Advertisement

ಸಾಲ ಮಾಡಿ ಹೋಳಿಗೆ ತಿಂದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

01:12 AM Mar 17, 2022 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಪಡೆದಿರುವ ಸಾಲದ ಪ್ರಮಾಣವೂ ಹೆಚ್ಚಾಗಿಲ್ಲ, ಕೇಂದ್ರದಿಂದ ಬರುವ ತೆರಿಗೆ ಪಾಲೂ ಕಡಿಮೆಯಾಗಿಲ್ಲ. ಕೊರೊನಾ ನಡುವೆಯೂ ಆರ್ಥಿಕತೆ ಉತ್ತಮವಾಗಿ ನಿರ್ವಹಣೆ ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.

Advertisement

ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಸಾಲ ಮಾಡಿ ಹೋಳಿಗೆ ತಿನ್ನುವ ಸ್ಥಿತಿ ನಮ್ಮದಲ್ಲ. ನಾವು ಸಾಲದ ಹೊರೆ ಇಲ್ಲದೆ ರೊಟ್ಟಿ ತಿನ್ನುವ ಜನ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.

ನಮ್ಮ ಬಜೆಟ್‌ ಸಂಪೂರ್ಣ ಜನಪರ ಇದೆ. ಕ್ಷೀರ ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆ ಒಂದು ಕ್ರಾಂತಿಕಾರಕ ನಿರ್ಧಾರ. ಇದು ಮುಂದೆ ಅಪೆಕ್ಸ್‌ ಬ್ಯಾಂಕ್‌ಗೆ ಸರಿಸಮನಾಗಿ ಬೆಳೆಯಲಿದೆ. ಅದೇ ರೀತಿ ರೈತರಿಗೆ ಅನುಕೂಲವಾಗುವ ಯಶಸ್ವಿನಿ ಯೋಜನೆ ಮರು ಜಾರಿಗೂ ಘೋಷಣೆ ಮಾಡಿದ್ದೇವೆ. ಇವು ಜನಪರ ಅಲ್ಲವೇ ಎಂದು ಪ್ರಶ್ನಿಸಿದರು.

ಲಕ್ಷಾಂತರ ರೈತರ ಮಕ್ಕಳಿಗೆ ನೆರವಾಗುವ ವಿದ್ಯಾನಿಧಿ ಜಾರಿಗೊಳಿಸಿದ್ದೇವೆ. ಅದನ್ನು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸಲು ನಿರ್ಧರಿಸಿದ್ದೇವೆ ಎಂದರು.

ಇದೇ ಮೊದಲ ಬಾರಿಗೆ ಅಭಿವೃದ್ಧಿ ಆಕಾಂಕ್ಷಿಗಳ ತಾಲೂಕುಗಳು ಎಂದು ಗುರುರಿಸಿ, 93 ತಾಲೂಕುಗಳಲ್ಲಿ ಶಿಕ್ಷಣ, 100 ತಾಲೂಕುಗಳಲ್ಲಿ ಆರೋಗ್ಯ, 102 ತಾಲೂಕುಗಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ. ಇದಕ್ಕಾಗಿ ಮೂರು ಸಾವಿರ ಕೋಟಿ ರೂ. ಇಟ್ಟಿದ್ದೇವೆ ಎಂದು ಹೇಳಿದರು.

Advertisement

ಶಿಕ್ಷಣ, ಆರೋಗ್ಯ, ಮಾನವ ಸಂಪನ್ಮೂಲಕ್ಕೆ ಮಾಡುವ ಖರ್ಚು ವೆಚ್ಚ ಅಲ್ಲ. ಅದು ಭವಿಷ್ಯದ ಬಂಡವಾಳ ಹೂಡಿಕೆ ಎಂದು ಬಣ್ಣಿಸಿದ ಅವರು, ನರೇಗಾ ಯೋಜನೆಯ ಹಣ ಶಾಲಾ ಕಟ್ಟಡಗಳ ಬಳಕೆಗೂ ಅವಕಾಶ ಕೊಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಾಲ ಯಾಕೆ ಹೆಚ್ಚು ಪಡೆಯಲಾಗಿದೆ ಎಂದರೆ 2020-21 ನೇ ಸಾಲಿನಲ್ಲಿ 21,855 ಕೋಟಿ ರೂ. ಸಂಪನ್ಮೂಲ ಕ್ರೂಢೀಕರಣ ಕೊರತೆ ಆಯಿತು. ಹೀಗಾಗಿ, ಸಾಲ ಮಾಡಲೇಬೇಕಾಯಿತು. ಆದರೂ ಅವಕಾಶ ಇದ್ದಷ್ಟೂ ಸಾಲ ಪಡೆದಿಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚೆನ್ನಾಗಿ ನಿರ್ವಹಿಸಿದ್ದೇವೆ. 2022-23 ನೇ ಸಾಲಿನಲ್ಲೂ ಸಾಲ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದಲೂ ಸಿದ್ದ ರಾಮಯ್ಯ ಅವರು ಮುಖ್ಯಮಂತ್ರಿಯಾಗುವ ತನಕ 1.38 ಲಕ್ಷ ಕೋಟಿ ರೂ. ಸಾಲ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಐದು ವರ್ಷಗಳಲ್ಲಿ ಮಾಡಿದ್ದ ಸಾಲಕ್ಕಿಂತ ನಾವು ನಾಲ್ಕು ವರ್ಷಗಳಲ್ಲಿ ಕಡಿಮೆ ಸಾಲ ಮಾಡಿದ್ದೇವೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆಲ್ಲ ಹಣ ಇಡುವುದಿಲ್ಲ. ಮುಂದಿನ ದಿನಗಳಲ್ಲಿ ಪೂರಕ ಅಂದಾಜು ಗಳಲ್ಲಿಯೂ ಹಣ ಇಡಬಹುದಾಗಿದೆ ಎಂದರು ತಿಳಿಸಿದರು.

ಕೊರೊನಾಗೆ ಕೇವಲ 8 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದು ಸರಿಯಲ್ಲ. ಕೊರೊನಾಗೆ ಅದಕ್ಕಿಂತ ಮೂರು ಪಟ್ಟು ಶಾಶ್ವತ ಮೂಲಸೌಕರ್ಯಕ್ಕೆ ವೆಚ್ಚ ಮಾಡಿದ್ದೇವೆ ಎಂದು ತಿಳಿಸಿದರು.

ಸಿಎಂ ಉತ್ತರ ವಿರೋಧಿಸಿ ಕಾಂಗ್ರೆಸ್‌ ಸಭಾತ್ಯಾಗ
ಬೆಂಗಳೂರು: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರುವ ಜಿಎಸ್‌ಟಿ ಪರಿಹಾರ ಹಾಗೂ ಕೇಂದ್ರದಿಂದ ಬರಬೇಕಿರುವ ಅನುದಾನದ ತಾರತಮ್ಯ ಕುರಿತು ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಆರೋಪ ಪ್ರತ್ಯಾರೋಪ ನಡೆದು, ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ ಮೇಲೆ ನೀಡಿದ ಉತ್ತರ ಅವಾಸ್ತವಿಕ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಸಿಎಂ ಬೊಮ್ಮಾಯಿ ಉತ್ತರ ನೀಡುತ್ತಿರುವಾಗ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸದನಕ್ಕೆ ಸುಳ್ಳು ಮಾಹಿತಿಯನ್ನ ನೀಡಬೇಡಿ, ಬಜೆಟ್‌ನಲ್ಲಿ ಕೇಂದ್ರದ ಅನುದಾನವನ್ನೂ ವಿವರಿಸಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಸಿಎಂ ಬೊಮ್ಮಾಯಿ, ನಾವು ಎಲ್ಲೂ ದಾರಿ ತಪ್ಪಿಸುತ್ತಿಲ್ಲ. ಕೇಂದ್ರದ ನೆರವಿನ ಬಗ್ಗೆ ಯಾಕೆ ಮಾತನಾಡುತ್ತೀರ. ರಾಜ್ಯ ಬಜೆಟ್‌ ಬಗ್ಗೆ ಮಾತ್ರ ನೀವು ಮಾತನಾಡಿ ಎಂದು ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಿಪಕ್ಷ ಉಪ ನಾಯಕ ಯು.ಟಿ. ಖಾದರ್‌, ನಿಮಗೆ ಕೇಂದ್ರ ಸರಕಾರದ ಭಯವಿದೆ ಹಾಗಾಗಿ ನೀವು ಕೇಂದ್ರದ ಬಗ್ಗೆ ಮಾತನಾಡುವುದಿಲ್ಲ. ಭಯದಿಂದ ಸರಕಾರವನ್ನು ನಡೆಸುತ್ತೀರ ಎಂದು ಖಾದರ್‌ ಸಿಎಂ ಕಾಲೆಳೆದರು.

ಖಾದರ್‌ ಮಾತಿಗೆ ತಿರುಗೇಟು ನೀಡಿದ ಸಿಎಂ, ನಮಗೆ ಯಾರ ಭಯವಿಲ್ಲ. ನಿಮಗೆ ಭಯವಿದೆ, ಆ ಭಯ ನಿಮ್ಮ ಪಾರ್ಟಿಯಲ್ಲಿದೆ. ಚುನಾವಣೆಯಲ್ಲಿ ಸೋತರೂ ನಿಮ್ಮ ನಾಯಕರಿಗೆ ದೊಡ್ಡ ಸಲಾಂ ಹೊಡೆಯುತ್ತೀರಾ. ನೀವು ಎಂತವರು, ಸೋತ ನಾಯಕರ ಮುಂದೆ ಸಲಾಂ ಹೊಡೆಯುವುದು ನಿಮ್ಮದು ಎಂತಹ ಧೈರ್ಯ ಎಂದು ಕೆಣಕಿದರು.

2017-18ರಲ್ಲಿ 31 ಸಾವಿರ ಕೋಟಿ ರೂ. ಕೇಂದ್ರದ ತೆರಿಗೆ ಪಾಲಿನ ಹಣ ಬರುತ್ತಿತ್ತು. ಈಗ ಅದು 29 ಸಾವಿರ ಕೋಟಿಗೆ ಇಳಿದಿದೆ. ಕಡಿಮೆ ಆಗಿದೆ. ಸಾಲವನ್ನು ಜಿಎಸ್‌ಟಿಯ 25% ಕ್ಕಿಂತ ಹೆಚ್ಚಿಗೆ ಸಾಲ ಪಡೆಯಬಾರದು, ಜಿಎಸ್‌ ಡಿಪಿ ಪ್ರತಿವರ್ಷ ಹೆಚ್ಚಾಗುತ್ತ ಹೋಗುತ್ತದೆ. ನಾವು ಐದು ವರ್ಷದಲ್ಲಿ ಶೇ 20 ಸಾಲದ ಪ್ರಮಾಣ ಮೀರಲೇ ಇಲ್ಲ. ಯಡಿಯೂರಪ್ಪ ಇದ್ದಾಗ ಶೇ 27.47, ರಷ್ಟಾಗಿದೆ. ಸಾಲ ಹೆಚ್ಚಾದಷ್ಟು ಬಡ್ಡಿ ಪ್ರಮಾಣ ಹೆಚ್ಚಾಗುತ್ತದೆ, ಮದಿನ ವರ್ಷ 47 ಸಾವಿರ ಕೋಟಿ ರೂ. ಬಡ್ಡಿ ಕೊಡಬೇಕಾಗುತ್ತದೆ, ಅದಕ್ಕಾಗಿ ಅನಗತ್ಯ ವೆಚ್ಚ ಕಡಿಮೆ ಮಾಡಿ. ಹೆಚ್ಚುವರಿ ಹು¨ªೆಗಳನ್ನು ರದ್ದುಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದರು.

ಅವರ ಆಕ್ಷೇಪಕ್ಕೆ ಸ್ಪಷ್ಟೀಕರಣ ನೀಡಿದ ಸಿಎಂ ಹಿಂದಿನ ಸರಕಾರದ ವಿದ್ಯಾಸಿರಿ, ಅರಿವು, ಶಿಷ್ಯವೇತನ ನೀಡುವ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ಕೇಂದ್ರ ಸರ್ಕಾರದಿಂದ ಬೇರೆ ಬೇರೆ ಯೋಜನೆಗಳಿಗೆ ಅನುದಾನ. ನೀಡಲಾಗುತ್ತದೆ. ಹೀಗಾಗಿ ಕೇಂದ್ರದಿಂದ ಬರುವ ಅನುದಾನದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಅಂಕಿ ಅಂಶಗಳ ಮೂಲಕ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದರು. ಸಿಎಂ ಉತ್ತರ ಸರಿಯಲ್ಲ ಎಂದು ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next