Advertisement

ಸ್ವಚ್ಛ ರೈಲು ನಿಲ್ದಾಣ; ಇಲಾಖೆಯಿಂದ ಸ್ವಚ್ಛತೆ, ಜನರಿಗಿಲ್ಲ ಬದ್ಧತೆ

10:00 AM Oct 13, 2019 | Sriram |

ಭಾರತೀಯ ರೈಲ್ವೇ ಇಲಾಖೆ ಸ್ವತ್ಛತಾ ಹೀ ಸೇವಾ ಅಭಿಯಾನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ನಿಲ್ದಾಣಗಳನ್ನೂ ಸ್ವಚ್ಛ ಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್‌ ಮುಕ್ತಗೊಳಿಸಲಾಗುತ್ತಿದೆ. ಯಾವುದೇ ನಿಲ್ದಾಣಗಳು ತೀರಾ ಕಳಪೆ ಇಲ್ಲ. ಸ್ವಚ್ಛತೆಯ ಕೊರತೆ ಸ್ವಲ್ಪ ಇದ್ದರೂ ಅದನ್ನು ಪೂರ್ಣವಾಗಿ ಇಲಾಖೆಯ ಬೇಜವಾಬ್ದಾರಿ ಎನ್ನುವಂತಿಲ್ಲ. ಕುಂದಾಪುರ, ಬಿಜೂರು, ಸೇನಾಪುರ, ಬೈಂದೂರು, ಶಿರೂರು ನಿಲ್ದಾಣಗಳ ಸ್ಥಿತಿಗತಿ ಹೇಗಿದೆ, ನಿಲ್ದಾಣ ಹಳಿಗಳಲ್ಲಿ ಸ್ವಚ್ಛತೆ ಇದೆಯೇ, ಸ್ವಚ್ಛ ಕುಡಿಯುವ ನೀರು ಇದೆಯೇ, ಕಸದ ಬುಟ್ಟಿಗಳನ್ನು ಇಡಲಾಗಿದೆಯೇ, ಶೌಚಾಲಯ ವ್ಯವಸ್ಥೆ ಸರಿಯಿದೆಯೇ ಎಂಬ ಸಾಮಾನ್ಯ ಅಂಶಗಳನ್ನು ಇಟ್ಟುಕೊಂಡು “ಉದಯವಾಣಿ’ ತಂಡ ನಡೆಸಿದ ಸಾಕ್ಷಾತ್‌ ಚಿತ್ರಣ ಇಲ್ಲಿದೆ.

Advertisement

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಕುಂದಾಪುರ, ಬಿಜೂರು, ಸೇನಾಪುರ, ಬೈಂದೂರು, ಶಿರೂರು ಎಂಬಲ್ಲಿ ರೈಲು ನಿಲ್ದಾಣಗಳಿವೆ. ರೈಲ್ವೇ ಇಲಾಖೆ ವತಿಯಿಂದ ಸ್ವಚ್ಛತಾ ಪಕ್ಷ ಆಚರಿಸಿ ಸ್ವತ್ಛತಾ ಹೀ ಸೇವಾ ಅಭಿಯಾನ ನಡೆಸಿ ಸ್ವಚ್ಛ ರೈಲ್ವೇ ಕಾರ್ಯಕ್ರಮ ರೂಪಿಸಿದೆ. ಸೆ. 11ರಿಂದ ಅ.2ರ ವರೆಗೆ ಈ ಅಭಿಯಾನ ನಡೆದಿದ್ದು ಇನ್ನು ಪ್ರತೀ ತಿಂಗಳು ಮುಂದುವರಿಯಲಿದೆ. ನಿತ್ಯದ ಸ್ವಚ್ಛತೆ ಕೆಲಸ ಅಲ್ಲದೇ ಇಲಾಖೆ ಅಧಿಕಾರಿಗಳು, ಸಿಬಂದಿ ಒಟ್ಟಾಗಿ ಸ್ವಚ್ಛತಾ ಕೆಲಸ ಮಾಡಲಿದ್ದಾರೆ. ಆದರೆ ಇಲಾಖೆ ಎಷ್ಟೇ ಸ್ವಚ್ಛತೆ ಮಾಡಿದರೂ ಪ್ರಯಾಣಿಕರ ಸಹಕಾರ ಇಲ್ಲದಿದ್ದರೆ ಸ್ವಚ್ಛತೆ ಅಸಾಧ್ಯ. ಪ್ಲಾಸ್ಟಿಕ್‌ ಮುಕ್ತ ರೈಲ್ವೇ ವಾತಾವರಣ ನಿರ್ಮಾಣವೂ ಮಾಡುವ ಇರಾದೆ ಹೊಂದಿದ್ದು ಇದಕ್ಕಾಗಿ ಎಲ್ಲ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಹುಡಿ ಮಾಡುವ ಯಂತ್ರಗಳನ್ನು ಸ್ಥಾಪಿಸಲಿದೆ. ಕೊಂಕಣ ರೈಲ್ವೇ ವತಿಯಿಂದ ಉಡುಪಿಯಲ್ಲಿ ಈ ಯಂತ್ರ ಬರಲಿದ್ದು ಬೈಂದೂರು ಹಾಗೂ ಕುಂದಾಪುರ ನಿಲ್ದಾಣಕ್ಕೆ ಇಂತಹ ಯಂತ್ರದ ಅಗತ್ಯವಿದೆ. ಸಂಸದರ ನಿಧಿಯಿಂದಾದರೂ ಇದರ ಅಳವಡಿಕೆ ತುರ್ತಾಗಿ ಆಗಬೇಕಿದೆ.

ಪ್ಲಾಸ್ಟಿಕ್‌ ಬಳಕೆಗೆ ದಂಡ
ಭಾರತೀಯ ರೈಲ್ವೇ ಪ್ಲಾಸ್ಟಿಕ್‌ ಮುಕ್ತ ವಾತಾವರಣ ನಿರ್ಮಿಸಲುದ್ದೇಶಿಸಿದ್ದು ಮರುಬಳಕೆ ಅಸಾಧ್ಯವಾದ ಪ್ಲಾಸ್ಟಿಕ್‌ನ್ನು ರೈಲು ಹಾಗೂ ನಿಲ್ದಾಣಗಳಲ್ಲಿ ಬಳಸುವಂತಿಲ್ಲ. ತಿಂಡಿ ಪ್ಯಾಕೆಟ್‌ ಸಹಿತ ಇಂತಹ ಪ್ಲಾಸ್ಟಿಕ್‌ನ್ನು ನಿಷೇಧಿಸಲಾಗಿದೆ. ಪ್ರಯಾಣಿಕರು ಕೂಡಾ ಬಳಸುವಂತಿಲ್ಲ ಎಂಬ ಕಾನೂನು ಇದ್ದು ಬಳಸಿದರೆ ಇಲಾಖೆ ದಂಡ ವಿಧಿಸಲಿದೆ. ಈ ಕುರಿತು ಈಗಾಗಲೇ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅದೇ ರೀತಿ ಕಸ ಹಾಕಲು ಪ್ರತ್ಯೇಕಿಸುವಂತಹ‌ ಕಸದ ಬುಟ್ಟಿಗಳನ್ನು ಇಡಲಿದೆ.

ಪ್ರಯಾಣಿಕರ
ಸಹಕಾರ ಬೇಕಿದೆ
ಇಲಾಖೆ ವತಿಯಿಂದ ಎಲ್ಲ ನಿಲ್ದಾಣಗಳಲ್ಲೂ ಸ್ವಚ್ಛತಾ ಕಾರ್ಯ ನಿರಂತರ ಮಾಡಲಾಗುತ್ತದೆ. ನಿತ್ಯದ ಸ್ವತ್ಛತೆ ಅಲ್ಲದೇ ಅಧಿಕಾರಿಗಳು, ಸಿಬಂದಿ ತಿಂಗಳಲ್ಲಿ ಎರಡು ಬಾರಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಿದ್ದಾರೆ. ಇದು ನಿರಂತರ ಅಭಿಯಾನವಾಗಿರಲಿದೆ. ಆದರೆ ಪ್ರಯಾಣಿಕರ ಸಹಕಾರ ತೀರಾ ಅಗತ್ಯ. ಸ್ವಚ್ಛತೆಗೆ ನಮ್ಮೊಂದಿಗೆ ಪ್ರಯಾಣಿಕರು ಸಹಕರಿಸಿದರೆ ನಮ್ಮ ಅಭಿಯಾನ ಯಶಸ್ವಿಯಾಗಲಿದೆ. ಜತೆಗೆ ಅನಗತ್ಯ ದಂಡ ಹಾಕಿಸಿಕೊಳ್ಳುವುದನ್ನೂ ತಪ್ಪಿಸಿಕೊಳ್ಳಬಹುದು.ಪ್ಲಾಸ್ಟಿಕ್‌, ಕಸ ಸೇರಿದಂತೆ ಎಲ್ಲದಕ್ಕೂ ಕಠಿನ ದಂಡ ವಿಧಿಸುವ ಕಾನೂನು ಇದೆ. ಈ ಕುರಿತು ಪ್ರಯಾಣಿಕರಿಗೆ ಜಾಗೃತಿ ಅವಶ್ಯ.
 -ಕೆ. ಸುಧಾ ಕೃಷ್ಣಮೂರ್ತಿ,
ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ
ಕೊಂಕಣ ರೈಲ್ವೇ ಮಂಗಳೂರು ವಿಭಾಗ

ಕುಂದಾಪುರ ರೈಲ್ವೇ ನಿಲ್ದಾಣದ ಸ್ವಚ್ಛತೆ: ಇನ್ನಷ್ಟು ಆಗಬೇಕಿದೆ
ಬಸ್ರೂರು: ಮೂಡ್ಲಕಟ್ಟೆಯಲ್ಲಿರುವ ಕುಂದಾಪುರ ರೈಲ್ವೇ ನಿಲ್ದಾಣಕ್ಕೆ ಕುಂದಾಪುರದಿಂದ 6 ಕಿ.ಮೀ. ದೂರವಿದೆ. ಕುಂದಾಪುರದಿಂದ ಬಸ್ರೂರು- ಕಂಡ್ಲೂರು ರಾಜ್ಯ ಹೆದ್ದಾರಿಯಲ್ಲಿ ಸಾಗುವ ಎಲ್ಲಾ ಬಸ್ಸುಗಳು ಮೂಡ್ಲಕಟ್ಟೆ ರೈಲ್ವೇ ನಿಲ್ದಾಣದವರೆಗೆ ಹೋಗುವುದಿಲ್ಲ. ಸಟ್ಟಾಡಿಯಲ್ಲಿ ತಂಗು ದಾಣದಲ್ಲೆ ಪ್ರಯಾಣಿಕರು ಇಳಿದು ನಡೆದು, ಬಾಡಿಗೆ ವಾಹನದಲ್ಲಿ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯ ಸ್ಥಿತಿಯಿದೆ.

Advertisement

ನಿಲ್ದಾಣದ ಒಳಗೆ ಹೋದರೆ ಆರಾಮವಾಗಿ ಪ್ರಯಾಣಿಕರು ಕುಳಿತುಕೊಳ್ಳಬಹುದಾದಷ್ಟು ಕಬ್ಬಿಣದ ಬೆಂಚುಗಳಿವೆ. ಎಲ್ಲೆಂದರಲ್ಲಿ ಕಸ ಬಿದ್ದಿರುವುದು ನಿಲ್ದಾಣದಲ್ಲಿ ಕಂಡು ಬಂದಿಲ್ಲ. ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇಡಲಾಗಿದೆ. ಆದರೆ ರೈಲ್ವೇ ಹಳಿಯ ಮೇಲೆ ಅಷ್ಟೊಂದು ಸ್ವತ್ಛತೆ ಕಂಡು ಬಂದಿಲ್ಲ.

ಸ್ವಚ್ಛ ನೀರು
ರೈಲ್ವೇ ನಿಲ್ದಾಣದಲ್ಲಿ ಒಂದೆಡೆ ಉಚಿತ ನೀರು ಸರಬರಾಜಾಗುತ್ತಿದ್ದರೆ ಇನ್ನೊಂದೆಡೆ
“ಜನಜಲ್‌’ ಯೋಜನೆಯಡಿ ಪರಿಶುದ್ಧ ನೀರನ್ನೂ ಒಂದು ಲೋಟಕ್ಕೆ ರೂ.2 ನ್ನು ಒಂದು ಲೀಟರಿಗೆ 5 ರೂ. ಗಳಂತೆ ಪಾವತಿ ನೀರು ದೊರೆಯುತ್ತಿದೆ.

ಶೌಚಾಲಯ
ಪ್ರಯಾಣಿಕರ ವಿಶ್ರಾಂತಿ ಕೊಠಡಿಯನ್ನು ಪ್ರವೇಶಿಸಿ ನೋಡಿದರೆ ಜಾಗ ವಿಶಾಲ ವಾಗಿದ್ದು ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ಶೌಚಾಲಯ ಒಂದೇ ಇರುವುದಾದರೂ ನಿಲ್ದಾಣದ ಉತ್ತರಭಾಗದಲ್ಲಿ ಪುರುಷ-ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಕಲ್ಪಿಸಲಾಗಿದೆ.

ವಿಶಾಲವಾದ ಪಾರ್ಕಿಂಗ್‌
ನಿಲ್ದಾಣದಲ್ಲಿ ಒಂದು ಅಂಗಡಿಯಿದ್ದು ಅಲ್ಲೇ ಕುಡಿಯಲು ಚಹಾ ಮತ್ತು ಕಾಫಿ ಹಾಗೂ ರೆಡಿಮೇಡ್‌ ತಿಂಡಿಗಳು ಸಿಗುತ್ತವೆ. ದಿನಪತ್ರಿಕೆಗಳು ಮತ್ತಿತರ ಬಳಕೆಯ ಸಾಮಗ್ರಿಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. ನಿಲ್ದಾಣದ ಹೊರಗಡೆ ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆಯಿದೆ. ಆಟೊರಿûಾ, ಕಾರುಗಳನ್ನು ಸರದಿಯ ಪ್ರಕಾರ ನಿಲ್ಲಿಸಿದ್ದರೆ ದ್ವಿಚಕ್ರ ವಾಹನಗಳು ಎಲ್ಲಿ ಬೇಕೆಂದರೆ ಅಲ್ಲಿ ನಿಲ್ಲಿಸುತ್ತಿರುವುದು ಕಂಡು ಬಂದಿದೆ. ಅಲ್ಲೂ ಸಾರ್ವಜನಿಕರು ಸ್ವಚ್ಛತೆಗೆ ಸಹಕರಿಸಬೇಕಾದ ಅನಿವಾರ್ಯ ಕಂಡು ಬಂತು.

ಲಗೇಜ್‌ ಇಡಲು ವ್ಯವಸ್ಥೆಯಿಲ್ಲ
ಪ್ರಯಾಣಿಕರು ತಮ್ಮ ಬಳಿ ತಂದ ಸೂಟ್‌ ಕೇಸ್‌, ಬ್ಯಾಗ್‌ಗಳನ್ನು ಒಯ್ಯುತ್ತಾರೆ ಬಿಟ್ಟರೆ ದೊಡ್ಡ ಗಾತ್ರದ ಲಗೇಜ್‌ಗಳನ್ನು ಇಡಲು ಸೂಕ್ತ ವ್ಯವಸ್ಥೆಗಳು ಇಲ್ಲಿ ಕಂಡು ಬಂದಿಲ್ಲ. ಎಲ್ಲೆಂದರಲ್ಲಿ ಲಗೇಜ್‌ಗಳು ಅನಾಥವಾಗಿ ಕಂಡು ಬರುತ್ತಿವೆ.

ಇಲಾಖೆಯಿಂದ ಮಾತ್ರವಲ್ಲದೇ ಬಸ್ರೂರು ನಿವೇದಿತಾ ಪ್ರೌಢಶಾಲಾ ವಿದ್ಯಾರ್ಥಿಗಳಿಂದ, ಬಸ್ರೂರು ಶಾರದಾ ಕಾಲೇಜಿನ ಎನ್ನೆಸ್ಸೆಸ್‌ ಘಟಕದ ವತಿ ಯಿಂದಲೂ ಸ್ವಚ್ಛತಾ ಕಾರ್ಯ ನಡೆದಿದೆ.

ಸೇನಾಪುರದಲ್ಲಿ ನಡೆಯಿತು ಸ್ವತ್ಛತೆ
ಕುಂದಾಪುರ: ಸೇನಾಪುರ ನಿಲ್ದಾಣದಲ್ಲಿ ಅಧಿಕಾರಿಗಳು ಸಿಬಂದಿ ಸೇರಿ ಸ್ವಚ್ಛತಾ ಪಕ್ಷ ಆಚರಿಸಿದರು. ನಿಲ್ದಾಣದ ಸ್ವಚ್ಛ ತೆಗೆ ಆದ್ಯತೆ ನೀಡಲಾಗಿದೆ. ಇಲ್ಲಿ ನಿಲುಗಡೆಯಾಗುವ ರೈಲುಗಳ ಸಂಖ್ಯೆ ಕಡಿಮೆಯಾದ ಕಾರಣ ಅಧಿಕ ಯಾತ್ರಿಗಳಿಂದ ತುಂಬಿರುವುದಿಲ್ಲ. ಆದ್ದರಿಂದ ಇಲ್ಲಿ ಸ್ವಚ್ಛತೆಗೆ ಹೆಚ್ಚಿನ ಧಕ್ಕೆ ಬರುವುದಿಲ್ಲ.

ಸಮಯ ಪಾಲನೆ ಆಗಬೇಕಿದೆ
ನಾನು ಪ್ರತಿವಾರ ಕುಂದಾಪುರದಿಂದ ಕುಮಟಾದವರೆಗೆ ಹೋಗಿ ಬರುತ್ತಿರುವ ಪ್ರಯಾಣಿಕ. ಬೆಳಗ್ಗೆ 8.30ಕ್ಕೆ ಬರಬೇಕಾದ ಕಾರವಾರ ಮಡಗಾಂವ್‌ ರೈಲು ಬರುವುದು ಬೆಳಗ್ಗೆ 10 ಗಂಟೆಯ ಅನಂತರ. ಬೈಂದೂರಿಗೆ ಹೋಗಬೇಕಾದರೆ ನಾಲ್ಕಾರು ಕಡೆ ನಿಂತು ಸಾಗುವ ಈ ಪ್ಯಾಸೆಂಜರ್‌ ರೈಲಲ್ಲಿ ಕುಮಟಾಕ್ಕೆ ತಲುಪಬೇಕಾದರೆ ಅಪರಾಹ್ನ 2 ಗಂಟೆ ದಾಟಿರುತ್ತದೆ. ರೈಲು ನಿಲ್ದಾಣಕ್ಕೂ ಬರುವ ಮತ್ತು ನಿರ್ಗಮಿಸುವ ವ್ಯವಸ್ಥೆ ಸರಿಯಿಲ್ಲ. ಕುಮಟಾ ಸೇರಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ. ಬಸ್ಸಿನಲ್ಲಾದರೆ 2 ಗಂಟೆಯಲ್ಲಿ ಕುಮಟಾ ತಲುಪಬಹುದಾಗಿದೆ. ಹಾಗಾಗಿ ಸ್ವಚ್ಛ ತೆಗೆ ಆದ್ಯತೆ ನೀಡದಿದ್ದರೆ ಕಷ್ಟ.
-ಎನ್‌.ಎಂ. ಗಾಂವ್ಕರ್‌,
ರೈಲ್ವೇ ಪ್ರಯಾಣಿಕ ಕುಂದಾಪುರ

ಮೂಲ ಸೌಕರ್ಯದ ಕೊರತೆ, ಅಭಿವೃದ್ಧಿ ಕಾಣಬೇಕಿದೆ
ಬೈಂದೂರು: ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣ ಕಳೆದ ಹಲವು ವರ್ಷಗಳ ಹೋರಾಟದ ಫಲವಾಗಿ ತಾಲೂಕಿನ ಬಹುದೊಡ್ಡ ನಿಲ್ದಾಣವಾಗಿ ಮಾರ್ಪಡುತ್ತಿದೆ. ಪ್ರತಿದಿನ 700-800 ಪ್ರಯಾಣಿಕರು ಕೇರಳ ಹಾಗೂ ಇತರ ಕಡೆಗಳಿಂದ ಬೈಂದೂರಿಗೆ ಆಗಮಿಸುತ್ತಾರೆ. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳವಾದ ಕೊಲ್ಲೂರಿಗೆ ತೆರಳುವ ಅಪಾರ ಸಂಖ್ಯೆಯ ಭಕ್ತರು ಬೈಂದೂರು ನಿಲ್ದಾಣದ ಮೂಲಕ ತೆರಳುತ್ತಾರೆ. ಸ್ವಚ್ಛ ತೆಗಿಂತ ಮುಖ್ಯವಾಗಿ ಕೊಲ್ಲೂರಿಗೆ ತೆರಳುವ ವಾಹನದ ಸಮಸ್ಯೆಯ ಇಲ್ಲಿನ ಜನರ ಪ್ರಮುಖ ಸಮಸ್ಯೆಯಾಗಿದೆ. ನಿಲ್ದಾಣದ ಮುತುವರ್ಜಿಯಲ್ಲಿ ಕೊಲ್ಲೂರಿಗೆ ತೆರಳುವ ಭಕ್ತರಿಗೆ ಕ್ಲಪ್ತ ಸಮಯದಲ್ಲಿ ಬಸ್‌ ಹಾಗೂ ಇತರ ವಾಹನಗಳ ಸೇವೆ ರಿಯಾಯಿತಿ ದರದಲ್ಲಿ ದೊರೆಯಬೇಕಿದೆ.

ಸ್ವಚ್ಛತೆ ವಿಚಾರದಲ್ಲಿ ಕಳೆದ ಒಂದು ತಿಂಗಳಿಂದ ಇಲಾಖೆ ವಿಶೇಷ ಆದ್ಯತೆ ನೀಡಿದೆ. ರೈಲ್ವೇ ನಿಲ್ದಾಣದ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ರೈಲ್ವೇ ಹಳಿಗಳು, ವರಾಂಡ, ಪಾರ್ಕಿಂಗ್‌ ಮುಂತಾದ ಕಡೆ ಅತ್ಯಂತ ಆದ್ಯತೆ ನೀಡಿ ಸ್ವಚ್ಛತೆ ಕಾಪಾಡಿಕೊಂಡಿದೆ. ಐದಕ್ಕೂ ಅಧಿಕ ಕಸದ ತೊಟ್ಟಿಗಳನ್ನು ಅಳವಡಿಸಿದೆ. ಮಾತ್ರವಲ್ಲದೆ ಕಳೆದೊಂದು ವಾರದಿಂದ ಪ್ರತಿದಿನ ಒಂದೊಂದು ಶಾಲೆ ಹಾಗೂ ಸಂಘ ಸಂಸ್ಥೆಯ ನೆರವಿನಿಂದ ಸ್ವಚ್ಛತೆಗಾಗಿ ಶ್ರಮದಾನ ನಡೆಯುತ್ತಿದೆ.

ಇನ್ನುಳಿದಂತೆ ಶಿರೂರು ರೈಲ್ವೇ ನಿಲ್ದಾಣದಲ್ಲಿ ಬೆಂಗಳೂರು ಡೆಮೋ ಹಾಗೂ ಲೋಕಲ್‌ ರೈಲುಗಳು ಮಾತ್ರ ನಿಲುಗಡೆಯಾಗುತ್ತವೆ. ಕಸದ ತೊಟ್ಟಿ ಅಳ ವಡಿಸಿದ್ದು ಸ್ವಚ್ಛ ತೆಗಾಗಿ ಅಧಿಕಾರಿಗಳು ವಿಶೇಷ ಆದ್ಯತೆ ನೀಡಿದ್ದಾರೆ. ಇಲ್ಲಿನ ನಿಲ್ದಾಣಗಳಿಗೆ ಸಂಪರ್ಕ ವ್ಯವಸ್ಥೆ ಹಾಗೂ ಹೆಚ್ಚುವರಿ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡಬೇಕಾಗಿದೆ.

ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಈಗಾಗಲೇ ನೀಲಿ ನಕಾಶೆ ಸಿದ್ಧಗೊಂಡಿದೆ.ಒಂದೊಮ್ಮೆ ಉದ್ದೇಶಿತ ಚಿಂತನೆಯಲ್ಲಿ ಅಭಿವೃದ್ದಿಗೊಂಡರೆ ಮಡಗಾಂವ್‌-ಮಂಗಳೂರು ಹೊರತುಪಡಿಸಿದರೆ ಅತಿ ದೊಡ್ಡ ರೈಲ್ವೇ ನಿಲ್ದಾಣ ಬೈಂದೂರಿನಲ್ಲಿ ಸ್ಥಾಪನೆಯಾಗಲಿದೆ. 18ಕ್ಕೂ ಅಧಿಕ ರೈಲುಗಳು ನಿಲುಗಡೆ ನೀಡುತ್ತಿದೆ. ರೈಲ್ವೇ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಯಿಂದ ಅನತಿ ದೂರದಲ್ಲಿದೆ. ಆದರೆ ಹೊಸ ಬಸ್‌ ನಿಲ್ದಾಣದ ಜಂಕ್ಷನ್‌ ದುರಸ್ತಿಯಾಗಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ಮಾತ್ರವಲ್ಲದೆ ರೈಲ್ವೇ ನಿಲ್ದಾಣದ ಎಡ ಪಾಶ್ವದಲ್ಲಿರುವ ಮರ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿ ಶೀಘ್ರ ಕಟ್ಟಡ ಕಾಮಗಾರಿ ಆರಂಭಿಸಬೇಕಾಗಿದೆ.

ಬಿಜೂರು ರೈಲ್ವೇ ನಿಲ್ದಾಣ ಸ್ವಚ್ಛವಾಗಿದೆ; ಆದರೆ…
ಉಪ್ಪುಂದ: ಎಲ್ಲಿಯ ವರೆಗೆ ನಮ್ಮ ಮನೆ, ಸಂಸ್ಥೆ, ಇಲಾಖೆ ಜತೆಗೆ ನಮ್ಮ ಪರಿಸರವೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವ ಚಿಂತನೆ ಮೊಳಕೆಯೊಡೆಯುವುದಿಲ್ಲವೊ ಅಲ್ಲಿಯವರೆಗೆ ಸ್ವಚ್ಛತೆಯ ಕನಸು ಪರಿಪೂರ್ಣಗೊಳ್ಳದು.

ತಮ್ಮ ಮನೆಯ ಕಸ-ತ್ಯಾಜ್ಯಗಳನ್ನು ಕಂಪೌಂಡ್‌ನ‌ ಆಚೆಗೋ, ರಸ್ತೆಯ ಬದಿಗೋ ಎಸೆಯುವ ಪ್ರವೃತ್ತಿಯಿಂದ ಇನ್ನೂ ಹೊರ ಬಾರದೆ ಇರುವುದು ದುರಂತವೇ ಸರಿ. ಇದಕ್ಕೆ ಬಿಜೂರು ರೈಲ್ವೇ ನಿಲ್ದಾಣ ಕೂಡಾ ಹೊರತಾಗಿಲ್ಲ. ಹೊರ ನೋಟಕ್ಕೆ ರೈಲ್ವೇ ನಿಲ್ದಾಣ ಸ್ವತ್ಛವಾಗಿದೆ.

ಪ್ಲಾಟ್‌ಫಾರಂನಲ್ಲಿ, ರೈಲ್ವೇ ಹಳಿಯ ಮೇಲೆ ಅಲ್ಲಲ್ಲಿ ಬಿದ್ದಿರುವ ಕಸಗಳನ್ನು ಸಿಬಂದಿ ತೆಗೆದು ಸ್ವಚ್ಛಗೊಳಿಸುತ್ತಾರೆ. ಆದರೆ ಇದನ್ನು ಹಾಕುವುದು ಮಾತ್ರ ಪ್ಲಾಟ್‌ ಫಾರಂನಲ್ಲಿ ಕುಳಿತುಕೊಳ್ಳಲು ಇಟ್ಟಿರುವ ಬೆಂಚುಗಳ ಹಿಂದೆ ಇರುವ ಗಾರ್ಡ್‌ಗಳ ( ಸಣ್ಣ ಗೋಡೆ) ಹಿಂದೆ ಇರುವ ಮರಗಳ, ಗಿಡ ಪೊದೆಗಳ ನಡುವೆ!.

ರೈಲ್ವೇ ನಿಲ್ದಾಣದ ಪ್ಲಾಟ್‌ ಫಾರಂನ ಎರಡು ಕಡೆಯ ಗೋಡೆಗಳ ಹಿಂದೆ ಪ್ಲಾಸ್ಟಿಕ್‌ ಬಾಟಲಿ, ತಿಂಡಿ-ತಿನಿಸುಗಳ (ಪ್ಲಾಸ್ಟಿಕ್‌)ಜರಿಗಳು ರಾಶಿ ಬಿದ್ದಿವೆ. ರೈಲ್ವೇ ನಿಲ್ದಾಣವನ್ನು ಪ್ಲಾಸ್ಟಿಕ್‌, ಕಸಗಳಿಂದ ಸ್ವಚ್ಛ ಮಾಡಿ ಸೂಕ್ತವಾಗಿ ವಿಲೇವಾರಿ ಮಾಡುವ ಗೋಜಿಗೆ ಹೋಗದೆ ಅದರ ಹಿಂದೆಯೇ ಎಸೆಯಲಾಗಿದೆ. ಇದು ರೈಲ್ವೇ ನಿಲ್ದಾಣದ ಸ್ವತ್ಛತೆಗೆ ತೋರಿದ ಅಸಡ್ಡೆ ಎನ್ನಬಹುದು.

ಬೇಡಿಕೆ
ಆರಂಭದಲ್ಲಿ ಪ್ರಮುಖ ರೈಲುಗಳ ನಿಲುಗಡೆಯಿಂದ ಹೆಸರು ಪಡೆದಿದ್ದ ನಿಲ್ದಾಣವು ಕೆಲವು ಜನರ ದೂರದೃಷ್ಟಿತ್ವದ ಕೊರತೆಯಿಂದಾಗಿ ದಿನಕಳೆದಂತೆ ಬೇಡಿಕೆಯನ್ನೆ ಕಳೆದುಕೊಂಡಿತು. ಇದಕ್ಕೆ ರಸ್ತೆ ಸಂಪರ್ಕ ಇಲ್ಲದಿರುವುದೂ ಕಾರಣವಾಗಿದೆ. ಉಪ್ಪುಂದದಿಂದ ನಾಯ್ಕನಕಟ್ಟೆ ಮೂಲಕ ಬರಲು ಸುಮಾರು 2 ಕಿ.ಮೀ. ಆಗುತ್ತದೆ. ರಿಕ್ಷಾದ ಬಾಡಿಗೆಯೂ ಹೆಚ್ಚಾಗಿರುತ್ತದೆ. ಬದಲಾಗಿ ಸುಮಾರು 900 ಮೀ. ಒಳಗೆ ಇರುವ ನಂದನವನ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಗೊಳಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ನದಿಗೆ ಪ್ಲಾಸ್ಟಿಕ್‌
ತಡೆಗೋಡೆಗಳ ಹಿಂದೆಯೇ ಮಳೆ ನೀರು ಹರಿಯುವ ತೋಡುಗಳಿವೆ. ಇದು ಕೃಷಿ ಗದ್ದೆಗಳ ಮೂಲಕ ನದಿಯನ್ನು ಸೇರುತ್ತದೆ. ಪ್ಲಾಸ್ಟಿಕ್‌, ಬಾಟಲಿ, ತಿಂಡಿ ತಿನಿಸುಗಳ ಜರಿಗಳು ತೋಡುಗಳಿಗೆ ಸೇರಿ ನದಿಗಳಿಗೆ ಹೋಗುತ್ತದೆ.ಇಲ್ಲಿ ಕ್ರಾಸ್‌ಗೆ ಇರುವುದರಿಂದ ಒಂದೇ ಕಡೆಯ ಪ್ಲಾಟ್‌ಫಾರಂನಿಂದ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಇನ್ನೊಂದು ಕಡೆಗೂ ಪ್ಲಾಟ್‌ ಫಾರಂ ನಿರ್ಮಿಸಬೇಕು ಎನ್ನುವ ಕೂಗು ಇದೆ.

ಮಾಹಿತಿ: ಲಕ್ಷ್ಮೀ ಮಚ್ಚಿನ, ಅರುಣ ಕುಮಾರ್‌ ಶಿರೂರು, ದಯಾನಂದ ಬಳ್ಕೂರು, ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next