ಹೊಸಪೇಟೆ: ವಿಶ್ವ ಪರಿಸರ ದಿನದ ಅಂಗವಾಗಿ ಸ್ವಚ್ಛತಾ ಮತ್ತು ಹಸಿರೀಕರಣ ಅಭಿಯಾನದ ನಿಮಿತ್ತ ಹೊಸಪೇಟೆಯ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಗುರುವಾರ ತುಂಗಭದ್ರಾ ನದಿಯ ಹಿನ್ನೀರಿನ ಪ್ರದೇಶ ಗುಂಡಾ ಟ್ರೀ ಪಾರ್ಕ್ ಹತ್ತಿರ ರೋಟರಿ ಕ್ಲಬ್ನ ಹಾಗೂ ಗ್ರೀನ್ ಹೊಸಪೇಟೆ ಸಂಘಟನೆಗಳ ಸಹಯೋಗದೊಂದಿಗೆ ತುಂಗಭದ್ರಾ ನದಿಯ ಹಿನ್ನೀರಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಗುಂಡಾ ಸಸ್ಯೋದ್ಯಾನವನದಲ್ಲಿ ಗಿಡಗಳನ್ನು ನೆಡುವ ಮೂಲಕ ಗುಂಡಾ ಹಸಿರೀಕರಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನದಿ ತೀರದಲ್ಲಿ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಲೇವಾರಿ ಮಾಡಲಾಯಿತು.
ಹೊಸಪೇಟೆಯ ಪ್ರಾದೇಶಿಕ ವಲಯ ಅರಣ್ಯಾಕಾರಿ ಕೆ.ಸಿ.ವಿನಯ್ ಮಾತನಾಡಿ, ಜೂ.2ರಿಂದ ಈ ಅಭಿಯಾನ ಆರಂಭವಾಗಿದ್ದು ಜೂ.7ರವರೆಗೆ ನಡೆಯಲಿದೆ. ಜೂ.3ರಂದು ಜೋಳದರಾಶಿಗುಡ್ಡ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಜೂ.4ರಂದು ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮ, ಜೂ.5ರಂದು ನಗರದ ವಿವಿಧ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮ, ಜೂ.6ರಂದು ಜಂಬುನಾಥ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಹಾಗೂ ಗಿಡ ನೆಡುವ ಕಾರ್ಯಕ್ರಮ, ಜೂ.7ರಂದು ಹೊಸಪೇಟೆ ವ್ಯಾಪ್ತಿಯ ವಿವಿಧ ಬೋಳುಗುಡ್ಡ ಪ್ರದೇಶಗಳಲ್ಲಿ ಗಿಡ ನೆಡುವ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Related Articles
ಸಾರ್ವಜನಿಕರು ಮತ್ತು ಸ್ವಯಂಸೇವಕರಾಗಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಹೊಸಪೇಟೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ ಜಿ, ಹೊಸಪೇಟೆ ಹಾಗೂ ದರೋಜಿ ಅರಣ್ಯ ಸಿಬ್ಬಂದಿ, ರೋಟರಿ ಕ್ಲಬ್ ನ ಸದಸ್ಯರು ಹಾಗೂ ಗ್ರೀನ್ ಹೊಸಪೇಟೆ ಸದಸ್ಯರು ಇನ್ನಿತರರಿದ್ದರು.