Advertisement

ಬಾಲಚಂದ್ರ ಪ್ರಚಾರದಿಂದ ಬಿಜೆಪಿಗೆ ಆನೆಬಲ : ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ

07:28 PM Apr 15, 2021 | Team Udayavani |

ಮೂಡಲಗಿ: ಕೆ.ಎಂ.ಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕಳೆದ ಮೂರ್‍ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವದರಿಂದ ಬಿಜೆಪಿಗೆ ಆನೆ ಬಲ ಬಂದಿದ್ದು, ಅರಭಾಂವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿಯವರ ಶಕ್ತಿಯಿಂದ ಬಿಜೆಪಿಗೆ ಶೇ.80 ರಷ್ಟು ಮತಗಳು ಲಭಿಸಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬುಧವಾರ ಸಂಜೆ ಪಟ್ಟಣದ ಬಸವ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸುರೇಶ ಅಂಗಡಿ ಅವರಿಗೆ ನೀಡಿದ ಮುನ್ನಡೆಗಿಂತ ಈ ಬಾರಿ ಏ.17 ರಂದು ನಡೆಯುವ ಮತದಾನದಲ್ಲಿ ಮಂಗಲಾ ಅವರಿಗೆ ಅತ್ಯಧಿಕ ಮತಗಳ ಮುನ್ನಡೆ ನೀಡಿ ಜನಸೇವೆಗೆ ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಶಕ್ತಿ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಳೆದ ಸೋಮವಾರದಿಂದ ಮಂಗಲಾ ಪರ ಪ್ರಚಾರಕ್ಕೆ ಧುಮಕಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಅವರು ಈ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಅತ್ಯಧಿಕ ಮತಗಳು ಬಿಜೆಪಿಗೆ ಲಭಿಸುವಂತೆ ಕಾರ್ಯನಿರತರಾಗಿದ್ದಾರೆ. ದೇಶದ ಸಮಗ್ರ ಪ್ರಗತಿಗಾಗಿ ದಿ. ಸುರೇಶ ಅಂಗಡಿಯವರ ಸ್ಮರಣಿಯ ಕಾಮಗಾರಿಗಳನ್ನು ನೆನಪಿಸಿಕೊಂಡು ಮಂಗಲಾ ಅಂಗಡಿಯವರಿಗೆ ಮತ ನೀಡುವಂತೆ ಕೋರಿದರು.

ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗು. ಅದಕ್ಕೆ ಯಾವುದೇ ಸ್ಪಷ್ಟವಾದ ನಿಲವುಗಳಿಲ್ಲ. ನಮ್ಮ ಬಗ್ಗೆ ಹಗುರವಾಗಿ ಮಾತನಾಡಲು ಆ ಪಕ್ಷಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ಕಳೆದ 17 ವಿಧಾನ ಸಭಾ ಉಪಚುನಾವಣೆಗಳಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ ಜಯ ಸಾ ಸಿದೆ. ನಾಲ್ಕು ಶಿಕ್ಷಕರ ಮತಕ್ಷೇತ್ರಗಳಲ್ಲೂ ನಾವು ಗೆದ್ದಿದ್ದೇವೆ. ಈಗ ನಡೆಯುತ್ತಿರುವ ಮಸ್ಕಿ ಮತ್ತು ಬಸವ ಕಲ್ಯಾಣ ಉಪಉಪಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸುಮಾರು 25 ಸಾವಿರ ಮತಗಳಿಂದ ಆಯ್ಕೆಯಾಗಲಿದ್ದಾರೆ. ಅಲ್ಲದೇ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಂಗಲಾ ಅಂಗಡಿ ಅವರು 3 ಲಕ್ಷಕ್ಕೂ ಅಧಿ ಕ ಮತಗಳಿಂದ ಆಯ್ಕೆಯಾಗಲಿದ್ದಾರೆಂದು ತಿಳಿಸಿದರು.

ಶಾಸಕ ಹಾಗೂ ಕೆ.ಎಮ್‌. ಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಇನ್ನೊಬ್ಬರ ಕಣ್ಣೀರು ಒರೆಸುವುದಕ್ಕೆ ರಾಜಕೀಯಕ್ಕೆ ಬನ್ನಿ. ಯಾವುದೇ ಆಸ್ತಿ-ಪಾಸ್ತಿ ಮಾಡಲಿಕ್ಕೆ ಅಲ್ಲವೆಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಂದೇಶ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿ ಪರ ಶ್ರಮಿಸುತ್ತೇನೆ. ಪಕ್ಷಕ್ಕೆ ಎಂದಿಗೂ ಮೋಸ ಮಾಡುವದಿಲ್ಲವೆಂದು ಹೇಳಿದರು. ಭಾರತ ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಸುರಕ್ಷಿತವಾಗಿದೆ. ಇಡೀ ವಿಶ್ವವೇ ನಮ್ಮ ದೇಶವನ್ನು ಶ್ಲಾಘಿಸುತ್ತಿದೆ. ಅದರಂತೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರು ಸ್ವತಃ ನಮ್ಮ ಕ್ಷೇತ್ರಕ್ಕೆ ಬಂದು ಮತ ಯಾಚಿಸುತ್ತಿದ್ದಾರೆ. ಅವರಿಗೆ ಗೌರವ ನೀಡಿ ಹಿಂದಿನ ಮುನ್ನಡೆ ಮತಗಳಿಗಿಂತ ಒಟ್ಟಾರೆ 65 ಸಾವಿರ ಮತಗಳ ಮುನ್ನಡೆಯನ್ನು ಬಿಜೆಪಿ ಅಭ್ಯರ್ಥಿಗೆ ದೊರಕಿಸೋಣ. ಮಂಗಲಾ ಅವರು ಚುನಾವಣೆಯಲ್ಲಿ ಗೆಲ್ಲುವದು ನಿಶ್ಚಿತವೆಂದು ಹೇಳಿದರು.

Advertisement

ಸಹೋದರಿ ಮಂಗಲಾ ಅಂಗಡಿಯವರ ಅಣ್ಣನಾಗಿ ಕ್ಷೇತ್ರದಲ್ಲಿ ಅವರ ಗೆಲುವಿಗೆ ಶ್ರಮಿಸುತ್ತಿದ್ದೇನೆ. ವ್ಯಕ್ತಿಯ ವಿರುದ್ಧ ನಮ್ಮ ಹೋರಾಟವಲ್ಲ. ಕಳೆದ 56 ವರ್ಷಗಳಿಂದ ದೇಶವನ್ನು ಹಾಳು ಮಾಡಿದ ಕಾಂಗ್ರೆಸ್‌ ಪಕ್ಷದ ವಿರುದ್ಧ ತಮ್ಮ ಹೋರಾಟವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಸಂಸದರಾದ ಈರಣ್ಣ ಕಡಾಡಿ ಹಾಗೂ ಎ ನಾರಾಯಣಸ್ವಾಮಿ ಅವರು ಮಂಗಲಾ ಅಂಗಡಿ ಪರ ಮತಯಾಚಿಸಿದರು. ವೇದಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ, ಸಚಿವರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ, ಮುರಗೇಶ ನಿರಾಣಿ, ಮಾಜಿ ಸಂಸದ ಅಮರಸಿಂಹ ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ, ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹದೇವ ಶೆಕ್ಕಿ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಜಿಪಂ ಸದಸ್ಯರಾದ ವಾಸಂತಿ ತೇರದಾಳ, ಗೋವಿಂದ ಕೊಪ್ಪದ, ಪುರಸಭೆ ಸದಸ್ಯರು, ಪದಾಧಿ ಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next