Advertisement

ನೆರೆ ಸೂಚನೆಗೆ ನಗರ ಮಾದರಿ

10:05 AM Jul 19, 2018 | |

ಬೆಂಗಳೂರು: “ದಿಢೀರ್‌ ನೆರೆ’ ಮುನ್ಸೂಚನೆ ಬಗ್ಗೆ ಕಳೆದ ವರ್ಷ ಸಿಲಿಕಾನ್‌ ಸಿಟಿಯಲ್ಲಿ ನಡೆಸಿದ ಪ್ರಯೋಗ ಈಗ ದೇಶಕ್ಕೆ ಮಾದರಿ ಆಗುತ್ತಿದೆ. ನಗರದ 5 ಕಡೆ ಪ್ರಾಯೋಗಿಕವಾಗಿ ಸೆನ್ಸರ್‌ ಆಧಾರಿತ ನೆರೆ ಮುನ್ಸೂಚನಾ ವ್ಯವಸ್ಥೆ ಅಳವಡಿಸಲಾಗಿತ್ತು. ಅದನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೆಚ್ಚಿಕೊಂಡಿದ್ದು, ನಗರದಾದ್ಯಂತ ವಿಸ್ತರಿ ಸುವ ಜತೆಗೆ ದೇಶದ ಉಳಿದ ಮಹಾನಗರಗಳಿಗೂ ಮಾದರಿಯಾಗಿ ತೆಗೆದುಕೊಳ್ಳಲು ಉದ್ದೇಶಿಸಿದೆ.

Advertisement

ಈ ಹಿನ್ನೆಲೆಯಲ್ಲಿ “ನಗರ ನೆರೆ ಮಾದರಿ ಯೋಜನೆ’ಗೆ ಇತ್ತೀಚೆಗೆ ಅನುಮೋದನೆ ನೀಡಿ, 6 ಕೋಟಿ ರೂ. ಅನುದಾನವನ್ನೂ ಕೊಟ್ಟಿದೆ. ಸೆನ್ಸರ್‌ ಆಧಾರಿತ ನೆರೆ ಮುನ್ಸೂಚನಾ ವ್ಯವಸ್ಥೆಯನ್ನು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರೆ, ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ. ಈಗ ಇವೆರಡೂ ಜಂಟಿಯಾಗಿ ಯೋಜನೆ ಕೈಗೆತ್ತಿಕೊಂಡಿವೆ.

ದಿಢೀರ್‌ ನೆರೆ ಕೇವಲ ಬೆಂಗಳೂರಿನ ಸಮಸ್ಯೆ ಅಲ್ಲ; ಮುಂಬೈ, ಚೆನ್ನೈ, ಗುವಾಹಟಿ, ಸೂರತ್‌ ಹೀಗೆ ಬಹುತೇಕ ಮಹಾನಗರಗಳು ನೆರೆಗೆ ತುತ್ತಾಗುತ್ತಿವೆ. ಅವುಗಳ ಪರಿಣಾಮವನ್ನು ತಗ್ಗಿಸಲು ಈ ಸೆನ್ಸರ್‌ ಆಧಾರಿತ ಮುನ್ಸೂಚನಾ ವ್ಯವಸ್ಥೆ ನೆರವಾಗಲಿದೆ. ಇದರ ಮುಖ್ಯ ಉದ್ದೇಶ ನೆರೆ ಬರುವ ಪ್ರದೇಶಗಳ ಮಾಹಿತಿಯನ್ನು ಮುಂಚಿತವಾಗಿ ಅತ್ಯಂತ ನಿಖರವಾಗಿ ನೀಡುವುದು.
 ಅನಾಹುತಗಳನ್ನು ತಗ್ಗಿಸುವುದು ಹಾಗೂ ನೆರೆ ಉಂಟಾಗಬಹುದಾದ ದಾರಿಗಳಲ್ಲಿ ಹಾದುಹೋಗುವವರ ಮಾರ್ಗ ಬದಲಾವಣೆ ಮಾಡುವುದಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ (ಜಲವಿಜ್ಞಾನ ವಿಭಾಗ) ಶುಭಾ ಅವಿನಾಶ್‌ ತಿಳಿಸುತ್ತಾರೆ.

3 ವರ್ಷಗಳ ಈ ಯೋಜನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಜಲ ವಿಜ್ಞಾನಿಗಳು, ಕೆಎಸ್‌ಎನ್‌ಡಿಎಂಸಿಯ ತಜ್ಞರು ಇದ್ದಾರೆ. ಇವರೆಲ್ಲರ ಸಹ ಯೋಗದಲ್ಲಿ ಈಗಾಗಲೇ ಇರುವ ತಂತ್ರಜ್ಞಾನವನ್ನು ಮತ್ತಷ್ಟು ಉತ್ತಮಪಡಿಸಲಾಗುವುದು. ನಂತರ ಆ ವ್ಯವಸ್ಥೆಯನ್ನು ಆಯಾ ನಗರಗಳಿಗೆ ತಕ್ಕಂತೆ ಮರುವಿನ್ಯಾಸಗೊಳಿಸಿ ಅಳವಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಸಂಪನ್ಮೂಲವಾಗಿ ಪರಿವರ್ತನೆ: ವ್ಯರ್ಥವಾಗಿ ಹೋಗುವ ಮಳೆ ನೀರನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವುದು ಈ ಯೋಜನೆಯ ಇನ್ನೊಂದು ಮುಖ್ಯ ಉದ್ದೇಶ. ನಗರದಲ್ಲಿ ವಾರ್ಷಿಕ ಅಂದಾಜು 850 ಮಿ.ಮೀ. ಮಳೆ ಆಗುತ್ತಿದೆ. ಆದರೆ, ಇದು ಸುರಿಯುವ ರೀತಿಯಲ್ಲಿ ವ್ಯತ್ಯಾಸ ಆಗಿದೆ. ಅಲ್ಪಾವಧಿಯಲ್ಲಿ ಅತಿಹೆಚ್ಚು ಮಳೆ ಆಗುತ್ತದೆ. ಹೀಗೆ ಬಿದ್ದ ಮಳೆಯ ನೀರು ಅಷ್ಟೇ ರಭಸವಾಗಿ ಹರಿದುಹೋಗುತ್ತದೆ. ಕೆರೆಗಳು, ಮಳೆ ನೀರುಗಾಲುವೆಗಳ ಜಾಲಗಳನ್ನು ವ್ಯವಸ್ಥಿತಗೊಳಿಸಿ ಹಲವು ತಂತ್ರಜ್ಞಾನಗಳ ಮೂಲಕ ಇದನ್ನು ಮಾಡಬಹುದು. ಉದ್ದೇಶಿತ ಯೋಜನೆ ಅಡಿ ಈ ಬಗ್ಗೆ ಅಧ್ಯಯನ ನಡೆಸಲಾಗುವುದು  ಎಂದು ಭಾರತೀಯ ವಿಜ್ಞಾನ ಸಂಸ್ಥೆ ಜಲವಿಜ್ಞಾನಿ ಪ್ರೊ. ಮೋಹನ್‌ಕುಮಾರ್‌ ತಿಳಿಸಿದರು.

Advertisement

ಈ ಯೋಜನೆ ಅಡಿ ಸರ್ಕಾರ ನೀಡಿದ ಅನುದಾನದಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ ಗಂಟೆಗೊಮ್ಮೆ ಮಳೆ ಮುನ್ಸೂಚನೆ
ನೀಡಲಾಗುವುದು. ನೆರೆ ಸಂಭವಿಸಬಹುದಾದ ಪ್ರದೇಶಗಳಲ್ಲಿ ಅಳವಡಿಸಲಾಗುವ ಸೆನ್ಸರ್‌ಗಳು 10 ಸೆಂ.ಮೀ.ನಷ್ಟು ನೀರು ನಿಲುಗಡೆ ಆಗಿರುವುದನ್ನೂ ಪತ್ತೆ ಹಚ್ಚಿ, ಮಾಹಿತಿ ರವಾನೆ ಮಾಡಲಿದೆ. ಮುನ್ಸೂಚನೆಯ ನಿಖರತೆ ಹೆಚ್ಚಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ವಿವರಿಸಿದರು. 

ಎಲ್ಲೆಲ್ಲಿ ನಡೆದಿತ್ತು ಪ್ರಯೋಗ? ಪ್ರಾಯೋಗಿಕವಾಗಿ ಬೆಂಗಳೂರಿನ ಗೊಟ್ಟಿಗೆರೆ, ಹುಳಿಮಾವು, ಮಡಿವಾಳ ಮತ್ತು ಅರಕೆರೆಯ ಕೆರೆಗಳಿಗೆ ಕೂಡುವ ಮಳೆ ನೀರುಗಾಲುವೆಗಳಲ್ಲಿ ಐದು ಸೆನ್ಸರ್‌ ಆಧಾರಿತ ನೀರಿನಮಟ್ಟ ಅಳೆಯುವ ಮಾಪನಗಳನ್ನು ಅಳವಡಿಸಲಾಗಿದೆ. ಇದರ ಮಾಹಿತಿ ಸ್ವೀಕೃತಿ ಯಂತ್ರಗಳನ್ನು ಹತ್ತಿರದ ಕಟ್ಟಡದಲ್ಲಿ ಅಳವಡಿಸಲಾಗಿತ್ತು. ಮಳೆ ನೀರುಗಾಲುವೆಯಲ್ಲಿ ನೀರಿನಮಟ್ಟ
ಹೆಚ್ಚುತ್ತಿದ್ದಂತೆ ತಕ್ಷಣ ರಿಸೀವರ್‌ಗೆ ರವಾನೆಯಾಗುತ್ತದೆ. ಅಲ್ಲಿಂದ ಕೆಎಸ್‌ಎನ್‌ಡಿಎಂಸಿಗೆ ಹೋಗುತ್ತದೆ. ಆ ಮೂಲಕ ಉಳಿದೆಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಹೋಗುತ್ತದೆ. ಸುಮಾರು 15 ನಿಮಿಷಗಳಲ್ಲಿ ಈ ಮುನ್ಸೂಚನೆ ದೊರೆಯುತ್ತದೆ.

ಡ್ರೋನ್‌ ಬಳಕೆ
ನಗರ ನೆರೆ ಮಾದರಿ ಯೋಜನೆ ಅಡಿ ಬೆಂಗಳೂರಿನಲ್ಲಿ ನೆರೆ ಉಂಟಾದ ಪ್ರದೇಶಗಳ ಸಮೀಕ್ಷೆಗೆ ಡ್ರೋನ್‌ ಬಳಸಲಾಗುವುದು. ನೆರೆ ಹಾವಳಿಯ ತೀವ್ರತೆ, ಅದರ ಪರಿಣಾಮಗಳನ್ನು ಡ್ರೋಣ್‌ ಬಳಸಿ ಸಮೀಕ್ಷೆ ನಡೆಸಲಾಗು ವುದು. ಇದರಿಂದ ಸ್ಪಷ್ಟ ಚಿತ್ರಣ ಸಿಗಲಿದೆ. ಅದನ್ನು ಆಧರಿಸಿ ತಡೆ ಗಟ್ಟಲು ಹಲವಾರು ಕ್ರಮಗಳನ್ನು ಕೈಗೊಳ್ಳಲು ಅನುಕೂಲ ಆಗಲಿದೆ ಎಂದು ಡಾ.ಶ್ರೀನಿವಾಸ ರೆಡ್ಡಿ ತಿಳಿಸಿದರು. ಈಗ ಸಾಮಾನ್ಯವಾಗಿ ಸಂಚಾರದಟ್ಟಣೆ ಉಂಟಾದ ಮಾರ್ಗಗಳ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ನೆರೆ ಬಗ್ಗೆ ಮಾಹಿತಿ ನೀಡಿ, ಮಾರ್ಗ ಬದಲಿಸಲಾಗುವುದು. ಈ ನಿಟ್ಟಿನಲ್ಲಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗುವುದು ಎಂದರು.

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next