Advertisement

ಶಾಲೆ ಆರಂಭದ ಗೊಂದಲ ನಿವಾರಿಸಿ: ಶಾಸಕ ಖಾದರ್‌

11:57 PM Sep 29, 2020 | mahesh |

ಮಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಸರಕಾರವು ಸ್ಪಷ್ಟ ನಿರ್ಧಾರ ತೆಗೆದುಕೊಂಡು ಪೋಷಕರಲ್ಲಿ ಉಂಟಾಗುತ್ತಿರುವ ಗೊಂದಲ ನಿವಾರಿಸಬೇಕು ಎಂದು ಶಾಸಕ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಸರಕಾರದ ಅಸ್ಪಷ್ಟ ನಿಲುವಿನಿಂದಾಗಿ ವಿದ್ಯಾರ್ಥಿಗಳು, ಹೆತ್ತವರು, ಶಾಲಾಡಳಿತ ಮಂಡಳಿಯವರಲ್ಲಿ ಗೊಂದಲ, ಆತಂಕ ಮೂಡಿದೆ. ಕೊರೊನಾ ಹೆಚ್ಚುತ್ತಿದೆ. ಶಿಕ್ಷಣದಷ್ಟೇ ಮಕ್ಕಳ ಆರೋಗ್ಯವೂ ಮುಖ್ಯ. ಸರಕಾರದ ಬಳಿ ವರದಿಗಳಿರುತ್ತವೆ. ಆ ವರದಿಯನ್ನು ಗಮನಿಸಿ ಶಾಲಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಗ ಳಿಗೆ ಬೋರ್ಡ್‌ ಪರೀಕ್ಷೆ ಇರುವುದರಿಂದ ಆ ಎರಡು ತರತಿಗಳಿಗೆ ಮಾತ್ರ ತರಗತಿ ಮಾಡಲಾಗುತ್ತದೆಯೇ ಎಂಬುದನ್ನು ಕೂಡ ಸ್ಪಷ್ಟಪಡಿಸಬೇಕು. ಸದ್ಯ ಕೆಲವು ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳು ನಡೆಯುತ್ತಿಲ್ಲ. ಶಾಲೆ ಪುನರಾರಂಭದ ಬಗ್ಗೆ ಸರಕಾರ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ. ಅದರ ಬದಲು ಶಾಸಕರಿಗೆ ಪತ್ರ ಬರೆದು ಅಭಿಪ್ರಾಯವನ್ನು ಪಡೆದುಕೊಳ್ಳಲು ಮುಂದಾಗಿದೆ. ಇದು ಸರಿಯಲ್ಲ ಎಂದರು.

ರೈತ, ಗ್ರಾಹಕ ವಿರೋಧಿ ಕಾಯಿದೆ
ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ರೈತರು ಮಾತ್ರವಲ್ಲದೆ ಗ್ರಾಹಕರಿಗೂ ತೊಂದರೆಯಾಗಲಿದೆ. ಇದು ರೈತ ಸ್ನೇಹಿ ಕಾಯಿದೆ
ಯಲ್ಲ, ವ್ಯಾಪಾರಿ ಸ್ನೇಹಿ ಕಾಯಿದೆ. ರೈತರಿಗೆ ವ್ಯಾಪಾರಿಗಳಿಂದ ಆಗುವ ಶೋಷಣೆ ತಪ್ಪಿಸುವುದ ಕ್ಕಾಗಿ ಎಪಿಎಂಸಿ ಗಳನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಆದರೆ ಈಗ ಕಾಯಿದೆಗೆ ತಿದ್ದುಪಡಿ ಮಾಡುವುದರಿಂದ ವ್ಯಾಪಾರಿ ಗಳು ಮತ್ತೆ ರೈತರನ್ನು ಶೋಷಣೆ ಮಾಡಲು ಅವಕಾಶ ನೀಡಿದಂತಾಗಿದೆ. ಉತ್ಪನ್ನಗಳ ಬೆಲೆ ಕೂಡ ಹೆಚ್ಚಳವಾಗಿ ಗ್ರಾಹಕರಿಗೆ ತೊಂದರೆಯಾಗಲಿದೆ. ಇದರಿಂದ ವ್ಯಾಪಾರಿಗಳಿಗೆ ಮಾತ್ರ ಲಾಭವಾಗಲಿದೆ ಎಂದು ಖಾದರ್‌ ಹೇಳಿದರು.

ಉಳ್ಳವನೇ ಒಡೆಯ
ಉಳುವವನೇ ಹೊಲದ ಒಡೆಯ ಆಗಬೇಕೆಂಬ ಉದ್ದೇಶದಿಂದ ಭೂ ಸುಧಾರಣೆ ಕಾಯಿದೆ ಜಾರಿಗೆತರಲಾಗಿತ್ತು. ಆದರೆ ಈಗ ಜಾರಿಗೆ ತರುತ್ತಿರುವ ಭೂ ಸುಧಾರಣೆ ಕಾಯಿದೆಯಿಂದಾಗಿ ಉಳ್ಳವರು (ಶ್ರೀಮಂತರು) ಹೊಲದ ಒಡೆಯರಾಗಲಿದ್ದಾರೆ. ಕೆಲವೇ ಮಂದಿಗೆ ಅನುಕೂಲ ಮಾಡಿಕೊಡಲು ಕೇಂದ್ರ, ರಾಜ್ಯ ಸರಕಾರಗಳು ಕೃಷಿ ಕಾಯಿದೆಗಳನ್ನು ಜಾರಿಗೆ ತರುತ್ತಿವೆ ಎಂದು ಖಾದರ್‌ ದೂರಿದರು. ಜಿ.ಪಂ. ಸದಸ್ಯೆ ಮಮತಾ ಗಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next