Advertisement

ಎಲ್ಲಡೆ ಸಂಭ್ರಮದ ಕ್ರಿಸ್ಮಸ್‌; ಚರ್ಚ್‌ಗಳಲ್ಲಿ ವಿಶೇಷ ಪೂಜೆ 

07:45 PM Dec 25, 2021 | Team Udayavani |

ಪುತ್ತೂರು: “ಶಾಂತಿ, ಸೌಹಾರ್ದತೆಯ ಸಂದೇಶ ಸಾರುವ ಹಬ್ಬ’: 

Advertisement

ಪುತ್ತೂರು: ಶಾಂತಿ, ಸೌಹಾ ರ್ದತೆಯಿಂದ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವುದೇ ಕ್ರಿಸ್ಮಸ್‌ ಹಬ್ಬದ ಸಾರ ಎಂದು ಕಪುಚಿನ್‌ ಧರ್ಮ ಗುರು ಐವನ್‌ ಪಿಂಟೋ ಫರಂಗಿಪೇಟೆ ಹೇಳಿದರು.

ಮರೀಲು ಸೆಕ್ರೇಡ್‌ ಹಾರ್ಟ್‌ ಚರ್ಚ್‌ನಲ್ಲಿ ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಬೈಬಲ್‌ ವಾಚಿಸಿ ಅವರು ಸಂದೇಶ ನೀಡಿದರು. ಯೇಸುಕ್ರಿಸ್ತರು ಲೋಕೋ ದ್ಧಾರಕರು. ಜಗತ್ತಿಗೆ ಶಾಂತಿ ಹಾಗೂ ಮಾನವೀಯತೆ ಸಾರಿದವರು. ನಮ್ಮ ನಡೆ- ನುಡಿ, ಕಷ್ಟ-ಸಂಕಷ್ಟಗಳು, ಸಂತೋಷ ಎಲ್ಲವೂ ಯೇಸುಕ್ರಿಸ್ತರಿಗೆ ಸಮ ರ್ಪಿಸು ವಂತಾಗಬೇಕು. ಯೇಸು ಕ್ರಿಸ್ತರಿಗೆ ನಮ್ಮ ಹೃದಯ ಹಾಗೂ ಮನಸ್ಸಿನಲ್ಲಿ ಸ್ಥಾನ ನೀಡುವ ಮೂಲಕ ಈ ಕ್ರಿಸ್ಮಸ್‌ ಹಬ್ಬ ಎಲ್ಲರ ಬಾಳಿಗೂ ಬೆಳಕಾಗಲಿ ಎಂದು ಅವರು ಹೇಳಿದರು. ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಫ್ರ್ಯಾಂಕ್‌ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಚರ್ಚ್‌ಗಳಲ್ಲಿ ಸರಳ ಆಚರಣೆ:

ಪುತ್ತೂರು ಮಾಯಿದೇವುಸ್‌ ಚರ್ಚ್‌ ನಲ್ಲಿ ಶುಕ್ರವಾರ ಸಂಜೆ, ಶನಿವಾರ ಬೆಳಗ್ಗೆ ಮತ್ತು ಸಂಜೆ ಪೂಜೆ ನೆರವೇರಿತು. ಮಾಯಿ ದೇವುಸ್‌ ಚರ್ಚ್‌ನ ಧರ್ಮಗುರುಗಳಾದ ಫಾ| ಲಾರೆನ್ಸ್‌ ಮಸ್ಕರೇನಸ್‌, ಫಾ| ವಿಜಯ್‌ ಲೋಬೋ, ಫಾ|ಸ್ಟ್ಯಾನಿ ಪಿಂಟೋ, ಫಾ|ಅಶೋಕ್‌ ರಾಯನ್‌, ಫಾ| ಕೆವಿನ್‌ ಬಲಿಪೂಜೆಯಲ್ಲಿ ಪಾಲ್ಗೊಂಡರು. ಮರೀಲು ಸೆಕ್ರೇಡ್‌ ಹಾರ್ಟ್‌ ಚರ್ಚ್‌, ಬನ್ನೂರು ಚರ್ಚ್‌ಗಳಲ್ಲಿ ಕೋವಿಡ್‌ ನಿಯಮದ ಹಿನ್ನೆಲೆಯಲ್ಲಿ ಸರಳ ಆಚರಣೆ ನಡೆಯಿತು. ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆ ನೆರವೇರಿತು. ದಿವ್ಯ ಬಲಿಪೂಜೆ ಆರಂಭಕ್ಕಿಂತ ಮೊದಲು ಆಯಾ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಭಕ್ತಿಗೀತೆ(ಕ್ಯಾರಲ್ಸ್‌) ಹಾಡುವ ಸಂಪ್ರದಾಯ ಮೊದಲ್ಗೊಂಡಿತು. ಆಯಾ ಚರ್ಚ್‌ಗಳಲ್ಲಿ ದಿವ್ಯ ಬಲಿಪೂಜೆ ಬಳಿಕ ಚರ್ಚ್‌ನಲ್ಲಿ ದಾನಿಗಳಿಗೆ ಶುದ್ಧೀಕರಿಸಿದ ಪವಿತ್ರ ಮೋಂಬತ್ತಿ ನೀಡಿ ಗೌರವಿಸಲಾಯಿತು. ಕ್ರಿಸ್ಮಸ್‌ ಕೇಕ್‌ ವಿತರಿಸಲಾಯಿತು.

Advertisement

ಬನ್ನೂರು ಚರ್ಚ್‌; ಗೋದಲಿ, ನಕ್ಷತ್ರ:

ಬಲಿಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿ ಯಲ್ಲಿ ಬಾಲಯೇಸು ಮೂರ್ತಿ ಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸುಕ್ರಿಸ್ತರ ಜನನವನ್ನು ಸ್ವಾಗತಿಸಿದರು. ಕ್ರಿಸ್ಮಸ್‌ ನಕ್ಷತ್ರಗಳು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು. ಚರ್ಚ್‌, ಮನೆಗಳಲ್ಲಿ ಯೇಸುಕ್ರಿಸ್ತರ ಜನನ ಸಾರುವ ಗೋದಲಿ ನಿರ್ಮಿಸಲಾಗಿತ್ತು.

ಬೆಳ್ತಂಗಡಿ: ಕ್ರಿಸ್ತ ಸಂದೇಶ ಸಾರಿದ ಧರ್ಮಗುರುಗಳು :

ಬೆಳ್ತಂಗಡಿ: ಯೇಸು ಕ್ರಿಸ್ತನ ಜನ್ಮದಿನಾಚರಣೆಯ ಪ್ರಯುಕ್ತ ಡಿ. 24ರಂದು ರಾತ್ರಿ ತಾಲೂಕಿನ ಮಂಗಳೂರು ಧರ್ಮಪ್ರಾಂತಕ್ಕೆ ಒಳಪಟ್ಟ 12 ಚರ್ಚ್‌, ಬೆಳ್ತಂಗಡಿ ಧರ್ಮಪ್ರಾಂತಕ್ಕೆ ಸಂಬಂಧಿಸಿದ 17 ಚರ್ಚ್‌ಗಳಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರುಗಳ ಸಮ್ಮುಖದಲ್ಲಿ ದಿವ್ಯ ಬಲಿಪೂಜೆ ನೆರವೇರಿತು.

ಬೆಳ್ತಂಗಡಿ ಸಂತ ಲಾರೆನ್ಸ್‌ ಪ್ರಧಾನ ದೇವಾಲಯದಲ್ಲಿ ಧರ್ಮಾಧ್ಯಕ್ಷ ಬಿಷಪ್‌ ಲಾರೆನ್ಸ್‌ ಮುಕ್ಕುಯಿ ಕ್ರಿಸ್‌ಮಸ್‌ ಸಂದೇಶ ಸಾರಿದರು. ಫಾ| ಅಬ್ರಾಹಂ ಪಟ್ಟೇರಿಲ್‌, ಲಾರೆನ್ಸ್‌ ಪನೋಲಿಲ್‌, ಧರ್ಮಗುರು ಫಾ| ತೋಮಸ್‌ ಕಂಞಗಳ್‌ ಸಹಕರಿಸಿದರು. ಹೋಲಿ ರೆಡಿಮರ್‌ ಚರ್ಚ್‌ನಲ್ಲಿ ಶುಕ್ರವಾರ ಸಂಜೆ 7ಕ್ಕೆ ಪ್ರಧಾನ ಧರ್ಮಗುರು ಫಾ| ಕ್ಲಿಫರ್ಡ್‌ ಪಿಂಟೋ ಬಲಿ ಪೂಜೆ ನೆರವೇರಿಸಿದರು. ರೆ| ಫಾ| ಜೋಸೆಫ್‌ ಕಡೋìಜಾ ಸಹಿತ ಇತರ ಧರ್ಮಗುರುಗಳು ಆಶೀರ್ವಚನ ನೀಡಿದರು.

ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಚರ್ಚ್‌ನಲ್ಲಿ ಧರ್ಮಗುರು ಫಾ| ಸ್ಟೀವನ್‌ ದಿವ್ಯಬಲಿಪೂಜೆ ನೆರವೇರಿಸಿದರು. ಫಾ| ದೀಪಕ್‌ ಡೇಸಾ ಪ್ರವಚನ ನೀಡಿದರು. ಮುಖ್ಯ ಧರ್ಮಗುರು ಫಾ| ಬೇಸಿಲ್‌ ವಾಸ್‌ ಆಶೀರ್ವಚನ ನೀಡಿದರು. ಎಲ್ಲ ಚರ್ಚ್‌ಗಳಲ್ಲಿ ಕ್ರಿಸ್ತ ಜನನ ಪ್ರತಿಬಿಂಬಿಸುವ ಗೊಂಬೆಗಳು, ಹೆಚ್ಚಿನ ಮನೆಗಳಲ್ಲಿ ಕ್ರಿಸ್ಮಸ್‌ ವೃಕ್ಷವನ್ನು ಅಲಂಕರಿಸಲಾಗಿತ್ತು.

ಶನಿವಾರ ಬೆಳಗ್ಗೆ ಉಜಿರೆ ಸಂತ ಅಂಥೋನಿ ಚರ್ಚ್‌, ಸೈಂಟ್‌ ಜಾರ್ಜ್‌ ಉಜಿರೆ, ಮುಂಡಾಜೆ, ತೋಟತ್ತಾಡಿ, ಗಂಡಿಬಾಗಿಲು, ವೇಣೂರು, ಅಳದಂಗಡಿ, ನಾಳ, ನೈನಾಡು, ಗರ್ಡಾಡಿ, ಬದ್ಯಾರು, ಮಂಜೊಟ್ಟಿ, ಸೇರಿದಂತೆ ಪ್ರಮುಖ ಚರ್ಚ್‌

ಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಬಂಧುಗಳಿಗೆ ಸಿಹಿತಿಂಡಿ ಹಂಚಿ, ಕೇಕ್‌ ನೀಡಿ ಸಂಭ್ರಮಿಸಿದರು.

ಕಡಬ: ಸರಳ ಆಚರಣೆ :

ಕಡಬ: ಪರಿಸರದಲ್ಲಿ  ಕ್ರೈಸ್ತರು ಕ್ರಿಸ್ಮಸ್‌ ಹಬ್ಬವನ್ನು ಕೋವಿಡ್‌ ಮುಂಜಾಗ್ರತ ಕ್ರಮಗಳೊಂದಿಗೆ ಸರಳ ರೀತಿಯಲ್ಲಿ ಆಚರಿಸಿದರು.  ವಿವಿಧ ಚರ್ಚ್‌ಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ  ಬೆಳಗ್ಗೆ ವಿಶೇಷ ಪೂಜೆ ಜರಗಿತು.

ಕಡಬದ ಸೈಂಟ್‌ ಜೋಕಿಮ್ಸ್‌ ಚರ್ಚ್‌ನಲ್ಲಿ  ಶುಕ್ರವಾರ ರಾತ್ರಿ  ಹಾಗೂ  ಶನಿವಾರ ಬೆಳಗ್ಗೆ ಧರ್ಮಗುರು ವಂ|ಅರುಣ್‌ ವಿಲ್ಸನ್‌  ಲೋಬೋ ವಿಶೇಷ ಬಲಿಪೂಜೆ ನಡೆಸಿದರು. ತಾಲೂಕಿನ ವ್ಯಾಪ್ತಿಯ  ಸೀರೋ ಮಲಬಾರ್‌ ಕೆಥೋಲಿಕ್‌,           ಲ್ಯಾಟಿನ್‌ ಕೆಥೋಲಿಕ್‌, ಮಲಂಕರ ಸಿರಿಯನ್‌ ಕೆಥೋಲಿಕ್‌, ಕ್ನಾನಾಯ ಕೆಥೋಲಿಕ್‌, ಸಿರಿಯನ್‌ ಜಾಕೋಬೈಟ್‌, ಸಿರಿಯನ್‌ ಓರ್ತಡೋಕ್ಸ್‌ ಮುಂತಾದ ಧರ್ಮಸಭೆಗಳಿಗೆ ಸೇರಿದ ಚರ್ಚ್‌ಗಳಲ್ಲಿ  ಕಿಸ್ಮಸ್‌ ಆಚರಣೆ ನಡೆಯಿತು.

ಸಂಯುಕ್ತ ಕ್ರಿಸ್ಮಸ್‌ ಆಚರಣೆ:  

ಕಡಬ ಪರಿಸರದ ವಿವಿಧ ಧರ್ಮಸಭೆಗಳಿಗೆ ಸೇರಿದ ಸುಮಾರು 22 ಚರ್ಚ್‌ಗಳ ಸಂಯುಕ್ತ ಆಶ್ರಯದಲ್ಲಿ ಕಡಬ ಸಂಯುಕ್ತ ಕ್ರಿಸ್ಮಸ್‌ ಆಚರಣ ಸಮಿತಿಯ ನೇತೃತ್ವದಲ್ಲಿ  42ನೇ ವರ್ಷದ ಸಂಯುಕ್ತ ಕ್ರಿಸ್ಮಸ್‌ ಆಚರಣೆ ಹಾಗೂ ಸಾಧಕರಿಗೆ ಸಮ್ಮಾನ ಕೋವಿಡ್‌ ಮುಂಜಾಗ್ರತ ಕ್ರಮಗಳೊಂದಿಗೆ  ಕಡಬದ ಸೈಂಟ್‌ ಜೋಕಿಮ್ಸ್‌  ಚರ್ಚ್‌ ನ ಸಭಾಂಗಣದಲ್ಲಿ  ಡಿ. 26ರಂದು ಸಂಜೆ 5 ಗಂಟೆಗೆ ಜರಗಲಿದೆ.  ವಂ|ಜಿ.ಎಂ.ಸ್ಕರಿಯಾ ರಂಬಾನ್‌ ನೆಲ್ಯಾಡಿ ಸಂದೇಶ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಬಂಟ್ವಾಳ: ಚರ್ಚ್‌ಗಳಲ್ಲಿ ಆಚರಣೆ, ಸಂದೇಶ :

ಬಂಟ್ವಾಳ: ತಾಲೂಕಿನಾದ್ಯಂತ ಕ್ರಿಸ್ಮಸ್‌ ಅನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಶುಕ್ರವಾರ ರಾತ್ರಿ ಭಕ್ತರು ತಮ್ಮ ವ್ಯಾಪ್ತಿಯ ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಜನನವನ್ನು ಬಲಿಪೂಜೆಯೊಂದಿಗೆ ಆಚರಿಸಿದರು.

ಬಂಟ್ವಾಳದ ಪ್ರಧಾನ ದೇವಾಲಯ ಮೊಡಂಕಾಪು ಇನ್ಫೆಂಟ್‌ ಜೀಸಸ್‌ ಚರ್ಚ್‌ನಲ್ಲಿ ರೆ|ಫಾ| ವಲೇರಿಯನ್‌ ಡಿ’ಸೋಜಾ ಬಲಿಪೂಜೆ ನೆರವೇರಿಸಿದ್ದು, ಆಯಾಯ ಚರ್ಚ್‌

ಗಳ ಧರ್ಮಗುರುಗಳು ಬಲಿಪೂಜೆ ಅರ್ಪಿಸಿ ಕ್ರಿಸ್ಮಸ್‌ ಸಂದೇಶ ನೀಡಿದರು.

ಬಂಟ್ವಾಳದ ಸೂರಿಕುಮೇರು ಬೋರಿಮಾರ್‌ ಸಂತ ಜೋಸಫ್‌ ಚರ್ಚ್‌, ಅಗ್ರಾರ್‌ ದಿ ಮೋಸ್ಟ್‌ ಹೋಲಿ ಕ್ಸೇವಿಯರ್‌ ಚರ್ಚ್‌, ಅವರ್‌ ಲೇಡಿ ಆಫ್‌ ಲೊರೆಟ್ಟೊ ಚರ್ಚ್‌, ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌, ದೇವಮಾತಾ ಚರ್ಚ್‌ ಮೊಗರ್ನಾಡು, ಸಂತ ಮೈಕೆಲ್‌ ಚರ್ಚ್‌ ಬೆಳ್ಳೂರು, ಸಂತ ತೋಮಸ್‌ ಚರ್ಚ್‌ ಅಮ್ಮೆಂಬಳ, ತೊಡಂಬಿಲ ಚರ್ಚ್‌, ಶಂಭೂರು ಚರ್ಚ್‌, ಫರ್ಲಾ ಅವರ್‌ ಲೇಡಿ ಆಫ್‌ ವೆಲಂಕಣಿ ಚರ್ಚ್‌ ಮೊದಲಾದೆಡೆ ಬಲಿಪೂಜೆ, ವಿವಿಧ ಕಾರ್ಯಕ್ರಮಗಳು ನಡೆದವು.

ಚರ್ಚ್‌ಗಳಲ್ಲಿ ವಿಶೇಷ ಆಲಂಕಾರ ಮಾಡಲಾಗಿದ್ದು, ಗೋದಲಿ ನಿರ್ಮಾಣಗೊಂಡಿತ್ತು. ಜತೆಗೆ ಕ್ರೈಸ್ತರು ಕೂಡ ಮನೆಗಳಲ್ಲಿ ಗೋದಲಿ ನಿರ್ಮಿಸಿ ನಕ್ಷತ್ರ ಬೆಳಗಿದ್ದರು.

ಲೋರೆಟ್ಟೊ ಮಾತಾ ಚರ್ಚ್‌: ಕ್ರಿಸ್ಮಸ್‌ ಆಚರಣೆ:

ಲೊರೆಟ್ಟೊ ಮಾತಾ ಚರ್ಚ್‌ನಲ್ಲಿ ಧರ್ಮಗುರು ವಂ| ಫ್ರಾನ್ಸಿಸ್‌ ಕ್ರಾಸ್ತಾ, ವಂ| ಸಿಪ್ರಿಯನ್‌, ವಂ| ಜೇಸನ್‌ ಮೋನಿಸ್‌ ಬಲಿಪೂಜೆಯನ್ನು ಅರ್ಪಿಸಿದರು. ಬಳಿಕ ಸಂದೇಶ ನೀಡಿದ ಧರ್ಮಗುರುಗಳು, ಪ್ರಪಂಚದಾದ್ಯಂತ ಅತೀ ಸಂಭ್ರಮದಿಂದ ಎಲ್ಲ ಧರ್ಮದವರು ಆಚರಿಸುವ ಹಬ್ಬವೆಂದರೆ ದೀಪಾವಳಿ ಮತ್ತು ಕ್ರಿಸ್ಮಸ್‌. ಈ ಎರಡು ಹಬ್ಬಗಳು ಭೂಲೋಕದಲ್ಲಿ ದೇವರು ಆನಾವರಿಸಿದ ದಿವ್ಯ ಬೆಳಕನ್ನು ಬಿಂಬಿಸುತ್ತವೆ. ಕ್ರಿಸ್ಮಸ್‌ ಹಬ್ಬ ದೇವರ ಅಗಾಧ ಪ್ರೀತಿ, ದೈವಿಕ ಮನುಷ್ಯತ್ವವನ್ನು ಪ್ರಭು ಯೇಸುಕ್ರಿಸ್ತರ ಜನ್ಮದ ಮೂಲಕ ಸಾರುತ್ತದೆ. ಕೋವಿಡ್‌ ಕಷ್ಟದ ದಿನಗಳಲ್ಲಿ ಒಬ್ಬರಿಗೊಬ್ಬರು ತೋರಿಸಿದ ಪ್ರೀತಿ, ವಾತ್ಸಲ್ಯ, ಮನುಷ್ಯತ್ವ ಕ್ರಿಸ್ಮಸ್‌ ಹಬ್ಬಕ್ಕೆ ದೇವರಿಗೆ ನಾವು ಕೊಟ್ಟ ಉಡುಗೊರೆ ಎಂದರು.

ಚರ್ಚ್‌ ಅವರಣದಲ್ಲಿ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು. ದಾನಿಗಳನ್ನು ಗೌರವಿಸಲಾಯಿತು. ಲೊರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ವಂ| ಜೇಸನ್‌ ಮೊನಿಸ್‌ ಪ್ರವಚನ ನೀಡಿದರು. ಚರ್ಚ್‌ ಮುಖ್ಯರಸ್ತೆಯನ್ನು ಲೊರೆಟ್ಟೊ ಫ್ರೆಂಡ್ಸ್‌ನ ಪದಾಧಿಕಾರಿಗಳು ಆಲಂಕರಿಸಿದ್ದರು. ಐಸಿವೈಮ್‌ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನೆರವೇರಿತು.

ಸುಳ್ಯ: ವಿಶೇಷ ಪೂಜೆ, ಕುರ್ಬಾನಿ :

ಸುಳ್ಯ: ಸುಳ್ಯ ಸೈಂಟ್‌ ಬ್ರಿಜಿಡ್ಸ್‌ ಚರ್ಚ್‌ನಲ್ಲಿ ವಿಶೇಷ ಪೂಜೆ ಹಾಗೂ ಕುರ್ಬಾನಿ ನಡೆಯಿತು. ವಿಶೇಷ ಪೂಜೆ, ಬಲಿಪೂಜೆ ಮತ್ತು ಕ್ರಿಸ್ಮಸ್‌ ಶುಭಾಶಯ ವಿನಿಮಯವನ್ನು ಸೈಂಟ್‌ ಬ್ರಿಜಿಡ್ಸ್‌ ಚರ್ಚ್‌ನ ಧರ್ಮ ಗುರು ವಿಕ್ಟರ್‌ ಡಿ’ಸೋಜಾ ನಡೆಸಿಕೊಟ್ಟರು. ಅನಂತರ ಮಾತನಾಡಿದ ಅವರು, ಜಗತ್ತಿನ ಜನರೆಲ್ಲರಿಗೂ ಪರಮಾನಂದವನ್ನು ತರುವ ಹಬ್ಬ ಕ್ರಿಸ್ಮಸ್‌. ಪರಿಶುದ್ಧ ಹೃದಯದಲ್ಲಿ ಮಾತ್ರ ದೇವರು ವಾಸವಿರುತ್ತಾರೆ. ಆದ್ದರಿಂದ ನಮ್ಮ ಹೃದಯದಿಂದ ಎಲ್ಲ ಕೆಡುಕುಗಳನ್ನು ತೊರೆದು ಶುದ್ಧವಾದ ಹೃದಯಕ್ಕೆ ದೇವರನ್ನು ಬರಮಾಡಿಕೊಳ್ಳೋಣ ಎಂದರು.

ಸಮಾಜದಲ್ಲಿ ನೆಮ್ಮದಿ, ಏಕತೆ, ನೈಜವಾದ ಸಮೃದ್ಧಿ ನೆಲೆಯಾಗಬೇಕಾದರೆ ಪ್ರತಿಯೊಬ್ಬರ ಹೃದಯದಲ್ಲೂ ದೇವರಿಗೆ ವಾಸಿಸಲು ಅವ

ಕಾಶ ನೀಡಬೇಕು. ಆಗ ಮಾತ್ರ ನಿಜವಾದ ಶಾಂತಿ ಸಮಾಧಾನದ ಬಾಳು ನಮ್ಮದಾಗಿರುತ್ತದೆ ಎಂದು ಹೇಳಿದರು.

ತಾಲೂಕಿನ ಬೆಳ್ಳಾರೆ, ಸಂಪಾಜೆ, ಪಂಜ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next