Advertisement

ಕರ್ನಾಟಕ ದೇಶಕ್ಕೆ ಮಾದರಿ ಕೋವಿಡ್-19 ನಿಯಂತ್ರಣದಲ್ಲಿ ಸಿಎಂ ಯಡಿಯೂರಪ್ಪ ಉತ್ತಮ ಕೆಲಸ

02:47 AM Jun 15, 2020 | Sriram |

ಬೆಂಗಳೂರು/ ಹೊಸದಿಲ್ಲಿ: ಕೋವಿಡ್-19 ನಿಯಂತ್ರಣದಲ್ಲಿ ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ತಂಡ ದೇಶಕ್ಕೆ ಮಾದರಿಯಾಗುವಂತೆ ಸೋಂಕು ಪರಿಸ್ಥಿತಿ ಯನ್ನು ಎದುರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

Advertisement

ಬಿಜೆಪಿಯಿಂದ ರವಿವಾರ ಹಮ್ಮಿಕೊಂಡಿದ್ದ “ಕರ್ನಾಟಕ ಜನಸಂವಾದ’ ವರ್ಚುವಲ್‌ ರ್ಯಾಲಿಯಲ್ಲಿ ಪಾಲ್ಗೊಂಡು ದಿಲ್ಲಿಯಿಂದಲೇ ಮಾತನಾಡಿದ ಅವರು, ಕೋವಿಡ್-19 ಪರಿಸ್ಥಿತಿಯನ್ನು ದೇಶ ಮತ್ತು ಕರ್ನಾಟಕ ಸಮರ್ಥವಾಗಿ ಎದುರಿಸಿದೆ ಎಂದರಲ್ಲ, ಪಕ್ಷದ ಕಾರ್ಯಕರ್ತರ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾ ಸಿದರು.

ಟ್ರೇಸ್‌ (ಪತ್ತೆ), ಟೆಸ್ಟ್‌ (ಪರೀಕ್ಷೆ), ಟ್ರೀಟ್‌ಮೆಂಟ್‌ (ಚಿಕಿತ್ಸೆ) ಮತ್ತು ಟೆಕ್ನಾಲಜಿ (ತಾಂತ್ರಿಕತೆ) ಎಂಬ ನಾಲ್ಕು “ಟಿ’ ಆಧಾರಿತವಾಗಿ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಅವರ ತಂಡ ಕೋವಿಡ್-19 ನಿಯಂತ್ರಣದ ಕಾರ್ಯವನ್ನು ಅತ್ಯಂತ ಸಮರ್ಪಕ ವಾಗಿ ಮಾಡುತ್ತಿದೆ. ಇಡೀ ದೇಶಕ್ಕೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಕೋವಿಡ್-19 ಪ್ರಕರಣಗಳು ಬೇರೆಡೆಗೆ ಹೋಲಿಸಿದರೆ ತುಂಬ ಕಡಿಮೆ. ಕರ್ನಾಟಕ ಸರಕಾರ ಅತ್ಯುತ್ತಮ ವಾಗಿ ಕೆಲಸ ಮಾಡುತ್ತಿದೆ. ಸಂಕಷ್ಟಕ್ಕೆ ಒಳಗಾದ ಕೃಷಿಕರು, ಸವಿತಾ ಸಮಾಜ, ಆಟೋ, ಟ್ಯಾಕ್ಸಿ ಚಾಲಕರ ಸಹಿತ ವಿವಿಧ ವರ್ಗಗಳಿಗೆ ಜನಕಲ್ಯಾಣದ ಪ್ಯಾಕೇಜ್‌ ಅನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಲಸೆ ಕಾರ್ಮಿಕರ ಬಗ್ಗೆ ಯಡಿಯೂರಪ್ಪ ಅವರವಿಶೇಷ ಕಾಳಜಿ ಮೆಚ್ಚುವಂಥದ್ದು. ದೇಶಕ್ಕೆ ಮೋದಿ ಯವರು 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್‌ ಘೋಷಿಸಿದರು. ಅದಕ್ಕೂ ಮುನ್ನವೇ ರಾಜ್ಯಕ್ಕೆ ಯಡಿಯೂರಪ್ಪ 2,100 ಕೋ.ರೂ. ಪ್ಯಾಕೇಜ್‌ ಘೋಷಿಸಿದ್ದರು. ರಾಜ್ಯದ ಬಿಜೆಪಿ ಕಾರ್ಯಕರ್ತರು ಕೋವಿಡ್-19ವೇಳೆ ಉತ್ತಮ ಕಾರ್ಯ ಮಾಡಿದ್ದು, ನನ್ನ ನಮನ ಸಲ್ಲಿಸುತ್ತೇನೆ ಎಂದರು.

Advertisement

ಆತ್ಮ ನಿರ್ಭರ ಭಾರತ ಸವಾಲಿನ ಸಾಧನೆ
ಕೋವಿಡ್-19 ಪರಿಸ್ಥಿತಿಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾತ್ರವಲ್ಲದೆ ವಿವಿಧ ದೇಶಗಳು ಭಾರತದ ಸಾಧನೆಯನ್ನು ಮೆಚ್ಚಿಕೊಂಡಿವೆ. ಆತ್ಮನಿರ್ಭರ ಭಾರತ ಪ್ಯಾಕೇಜ್‌ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ದಾರಿಯಾಗಲಿದೆ. ಕೋವಿಡ್-19 ಸವಾಲು ನಮ್ಮ ಸಾಧನೆಯ ಹಾದಿಯಾಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ 6 ವರ್ಷದ ಸಾಧನೆಗಳು ಅದಕ್ಕೆ ಹಿಂದಿನ 60 ವರ್ಷದ ಸಾಧನೆಗಳಿಗೆ ಸಮ. ಕೋವಿಡ್-19 ವೇಳೆ ಪ್ರಧಾನಿ ದೃಢ ತೀರ್ಮಾನ ಮತ್ತು ಸಕಾಲದಲ್ಲಿ ಲಾಕ್‌ಡೌನ್‌ ಘೋಷಿಸಿ ಕೋವಿಡ್-19 ನಿಯಂತ್ರಣದಲ್ಲಿದೆ ಎಂದರು.

ದಿನಕ್ಕೆ 6 ಲಕ್ಷ ಪಿಪಿಇ ಕಿಟ್‌
ಭಾರತದಲ್ಲಿ ಪ್ರತಿ ದಿನ ಆರು ಲಕ್ಷ ಪಿಪಿಇ ಕಿಟ್‌ ತಯಾರಾಗುತ್ತಿದೆ. ಕೋವಿಡ್-19 ಆರಂಭದ ವೇಳೆ ದೇಶದಲ್ಲಿ ಒಂದೇ ಒಂದು ಕಿಟ್‌ ಉತ್ಪಾದನೆಯಾಗುತ್ತಿರಲಿಲ್ಲ. ಈಗ ಜಗತ್ತಿನ ಮುಂದೆ ಭಾರತದ ಶಕ್ತಿ ಅನಾವರಣಗೊಂಡಿದೆ. ಕೋವಿಡ್-19 ಕಾಣಿಸಿಕೊಂಡ ಆರಂಭದಲ್ಲಿ 3 ದಿನಗಳಲ್ಲಿ ಸೋಂಕು ದ್ವಿಗುಣಗೊಳ್ಳುತ್ತಿತ್ತು. ಈಗ 14 ದಿನಕ್ಕೆ ದ್ವಿಗುಣವಾಗುತ್ತಿದೆ. ದೇಶಾದ್ಯಂತ 1,000 ಕೋವಿಡ್‌ ಆಸ್ಪತ್ರೆಗಳು ಸೇವೆ ಸಲ್ಲಿಸು ತ್ತಿವೆ. ಟೆಸ್ಟಿಂಗ್‌ ಸಂಖ್ಯೆ 1,500ರಿಂದ 1.50 ಲಕ್ಷಕ್ಕೆ ಏರಿದೆ. 20 ಸಾವಿರ ಐಸೊ ಲೇಷನ್‌ ಬೆಡ್‌ಗಳಿವೆ ಎಂದರು.

ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ
ದೇಶ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದಾಗ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿತ್ತು. ದೇಶದಲ್ಲಿ ಸಂಕಷ್ಟ ಇದ್ದಾಗ ಸರಕಾರದ ಜತೆ ವಿಪಕ್ಷಗಳು ಕೈಜೋಡಿಸಬೇಕು. ವಿಪಕ್ಷ ಹೇಗಿರಬೇಕು ಎಂಬುದು ಗೊತ್ತಿಲ್ಲದಿದ್ದರೆ ನಮ್ಮ ಬಳಿಗೆ ಬನ್ನಿ, ಪಾಠ ಹೇಳುತ್ತೇವೆ ಎಂದು ನಡ್ಡಾ ವಾಗ್ಧಾಳಿ ನಡೆಸಿದರು. ಕಾಂಗ್ರೆಸ್‌ಗೆ ದೇಶದ ಹಿತಕ್ಕಿಂತ ರಾಜಕೀಯವೇ ದೊಡ್ಡದಾಗಿದೆ. ಅಸಹಿಷ್ಣುತೆ ದೇಶದ ಡಿಎನ್‌ಎ ಆಗಿದೆ ಎಂದು ಈಗ ಹೇಳುವಿರಾದರೆ ನಿಮಗೆ ಅದರ ಚಿಂತೆ ಬೇಡ. ಕಾಂಗ್ರೆಸ್‌ ಡಿಎನ್‌ಎ ಬದಲಾಯಿಸುವ ಬಗ್ಗೆ ಚಿಂತಿಸಿ ಎಂದು ಜೆ.ಪಿ. ನಡ್ಡಾ ಅವರು ರಾಹುಲ್‌ ಗಾಂಧಿಯವರಿಗೆ ಟಾಂಗ್‌ ನೀಡಿದರು.

ಮೋದಿ ಸರಕಾರದ ಗಟ್ಟಿ ನಿರ್ಧಾರ
ಕಾಶ್ಮೀರವನ್ನು ಭಾರತದೊಳಗೆ ವಿಲೀನಗೊಳಿಸಿ, 370ನೇ ವಿಧಿಯಿಂದ ಕಾಶ್ಮೀರಕ್ಕೆ ಮುಕ್ತಿ ನೀಡಲಾಗಿದೆ. ಸಿಎಎ ಕಾಯ್ದೆಯನ್ನೂ ಸರಕಾರ ತರುತ್ತಿದೆ. ತ್ರಿವಳಿ ತಲಾಖ್‌ ನಿಷೇಧಿಸಲಾಗಿದೆ. ರಾಮಮಂದಿರ ನಿರ್ಮಾಣವನ್ನು ಮೋದಿ ಸರಕಾರ ಸಾಕಾರ ಮಾಡಿದೆ. ಸದ್ಯದಲ್ಲೇ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. ಜನ್‌ಧನ್‌, ಉಜಾಲ, ಉಜ್ವಲಾ ಯೋಜನೆಗಳ ಮೂಲಕ ಮೋದಿ ಸರಕಾರ ದೇಶದ ಜನಮಾನಸವನ್ನು ತಲುಪಿದೆ ಎಂದು ಜೆ.ಪಿ. ನಡ್ಡಾ ಪ್ರತಿಪಾದಿಸಿದರು.

ಕೋವಿಡ್-19 ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ಸೇವೆಯೇ ನಮ್ಮ ಮೂಲ ಮಂತ್ರವಾಗಿರಬೇಕು. ಪಕ್ಷಕ್ಕಿಂತ ದೇಶ ಮೊದಲು. ದೇಶದ ಜತೆಗೆ ಸೇವೆಯ ಮೂಲಕ ಸದಾ ಸ್ಪಂದಿಸುತ್ತಿರಬೇಕು. ಇದಕ್ಕಾಗಿ ಡಿಜಿಟಲ್‌ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆ, ಸೌಲಭ್ಯ ಮನೆ ಮನೆಗೆ ತಲುಪಿಸಬೇಕು.
-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಕ್ರಾಂತಿಕಾರಿ ಪರಿವರ್ತನೆ
ಹೊಸದಿಲ್ಲಿ: ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಸಹಿತ ಹಲವಾರು ಕ್ರಾಂತಿ ಕಾರಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಜನ ಸಂವಾದ ವರ್ಚುವಲ್‌ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಶ್ರೀಕಾರ ಹಾಕಲಾಗಿದೆ ಎಂದಿದ್ದಾರೆ. ಭಾರತ ಈಗ ಬಲಹೀನ ರಾಷ್ಟ್ರವಲ್ಲ. ಅದರ ಸೇನಾ ಶಕ್ತಿ ಈಗ ಅಗಾಧವಾಗಿ ಹೆಚ್ಚಾಗಿದೆ. ಅದನ್ನು ಭಾರತ ತನ್ನ ರಕ್ಷಣೆಗಾಗಿ ಬಳಸುತ್ತದೆಯೇ ವಿನಾ ಇತರ ರಾಷ್ಟ್ರಗಳನ್ನು ಕೆಣಕಲು ಎಂದೂ ಉಪಯೋಗಿಸುವುದಿಲ್ಲ ಎಂದು ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next