ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾದ ನಂತರ ಅವರ ಆಪ್ತ ವಲಯದಲ್ಲಿ ಆತಂಕ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಎಂ ಬಿಎಸ್ ವೈ ಅವರನ್ನು ಭೇಟಿಯಾಗಿದ್ದ, ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗ ಸಿಎಂ ಬಿಎಸ್ ವೈ ಅವರ ಕುಟುಂಬಸ್ಥರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪುತ್ರ ವಿಜಯೇಂದ್ರ ಅವರ ವರದಿ ನೆಗೆಟಿವ್ ಆಗಿದ್ದರೆ, ಪುತ್ರಿ ಪದ್ಮಾವತಿ ಅವರಿಗೆ ಪಾಸಿಟಿವ್ ಆಗಿದೆ.
ನಿನ್ನೆ ರಾತ್ರಿ ಸಿಎಂ ಬಿಎಸ್ ವೈ ಟ್ವಿಟ್ ಮಾಡಿ ತಮಗೆ ಕೋವಿಡ್ ಸೋಂಕು ತಾಗಿರುವ ಕುರಿತು ಹೇಳಿಕೊಂಡಿದ್ದರು. ಯಾವುದೇ ಸೋಂಕು ಲಕ್ಷಣಗಳು ಇಲ್ಲದೇ ಇದ್ದರೂ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದಿದ್ದರು.
ರವಿವಾರ ಸಿಎಂ ನಿವಾಸದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಬಿಎಸ್ ವೈ ಮತ್ತು ಪುತ್ರಿ ಪದ್ಮಾವತಿ ಅವರಿಗೆ ಸೋಂಕು ದೃಢವಾಗಿತ್ತು. ಮಗ ವಿಜಯೇಂದ್ರ, ಅವರ ಆಪ್ತ ಸಹಾಯಕ ಮತ್ತು ಸಿಎಂ ಒಎಸ್ ಡಿ ಮಹಾಂತೇಶ ಅವರ ವರದಿ ನೆಗೆಟಿವ್ ಆಗಿದೆ. ಸಿಎಂ ಮತ್ತು ಪುತ್ರಿ ಪದ್ಮಾವತಿ ಅವರಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯೇಂದ್ರ ಒಂದು ವಾರ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ.