ಮಾಗಡಿ: ಮಹಾತ್ಮ ಗಾಂಧೀಜಿ ಕಂಡ ಸ್ವಚ್ಛ ಪರಿಸರ, ಸುಂದರ ಗ್ರಾಮದ ಕನಸು ನನಸು ಮಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಇಕ್ರಂ ತಿಳಿಸಿದರು.
ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯ್ತಿ ವಾಪ್ತಿಯಲ್ಲಿ ಜಿಪಂ, ತಾಪಂ ಹಾಗೂ ಮತ್ತೀಕೆರೆ ಗ್ರಾಪಂ ಆಶ್ರಯದಲ್ಲಿ ಗೆಜ್ಜಾಗಾರಕುಪ್ಪೆ ಸಮೀಪ ಏರ್ಪಡಿಸಿದ್ದ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ ಯೋಜನೆ ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ 86 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಪ್ರಾರಂಭಿಸಲಾಗಿದ್ದು, ಹಸಿ, ಒಣ ಕಸ ಸಂಗ್ರಹಕ್ಕೆ ಪ್ರತಿ ಮನೆಗೂ 2 ಕಸದ ತೊಟ್ಟಿಗಳನ್ನು ನೀಡಲಾಗುವುದು. ಜನರು ಮನೆಯಲ್ಲಿ ಸಂಗ್ರಹವಾಗುವ ಒಣ, ಹಸಿ ಕಸ ಬೇರ್ಪಡಿಸಿ ಗ್ರಾಪಂ ನೀಡಿರುವ ಪ್ರತ್ಯೇಕ ತೊಟ್ಟಿಗೆ ಹಾಕಬೇಕು ಎಂದು ಸಲಹೆ ನೀಡಿದರು.
ಪಂಚಾಯ್ತಿಯಿಂದ ಬರುವ ಕಸದ ವಾಹನಕ್ಕೆ ಕಡ್ಡಾಯವಾಗಿ ಕಸ ಹಾಕಬೇಕು.ಈ ತ್ಯಾಜ್ಯವನ್ನು ಸಂಗ್ರಹಿಸಿ ಪುನರ್ಬಳಕೆಗೆ ಉಪಯೋಗಿಸಲಾಗುತ್ತದೆ. ಗ್ರಾಮಸ್ಥರು ಸ್ವಚ್ಛತೆ ಕಾಪಾಡಿಕೊಂಡು ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿಸಬೇಕು. ಗ್ರಾಮಪಂಚಾಯ್ತಿಗಳು ಜನರಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಪಿಡಿಒ ಕೃಷ್ಣಪ್ಪ ಮಾತನಾಡಿ, ನಾವು ವಾಸಿಸುವ ಸುತ್ತ ಮುತ್ತಲಿನ ಪರಿಸರ ಸ್ವತ್ಛವಾಗಿದ್ದರೆ, ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಕಸವನ್ನು ಎಲ್ಲೆಂದರಲ್ಲಿ ಹಾಕದೆ ವಿಂಗಡನೆ ಮಾಡಿ ಗ್ರಾಪಂ ವಾಹನಕ್ಕೆ ಹಾಕಬೇಕು. ಸ್ವಚ್ಛತ್ವಯೇ ನಮ್ಮ ಗುರಿಯಾಗಬೇಕು ಎಂದು ತಿಳಿಸಿದರು.
ಹಸಿ,ಒಣಕಸಸಂಗ್ರಹಣೆಗೆಗ್ರಾಮಪಂಚಾಯತಿಗೆ ವಾಹನ ನೀಡಲಾಯಿತು. ಗ್ರಾಪಂ ಸಿಬ್ಬಂದಿಮಹೇಶ್, ಯಲ್ಲಯ್ಯ, ಸೋಮಶೇಖರಯ್ಯ, ಸಿದ್ದಲಿಂಗಯ್ಯ ಮತ್ತು ಹನುಮಂತಯ್ಯ ಇವರಿಗೆ ಸಮವಸ್ತ್ರ ಮತ್ತು ಕೈಚೀಲ ನೀಡಲಾಯಿತು. ಸಿಇಒ ಸಸಿ ನೆಟ್ಟು ಜನರಲ್ಲಿ ಜಾಗೃತಿ ಮೂಡಿಸಿದರು. ಜಿಪಂ ಯೋಜನಾ ನಿರ್ದೇಶಕ ಬಸವರಾಜ್, ಎಸ್.ಬಿ.ಎಂ.ಶ್ರೀನಿವಾಸ್, ಗ್ರಾಪಂ ಕಾರ್ಯದರ್ಶಿಮಲ್ಲಾರಾದ್ಯ, ಸೀನಪ್ಪ, ಚಂದ್ರಪ್ರಭ, ಎನ್.ರವಿ, ಗ್ರಾಪಂ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.