Advertisement

Karnataka ರಾಜ್ಯಕ್ಕೆ ಹೆಚ್ಚು ಪಾಲು ಕೇಳಲು ಸಿಎಂ ಸಿದ್ದರಾಮಯ್ಯ ತಯಾರಿ

12:25 AM Aug 17, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ಅನುದಾನ ಹಂಚಿಕೆಯಲ್ಲಿ ತಾರತಮ್ಯದ ವಿರುದ್ಧ ಗುಡುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮರುದಿನವೇ ಅದಕ್ಕೆ ಪೂರಕವಾಗಿ 16ನೇ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಪಾಲು ತರುವ ಕಸರತ್ತಿಗೆ ಚಾಲನೆ ನೀಡಿದ್ದಾರೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಸುದೀರ್ಘ‌ ಚರ್ಚೆ ನಡೆಸಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ಪುನರಾವರ್ತನೆ ಆಗದಿರಲು ಹಲವು ಸೂಚನೆಗಳನ್ನು ನೀಡಲಾಯಿತು.

15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕಾದ ಅನ್ಯಾಯ 16ನೇ ಹಣಕಾಸು ಆಯೋಗದಲ್ಲೂ ಮುಂದುವರಿಯಬಾರದು. ಗರಿಷ್ಠ ತೆರಿಗೆ ಪಾವತಿಸಿದರೂ ಕಡಿಮೆ ಪಾಲು ಸಿಗುತ್ತಿದೆ. ಇದು ಪುನರಾವರ್ತನೆ ಆಗದಂತೆ ಅಗತ್ಯ ಮಾನದಂಡಗಳನ್ನು ರೂಪಿಸಬೇಕು. ಆ ಮೂಲಕ ರಾಜ್ಯಕ್ಕೆ ಹೆಚ್ಚು ಅನುದಾನ ಸಿಗುವಂತಾಗಬೇಕು ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರದಿಂದ ಈ ಹಿಂದಿನ ಹಣ ಕಾಸು ಆಯೋಗಗಳಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ಸಿಗುತ್ತಿತ್ತು. ಆಗ ಜಾಸ್ತಿ ಸಿಗುತ್ತಿದ್ದುದು, ಈಗ ಏಕಾಏಕಿ ಯಾಕೆ ಕಡಿಮೆಯಾಯಿತು? ಯಾವ ಮಾನದಂಡಗಳನ್ನು ಆಧರಿಸಿ ಕಡಿಮೆ ಮಾಡಿದರು? ಅದಕ್ಕೆ ಪ್ರತಿಯಾಗಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ಸರಿಪಡಿಸಲು ಯಾವ ಮಾನದಂಡಗಳನ್ನು ರೂಪಿಸುವುದು ಸೂಕ್ತ ಇದೆಲ್ಲದರ ಬಗ್ಗೆ ಪರಾಮರ್ಶೆ ಮಾಡಿ, ವರದಿ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು ಎನ್ನಲಾಗಿದೆ.

ಪಾಲು ಹೆಚ್ಚಳಕ್ಕೆ ವರದಿ ಸಿದ್ಧಪಡಿಸಿ
ಸಾಫ್ಟ್ವೇರ್‌ ವಲಯದಲ್ಲಿ ಬರುವ ದೇಶದ ಒಟ್ಟಾರೆ ತೆರಿಗೆ ಪೈಕಿ ಶೇ. 42ರಷ್ಟು ಬೆಂಗಳೂರಿನಿಂದಲೇ ಪಾವತಿಯಾಗುತ್ತಿದೆ. ಆದರೆ, ಅದರಲ್ಲಿ ಬರುವ ಪಾಲು ಅತ್ಯಲ್ಪ. ಇದರಿಂದ ಬೆಂಗಳೂರಿನ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದವರು ಹೇಳಿದರು.

Advertisement

29ಕ್ಕೆ ಹಣಕಾಸು ಆಯೋಗದ ಸಭೆ?
16ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಆ. 29ಕ್ಕೆ ಸಭೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಬೇಕಾದ, ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಬಹುದಾದ ಮಾನ ದಂಡಗಳ ವರದಿ ಪಡೆಯುವ ಸಂಬಂಧ ಈ ಪೂರ್ವಭಾವಿ ಸಭೆನಡೆಸಲಾಗಿದೆ. ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌.ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಫಾಕ್ಸ್‌ಕಾನ್‌ಗೆ ಅಗತ್ಯ ನೆರವು: ಸಿಎಂ ಭರವಸೆ
ಬೆಂಗಳೂರು: ಆ್ಯಪಲ್‌ ಫೋನ್‌ ಸೇರಿ ಎಲೆಕ್ಟ್ರಾನಿಕ್‌ ಸಾಧನಗಳ ತಯಾರಿಕೆಯಲ್ಲಿ ಜಗತ್ತಿನ ಅಗ್ರಗಣ್ಯ ಕಂಪೆನಿಗಳಲ್ಲಿ ಒಂದಾಗಿರುವ ಫಾಕ್‌ಕಾನ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಂಗ್‌ ಲಿಯು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಖಾಸಗಿ ಹೊಟೇಲ್‌ನಲ್ಲಿ ಭೇಟಿಯಾಗಿ ಸಮಾಲೋಚಿಸಿದರು.

ಫಾಕ್ಸ್‌ಕಾನ್‌ ಮತ್ತು ರಾಜ್ಯದ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲು ನಾವು ಬದ್ಧರಾಗಿದ್ದೇವೆ. ರಾಜ್ಯದಲ್ಲಿನ ಫಾಕ್ಸ್‌ಕಾನ್‌ ಯೋಜನೆಗೆಗಳಿಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ಮತ್ತು ನೆರವು ಒದಗಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇದಕ್ಕೂ ಮೊದಲು ಯಂಗ್‌ ಲಿ ಯು ಅವರನ್ನು ಸರಕಾರದ ಪರವಾಗಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next