Advertisement

ವೈಜ್ಞಾನಿಕ ಚಿಂತನೆಗೆ ವಿಜ್ಞಾನ ಪ್ರದರ್ಶನ ಸಹಕಾರಿ: ಶೆಟ್ಟರ

12:39 PM Jan 12, 2017 | |

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವೈಜ್ಞಾನಿಕವಾಗಿ ಬೆಳೆಯಲು ಇಂತಹ ವಿಜ್ಞಾನ ಪ್ರದರ್ಶಗಳು ಅವಶ್ಯ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. ಅಗಸ್ತ್ಯ ಅಂತಾರಾಷ್ಟ್ರೀಯ ಫೌಂಡೇಶನಿಂದ ನಡೆದ ಜಿಜ್ಞಾಸ-2017 ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಇಂದು ಮಕ್ಕಳಲ್ಲಿ ಹೊಸ-ಹೊಸ ಚಿಂತನೆ ಮೂಡಿಸುವ ಕೆಲಸಗಳು ನಡೆಯಬೇಕು. ಸದಾ ಅವರನ್ನು ಪ್ರೋತ್ಸಾಹಿಸುವ ಕಾರ್ಯಗಳನ್ನು ಆಯೋಜನೆ ಮಾಡಬೇಕು. ಆಗ ಮಾತ್ರ ವಿದ್ಯಾರ್ಥಿ ಗಳು ಸಾಧನೆಯೆಡೆ ಸಾಗುತ್ತಾರೆ ಎಂದರು. ಶಾಲೆ-ಕಾಲೇಜುಗಳು ಶಿಕ್ಷಣದ ಜತೆಗೆ ವ್ಯಕ್ತಿತ್ವ ಬೆಳೆಸುವ ವೇದಿಕೆಗಳಾಗಿ ರೂಪುಗೊಳ್ಳಬೇಕು. 

ಮೌಢಾಚರಣೆ ನಿಷೇಧದ ಕುರಿತು ಚರ್ಚೆಗಳು ನಡೆದಿವೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಡೆಯಬೇಕು. ನಮ್ಮ ಹಿಂದೂ ಸಂಪ್ರದಾಯದಂತೆ ಹಬ್ಬಗಳ ಆಚರಣೆ ಮಾಡಲಾಗುತ್ತದೆ. ಆದರೆ ಅದಕ್ಕೆ ವೈಜ್ಞಾನಿಕ ಕಾರಣಗಳು ಇವೆ. ಮೌಢಾಚರಣೆ ನಿಷೇಧಕ್ಕೆ ಕಾನೂನು ರೂಪಿಸುವುದು ಸರಿಯಲ್ಲ.

ಬದಲಾಗಿ ಈ ಕುರಿತು ಜಾಗೃತಿ ಮೂಡಿಸುವುದು ಅವಶ್ಯ ಎಂದರು. ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ ಮಾತನಾಡಿ, ಕಳೆದ 7 ವರ್ಷಗಳಿಂದ ಜಿಜ್ಞಾಸ ವಿಜ್ಞಾನ ಮೇಳ ಉತ್ತಮವಾಗಿ ನಡೆಯುತ್ತಿದ್ದು, ಇದನ್ನು ರಾಜ್ಯದಲ್ಲಿರುವ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು ವೀಕ್ಷಣೆ ಮಾಡುವಂತಾಗಬೇಕು. 

ಇದಕ್ಕಾಗಿ ಪ್ರದರ್ಶನವನ್ನು 3 ದಿನ ಬದಲು 5 ದಿನಕ್ಕೆ ವಿಸ್ತರಿಸಬೇಕು ಎಂದರು. ಡಾ| ನೀಲಂ ಮಹೇಶ್ವರಿ, ಸಾಯಿ ಚಂದ್ರಶೇಖರ, ರಾಜೀವ ಲೋಚನ್‌ದಾಸ್‌ ಇನ್ನಿತರರು ಮಾತನಾಡಿದರು. ಮಹಾಪೌರ ಮಂಜುಳಾ ಅಕ್ಕೂರ ಅಧ್ಯಕ್ಷತೆ ವಹಿಸಿದ್ದರು. ಉಪಮಹಾಪೌರ ಲಕ್ಷ್ಮೀ ಉಪ್ಪಾರ, ಸದಾನಂದ ಡಂಗನವರ, ಡಾ| ವೈಶಾಲಿ, ಡಾ| ವಿಶ್ವನಾಥ ಪಲ್ಲೇದ ಇದ್ದರು.

Advertisement

ಕಪ್ಪತಗುಡ್ಡ ಸಂರಕ್ಷಣೆಗೆ ಶೆಟ್ಟರ ಒತ್ತಾಯ
ಹುಬ್ಬಳ್ಳಿ:
ಮಹತ್ವದ ಅರಣ್ಯ ಸಂಪತ್ತು ನಾಶಕ್ಕೆ ಅವಕಾಶ ನೀಡದೆ ಗದುಗಿನ ಕಪ್ಪತ್ತಗುಡ್ಡವನ್ನು ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿ ಆದೇಶ ಹೊರಡಿಸಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಕಪ್ಪತ್ತಗುಡ್ಡದ ಮೇಲೆ ಕೆಲವರ ವಕ್ರದೃಷ್ಟಿ ಬಿದ್ದಿದ್ದು ಅದನ್ನು ಕಬಳಿಸುವ ಹುನ್ನಾರುಗಳು ನಡೆದಿವೆ. ಸುಮಾರು 44 ಸಾವಿರ ಎಕರೆ ಪ್ರದೇಶವನ್ನು ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಚಿನ್ನದ ನಿಕ್ಷೇಪ, ಔಷಧಿ ಸದಸ್ಯಗಳು ಹಾಗೂ ಪ್ರಾಣಿಪಕ್ಷಿಗಳಿದ್ದು, ಅವೆಲ್ಲವುಗಳನ್ನು ಹಾಳು ಮಾಡಲು ಹೊರಟ್ಟಿದ್ದಾರೆ. ರಾಜ್ಯ ಸರಕಾರ ಕೂಡಲೇ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. 

ಮೊದಲ ದಿನ ಉತ್ತಮ ಸ್ಪಂದನೆ
ಹುಬ್ಬಳ್ಳಿ:
ಇಲ್ಲಿನ ಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ಬುಧವಾರದಿಂದ ಆರಂಭಗೊಂಡಿರುವ ಅಗಸ್ತ್ಯ ಫೌಂಡೇಶನ್‌ನ ಜಿಜ್ಞಾಸ್‌-2017ರ ವಿಜ್ಞಾನ ಪ್ರದರ್ಶನಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.

 ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಒಟ್ಟು 116 ಮಾದರಿಗಳು ಪಾಲ್ಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 84 ಹಾಗೂ ದೇಶದ ವಿವಿಧ ರಾಜ್ಯಗಳಿಂದ ಸುಮಾರು 34 ವಿಜ್ಞಾನ ಮಾದರಿಗಳು ಪ್ರದರ್ಶನದಲ್ಲಿವೆ. ಪ್ರದರ್ಶನದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ, ಗುಜರಾತ್‌, ನವದೆಹಲಿ, ರಾಜಸ್ತಾನ, ಪಶ್ಚಿಮ ಬಂಗಾಲ, ಓರಿಸ್ಸಾ, ಉತ್ತರಾಖಂಡ, ತ್ರಿಪುರಾ ಸೇರಿದಂತೆ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು,

ತಾವು ಸಿದ್ಧಪಡಿಸಿದ ಮಾದರಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೊದಲ ದಿನವಾದ ಬುಧವಾರ ಧಾರವಾಡ ಜಿಲ್ಲೆಯಿಂದ ಸುಮಾರು 18 ಶಾಲೆಗಳಿಂದ 2348 ವಿದ್ಯಾರ್ಥಿಗಳು, 191 ಶಿಕ್ಷಕರು ಹಾಗೂ 428 ಸಾರ್ವಜನಿಕರು ಪ್ರದರ್ಶನಕ್ಕೆ ಆಗಮಿಸಿ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ಮಾಹಿತಿ ಪಡೆದರು 

Advertisement

Udayavani is now on Telegram. Click here to join our channel and stay updated with the latest news.

Next