Advertisement

Mysore: ಐದು ಸಾವಿರ ಗಣಪತಿ ಚಿತ್ರ ಸಂಗ್ರಹಕಾರ..!

03:59 PM Sep 09, 2024 | Team Udayavani |

ಮೈಸೂರು: ವಿವಿಧ ಭಾಷೆಯ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು ಹಾಗೂ ವಿಶೇಷ ಪುರವಣಿಯಲ್ಲಿ ಪ್ರಕಟವಾಗಿರುವ ಗಣಪತಿಯ ಚಿತ್ರಗಳನ್ನು ಸಂಗ್ರಹಿ ಸುವ ಮೂಲಕ ವಿಶಿಷ್ಟ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಮೈಸೂರಿನ ಕಾಳೀಹುಂಡಿ ಶಿವಕುಮಾರ್‌.

Advertisement

ಶಿವಕುಮಾರ್‌ ಅವರ ಸಂಗ್ರಹದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಗಣಪತಿ ಗಳಿವೆ. ಇವುಗಳು ಒಂದರ ರೀತಿ ಇನ್ನೊಂದು ಇಲ್ಲ .ಎಲ್ಲವೂ ಭಿನ್ನ-ವಿಭಿನ್ನ ಹಾಗೂ ವಿಶೇಷವಾಗಿವೆ. ಕೆಲವು ಗಣಪತಿಗಳ ಚಿತ್ರವು ಮ್ಯಾಗ ಜೀನ್‌ಗಳ ಮುಖಪುಟದಲ್ಲಿ ಪ್ರಕಟವಾಗಿವೆ. ಇನ್ನೂ ಕೆಲವು ವಿಶೇಷ ವರದಿಗಳಲ್ಲಿ ಬಂದಿವೆ.

ಮತ್ತೆ ಹಲವು ಹಬ್ಬದ ಸಮಯದಲ್ಲಿ, ವಿಶೇಷ ಸಂದರ್ಭದಲ್ಲಿ ಪ್ರಕಟವಾಗಿರುವ ಗಣಪತಿಗಳ ಚಿತ್ರಗಳಾಗಿವೆ. ಮತ್ತೆ ಕೆಲವು ಅಕ್ಷರ ರೂಪದಲ್ಲಿ ಬಿಡಿಸಿರುವ ಚಿತ್ರಗಳಾಗಿವೆ. ಇವರ ಸಂಗ್ರಹದಲ್ಲಿ ಕೇವಲ ಕನ್ನಡ ಭಾಷೆಯದ್ದಲ್ಲದೇ ತಮಿಳು, ತೆಲುಗು, ಹಿಂದಿ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಗಣೇಶನ ಚಿತ್ರಗಳು ಇವೆ.

ವಿವಿಧ ಚಿತ್ರಗಳು: ಗಣಪತಿ ಹಬ್ಬದ ಸಮಯದಲ್ಲಿ ಆಯಾ ಕಾಲಘಟ್ಟದಲ್ಲಿ ಪ್ರಸ್ತುತವೆನಿಸುವ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಕೆಲವು ಕಲಾವಿದರು ಗಣೇಶನಿಗೆ ರೂಪ ಕೊಡುತ್ತಾರೆ. ಆನೆಯ ಮೇಲೆ ಕುಳಿತ ಗಣಪ, ಕಾಡುಗಳ್ಳ ವೀರಪ್ಪನ್‌ನನ್ನು ಸಂಹಾರ ಮಾಡುವ ಚಿತ್ರ, ದೇವೇಗೌಡರ ಕಾಲದಲ್ಲಿ ಸಂಪುಟ ವಿಸ್ತರಣೆಯಾಗದೇ ಇದ್ದ ಸಮಯದಲ್ಲಿ ಮುಖ್ಯಮಂತ್ರಿಯವರ ಜೊತೆಗೆ ಕುಳಿತು ಸಮಾಲೋಚನೆ ಮಾಡುವ ಗಣಪ, ಅಬ್ದುಲ್‌ ಕಲಾಂ ಜತೆ ಸಂವಾದ ಮಾಡುತ್ತಿರುವ ಗಣೇಶ, ಕೋವಿಡ್‌ ಸಮಯದಲ್ಲಿ ಸಂಕಷ್ಟ ಹರಣ ಮಾಡುವ ಗಣಪ, ವೈದ್ಯ ರೂಪದ ಗಣಪ ಹೀಗೆ ಹಲವಾರು ಚಿತ್ರಗಳು ಶಿವಕುಮಾರ್‌ ಅವರ ಸಂಗ್ರಹ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇವೆ.

Advertisement

ಪ್ರಕೃತಿಯಲ್ಲಿ ವಿಸ್ಮಯದಂತೆ ಕಂಡ ಗಣಪನ ಚಿತ್ರಗಳು, ಅಂದರೆ ಕ್ಯಾರೆಟ್‌ನಲ್ಲಿ ಮೂಡಿದ ಗಣಪ, ಮರದ ಕಾಂಡದಲ್ಲಿ ಮೂಡಿದ ಗಣಪ, ಅರಿಶಿನದಲ್ಲಿ ಕಂಡ ಗಣಪನ ಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಇದಲ್ಲದೇ ಕರ್ನಾಟಕದಲ್ಲಿ ಇರುವ ಗಣಪತಿ ದೇವಾಲಯಗಳ ವಿಶೇಷ,ಅಲ್ಲಿನ ದೈವಿಶಕ್ತಿಯ ಮಹಾತ್ಮೆ ಕುರಿತು ಪ್ರಕಟವಾಗಿರುವ ಲೇಖನಗಳ

ಸಂಗ್ರಹವನ್ನು ಮಾಡಿದ್ದಾರೆ ಪ್ರದರ್ಶನ: ತಾವು ಮಾಡಿರುವ ಸಂಗ್ರಹವನ್ನು ನೂರಾರು ಜನರು ನೋಡಲಿ ಎನ್ನುವ ಉದ್ದೇಶದಿಂದ ಸಮಾರಂಭಗಳು ಏರ್ಪಡುವ ಜಾಗದಲ್ಲಿ, ಕನ್ನಡ ಸಾಹಿತ್ಯ ಸಮ್ಮೆಳನ ನಡೆಯುವ ಊರುಗಳಲ್ಲಿ ಪ್ರದರ್ಶನ ಏರ್ಪಡಿಸುತ್ತಾರೆ. ಬೇರೆ ಯಾರ ಸಹಾಯವನ್ನು ಕೇಳದೇ ಮಳಿಗೆಗೆ ತಾವೇ ನಿಗದಿತ ಹಣ ಪಾವತಿಸಿ,ಬಾಡಿಗೆಗೆ ಪಡೆದುಕೊಳ್ಳುತ್ತಾರೆ. ಇಲ್ಲಿ ಗಣಪನ ಚಿತ್ರಗಳಲ್ಲದೇ, ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕ ವಸ್ತುಗಳಿಂದ ತಯಾರು ಮಾಡಿರುವ ಗಣೇಶ ಮೂರ್ತಿಯನ್ನು ಕರೆ-ಕುಂಟೆ, ನದಿ, ಸಮುದ್ರಗಳಲ್ಲಿ ವಿಸರ್ಜನೆ ಮಾಡುವುದರಿಂದ ಜನರ ಜೀವನದ ಮೇಲೆ ಯಾವ ರೀತಿ ದುಷ್ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ಜನರಿಗೆ ತಿಳಿಸುತ್ತಾರೆ.

ಇದಕ್ಕೆಂದೆ ವಿಸರ್ಜನೆ ಮಾಡಿದ ನಂತರ ಕೆರೆಗಳಲ್ಲಿ, ನದಿಗಳಲ್ಲಿ ತೇಲುತ್ತಿರುವ ಗಣಪತಿಯ ಫೋಟೋಗಳು ಪ್ರಕಟವಾಗಿರುವ ಪತ್ರಿಕೆಗಳ ತುಣುಕುಗಳನ್ನು ಕೂಡ ಪ್ರದರ್ಶಿಸುತ್ತಾರೆ. ಜೊತೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಾರೆ.

ಶುರುವಾದ ಹವ್ಯಾಸ: ಕಾಳಿಹುಂಡಿ ಶಿವಕುಮಾರ್‌ ಪ್ರತಿನಿತ್ಯ ಪತ್ರಿಕೆಗಳನ್ನು ಖರೀದಿಸುತ್ತಾರೆ. ತಾವು ಓದಿದ ಬಳಿಕ ಅದನ್ನು ತಮ್ಮ ಮನೆಯಲ್ಲೇ ಜೋಪಾನವಾಗಿ ಇಡುತ್ತಾರೆ. ವರ್ಷ ಎಷ್ಟಾದರೂ ಸರಿ ತೂಕಕ್ಕೆ ಹಾಕುವುದಿಲ್ಲ. ಇಂತಹ ಮನೋಭಾವನೆ ಹೊಂದಿರುವ ಶಿವಕುಮಾರ್‌ ಒಂದು ದಿನ ಪತ್ರಿಕೆಗಳನ್ನು ತಿರುವು ಹಾಕುತ್ತಿದ್ದ ಸಮಯದಲ್ಲಿ ವಿವಿಧ ರೀತಿಯಲ್ಲಿ ಇದ್ದ ಗಣಪತಿ ಚಿತ್ರವನ್ನು ನೋಡಿ, ಇವುಗಳನ್ನು ಏಕೆ ಸಂಗ್ರಹ ಮಾಡಬಾರದು ಎಂದು ಅನಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೆಲಸ ಶುರುಮಾಡಿದ್ದಾರೆ. ಮೊದಲಿಗೆ ನೂರರಷ್ಟು ಇದ್ದ ಗಣಪತಿ ಚಿತ್ರಗಳನ್ನು ಗಣೇಶ ಚತುರ್ಥಿಯ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಗಣೇಶನ್ನು ಕೂರಿಸುವುದರೊಂದಿಗೆ ಪ್ರದರ್ಶನ ಮಾಡುತ್ತಿದ್ದರು. ಆಗ ಅಕ್ಕ-ಪಕ್ಕದ ಮನೆಯವರು, ನಂಟರು ಈ ಚಿತ್ರಗಳನ್ನು ನೋಡಿ, ಖುಷಿಯನ್ನು ವ್ಯಕ್ತಪಡಿಸಿ, ಶಿವಕುಮಾರ್‌ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಸ್ಫೂರ್ತಿಗೊಂಡ ಶಿವಕುಮಾರ್‌ ರಾಜ್ಯದ ಎಲ್ಲ ಕಡೆ ಪ್ರದರ್ಶನ ಮಾಡಲು ಹೆಜ್ಜೆ ಹಾಕಿದರು.

ಈಗಲೂ ರಾಜ್ಯಾದ್ಯಂತ ಇರುವ ಅವರ ಸ್ನೇಹಿತರಿಗೆ ನಿಮ್ಮ – ನಿಮ್ಮ ಬಡಾವಣೆಯಲ್ಲಿ ಕೂರಿಸಿರುವ ಗಣಪತಿ ಮೂರ್ತಿಯ ಚಿತ್ರವನ್ನು ಫೋಟೋ ತಗೆದು ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಾರೆ. ಇವುಗಳೊಂದಿಗೆ ಪತ್ರಿಕೆಗಳ ಸ್ಥಳೀಯ ಅವೃತ್ತಿಗಳಲ್ಲಿ ಪ್ರಕಟವಾಗುವ ಗಣೇಶ ಮೂರ್ತಿಯ ಫೋಟೋಗಳನ್ನು ಸಂಗ್ರಹಿಸುವಂತೆ ತಿಳಿಸುತ್ತಾರೆ.

ಸೋಮವಾರದ ತನಕ ಪ್ರದರ್ಶನ:  ಗಣಪತಿ ಚಿತ್ರಗಳ ಪ್ರದರ್ಶನವು ಮೈಸೂರಿನ ನಿಮಿಷಾಂಬ ನಗರದಲ್ಲಿ ನಮನ ಪಾರ್ಕಿನ ಬಳಿ ಇರುವ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಸೆ.9ರ ಸೋಮವಾರ ರಾತ್ರಿ 7ರ ತನಕವು ಪ್ರದರ್ಶನವಿರುತ್ತದೆ. ಆಸಕ್ತರು ನೋಡಬಹುದಾಗಿದೆ.

ಮದುವೆ ಕರೆಯೊಲೆಯ ಸಂಗ್ರಹ:

ಇತ್ತೀಚೆಗೆ ಮದುವೆ ಆಹ್ವಾನ ಪತ್ರಿಕೆಗಳಲ್ಲಿ ಇರುವ ಗಣಪತಿ ಚಿತ್ರಗಳನ್ನು ಸಂಗ್ರಹಿಸಲು ತೊಡಗಿದ್ದಾರೆ. ಶಿವಕುಮಾರ್‌ ತಮ್ಮ ನೆಂಟರ ಮನೆಗೆ, ಸ್ನೇಹಿತರ ಮನೆಗೆ ಹೋದ ಸಮಯದಲ್ಲಿ ಇಂತಹ ಆಹ್ವಾನ ಪತ್ರಿಕೆಗಳು ಕಣ್ಣಿಗೆ ಬಿದ್ದರೆ ಎತ್ತಿಟ್ಟುಕೊಳ್ಳುತ್ತಾರೆ. ದೇವ ಸ್ಥಾನಗಳಲ್ಲಿ ಮೊದಲ ಆಹ್ವಾನ ಪತ್ರಿಕೆಗಳನ್ನು ಪೂಜೆ ಮಾಡಿಸುವುದು ನಮ್ಮಲ್ಲಿ ನಡೆದು ಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇಂತಹ ಪೂಜೆ ಮಾಡಿದ ಆಹ್ವಾನ ಪತ್ರಿಕೆಗಳನ್ನು ಆಯಾ ದೇವಸ್ಥಾನದ ಅರ್ಚಕರ ಬಳಿ ಕೇಳಿ ಪಡೆದುಕೊಳ್ಳುತ್ತಿದ್ದಾರೆ.

ಧರ್ಮದ ಬಗ್ಗೆ ಯುವಕರಿಗೆ ಅರಿವು ಮೂಡಿಸಲು ಗಣಪತಿ ಫೋಟೋಗಳ ಪ್ರದರ್ಶನ ಮಾಡುತ್ತಿದ್ದೇನೆ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಗಣಪತಿ ಚಿತ್ರಗಳನ್ನು ಸಂಗ್ರಹಿಸಿದ್ದೇನೆ. ಪ್ರದರ್ಶನಗಳಲ್ಲಿ ಆಯ್ದ ಚಿತ್ರಗಳು ಮಾತ್ರ ಇವೆ. ಎಲ್ಲವನ್ನೂ ಪ್ರದರ್ಶಿಸ ಬೇಕು ಎಂದರೆ ದೊಡ್ಡ ಕಲ್ಯಾಣ ಮಂಟಪ ಬೇಕಾಗುತ್ತದೆ. ಇದಲ್ಲದೇ ಇನ್ನೂ ಏಳೆಂಟು ವರ್ಷದ ಪತ್ರಿಕೆಗಳಲ್ಲಿ ಬಂದಿರುವ ಗಣಪತಿಯ ಚಿತ್ರಗಳನ್ನು ಸಂಗ್ರಹ ಮಾಡಿಯೇ ಇಲ್ಲ. ಅವನ್ನೂ ಸಂಗ್ರಹಿಸಿದ್ದಾರೆ ಎರಡು-ಮೂರು ಸಾವಿರ ಪೋಟೋಗಳು ಜಾಸ್ತಿಯಾಗಬಹುದು.-ಕಾಳೀಹುಂಡಿ ಶಿವಕುಮಾರ್‌, ಗಣಪತಿ ಚಿತ್ರ ಸಂಗ್ರಹಕಾರ

-ಆರ್‌.ವೀರೇಂದ್ರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next