Advertisement

CM ಕಗ್ಗಂಟು: ಬೀದಿಗಿಳಿದ ಬೆಂಬಲಿಗರು

10:48 PM May 17, 2023 | Team Udayavani |

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನದ ಕಗ್ಗಂಟು ಜಟಿಲವಾಗಿರುವ ನಡುವೆಯೇ ಅವರ ಬೆಂಬಲಿಗರು ಬೀದಿಗಿಳಿಯುವ ಮೂಲಕ ಹೈಕಮಾಂಡ್‌ ಮೇಲೆ ಒತ್ತಡ ಮುಂದುವರಿಸಿದ್ದಾರೆ. ರಾಮನಗರ ಜಿಲ್ಲೆ ಸೇರಿ ಹಲವೆಡೆ ಡಿ.ಕೆ.ಶಿವಕುಮಾರ್‌ ಬೆಂಬಲಿಗರು ಪ್ರತಿಭಟನೆ ನಡೆಸುವ ಮೂಲಕ ಪಕ್ಷಕ್ಕೆ ಮುನ್ನಡೆ ದೊರಕಿಸಿಕೊಟ್ಟ ಶಿವಕುಮಾರ್‌ ಅವರಿಗೇ ಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿದರು. ಇನ್ನು ಸಿದ್ದರಾಮಯ್ಯ ಪರವಾಗಿಯೂ ರಾಜ್ಯದ ಹಲವೆಡೆ ಬೆಂಬಲಿಗರು ದನಿ ಎತ್ತಿದ್ದಾರೆ. ಸಿದ್ದರಾಮನ ಹುಂಡಿಯಲ್ಲಿ ಬೆಂಬಲಿಗರು, ಕಾರ್ಯಕರ್ತರು ಸಿದ್ದರಾಮಯ್ಯ ಅವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

Advertisement

ಕಾರ್ಯಕರ್ತರ ಆಕ್ರೋಶ, ರಾಮನಗರದಲ್ಲಿ ರಸ್ತೆ ತಡೆ

ರಾಮನಗರ: ಡಿ.ಕೆ.ಶಿವಕುಮಾರ್‌ಗೆ ಸಿಎಂ ಗಾದಿ ಕೈ ಜಾರುತ್ತಿದೆ ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಡಿಕೆಶಿ ತವರು ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ. ಗುರುವಾರ ಸಂಜೆ ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳು ತಮ್ಮ ನಾಯಕನ ಪರವಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸುವ ಮೂಲಕ ಡಿ.ಕೆ.ಶಿವಕುಮಾರ್‌ ಪರ ಬ್ಯಾಟಿಂಗ್‌ ಬೀಸಿದ್ದಾರೆ.

ಪಟ್ಟಣದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕೆಂದು ಹೈಕಮಾಂಡ್‌ ಅನ್ನು ಒತ್ತಾಯಿಸಿದರು. ಡಿಕೆಶಿ ಭಾವಚಿತ್ರವನ್ನು ಹಿಡಿದು ಘೋಷಣೆ ಕೂಗುತ್ತ  ಕೆಲಕಾಲ ರಸ್ತೆ ತಡೆ ನಡೆಸಿದರು.

ದುಡಿದವರಿಗೆ ಬೆಲೆ ನೀಡಿ

Advertisement

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚೇತನ್‌, ರಾಜ್ಯದಲ್ಲಿ 135 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲುವಲ್ಲಿ ಡಿ.ಕೆ.ಶಿವಕುಮಾರ್‌ ಕೊಡುಗೆ ಸಾಕಷ್ಟಿದೆ. ಪಕ್ಷ ಸಂಕಷ್ಟದಲ್ಲಿದ್ದಾಗ ಮುನ್ನಡೆಸಿ ಅಧಿಕಾರಕ್ಕೆ ಬರಲು ಕಾರಣವಾದ ಇವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕಿರುವುದು  ನ್ಯಾಯೋಚಿತ ಎಂದು ಹೇಳಿದರು.

ಬೆಂಗಳೂರು -ಮೈಸೂರು ರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕಾಂಗ್ರೆಸ್‌ ಬಾವುಟಗಳನ್ನು ಹಿಡಿದು ಮೂವತ್ತು ನಿಮಿಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ರಾಮನಗರದಲ್ಲಿ ಬಿಗಿ ಪೊಲೀಸ್‌ ಭದ್ರತೆ

ರಾಮನಗರ: ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ಕೈ ಜಾರಿದೆ ಎಂಬ ಮಾಹಿತಿ ಗುರುವಾರ ಮಧ್ಯಾಹ್ನ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ರಾಮನಗರ ಜಿಲ್ಲೆಯಲ್ಲಿ ಪೊಲೀಸರು ಅಲರ್ಟ್‌ ಆಗಿದ್ದಾರೆ. ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಭದ್ರತೆಗಾಗಿ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ.  ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಗಾದಿ ದೊರೆಯಲಿದೆ ಎಂದು ಬಹುತೇಕ ಮುಖಂಡರು ಭಾವಿಸಿದ್ದರು. ಆದರೆ, ಗುರುವಾರ ಮಧ್ಯಾಹ್ನದ ಸುಮಾರಿಗೆ ಸಿದ್ದರಾಮಯ್ಯಗೆ ಸಿಎಂ ಹುದ್ದೆ ದೊರೆಯಲಿದೆ ಎಂಬ ಮಾಹಿತಿ ಹರಿದಾಡಿದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡಿದೆ. ಮುಂಜಾಗೃತ ಕ್ರಮವಾಗಿ ಡಿಕೆಶಿ ತವರು ಜಿಲ್ಲೆಯಲ್ಲಿ ಪೊಲೀಸ್‌ ಭದ್ರತೆ ಹೆಚ್ಚಳಗೊಳಿಸಲಾಗಿದೆ.

ಸಿದ್ದು ಪರ ಸಂಘಟನೆಗಳ ಬ್ಯಾಟಿಂಗ್‌

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಪರಿಗಣಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಕಾಂಗ್ರೆಸ್‌ ಹೈಕಮಾಂಡ್‌ ಅನ್ನು ಒತ್ತಾಯಿಸಿವೆ. ಶೋಷಿತ ಸಮುದಾಯಗಳ ಒಗ್ಗಟ್ಟಿನ ರಾಜಕೀಯ ಹೋರಾಟದ ಫಲವಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಸಾಮಾಜಿಕ ನ್ಯಾಯ ಮತ್ತು ಸಮಾನತಾ ವಾದದ ಗಟ್ಟಿ ದನಿಯಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನೇಮಿಸಬೇಕೆಂದು  ದಲಿತ ಸಂಘರ್ಷ ಸಮಿತಿ ಸೇರಿ ಹಲವು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಇನ್ನು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ನೇಮಿಸಲಾಗುತ್ತದೆ ಎಂದು ತಿಳಿದು ವರುಣ ವಿಧಾನಸಭಾ ಕ್ಷೇತ್ರ ಹಾಗೂ ಸಿದ್ದರಾಮಯ್ಯ ತವರೂರು ಸಿದ್ದರಾಮನಹುಂಡಿಯಲ್ಲಿ ಬುಧವಾರ ಸಂಭ್ರಮಾಚರಣೆ ಕಂಡು ಬಂತು. ವರುಣ ಕ್ಷೇತ್ರದ ಹಲವೆಡೆ ಸಿದ್ದರಾಮಯ್ಯ ಅವರ ಕಟೌಟ್‌ ಇಟ್ಟು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಲಾಯಿತು. ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ರ್ಯಾಲಿ ನಡೆಸಿದರು. ಸಿದ್ದರಾಮಯ್ಯ ಪರವಾಗಿ ಘೋಷಣೆ ಕೂಗಿದರು. ಸಿದ್ದರಾಮನಹುಂಡಿಯಲ್ಲಿ ಅಭಿಮಾನಿಗಳು ಸಿದ್ದರಾಮಯ್ಯ ಅವರ ಕಟೌಟ್‌ ಮುಂದೆ ನೃತ್ಯ ಮಾಡಿ ಸಂಭ್ರಮಿಸಿದರು. ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next