Advertisement

ಕೋಡಿ ಸಂಪರ್ಕ ಸೇತುವೆ ಶಿಥಿಲ; ಅಪಾಯದಲ್ಲಿ ವಾಹನ ಸಂಚಾರ

09:13 PM Oct 18, 2020 | mahesh |

ಕುಂದಾಪುರ: ಇಲ್ಲಿನ ಬಸ್ರೂರು ಮೂರುಕೈ ಸಮೀಪದಿಂದ ವಿನಾಯಕ ಥಿಯೇಟರ್‌ ಪಕ್ಕದ ರಸ್ತೆಯಲ್ಲಿ ಕೋಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಆದರೆ ಇದರಲ್ಲೇ ಕೋಡಿಗೆ ಹೋಗುವ ಬಸ್‌ಗಳು, ಘನ ವಾಹನಗಳ ಸಂಚಾರ ಮುಂದುವರಿದಿದ್ದು ತೀವ್ರ ಅಪಾಯಕಾರಿಯಾಗಿದೆ.

Advertisement

ಅಪಾಯದಲ್ಲಿ
ಸೇತುವೆ ಮೇಲೆ ಹಾಕಿದ್ದ ಡಾಮರು ಎಂದೋ ಎದ್ದು ಹೋಗಿದೆ. ತಡೆಹಿಡಿಕೆಗಳು ತುಕ್ಕು ಹಿಡಿದಿವೆ. ಸೇತುವೆ ಸ್ತಂಭದ ಕಲ್ಲುಗಳು ಕುಸಿಯಲಾರಂಭವಿಸಿವೆ. ಅನೇಕ ಸಮಯದಿಂದ ಈ ಕುರಿತು ಬೇಡಿಕೆ ಇದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂಬ ದೂರು ಕೂಡಾ ಕೇಳಿಬಂದಿತ್ತು. “ಉದಯವಾಣಿ’ “ಸುದಿನ’ ಈ ಕುರಿತು ವರದಿ ಮಾಡಿತ್ತು. ಇದೀಗ ಸೇತುವೆ ಮೇಲಿನ ಸಂಚಾರ ಮತ್ತಷ್ಟು ಅಪಾಯಕಾರಿ ಹಂತದಲ್ಲಿದೆ. ಇಲ್ಲಿ ಫಿಶ್‌ಮೀಲ್‌ ಕಾರ್ಖಾನೆಗಳಿಗೆ ಹೋಗುವ ದೊಡ್ಡ ಲಾರಿಗಳು ಸೇರಿದಂತೆ ಘನ ವಾಹನಗಳು ಓಡಾಡುವ ಕಾರಣ ಸೇತುವೆ ಮೇಲಿನ ಓಡಾಟ ತಂತಿ ಮೇಲಿನ ಓಡಾಟದಷ್ಟೇ ಗಂಭೀರವಾಗಿದೆ.

ಅನುದಾನ ಮಂಜೂರು
ರಾಷ್ಟ್ರೀಯ ಹೆದ್ದಾರಿ ಹಂಗಳೂರು ಜಂಕ್ಷನ್‌ನಿಂದ ಬಸ್‌, ರಿಕ್ಷಾ, ಲಾರಿ ಎಂದು ನೂರಾರು ವಾಹನಗಳು ಪ್ರತಿನಿತ್ಯ ಓಡಾಡುವ ಶ್ರೀರಾಮ ವಿದ್ಯಾ ಕೇಂದ್ರದ ಬಳಿಯ ಹಾಗೂ ಬಡಾಕೆರೆಯ ಸೇತುವೆಗಳು ಶಿಥಿಲವಾಗಿವೆ. ಪೂರ್ಣ ನಾದುರಸ್ತಿಯಲ್ಲಿರುವ ಈ ಎರಡು ಸೇತುವೆಗಳನ್ನು ತೆಗೆದು ಹೊಸದಾಗಿ ರಚಿಸಲು 2 ಕೋ.ರೂ. ಮಂಜೂರಾಗಿದೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸೇತುವೆ ರಚನೆಗಾಗಿ ಫೆಬ್ರವರಿಯಲ್ಲೇ ಅನು ದಾನವನ್ನು ಮುಖ್ಯಮಂತ್ರಿಗಳಿಂದ ಖುದ್ದು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಆದರೆ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಈ ವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ಇದೀಗ ಟೆಂಡರ್‌ ಪ್ರಕ್ರಿಯೆ ಪೂರ್ಣವಾಗಿದ್ದು 15-30 ದಿನಗಳಲ್ಲಿ ಕೆಲಸಕ್ಕೆ ಆದೇಶ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹೇಳಿದೆ.

ನಿಷೇಧ
ಕಳೆದ ಒಂದು ವರ್ಷದಿಂದ ಹಂಗಳೂರು, ಎಂ-ಕೋಡಿ, ಹಳೆ ಅಳಿವೆ, ಕೋಡಿ ಬೀಚ್‌ಗೆ ಸಂಬಂ ಧಿಸಿದಂತೆ ಓಡಾಟಕ್ಕೆ ವಾಹನಗಳು ಈ ಸೇತುವೆ ಮೇಲೆಯೇ ಭಯದಿಂದ ಸಂಚಾರ ನಡೆಸುತ್ತಿದ್ದರೂ ಹೊಸ ಸೇತುವೆ ಮಂಜೂರಾಗಿರಲಿಲ್ಲ. ಬಸ್‌, ಶಾಲಾ ಬಸ್‌, ಘನವಾಹನಗಳ ಓಡಾಟ ಸಂದರ್ಭ ಸೇತುವೆ ಗಡಗಡ ಎನ್ನುತ್ತಿತ್ತು. ಈಗ ಸ್ಥಳೀಯ ರಿಕ್ಷಾ ಚಾಲಕರೇ ಈ ರಸ್ತೆ ಮೂಲಕ ಫಿಶ್‌ ಕಟ್ಟಿಂಗ್‌ ಮಿಲ್‌ ಮೊದಲಾದೆಡೆಗೆ ಘನ ವಾಹನ ಹೋಗದಂತೆ ತಡೆದು ಬುದ್ಧಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಎಷ್ಟು ಹೊತ್ತು ಈ ರೀತಿ ಕಾವಲು ಕಾಯಲು ಸಾಧ್ಯ ಎನ್ನುತ್ತಾರೆ ರಿಕ್ಷಾ ಚಾಲಕ ಮಹೇಶ್‌ ಶೆಣೈ.

ದೂರದ ಬದಲಿ ರಸ್ತೆ
ಈ ಸೇತುವೆಗಳು ಶಿಥಿಲವಾದ ಕಾರಣ ಘನವಾಹನ ಸಂಚಾರ ನಿಷೇಧಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ. ಆದರೆ ಆದೇಶ ಕಡತದಲ್ಲಿಯೇ ಇದೆ. ಅನುಷ್ಠಾನಕ್ಕೆ ಬಂದರೆ ಬದಲಿ ರಸ್ತೆ ಬಲುದೂರ ಎಂಬ ಸ್ಥಿತಿಯಿದೆ ಎನ್ನುತ್ತಾರೆ ಸ್ಥಳೀಯರು. ಶಾಸ್ತ್ರಿ ಸರ್ಕಲ್‌ ಮೂಲಕ ಆಗಮಿಸಿ ಪಾರಿಜಾತ ಸರ್ಕಲ್‌ ದಾಟಿ ಚರ್ಚ್‌ ರಸ್ತೆ ಮೂಲಕ ಕೋಡಿಗೆ ಹೋಗಬೇಕಾಗು ತ್ತದೆ. ಆಗ ನಗರದ ಒಳಗೆ, ಚರ್ಚ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನನುಕೂಲವಾಗಲಿದೆ.

Advertisement

ಪ್ರವಾಸಿ ತಾಣ
ಕೋಡಿ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಸೀವಾಕ್‌, ಉದ್ಯಾನ, ಬೀಚ್‌, ರೆಸಾರ್ಟ್‌ ಸೇರಿದಂತೆ ಅನೇಕ ಆಕರ್ಷಣೆಗಳು ಕೋಡಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ವಾರಾಂತ್ಯದಲ್ಲಿ ಸಾವಿರಾರು ಜನ ಭಾಗವಹಿಸುವುದೂ ಇದೆ. ಅಷ್ಟಲ್ಲದೆ ಕೋಡಿ ಪ್ರದೇಶದಲ್ಲಿ ಆಸ್ಪತ್ರೆ, ಶಾಲೆ, ಕಾಲೇಜು, ಮಂದಿರ, ಮಸೀದಿ ಎಂದು ಎಲ್ಲ ಸೌಕರ್ಯಗಳೂ ಇವೆ. ನೂರಾರು ಮನೆಗಳಿದ್ದು ಬಸ್‌ ಸಂಪರ್ಕ ಕೂಡಾ ಇದೆ.

ಪ್ರವಾಸಿ ತಾಣ
ಕೋಡಿ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಸೀವಾಕ್‌, ಉದ್ಯಾನ, ಬೀಚ್‌, ರೆಸಾರ್ಟ್‌ ಸೇರಿದಂತೆ ಅನೇಕ ಆಕರ್ಷಣೆಗಳು ಕೋಡಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ವಾರಾಂತ್ಯದಲ್ಲಿ ಸಾವಿರಾರು ಜನ ಭಾಗವಹಿಸುವುದೂ ಇದೆ. ಅಷ್ಟಲ್ಲದೆ ಕೋಡಿ ಪ್ರದೇಶದಲ್ಲಿ ಆಸ್ಪತ್ರೆ, ಶಾಲೆ, ಕಾಲೇಜು, ಮಂದಿರ, ಮಸೀದಿ ಎಂದು ಎಲ್ಲ ಸೌಕರ್ಯಗಳೂ ಇವೆ. ನೂರಾರು ಮನೆಗಳಿದ್ದು ಬಸ್‌ ಸಂಪರ್ಕ ಕೂಡಾ ಇದೆ.

Advertisement

Udayavani is now on Telegram. Click here to join our channel and stay updated with the latest news.

Next