Advertisement

ಕಾಂಗ್ರೆಸ್‌ಗೆ ಸವಾಲಾದ ಕರಾವಳಿ, ಮಲೆನಾಡು

12:48 AM Jan 31, 2023 | Team Udayavani |

ದಕ್ಷಿಣ ಕನ್ನಡ                                  
2ನೇ ಹಂತದ ನಾಯಕರ ಸೃಷ್ಟಿ ಇಲ್ಲ
ಆರಂಭದಿಂದಲೂ ಕರಾವಳಿಯಲ್ಲಿ ಕಾಂಗ್ರೆಸ್‌ನದ್ದೇ ಪಾರಮ್ಯ. ಆದರೆ ಕಳೆದ ಎರಡು ದಶಕಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಅದರಲ್ಲೂ ಎರಡು ದಶಕಗಳಿಂದ ಕಾಂಗ್ರೆಸ್‌-ಬಿಜೆಪಿ ನಡುವೆಯೇ ನೇರಾನೇರ ಹೋರಾಟ ನಡೆಯುತ್ತಿದೆ. ಕಳೆದ 3 ದಶಕಗಳಿಂದ ಜಿಲ್ಲೆಯಲ್ಲಿ ವಾಮರಂಗ, ಬಿಜೆಪಿ ಪೈಪೋಟಿ ಸ್ಪರ್ಧೆ ನೀಡಲು ಆರಂ ಭಿಸಿ ದ್ದವು. 1983ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಳಹೆಸರಿಲ್ಲದಾಯಿತು, ಒಂದರಲ್ಲೂ ಅದು ಗೆಲ್ಲಲಿಲ್ಲ, ಆ ಸಲ 6 ಸ್ಥಾನಗಳು ಬಿಜೆಪಿಗೆ ಬಂದರೆ ಉಳಿದೆರಡು ಜನತಾ ಪಾರ್ಟಿ, ಸಿಪಿಎಂ ಪಾಲಾದವು.

Advertisement

ಕಾಂಗ್ರೆಸ್‌ ಕರಾವಳಿಯಲ್ಲಿ ಹಿನ್ನೆಡೆ ಕಾಣುವುದಕ್ಕೆ ಹಲವು ವಿಶ್ಲೇಷಣೆಗಳಿವೆ. ಮುಖ್ಯವಾಗಿ ಹೊಸ ಮುಖಗಳಿಗೆ ಮಣೆ ಹಾಕುವ ಬಿಜೆಪಿಯ ತಂತ್ರಗಾರಿಕೆಗೆ ಇಲ್ಲಿನ ಮತದಾರರು ಸೈ ಎಂದಿರುವುದು. ಕಾಂಗ್ರೆಸ್‌ ಹಿಂದಿ ನಿಂದಲೂ 2ನೇ ಹಂತದ ನಾಯಕರ ಸೃಷ್ಟಿಗೆ ಗಮನ ನೀಡದೆ ಕೆಲವೇ ನಾಯಕರನ್ನು ಬೆಳೆಸುತ್ತಿದೆ ಎಂಬ ಆಪಾದನೆಗೆ ಗುರಿಯಾಯಿತು. ಬಿಜೆಪಿ ಮಾತ್ರ ಹೊಸಬರು, ಕಾರ್ಯಕರ್ತರಿಗೆ ಟಿಕೆಟ್‌ ನೀಡುತ್ತಾ ಎಲ್ಲರಿಗೂ ಅವಕಾಶವಿದೆ ಎಂಬ ಭಾವನೆಯನ್ನು ಬಿತ್ತತೊಡಗಿತು. ಕಾಂಗ್ರೆಸ್‌ ಅಲ್ಪಸಂಖ್ಯಾಕರ ಓಲೈಕೆ ಮಾಡುತ್ತಿದೆ, ಹಿಂದೂ ದಮನ ನೀತಿ ಅನುಸರಿಸುತ್ತಿದೆ ಎಂಬುದಾಗಿ ಬಹು ಸಂಖ್ಯಾಕರಿಗೆ ಮನದಟ್ಟು ಮಾಡು ವಲ್ಲಿ ಬಿಜೆಪಿ ಯಶಸ್ವಿಯಾಗಿರುವುದೂ ಮತ್ತೂಂದು ಅಂಶ. ಇದಕ್ಕೆ ಪೂರಕವಾಗಿ ಬಾಬ್ರಿ ಮಸೀದಿ ಗಲಾಟೆ, ದ.ಕ. ಜಿಲ್ಲೆಯಲ್ಲಿ ನಡೆದ ಗಲಭೆ ಸಂದರ್ಭ ಕಾಂಗ್ರೆಸ್‌ನ ನೀತಿ, ಎಲ್‌.ಕೆ. ಆಡ್ವಾಣಿ ರಥಯಾತ್ರೆ ಇವೆಲ್ಲವೂ ಬಿಜೆಪಿಗೆ ವರವಾದವು. ಇದರ ಜತೆಗೆ ಇತ್ತೀಚೆಗಿನ 10 ವರ್ಷಗಳ ಬೆಳವಣಿಗೆ ಗಮನಿಸಿದರೆ ಕಾಂಗ್ರೆಸ್‌ನಲ್ಲಿನ ಪ್ರಬಲ ನಾಯಕತ್ವ ಕೊರತೆಯೂ ಪಕ್ಷದ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.

ಕೊಡಗು                                            
ಕಾರ್ಯಕರ್ತರು, ಸಂಘಟನೆ ಕೊರತೆ
ಎರಡು ವಿಧಾನಸಭಾ ಕ್ಷೇತ್ರ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅನಂತರದಲ್ಲಿ ಕಾಂಗ್ರೆಸ್‌ ಬಹಳ ವರ್ಷ ದೊಡ್ಡ ಸದ್ದು ಮಾಡಿದ್ದರೂ ಅದನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಸರಿ ಸುಮಾರು ಎರಡು ದಶಕಗಳಿಂದ ಇಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿಲ್ಲ. ಇನ್ನು ವಿರಾಜಪೇಟೆ ಹಾಗೂ ಮಡಿಕೇರಿಯಲ್ಲಿ ಕಾಂಗ್ರೆಸ್‌ ಭದ್ರವಾಗಿದೆ ಎಂದೂ ಈಗ ಹೇಳಲು ಅಸಾಧ್ಯ. ಈ ಹಿಂದೆ ಎಂ.ಸಿ.ಪೂಣಚ್ಚ, ಎ.ಪಿ.ಅಪ್ಪಣ್ಣ,  ಸುಮಾ ವಸಂತ್‌, ಎಂ.ಸಿ.ನಾಣಯ್ಯ, ಡಿ.ಎ.ಚಿಣ್ಣಪ್ಪ ಹೀಗೆ ಕಾಂಗ್ರೆಸ್‌ನ ಹಲವು ನಾಯಕರು ಪಕ್ಷದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಈಚೆಗೆ ಹಾಗಿಲ್ಲ. ಸಿದ್ದರಾಮಯ್ಯ  ಮೇಲೆ ಮೊಟ್ಟೆ ಎಸೆದಿರುವುದನ್ನು ವಿರೋಧಿಸಿ ನಡೆದ ಬಹುದೊಡ್ಡ ಪ್ರತಿಭಟನೆ ಹೊರತುಪಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ದೊಡ್ಡ ಮಟ್ಟದ ಹೋರಾಟ  ನಡೆದಿಲ್ಲ. ಬೂತ್‌ ಹಾಗೂ ಬ್ಲಾಕ್‌ ಹಂತದಲ್ಲಿ  ಪ್ರತೀ ಮನೆಗೂ ತಲುಪುವಲ್ಲಿ ಪಕ್ಷ ವಿಫ‌ಲವಾಗುತ್ತಿದೆ. ಬಿಜೆಪಿಯಲ್ಲಿರುವಷ್ಟು ದೊಡ್ಡ ಕಾರ್ಯಕರ್ತರ ಪಡೆ ಇಲ್ಲಿಲ್ಲ. ಜಿಲ್ಲಾ ಕಾಂಗ್ರೆಸ್‌ ಸಮರ್ಪಕವಾಗಿ ಯುವ ಶಕ್ತಿಯನ್ನು ಸಂಘಟಿಸುವ ಪ್ರಯತ್ನ  ಮಾಡುತ್ತಿದೆ.

ಉಡುಪಿ             
ಅಸ್ತಿತ್ವಕ್ಕಾಗಿ ಹೆಣಗಾಟ
ಉಡುಪಿ ಜಿಲ್ಲೆ ಅಥವಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ. ಆದರೀಗ  ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಮರು ಸಾಬೀತು ಪಡಿಸಲು ಹೆಣಗಾಡುವ ಸ್ಥಿತಿ ಇದೆ. 2013ರ ಚುನಾವಣೆಯಲ್ಲಿ ಐದರಲ್ಲಿ ಮೂರು ಕ್ಷೇತ್ರ ಕಾಂಗ್ರೆಸ್‌ ಪಾಲಾಗಿತ್ತು. 2018ರ ಚುನಾವಣೆ ಫ‌ಲಿತಾಂಶ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲಾಗಿಸಿತು. ಐದೂ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಈ ಅನಿರೀಕ್ಷಿತ ಭಾರೀ ಹಿನ್ನೆಡೆ ಪಕ್ಷದ ಉತ್ಸಾಹವನ್ನೇ ಕಸಿಯಿತು. ಈಗ ಪುನಃ ಪುಟಿದೇಳುವ ಸಂಕಲ್ಪದಲ್ಲಿ ಪಕ್ಷ ಸಂಘಟನೆ ನಡೆಯುತ್ತಿದೆ. ಇತ್ತೀಚೆಗಷ್ಟೆ ನಡೆದ ಪ್ರಜಾಧ್ವನಿ ಯಾತ್ರೆಯು ಪಕ್ಷದ ಮುಖಂಡರಲ್ಲಿ ಹೊಸ ಉತ್ಸಾಹ, ನಿರೀಕ್ಷೆ ಮೂಡಿಸಿದೆ. ಪ್ರಮೋದ್‌ ಮಧ್ವರಾಜ್‌ ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವುದು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆಯಾದೀತು. ಸದ್ಯ ಚುನಾವಣೆ ಹಿನ್ನೆಲೆಯಲ್ಲಿ ಬೂತ್‌ ಮಟ್ಟದಲ್ಲಿ ಸಂಘಟನಾತ್ಮಕ ತಯಾರಿ ಚಾಲ್ತಿಯಲ್ಲಿದೆ. ರಾಜ್ಯ ಮತ್ತು ವಿಭಾಗೀಯ ಮಟ್ಟದ ನಾಯಕರ ಪ್ರವಾಸವು ಕಾಂಗ್ರೆಸ್‌ಗೆ ಸ್ವಲ್ಪ ಶಕ್ತಿ ತುಂಬುವಂತಿದೆ.

ಚಿಕ್ಕಮಗಳೂರು                                      
ಸಂಘಟನೆಗೆ ಒತ್ತು
ಕಾಫಿನಾಡು ಭೌಗೋಳಿಕವಾಗಿ ವೈವಿಧ್ಯತೆ ಹೊಂದಿದ್ದು ಡಿ.ಬಿ. ಚಂದ್ರೇಗೌಡ, ಮೋಟಮ್ಮ, ಸಗೀರ್‌ ಅಹ್ಮದ್‌ ಸೇರಿದಂತೆ ಅನೇಕ ಮುತ್ಸದ್ಧಿಗಳನ್ನು ಬೆಳೆಸಿದ ಭೂಮಿ ಇದಾಗಿದೆ. ಚಿಕ್ಕಮಗಳೂರು ಜಿಲ್ಲೆ ಐದು ವಿಧಾನಸಭಾ ಕ್ಷೇತ್ರ ಒಳಗೊಂಡಿದ್ದು,  ತರೀಕೆರೆ ಕ್ಷೇತ್ರದಿಂದ ಕಾಂಗ್ರೆಸ್‌ನ 9 ಜನ, ಶೃಂಗೇರಿ ಕ್ಷೇತ್ರದಿಂದ 9 ಜನ, ಮೂಡಿಗೆರೆ ಕ್ಷೇತ್ರದಿಂದ 7 ಜನ, ಕಡೂರು ಕ್ಷೇತ್ರದಿಂದ 6 ಜನ ಹಾಗೂ ಚಿಕ್ಕಮಗಳೂರು ಕ್ಷೇತ್ರದಿಂದ 6 ಜನ ಸೇರಿದಂತೆ ಇದುವರೆಗೂ 37 ಜನರನ್ನು ವಿಧಾನಸಭೆಗೆ ಕಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಯಕರ್ತರ ನಿರ್ಲಕ್ಷé, ತಳಮಟ್ಟದಲ್ಲಿ ಸಂಘಟನೆ ವೈಫ‌ಲ್ಯ, ಒಗ್ಗಟ್ಟಿನ ಕೊರತೆ, ಸಣ್ಣ ಸಣ್ಣ ಸಮು ದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡದಿರುವುದು, ಗುಂಪುಗಾರಿಕೆ, ಅಲ್ಪಸಂಖ್ಯಾಕರ  ಓಲೈಕೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿನ್ನಡೆ, ಅರ್ಹ ಅಭ್ಯರ್ಥಿಗಳನ್ನು ಗುರುತಿಸುವಲ್ಲಿ ವೈಫ‌ಲ್ಯ, ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕುವುದು, ಪಕ್ಷ ಅಧಿಕಾರದಲ್ಲಿದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವುದು, ಧರ್ಮದಂಗಲ್‌ನಿಂದಲೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. 2023ರ ಚುನಾವಣೆಗಾಗಿ ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಮುಂದಾಗಿದೆ. ರಾಜ್ಯ ಮಟ್ಟದ ನಾಯಕರು ಸಾಲು ಸಾಲು ಸಮಾವೇಶ ನಡೆಸುತ್ತಿದ್ದಾರೆ. ಜಿಲ್ಲಾ ಮುಖಂಡರು ಸಭೆ ಸಮಾರಂಭ ನಡೆಸುವುದರ ಜತೆಗೆ ಬೂತ್‌ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಕಾರ್ಯಕರ್ತರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

Advertisement

ಶಿವಮೊಗ್ಗ                                    
ಹೊರಗಿನಿಂದ ಬಂದವರೇ ಬಲ
2018ರಲ್ಲಿ ಕೇವಲ ಒಂದು ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್‌ ಕಳೆದುಕೊಂಡ ಸ್ಥಾನಗಳನ್ನು ಮತ್ತೆ ಪಡೆಯಲು ತಂತ್ರಗಾರಿಕೆ ರೂಪಿಸಿದೆ. ಮಧು ಬಂಗಾರಪ್ಪ, ಆರ್‌.ಎಂ. ಮಂಜುನಾಥ ಗೌಡ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮೂಲಕ ಸೊರಬ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲ ಹೆಚ್ಚಾಗಿದೆ. ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದ ಬೇಳೂರು ಗೋಪಾಲಕೃಷ್ಣ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಶಿಕಾರಿಪುರದಲ್ಲಿನ ವಿರೋಧಿ ಅಲೆ ಲಾಭ ಪಡೆಯಲು ಲಿಂಗಾಯತ ಜಾತಿ ಅಸ್ತ್ರ ಪಯೋಗಿಸುವ ಸಾಧ್ಯತೆ ಇದೆ. ಶಿವಮೊಗ್ಗ ನಗರ, ಗ್ರಾಮಾಂತರ ಕ್ಷೇತ್ರದಲ್ಲೂ ಈ ಬಾರಿ ಹೊಸ ಮುಖಗಳಿಗೆ ಟಿಕೆಟ್‌ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಭದ್ರಾವತಿಯಲ್ಲಿ ಅಪ್ಪಾಜಿಗೌಡ ನಿಧನದ ಅನಂತರ ಹಲವು ಮುಖಂಡರಿಗೆ ಕಾಂಗ್ರೆಸ್‌ ಗಾಳ ಹಾಕಿದ್ದು ಶತಾಯಗತಾಯ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಒಂದು ಕಾಲದಲ್ಲಿ ಸಮಾಜವಾದದ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಸೊಷಿಯಲಿಸ್ಟ್‌ ಪಾರ್ಟಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಅನಂತರ ಕಾಂಗ್ರೆಸ್‌ ಪ್ರಾಬಲ್ಯ ಸಾಧಿಸಿತು. 1983ರಲ್ಲಿ ಬಿಜೆಪಿಯಿಂದ ಬಿ.ಎಸ್‌. ಯಡಿಯೂರಪ್ಪ, ಆನಂದರಾವ್‌ ಗೆಲುವು ಸಾಧಿಸುವ ಮೂಲಕ ಹೊಸ ರಾಜಕೀಯಕ್ಕೆ ನಾಂದಿ ಹಾಡಿದರು. ಅನಂತರ ಹಂತ ಹಂತವಾಗಿ ಬಿಜೆಪಿ ಪ್ರಾಬಲ್ಯ ಸಾಧಿಸಿತು. 1980ರ ಬಳಿಕ ಸಮಾಜವಾದಿ ಚಳವಳಿ ಪ್ರಭಾವ ಕಡಿಮೆಯಾದ ಅನಂತರ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. 2018 ಹಾಗೂ 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ ಒಂದು ಸ್ಥಾನ ಗಳಿಸಿದೆ. ಬಿಜೆಪಿ ಕೂಡ 1999 ಹಾಗೂ 2013ರ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರ ಮಾತ್ರ ಗೆದ್ದಿದೆ. ಸ್ವತಃ ಬಿ.ಎಸ್‌. ಯಡಿಯೂರಪ್ಪ ಅವರೇ ಆ ಚುನಾವಣೆಯಲ್ಲಿ ಸೋತಿದ್ದರು.

ಉತ್ತರ ಕನ್ನಡ                                               
ಒಳಜಗಳವೇ ಕಾರಣ
ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ, ಸಮರ್ಥ ಕಾರ್ಯಕರ್ತರ ಪಡೆ ಕೊರತೆ, ಪ್ರಬಲ ಸಂಘಟನೆ ಇಲ್ಲದಿರುವುದು ಹಾಗೂ ಕೆಲವು ಕೋಮು ಗಲಭೆಗಳು ಇವೆಲ್ಲ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮಲೆನಾಡು ಹಾಗೂ ಕರಾವಳಿಯನ್ನೊಳಗೊಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ಕಾರಣವಾಗಿವೆ. ಇಡೀ ಕರ್ನಾಟಕದ ಕರಾವಳಿಯಲ್ಲಿ ಪ್ರಬಲವಾಗಿ ಹಿಂದುತ್ವದ ರಾಜಕೀಯ ಪ್ರಕ್ರಿಯೆ ಮೂಡಲು ಉತ್ತರ ಕನ್ನಡದ ಘಟನೆಗಳು ಕಾರಣ. 60ರ ದಶಕದಲ್ಲಿ ಒಂದು ಕೋಮು ಗಲಭೆ ನಡೆದು, ಭಟ್ಕಳದಲ್ಲಿ ಗೋಲಿಬಾರ್‌ ನಡೆದು ನಾಲ್ವರು ಹತರಾಗಿದ್ದರು. ಅನಂತರ ಕರ್ನಾಟಕದ ಇತಿಹಾಸದಲ್ಲಿ ಅತೀಹೆಚ್ಚು ಸುದೀರ್ಘ‌ ಕಾಲ 10 ತಿಂಗಳು ಕರ್ಫ್ಯೂ ನಡೆದಿದ್ದು ಭಟ್ಕಳದಲ್ಲಿ. ಈ ಅವಧಿಯಲ್ಲಿ 10 ಮುಸ್ಲಿಮರ ಹಾಗೂ 9 ಹಿಂದೂಗಳ ಹತ್ಯೆಯಾಗಿತ್ತು. ಇದು ಕರ್ನಾಟಕದ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಸೋಲುಣಿಸಿ ಬಿಜೆಪಿ ಗೆಲುವಿಗೆ ಕಾರಣವನ್ನುಂಟು ಮಾಡಿತ್ತು. ಅನಂತರ ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿ ಹಾಲಿ ಎಂಎಲ್‌ಎ ಚಿತ್ತರಂಜನ್‌ ಹತ್ಯೆಯಾಯಿತು. ಇದೇ ಸಮಯದಲ್ಲಿ ದಕ್ಷಿಣ ಕನ್ನಡದಲ್ಲೂ ಬಿಜೆಪಿ ಕಾರ್ಯಕರ್ತರ ಕೊಲೆಯಾಯಿತು. ಈ ಎಲ್ಲ ಘಟನೆಗಳು ಹಿಂದುತ್ವದ ಆಧಾರದ ಮೇಲೆ ಬಿಜೆಗೆ ಗೆಲುವು ತಂದು ಕೊಟ್ಟಿದ್ದರೆ, ಕಾಂಗ್ರೆಸ್‌ನ ಒಳಜಗಳ ಪಕ್ಷ ಕುಸಿಯಲು ಕಾರಣವಾಯಿತು. ಉತ್ತರ ಕನ್ನಡದಲ್ಲಿ ಮಾರ್ಗರೇಟ್‌ ಹಾಗೂ ದೇಶಪಾಂಡೆ ಬಣದಿಂದಾಗಿ ಬಿಜೆಪಿಗೆ ಗೆಲುವು ಸುಲಭವಾಯಿತು. ಈಗಲೂ ಕಾಂಗ್ರೆಸ್‌ನ ಗುಂಪುಗಾರಿಕೆ ಕಡಿಮೆಯಾಗಿಲ್ಲ. ಬಿಜೆಪಿ ಹಿಂದೂತ್ವದ ಆಧಾರದ ಮೇಲೆ ಗೆಲ್ಲುತ್ತಿದೆ ಎಂಬುದಕ್ಕೆ ಹೊನ್ನಾವರ ಪರೇಶ್‌ ಮೇಸ್ತ ಸಂಶಯಾಸ್ಪದ ಸಾವು ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next