Advertisement

Christmas: ಜಗಕೆ ಜ್ಯೋತಿಯಾದ ಕ್ರಿಸ್ತ ಯೇಸುವಿನ ಜನನ

08:24 PM Dec 24, 2023 | Team Udayavani |

ಪ್ರಭು ಯೇಸುಕ್ರಿಸ್ತರ ಜನನವನ್ನು ಜಗತ್ತಿನಾದ್ಯಂತ ಧರ್ಮ, ಜಾತಿ, ಜನಾಂಗಗಳ ಭೇದವಿಲ್ಲದೆ ಕೊಂಡಾಡುತ್ತಾರೆ. ಮಾನವರಾದ ನಮ್ಮ ಹೃನ್ಮನಗಳು ಶಾಂತಿ ಮತ್ತು ಪ್ರೀತಿಯನ್ನೇ ಹುಡುಕುತ್ತಿರುತ್ತವೆ. ಅಂತಹ ಹೃದಯಗಳಿಗೆ ಯೇಸು ಕ್ರಿಸ್ತರ ಶಾಂತಿ ಹಾಗೂ ಪ್ರೀತಿಯ ತಣ್ತೀಗಳು ನಾಟುತ್ತವೆ ಎಂಬುದು ಸ್ಪಷ್ಟ. ಆದ್ದರಿಂದಲೇ ಕ್ರಿಸ್ಮಸ್‌ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.
ಕ್ರೈಸ್ತ ಧರ್ಮೀಯರು ಯೇಸು ಕ್ರಿಸ್ತರ ಜಯಂತಿಯಂದು ಸರ್ವೇಶ್ವರನು ತಮಗೆ ತೋರಿದ ಅಗಾಧ ಪ್ರೀತಿಯನ್ನು ನೆನಪಿಸಿಕೊಳ್ಳುತ್ತಾರೆ. “ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು.. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು’ (ಯೋವಾನ್ನ 3:16-17) ­ ಎಂಬುದಾಗಿ ಸತ್ಯವೇದ ಯೇಸುಕ್ರಿಸ್ತರ ಜನನದ ಉದ್ದೇಶವನ್ನು ತಿಳಿಸುತ್ತದೆ.

Advertisement

ಕುರುಬರಿಗೇಕೆ ಕಂದನ ಪ್ರಥಮ ದರ್ಶನ?
ರೋಮ್‌ ಚಕ್ರವರ್ತಿ ಹೊರಡಿಸಿದ ಜನಗಣತಿಯ ಆಜ್ಞೆ ಮೇರೆಗೆ ಜೋಸೆಫ್-ಮರಿಯಾ ದಂಪತಿ ನಜರೇತಿನಿಂದ ಬೆತ್ಲೆಹೆಮ್‌ಗೆ ಹೊರಟಾಗ ಮರಿಯಾಳು ತುಂಬು ಗರ್ಭಿಣಿ. ಅವರಿಗೆ ಛತ್ರದಲ್ಲಿ ಎಲ್ಲೂ ವಾಸ್ತವ್ಯ ಸಿಗದ ಕಾರಣ ಪಕ್ಕದಲ್ಲೇ ಇದ್ದ ಗೋದಲಿಯೊಂದರಲ್ಲಿ ಯೇಸುವಿಗೆ ಮರಿಯಾಳು ಜನ್ಮವಿತ್ತಳು. ಈ ಸುಸಮಾಚಾರವು ಪ್ರಥಮವಾಗಿ ದೂತರ ಮುಖಾಂತರ ಕುರುಬರಿಗೆ ತಲುಪಿ ಅವರು ಹುಡುಕುತ್ತಾ ಬಂದು ಯೇಸುಕಂದನಿಗೆ ನಮನ ಸಲ್ಲಿಸಿದರು.

ಜನ್ಮವೆತ್ತಾಗಲೇ, ದೂತರು ತಿಳಿಸಿದಂತೆ ಯೆಹೂದ್ಯರ ರಾಜನೆಂದು ಕರೆಸಿಕೊಂಡ ಯೇಸುಕ್ರಿಸ್ತರ ಜನನದ ಸುದ್ದಿ ಮೊದಲು ಕುರುಬರಿಗೇಕೆ ತಲುಪಿತು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಯೆಹೂದ್ಯರ ಅರಸರಲ್ಲಿ ಜನರ ಹೆಗ್ಗಳಿಕೆಗೂ, ದೇವರ ಮೆಚ್ಚುಗೆಗೂ ಪಾತ್ರನಾದ ದಾವಿದರಸನಿಗೆ ಪ್ರವಾದಿಗಳ ಮುಖಾಂತರ ಮೆಸ್ಸಿಯಾ (ರಕ್ಷಕ) ಜನಿಸುವ ಕುರಿತಾಗಿ ಹಾಗೂ ಆತನು ದಾವಿದನ ಕುಲದಿಂದಲೇ ಬರುವನೆಂದೂ ಮುಂಚಿತವಾಗಿ ತಿಳಿಸಲಾಗಿತ್ತು. ಅರಸನಾಗುವ ಮುಂಚೆ ದಾವಿದನೊಬ್ಬ ಕುರಿಗಾಹಿಯಾಗಿದ್ದ ಎನ್ನುವುದು ಇಲ್ಲಿ ಉಲ್ಲೇಖಾರ್ಹನೀಯ. ಆದಕಾರಣ ಕುರುಬರಿಗೆ ಯೇಸು ದರ್ಶನ ಪ್ರಥಮವಾಗಿ ಪ್ರಾಪ್ತವಾಗುತ್ತದೆ.

ಇಷ್ಟೇ ಅಲ್ಲದೇ, ಯೇಸು “ಪಾಪಪರಿಹಾರದ ಕುರಿಮರಿ’ಯಾಗಿ ಬಂದಿದ್ದಾರೆ ಎಂದು ಸತ್ಯವೇದ ಹೇಳುತ್ತದೆ. ಯೆಹೂದ್ಯರ ಪ್ರಕಾರ ತಮ್ಮ ಪಾಪವನ್ನು ಕಳೆಯಲು ಶುದ್ಧವಾದ, ಕಳಂಕರಹಿತ ಕುರಿಮರಿಯನ್ನಷ್ಟೇ ಅವರು ಬಲಿಯಾಗಿ ಅರ್ಪಿಸಬೇಕಾಗಿತ್ತು. ಹಾಗಾಗಿ ಕುರುಬರು ಬಲಿಯರ್ಪಣೆಗಾಗಿಯೇ ಕುರಿಮರಿಗಳನ್ನು ಸಲಹುತ್ತಿದ್ದರು. ಕುರಿಮರಿ ಜನಿಸಿದಾಗಲೇ ಅದಕ್ಕೆ ಯಾವುದೇ ರೀತಿಯಲ್ಲಿ ಗಾಯಗಳಾಗದೇ ಉತ್ತಮ ಮೆದುಬಟ್ಟೆಯಲ್ಲಿ ಸುತ್ತಿ ಕಾಪಾಡುತ್ತಿದ್ದರು. ಗೋದಲಿಯಲಿ ಜನಿಸಿದ ಕಂದ ಯೇಸು ಕಳಂಕರಹಿತ ಕುರಿಮರಿ ಎಂದು ಸಾರುವ ಸಲುವಾಗಿ ಕುರುಬರ ಹಾಜರಿ ಅಲ್ಲಿರುವುದು ಅತ್ಯಗತ್ಯ. ಯೇಸುವೇ ಆ ಪರಿಶುದ್ಧ, ಕಳಂಕರಹಿತ ಕುರಿಮರಿಯಾಗಿ ಲೋಕದ ಪಾಪಗಳಿಗೆ ಒಂದೇ ಸಾರಿ ತಮ್ಮ ಜೀವವನ್ನೇ ಬಲಿಯಾಗಿ ನೀಡುವರು ಎಂಬ ಸಂದೇಶವನ್ನು ನಾವಿಲ್ಲಿ ಮನಗಾಣಬಹುದು.

ಲೋಕಕ್ಕೆ ಆಗಮಿಸಿದ ಜಗಜ್ಜ್ಯೋತಿ
ಯೇಸು ಕ್ರಿಸ್ತರ ಮರಣ, ಪುನರುತ್ಥಾನದ ಅನಂತರ ಮೊದಲೆರಡು ಶತಮಾನಗಳಲ್ಲಿ ಜೆರುಸಲೇಮಿನ ಕ್ರೈಸ್ತರಂತೂ ಯೇಸು ಜನ್ಮ ದಿನವನ್ನು ಆಚರಿಸುತ್ತಿರಲಿಲ್ಲ. ನಾಲ್ಕನೇ ಶತಮಾನದಲ್ಲಿ ಇಡೀ ರೋಮ್‌ ನಗರ ತನ್ನ ರಾಜನೊಂದಿಗೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದಾಗ ಯೇಸುಕ್ರಿಸ್ತರ ಜಯಂತಿಯನ್ನು ಆಚರಿಸುವ ಪದ್ಧತಿ ರೋಮ್‌ ನಗರದಲ್ಲಿ ಆರಂಭಗೊಂಡಿತು.

Advertisement

ಅಷ್ಟರವರೆಗೆ ರೋಮ್‌ ನಗರದಾದ್ಯಂತ ಸರ್ಯದೇವನ ಜನುಮ ದಿನಾಚರಣೆ ನಡೆಯುತ್ತಿದ್ದು, ಕ್ರೆçಸ್ತರಾದ ರೋಮನ್‌ ಜನತೆ ಯೇಸು ಕ್ರಿಸ್ತರನ್ನು ಜಗಜ್ಜ್ಯೋತಿ ಎಂದು ಸಾರುತ್ತಾ, ಸತ್ಯವೇದದಲ್ಲಿ ಹೇಳಿರುವಂತೆ “ನಿಜವಾದ ಜ್ಯೋತಿ ಆ ದಿವ್ಯವಾಣಿಯೇ. ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಜ್ಯೋತಿ ಅವರೇ’. (ಯೋವಾನ್ನ 1:9) ಅವರ ಜನನವನ್ನು ಕೊಂಡಾಡತೊಡಗಿದರು. ಸತ್ಯವೇದದಲ್ಲಿನ “ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ’ (ಯೋವಾನ್ನ 1:5) ಎಂಬ ಸತ್ಯವೇದದ ವಾಕ್ಯವೂ ಯೇಸು ಜಗದ ಜ್ಯೋತಿಯಾಗಿ ಹುಟ್ಟಿದ್ದಾರೆಂದು ಸಾರುತ್ತದೆ.

“ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲ್ಲಿ ಸಂಚರಿಸುತ್ತಿದ್ದ ಜನರಿಗೆ. ಪ್ರಜ್ವಲಿಸಿತಾ ಜ್ಯೋತಿ ಕಗ್ಗತಲಲ್ಲಿ ಬಾಳುತ್ತಿದ್ದ ನಾಡಿಗರಿಗೆ’, ಎಂದು ಯೇಸುಕ್ರಿಸ್ತರು ಜನಿಸುವ 500 ವರ್ಷಗಳ ಹಿಂದೆ ಯೆಶಾಯ (1:9) ಎಂಬ ಪ್ರವಾದಿಯೊಬ್ಬ ಮುನ್ಸೂಚನೆ ನೀಡಿದ್ದನ್ನು ಸತ್ಯವೇದ ಪ್ರತಿಪಾದಿಸುತ್ತದೆ.

ಗೋದಲಿ ಪರಿಕಲ್ಪನೆಗೀಗ 800 ವರುಷಗಳು!
ಕ್ರಿಸ್ಮಸ್‌ ಬಂತೆಂದರೆ ಕ್ರೈಸ್ತರು ತಮ್ಮ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಗೋದಲಿ (ಕ್ರಿಬ್‌)ಯನ್ನು ರಚಿಸುವುದು ವಾಡಿಕೆ. ಗೋದಲಿಯಲಿ ಹುಟ್ಟಿದ ದೇವಕುವರನ ಸರಳತೆಯ ಪ್ರತೀಕವಾಗಿ ಕ್ರಿಬ್‌ ರಚಿಸಲಾಗುತ್ತದೆ. ಈ ಗೋದಲಿಯ ಪರಿಕಲ್ಪನೆ ಪ್ರಥಮವಾಗಿ ಹುಟ್ಟು ಹಾಕಿದ್ದು ಇಟಲಿಯ ಅಸ್ಸಿಸ್ಸಿ ನಗರದ ಸಂತ ಫ್ರಾನ್ಸಿಸ್‌. ಈ ಸಂತರು ಆಗರ್ಭ ಸಿರಿವಂತರಾಗಿದ್ದರೂ ಎಲ್ಲ ತ್ಯಜಿಸಿ ಮಠದಲ್ಲಿ ಸನ್ಯಾಸಿಯಾಗಿ ಜೀವಿಸತೊಡಗಿದ್ದರು. ಯೇಸುವಿನ ಬಡಹುಟ್ಟನ್ನು ಧ್ಯಾನಿಸಿದ ಅವರು ಇದೇ ಸರಳತೆಯ ಸಂದೇಶವನ್ನು ಲೋಕಕ್ಕೆಲ್ಲ ಸಾರುವ ಸಲುವಾಗಿ ಜೋಸೆಫ್-ಮರಿಯಾ-ಯೇಸು ಕಂದನ ಜತೆಯಾಗಿ ಕುರಿಗಳು, ಕುರುಬರು, ಪೂರ್ವದೇಶದ ಜ್ಞಾನಿಗಳನ್ನೊಳಗೊಂಡ ಗೋದಲಿಯನ್ನು ಇಟಲಿಯ ಗ್ರೇಸಿಯೊ ಪಟ್ಟಣದಲ್ಲಿ 1223ರಲ್ಲಿ ಪ್ರಥಮವಾಗಿ ನಿರ್ಮಿಸಿದರು. ಈ ಗೋದಲಿಯ ಪರಿಕಲ್ಪನೆ ವಿಶ್ವದಾದ್ಯಂತ ಇಂದು ನಾವು ಕಾಣಬಹುದು. ಈ ಪರಿಕಲ್ಪನೆಗೆ ಇಂದು 800 ವರ್ಷಗಳು ಸಂದಿವೆ.

ಯೇಸು ಕ್ರಿಸ್ತರ ದೈವೀಗುಣ ಜಗತ್ತಿಗೆ ಪಸರಿಸಲಿ
ಯೇಸುಕ್ರಿಸ್ತರು ಭೋದಿಸಿದ ಶಾಂತಿ-ಪ್ರೀತಿ ಪ್ರತೀ ಮಾನವ ಹೃದಯದಲ್ಲಿ ನೆಲೆಸಬೇಕಾದದ್ದು ಅನಿವಾರ್ಯ. ದ್ವೇಷ ಸಹಜಗುಣ ಆದರೆ ಪ್ರೀತಿಸುವುದು ಒಂದು ನಿಶ್ಚಿತ ಆಯ್ಕೆಯಾಗಿದೆ. ಬಂಧು ಮಿತ್ರರನ್ನಷ್ಟೇ ಅಲ್ಲ, ನಿಂದಕರನ್ನೂ, ಶತ್ರುಗಳನ್ನೂ ಪ್ರೀತಿಸುವ ಯೇಸು ಕ್ರಿಸ್ತರಲ್ಲಿದ್ದ ದೈವೀಗುಣ ಈ ಕ್ರಿಸ್ಮಸ್‌ ಸಂದರ್ಭದಲ್ಲಿ ಇಡೀ ಜಗತ್ತಿಗೆ ಪಸರಿಸಲಿ.

ಪ್ರೀತಿ, ವಿಶ್ವಾಸ ನಮ್ಮನ್ನು ಮಾನವೀಯತೆಯ ಹಾಗೂ ಸೌಹಾರ್ದಯುತ ಜೀವನದೆಡೆಗೆ ಕೊಂಡುಹೋಗುತ್ತವೆ. ಇಂತಹ ಜೀವನ ನಿಜಕ್ಕೂ ಸಾರ್ಥಕ. ಸಮಾಜದಲ್ಲಿನ ಅಶಾಂತಿಯನ್ನು ದೂರ ಮಾಡಲು ಎಲ್ಲರೂ ಶಾಂತಿ, ಸೌಹಾರ್ದದಿಂದ ಕೈಜೋಡಿಸಬೇಕಿದೆ. ಶಾಂತಿ, ಪ್ರೀತಿ, ದೀನತೆಯಂತಹ ಮಾನವೀಯತೆಯ ಸದ್ಗುಣ ಸಂಪನ್ನರು ಸಮಾಜ ದಲ್ಲೂ ಮಾನವೀಯತೆಯ ನೈತಿಕ ಗುಣಗಳನ್ನು ಬಿತ್ತುವರು. ಮಾನವೀಯತೆಯನ್ನು ಪ್ರತಿಯೊಬ್ಬ ನಾಗರಿಕರಲ್ಲಿ ಬಲಿಷ್ಠಗೊಳಿಸಬೇಕಿದೆ. ನಾವೆಲ್ಲರೂ ಸ್ವಾರ್ಥ, ಅಹಂತನವನ್ನು ಮೆಟ್ಟಿ ನಿಂತು ಧೈರ್ಯ, ಉತ್ಸಾಹದಿಂದ ಮುಂದೆ ಸಾಗಿದಲ್ಲಿ ಜೀವನದಲ್ಲಿ ಸುಖ, ಸಂತೋಷವನ್ನು ಹೊಂದಲು ಸಾಧ್ಯ. ನಿರ್ಗತಿಕರು, ಅನಾಥರಿಗೆ ನೆರವಾಗುವುದರ ಜತೆಯಲ್ಲಿ ಅಜ್ಞಾನ, ಅಮಾನವೀಯತೆ, ಅಧರ್ಮಗಳನ್ನು ಸಮಾಜದಿಂದ ತೊಡೆದುಹಾಕಬೇಕಿದೆ. ಸರ್ವರನ್ನೂ ಸಮಾನರಾಗಿ ಪರಿಗಣಿಸಿ ಪ್ರೀತಿ, ಕರುಣೆ, ಸೇವೆ, ಸಹಬಾಳ್ವೆ, ಕ್ಷಮೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಶಾಂತಿಯುತ ಬದುಕನ್ನು ಬಾಳುವ ಸಂಕಲ್ಪವನ್ನು ದೇವರ ಮಕ್ಕಳಾದ ನಾವೆಲ್ಲರೂ ಮಾಡೋಣ. ಎಲ್ಲರಿಗೂ ಕ್ರಿಸ್ಮಸ್‌ ಹಬ್ಬ ಮತ್ತು ಹೊಸವರ್ಷದ ಶುಭಾಶಯಗಳು.

-ಫಾ| ಜೊ. ಸಿ. ಸಿದ್ದಕಟ್ಟೆ, ಕಾರ್ಮೆಲ್‌ ಸಭೆ

Advertisement

Udayavani is now on Telegram. Click here to join our channel and stay updated with the latest news.

Next