Advertisement

ಮುಂದಿನ ಚುನಾವಣೆಗೆ ಈಗಿನಿಂದಲೇ ತಂತ್ರ; ದಾವಣಗೆರೆ ಉತ್ತರ ಕ್ಷೇತ್ರದತ್ತ ಬೊಮ್ಮಾಯಿ ಚಿತ್ತ?

11:54 AM Mar 13, 2022 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ವಿಧಾನಸಭೆ ಚುನಾವಣೆಗೆ ಹೊಸ ಕ್ಷೇತ್ರದ ಹುಡುಕಾಟದಲ್ಲಿದ್ದು ಸ್ವಕ್ಷೇತ್ರ ಶಿಗ್ಗಾವಿಯ ಜತೆಗೆ ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದಿಂದಲೂ ಸ್ಪರ್ಧಿಸಲು ಚಿತ್ತಹರಿಸಿದ್ದಾರಾ? ಇಂತದ್ದೊಂದು ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದ್ದು, ಮುಂದಿನ ಚುನಾವಣೆಗೆ ಈಗಿನಿಂದಲೇ ಕಾರ್ಯತಂತ್ರ ಆರಂಭಿಸಿರುವ ಬಸವರಾಜ ಬೊಮ್ಮಾಯಿ, ಸುರಕ್ಷಿತ ಕ್ಷೇತ್ರದತ್ತ ದೃಷ್ಟಿ ಹರಿಸಿದ್ದಾರೆಂದು ಹೇಳಲಾಗಿದೆ.

Advertisement

ಮುಂದಿನ ಚುನಾವಣೆಯಲ್ಲಿಯೂ ಬಸವರಾಜ ಬೊಮ್ಮಾಯಿ ಅವರದ್ದೇ ನೇತೃತ್ವ ಎಂದು ಖುದ್ದು ಅಮಿತ್‌ ಶಾ ಸಹಿತ ರಾಷ್ಟ್ರೀಯ ಬಿಜೆಪಿ ನಾಯಕರು ಹೇಳಿರುವುದರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಅಧಿಕಾರಕ್ಕೆ ತರುವ ಹೊಣೆಗಾರಿಕೆ ಅವರ ಮೇಲಿದೆ. ಹೀಗಾಗಿ, ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲ್ಲಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿಯ ಹಿರಿಯ ನಾಯಕ ಎಸ್‌.ಎ.ರವೀಂದ್ರನಾಥ್‌ ಶಾಸಕರಾಗಿ ದ್ದು ಅವರ ವಯಸ್ಸು 75 ಮೀರಿದೆ. ಹೀಗಾಗಿ ವಯಸ್ಸಿನ ಆಧಾರದ ಮೇಲೆ ರವೀಂದ್ರನಾಥ್‌ ಅವರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‌ ತಪ್ಪಬಹುದು. ಕ್ಷೇತ್ರ ದಲ್ಲಿ ಸಾದರ ಲಿಂಗಾಯತರ ಸಂಖ್ಯೆ ಹೆಚ್ಚಾಗಿರುವುದರಿಂದ ಬೊಮ್ಮಾಯಿ ಅವರು ಆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಆಪ್ತರ ಬಳಿ ಚರ್ಚಿಸಿದ್ದಾರೆಂದು ಹೇಳಲಾಗಿದೆ.

ದಾವಣಗೆರೆ ಉತ್ತರ ಕ್ಷೇತ್ರ ಬೊಮ್ಮಾಯಿಯವರ ತವರು ಹಾವೇರಿ ಜಿಲ್ಲೆಗೆ ಹೊಂದಿಕೊಂಡಿರುವ ದಾವಣಗೆರೆ ಜಿಲ್ಲೆಯ ಕ್ಷೇತ್ರ. ಬೊಮ್ಮಾಯಿ ಅವರು ಸಾದರ ಲಿಂಗಾಯತರಾಗಿದ್ದು ಜಾತಿ ಲೆಕ್ಕಾಚಾರದಲ್ಲಿಯೂ ಅವರಿಗೆ ಅನುಕೂಲವಾಗಬಹುದು. ಜತೆಗೆ ಈ ಭಾಗದಲ್ಲಿ ಸಿರಿಗೆರೆ ಹಾಗೂ ಸಾಣೆಹಳ್ಳಿ ಮಠಗಳ ಪ್ರಭಾವವೂ ಹೆಚ್ಚಾಗಿದ್ದು ಮಠಾಧೀಶರೂ ಸಹ ಬೊಮ್ಮಾಯಿ ಅವರ ಕೈ ಹಿಡಿಯಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ? ಗುಜರಾತ್‌ ಜತೆ ರಾಜ್ಯದಲ್ಲೂ ಚುನಾವಣೆಗೆ ನಡೆದಿದೆ ಚಿಂತನೆ

Advertisement

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಪ್ರಭಾವಿಯಾಗಿದ್ದಾರೆ. ಇದೇ ಕ್ಷೇತ್ರದಿಂದ ಅವರು ಆಯ್ಕೆಯಾಗಿ ಸಚಿವರೂ ಆಗಿದ್ದಾರೆ. ಮಲ್ಲಿಕಾರ್ಜುನ್‌ ಕೂಡ ಸಾದರ ಲಿಂಗಾಯತರೇ ಆಗಿದ್ದು ಅವರು ಮುಂದಿನ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಸ್ಪರ್ಧೆ ಕಠಿಣವೂ ಆಗಲಿದೆ. ಆದರೆ, ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬದಲಾಗಬಹುದೆಂಬ ಮಾತೂ ಇದೆ.

ಹಾಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಡಾ| ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನ ಕಾರಣದಿಂದ ಸ್ಪರ್ಧಿಸಲು ನಿರಾಕರಿಸಿದರೆ, ಅವರ ಪುತ್ರ ಮಲ್ಲಿಕಾರ್ಜುನ್‌, ದಾವಣಗೆರೆ ದಕ್ಷಿಣದಿಂದ (ತಂದೆ ಆಯ್ಕೆಯಾದ ಕ್ಷೇತ್ರ) ಸ್ಪರ್ಧಿಸಬಹುದು. ಆಗ ಕಾಂಗ್ರೆಸ್‌ ನಿಂದ ಯಾರೇ ಅಭ್ಯರ್ಥಿ ಕಣಕ್ಕಿಳಿದರೂ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದರೆ ಅನುಕೂಲವಾಗಬಹುದು.

ಸ್ವಲ್ಪ ಮಟ್ಟಿನ ಆತಂಕವಿದೆ: ಬಸವರಾಜ ಬೊಮ್ಮಾಯಿಯವರು ಸ್ವಕ್ಷೇತ್ರ ಶಿಗ್ಗಾವಿ ಜತೆಗೆ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಅಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರು ಹೆಚ್ಚಾಗಿರುವ ಕಾರಣ ಸ್ವಲ್ಪ ಮಟ್ಟಿನ ಆತಂಕವಿದ್ದು ಪರ್ಯಾಯ ಕ್ಷೇತ್ರ ನೋಡುತ್ತಿದ್ದಾರೆಂದು ಹೇಳಲಾಗಿದೆ. ಮುಂದಿನ ಚುನಾವಣೆಗಾಗಿ ಈಗಲೇ ಇನ್ನೊಂದು ಕ್ಷೇತ್ರದ ತಯಾರಿ ಮಾಡಿಕೊಳ್ಳುತ್ತಿದ್ದು ಈ ವಿಚಾರ ಬೊಮ್ಮಾಯಿ ಅವರಾಗಿಯೇ ಖಚಿತಪಡಿಸುವವರೆಗೂ ಗುಟ್ಟಾಗಿಯೇ ಉಳಿಯಲಿದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next