್‌ ವಾದಕ ಹರಿಪ್ರಸಾದ್‌ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಿಶ್ಚಿತಾರ್ಥದಲ್ಲಿ ಎರಡು ಕುಟುಂಬದ ಆಪ್ತರು, ರಾಜಕೀಯ, ಸಿನಿಮಾ ಕ್ಷೇತ್ರದ ಅನೇಕರು ಭಾಗವಹಿಸಿ ಅಮೂಲ್ಯ-ಜಗದೀಶ್‌ಗೆ ಶುಭಕೋರಿದರು. ಅಮೂಲ್ಯ-ಜಗದೀಶ್‌ ಮದುವೆ ಮೇನಲ್ಲಿ ನಡೆಯಲಿದೆ. ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್‌ ರಾಮಚಂದ್ರ ಅವರ ಪುತ್ರ ಜಗದೀಶ್‌ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದ್ದಾರೆ.  ಕೆಲ ದಿನಗಳ ಹಿಂದಷ್ಟೇ ಅಮೂಲ್ಯ ಮದುವೆ ಮಾತುಕತೆ ಗಣೇಶ್‌ ಮನೆಯಲ್ಲಿ ನಡೆದಿತ್ತು.  

ಮಾಜಿ ಕಾರ್ಪೋರೇಟರ್‌ ರಾಮಚಂದ್ರ ಹಾಗೂ ಗಣೇಶ್‌ ಕುಟುಂಬದ ಮಧ್ಯೆ ಒಳ್ಳೆಯ ಸ್ನೇಹವಿದ್ದ ಕಾರಣ ಹಾಗೂ ಅಮೂಲ್ಯ ಕೂಡಾ ಗಣೇಶ್‌ ಅವರ ಫ್ಯಾಮಿಲಿ ಫ್ರೆಂಡ್‌ ಆದ ಕಾರಣ ಗಣೇಶ್‌ ಮನೆಯಲ್ಲಿ ಮಾತುಕತೆ ನಡೆದು, ಮದುವೆ ನಿಶ್ಚಯವಾಗಿತ್ತು. ಹಾಗಾಗಿ, ಗಣೇಶ್‌-ಶಿಲ್ಪಾ ದಂಪತಿ ಕೂಡಾ ಅಮೂಲ್ಯ ನಿಶ್ಚಿತಾರ್ಥದಲ್ಲಿ ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದರು. ಸದ್ಯ ಅಮೂಲ್ಯ ನಾಯಕಿಯಾಗಿ ನಟಿಸಿರುವ “ಮಾಸ್ತಿಗುಡಿ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next