Advertisement

ಮೋಡ ಕವಿದ ಮತದಾನ!

11:45 AM Jun 12, 2018 | |

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಮತದಾನ ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಶೇ.55 ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದಾರೆ.ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ನಡುವೆ ಪೊಲೀಸ್‌, ಅರೆ ಸೇನಾಪಡೆ ಭದ್ರತೆಯಲ್ಲಿ ಟ್ಟು ಮತದಾರರ ಪೈಕಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಮಂದಿ ಹಕ್ಕು ಚಲಾಯಿಸಿದರು. ಜಯನಗರ 4ನೇ “ಟಿ’ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಬುಧವಾರ ಮತ ಎಣಿಕೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ.

Advertisement

ಸೋಮವಾರ ಬೆಳಗ್ಗೆ 7 ಗಂಟೆಗೆ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲೂ ಮತದಾನ ಆರಂಭವಾಯಿತು. ತುಂತುರು ಮಳೆ ನಡುವೆಯೇ ಹಲವೆಡೆ ಆರಂಭದಲ್ಲಿ ಮತದಾನ ಚುರುಕಾಗಿ ನಡೆಯಿತು. ಮೊದಲ ಎರಡು ಗಂಟೆಯಲ್ಲಿ ಶೇ.10 ಹಾಗೂ ನಂತರ ಬೆಳಗ್ಗೆ 11ರ ವೇಳೆಗೆ ಶೇ.22ರಷ್ಟು ಮತದಾನವಾಗಿತ್ತು. ಹಾಗಾಗಿ ಸಂಜೆ 6 ಗಂಟೆ ಹೊತ್ತಿಗೆ ಶೇ.65ರಷ್ಟು ಮತದಾನವಾಗಬಹುದು ಎಂಬ ನಿರೀಕ್ಷೆ ಹುಸಿಯಾಯಿತು.

ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಚುರುಕಾಗಿ ನಡೆದ ಮತದಾನ, ಮಧ್ಯಾಹ್ನದ ನಂತರ ಮಂದಗತಿಗೆ ಇಳಿಯಿತು. ಬೆಳಗ್ಗೆ 9ರಿಂದ 11ರವರೆಗೆ ಶೇ.12, ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಶೇ.12ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1ರಿಂದ 3ರವರೆಗೆ ಶೇ.8, ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಶೇ.9ರಷ್ಟು ಹಾಗೂ ಸಂಜೆ 5ರಿಂದ 6ರವರೆಗೆ ಶೇ.4ರಷ್ಟು ಮತದಾನವಾಗಿದ್ದರಿಂದ ಒಟ್ಟಾರೆ ಮತದಾನ ಶೇ.55ಕ್ಕೆ ಸೀಮಿತವಾಯಿತು.

ಸಾರಕ್ಕಿ, ಜೆ.ಪಿ.ನಗರ, ಜಯನಗರ 9ನೇ ಬ್ಲಾಕ್‌, ಜಯನಗರ ಪೂರ್ವ, ಗುರಪ್ಪನಪಾಳ್ಯ, ಬೈರಸಂದ್ರದ ಬಹುತೇಕ ಮತಗಟ್ಟೆಗಳ ಬಳಿ ಮತದಾರರು ಸಾಲಿನಲ್ಲಿ ನಿಂತು ಮತದಾನ ಮಾಡಿದ ದೃಶ್ಯ ಕಂಡುಬಂತು. ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತದಾರರನ್ನು ಸೆಳೆಯಲು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದರು.

ಸಾರಕ್ಕಿಯ ಸರ್ಕಾರಿ ಪ್ರೌಢಶಾಲೆಯ ನಾಲ್ಕು ಮತಗಟ್ಟೆಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಭೇಟಿ ನೀಡಿದಾಗ ಅವರೊಂದಿಗೆ ಇಬ್ಬರು ಬೆಂಬಲಿಗರು ಮತಗಟ್ಟೆ ಪ್ರವೇಶಿಸಲು ಅರೆಸೇನಾ ಪಡೆ ಸಿಬ್ಬಂದಿ ಆಕ್ಷೇಪಿಸಿದರು. ಬಳಿಕ ಸೌಮ್ಯಾ ರೆಡ್ಡಿ ಒಬ್ಬರೇ ಮತಗಟ್ಟೆಗಳ ವೀಕ್ಷಿಸಿ ತೆರಳಿದರು. ಕೆಲವೆಡೆ ಮತಗಟ್ಟೆಯೊಳಗೆ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದವರನ್ನು ಪೊಲೀಸರು ಹೊರಗೆ ಕಳುಹಿಸಿದ ಪ್ರಸಂಗ ಕೂಡ ನಡೆಯಿತು.

Advertisement

ಗಣ್ಯರಿಂದ ಮತದಾನ: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಇನ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ಎನ್‌.ಆರ್‌.ನಾರಾಯಣಮೂರ್ತಿ, ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಟಿ ಮೇಘನಾ ರಾಜ್‌, ತಾರಾ ದಂಪತಿ, ಸುಂದರ್‌ರಾಜ್‌, ಪ್ರಮೀಳಾ ಜೋಷಾಯಿ ಇತರರು ಹಕ್ಕು ಚಲಾಯಿಸಿದರು.

“ಮುಖ್ಯಮಂತ್ರಿ’ ಬೇಸರ: ಜೆ.ಪಿ.ನಗರ 4ನೇ ಘಟ್ಟದ ಕ್ಲಾರೆನ್ಸ್‌ ಪಬ್ಲಿಕ್‌ ಸ್ಕೂಲ್‌ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ಕೆಲ ಹೊತ್ತು ಮತದಾರರು ಕಾಯಬೇಕಾಯಿತು. ಇದೇ ಸಂದರ್ಭದಲ್ಲಿ ಹಕ್ಕು ಚಲಾಯಿಸಲು ಆಗಮಿಸಿದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ವಿಷಯ ತಿಳಿದು ಸ್ವಲ್ಪ ಹೊತ್ತು ಕಾದರು. ತುಂಬ ಹೊತ್ತು ಕಳೆದರೂ ದೋಷ ನಿವಾರಣೆಯಾಗದಿದ್ದಾಗ ಬೇಸರಗೊಂಡ ಅವರು, ತ್ವರಿತವಾಗಿ ಯಂತ್ರ ಸರಿಪಡಿಸುವಂತೆ ತಾಕೀತು ಮಾಡಿದರು. ಬಳಿಕ ದೋಷ ಸರಿಪಡಿಸಿದ ಸಿಬ್ಬಂದಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ವಿಕಲಚೇತನರ ಪರದಾಟ: ಕ್ಷೇತ್ರದ ಬಹುಪಾಲು ಮತಗಟ್ಟೆಗಳಲ್ಲಿ ವಿಕಲಚೇತನರ ಅನುಕೂಲಕ್ಕೆ ಗಾಲಿ ಕುರ್ಚಿ ಇರಲಿಲ್ಲ. ಸಾರಕ್ಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಲಿಕುರ್ಚಿ ಇಲ್ಲದ ಕಾರಣ ವಿಕಲಚೇತನರೊಬ್ಬರು ಮೊಣಕಾಲು ಊರುತ್ತಲೇ ಬಂದು ಮತದಾನ ಮಾಡಿದರು. ನಂತರ ಹೊರಬಂದಾಗ ಮತಗಟ್ಟೆಗೆ ಕರೆತಂದ ಆಟೋರಿಕ್ಷಾ ಕಾಣದೇ ಕಂಗಾಲಾಗಿದ್ದರು. ಹಲವು ಮತಗಟ್ಟೆಗಳಲ್ಲಿ ಇದೇ ರೀತಿ ಪೂರಕ ವ್ಯವಸ್ಥೆಗಳಿಲ್ಲದೆ ವಿಕಲಚೇತನರು ಕಷ್ಟಪಟ್ಟು ಮತದಾನ ಮಾಡುವಂತಾಯಿತು.

ಮಾಜಿ ಸಚಿವರ ವಿರುದ್ಧ ದೂರು: ಕ್ಷೇತ್ರದ ಮತದಾರರಲ್ಲದ ರಾಜಕೀಯ ಮುಖಂಡರು ಮತದಾನ ಮುಗಿಯುವ 48 ಗಂಟೆ ಮೊದಲು ಕ್ಷೇತ್ರದಿಂದ ಹೊರಹೋಗಬೇಕು ಎಂಬ ನಿಯಮವಿದೆ. ಆದರೆ ಜಯನಗರ ಕ್ಷೇತ್ರದ ಮತದಾರರಲ್ಲದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಹಲವು ಮತಗಟ್ಟೆಗೆ ಭೇಟಿ ನೀಡುವ ಮೂಲಕ ನಿಯಮ ಉಲ್ಲಂ ಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ರಾಮಲಿಂಗಾರೆಡ್ಡಿ ಅವರು ಜಯನಗರ ಕ್ಷೇತ್ರದ ಮತದಾರರಲ್ಲ. ಆದರೂ ಕ್ಷೇತ್ರದ ಹಲವೆಡೆ ಸಂಚರಿಸಿ ಮತಗಟ್ಟೆಗಳಿಗೂ ಭೇಟಿ ನೀಡಿದ್ದಾರೆ. ಜವಾಬ್ದಾರಿಯುತ ಸಚಿವ ಸ್ಥಾನಗಳನ್ನು ನಿಭಾಯಿಸಿದ ಅನುಭವವಿರುವ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರು ಕಾನೂನಿನ ಅರಿವಿದ್ದರೂ ನಿಯಮ ಉಲ್ಲಂ ಸಿದ್ದಾರೆ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಅವರು ಜಯನಗರ ಕ್ಷೇತ್ರ ಚುನಾವಣಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅವರ ಉಪಸ್ಥಿತಿಯು ಸಹಜವಾಗಿಯೇ ಚುನಾವಣಾ ಕಾರ್ಯ ನಿರತ ಅಧಿಕಾರಿ, ಸಿಬ್ಬಂದಿ ಮೇಲೆ ಪ್ರಭಾವ ಬೀರುತ್ತದೆ. ಕೂಡಲೇ ಅವರ ವಾಹನ ಜಪ್ತಿ ಮಾಡಿ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮತದಾನ ಪ್ರಮಾಣ ಇಳಿಕೆ: 2013ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಶೇ.55.93ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಶೇ.55ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಶೇ. 0.93ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.

ಮತದಾನದ ಟೈಮ್‌ಲೈನ್‌
ಬೆಳಗ್ಗೆ 9    ಶೇ.10
ಬೆಳಗ್ಗೆ 11    ಶೇ. 22.2
ಮಧ್ಯಾಹ್ನ 1    ಶೇ. 34.05
ಮಧ್ಯಾಹ್ನ 3    ಶೇ. 42.6
ಸಂಜೆ 5    ಶೇ. 51
ಸಂಜೆ 6    ಶೇ. 55

* 1.11,689 ಒಟ್ಟಾರೆ ಮತದಾನ ಮಾಡಿದವರು
* 56,865 ಹಕ್ಕು ಚಲಾಯಿಸಿದ ಪುರುಷರು
* 54,824 ಮಹಿಳೆಯರಿಂದ ಮತದಾನ

Advertisement

Udayavani is now on Telegram. Click here to join our channel and stay updated with the latest news.

Next