Advertisement

ನಾಲ್ಕು ಕ್ಷೇತ್ರಗಳಲ್ಲಷ್ಟೇ ನೀತಿ ಸಂಹಿತೆ

12:47 AM Nov 12, 2019 | Team Udayavani |

ಬೆಂಗಳೂರು: ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಡಿ.5ರಂದು ಉಪ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ನೀತಿಸಂಹಿತೆ ಜಾರಿಗೆ ಬಂದಿದೆ ಎಂದು ಬೆಂಗಳೂರು ಜಿಲ್ಲೆ ಚುನಾವಣಾಧಿಕಾರಿ, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು.

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಪಚುನಾವಣೆ ನಡೆಯಲಿರುವ ಕೆ.ಆರ್‌.ಪುರ, ಶಿವಾಜಿನಗರ, ಯಶವಂತಪುರ ಹಾಗೂ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನೀತಿಸಂಹಿತೆ ಅನ್ವಯಿಸಲಿದೆ ಎಂದರು.

ನಿಯಮಾವಳಿ ಪ್ರಕಾರ ಪಕ್ಕದ ಕ್ಷೇತ್ರದಲ್ಲಿ ಸಭೆ ಸಮಾರಂಭಗಳು ನಡೆದಲ್ಲಿ ಅದರ ಮೇಲೆ ಕ್ರಮ ಕೈಗೊಳ್ಳಲು ಬರುವುದಿಲ್ಲ. ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಜತೆ ಚರ್ಚೆ ಮಾಡಿ ಎಲ್ಲಿಯೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ಮಾಡಿಕೊಡಬಾರದು ಎಂದು ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನವೆಂಬರ್‌ 18ರವರೆಗೆ ಅವಕಾಶವಿದೆ. ಅಲ್ಲಿಯವರೆಗೆ ಅರ್ಜಿ ಸಲ್ಲಿಸಿದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದ್ದು, ಅವರು ಮತ ಚಲಾವಣೆ ಮಾಡಬಹುದಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಆಯೋಗದ ಸಿದ್ಧತೆ ಪೂರ್ಣಗೊಂಡಿದ್ದು, 1361 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇವುಗಳಲ್ಲಿ ಶೇ.10ರಷ್ಟು ಹೆಚ್ಚುವರಿ ಚುನಾವಣಾ ಸಿಬ್ಬಂದಿ ಒಳಗೊಂಡಂತೆ, 5,988 ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಾಣ, ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸುವ ಸಂಬಂಧ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

Advertisement

ಚುನಾವಣಾ ಪ್ರಕ್ರಿಯೆಗೆ ಚುನಾವಣಾ ವೀಕ್ಷಕರು, ಮಾದರಿ ನೀತಿ ಸಂಹಿತೆ ಪಾಲನಾ ತಂಡ, ಚುನಾವಣಾ ವೆಚ್ಚದ ಮೇಲೆ ನಿಗಾವಹಿಸುವುದಕ್ಕೆ ಅಕೌಂಟಿಂಗ್‌ ತಂಡ ಸೇರಿದಂತೆ ಒಟ್ಟು 60 ತಂಡ ರಚಿಸಲಾಗಿದೆ. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಮತದಾನದ ಗುರುತಿನ ಚೀಟಿಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 50862 ಅರ್ಜಿಗಳು ಬಂದಿದ್ದು, ಇವುಗಳಲ್ಲಿ 29,765ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. 959 ಅರ್ಜಿಗಳು ವಜಾಗೊಂಡಿವೆ. ಇನ್ನೂ 9,511 ಅರ್ಜಿಗಳು ವಿವಿಧ ಹಂತದಲ್ಲಿವೆ ಎಂದರು.

ಚುನಾವಣೆ ಪ್ರಕ್ರಿಯೆ
ನ.18 ನಾಮಪತ್ರ ಸಲ್ಲಿಕೆಗೆ ಕೊನೆದಿನ
ನ.19 ನಾಮಪತ್ರ ಪರಿಶೀಲನೆ
ನ.21 ನಾಮಪತ್ರ ವಾಪಾಸ್‌ಗೆ ಕೊನೆಯ ದಿನ
ಡಿ.5 ಮತದಾನ
ಡಿ.9 ಮತ ಎಣಿಕೆ
ಡಿ.11 ಚುನಾವಣೆ ಪ್ರಕ್ರಿಯೆ ಪೂರ್ಣ

ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ವಿವರ
ಕ್ಷೇತ್ರ ಪುರುಷ ಮತದಾರರು ಮಹಿಳಾ ಮತದಾರರು ಇತರೆ ಒಟ್ಟು
ಕೆ.ಆರ್‌.ಪುರ 2,51,885 2,29,087 160
ಯಶವಂತಪುರ 2,46,295 2,29,424 40
ಮಹಾಲಕ್ಷ್ಮೀ ಲೇಔಟ್‌ 1,46,415 1,37,428 42
ಶಿವಾಜಿನಗರ 96,928 94,689
ಒಟ್ಟು 7,41,523 6,90,628 243

ಯಾವ ಕ್ಷೇತ್ರದಲ್ಲಿ ಎಲ್ಲಿ ನಾಮಪತ್ರ ಸಲ್ಲಿಕೆ?
ವಿಧಾನಸಭಾ ಕ್ಷೇತ್ರ-ನಾಮಪತ್ರಸಲ್ಲಿಕೆ ಕಚೇರಿ- ಚುನಾವಣಾಧಿಕಾರಿ
-ಕೆ.ಆರ್‌.ಪುರ- ಹಳೇ ಮದ್ರಾಸ್‌ ರಸ್ತೆಯ ಕೆ.ಆರ್‌.ಪುರ ವಿಭಾಗದ ಕಂದಾಯ ಅಧಿಕಾರಿ ಕಚೇರಿ-ಆರ್‌.ರಾಮಚಂದ್ರನ್‌, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಉಗ್ರಾಣ ನಿಗಮ.

-ಯಶವಂತಪುರ- ಕೆಂಗೇರಿ ಉಪನಗರದ ಕರ್ನಾಟಕ ಬ್ಯಾಂಕ್‌ ಕಟ್ಟಡದಲ್ಲಿರುವ ಚುನಾವಣಾಧಿಕಾರಿ ಕಚೇರಿ-ಎ.ನವೀನ್‌ಜೋಸೆಫ್, ಉಪಕಾರ್ಯದರ್ಶಿ ಬಿಡಿಎ.

-ಮಹಾಲಕ್ಷ್ಮಿಲೇಔಟ್‌- ಕಂದಾಯ ಅಧಿಕಾರಿಗಳ ಕಚೇರಿ ರಾಜಾಜಿನಗರ ಆರ್‌ಟಿಓ ಕಟ್ಟಡ-ಡಾ.ಆಶಾ, ಮುಖ್ಯ ಆಡಳಿತಾಧಿಕಾರಿ, ಎನ್‌ಆರ್‌ಎಚ್‌ಎಂ

-ಶಿವಾಜಿನಗರ- ಕ್ವೀನ್ಸ್‌ ರಸ್ತೆಯ ಕಂದಾಯ ಕಚೇರಿ-ಡಾ.ಡಿ.ಬಿ.ನಟೇಶ್‌ ಉಪಪ್ರಧಾನ ವ್ಯವಸ್ಥಾಪಕ, ಕರ್ನಾಟಕ ಗೃಹ ಮಂಡಳಿ.

Advertisement

Udayavani is now on Telegram. Click here to join our channel and stay updated with the latest news.

Next