Advertisement

ಕ್ರಿಸ್ಮಸ್‌ ಸಂಭ್ರಮ: ತೊಕ್ಕೊಟ್ಟು ಮಂದಿರಕ್ಕೆ ಬಿಷಪ್‌ ಭೇಟಿ

01:00 PM Dec 26, 2018 | Team Udayavani |

ಉಳ್ಳಾಲ: ಒಂದೆಡೆ ಕ್ರಿಸ್ಮಸ್‌ ಸಂಭ್ರಮ; ಇನ್ನೊಂದೆಡೆ ಭಜನ ಮಹೋತ್ಸವದ ಸಡಗರ. ಕ್ರಿಸ್ಮಸ್‌ ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಭಜನ ಮಹೋತ್ಸವ ನಡೆಯುತ್ತಿದ್ದ ಮಂದಿರಕ್ಕೆ ಭೇಟಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Advertisement

ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿರುವ ವಿಠೊಭಾ ರುಕಾ¾ಯಿ ಮಂದಿರ ಈ ಸೌಹಾರ್ದ ಭೇಟಿಗೆ ಸಾಕ್ಷಿಯಾಯಿತು. ಸಚಿವ ಯು.ಟಿ. ಖಾದರ್‌ ಮತ್ತು ಸಂತ ಸೆಬಾಸ್ಟಿಯನ್ನರ ಧರ್ಮಕೇಂದ್ರದ ಧರ್ಮಗುರು ಫಾ| ಡಾ| ಜೆ.ಬಿ. ಸಲ್ಡಾನ್ಹಾ ಅವರು ಕೂಡ ಹಬ್ಬದ ಸಂತೋಷ ವಿನಿಮಯ ಮಾಡಿಕೊಂಡರು.

ಶತಮಾನ ಪೂರೈಸಿರುವ ಸಂತ ಸೆಬಾಸ್ಟಿಯನ್ನರ ಧರ್ಮ ಕೇಂದ್ರ ಮತ್ತು 71 ಸಂವತ್ಸರಗಳನ್ನು ಪೂರೈಸಿರುವ ವಿಠೊಭಾ ರುಕಾ¾ಯಿ ಮಂದಿರ ಅಕ್ಕಪಕ್ಕದಲ್ಲಿಯೇ ಇವೆ. ಇವೆರಡೂ ಧಾರ್ಮಿಕ ಕೇಂದ್ರಗಳು ಸೌಹಾರ್ದಕ್ಕೆ ಹೆಸರುವಾಸಿ. ಪ್ರತೀ ವರ್ಷ ಡಿ. 25ರಂದು ಸೆಬಾಸ್ಟಿಯನ್‌ ಧರ್ಮಕೇಂದ್ರದಲ್ಲಿ ಕ್ರಿಸ್ಮಸ್‌ ಆಚರಣೆ ನಡೆದರೆ ವಿಠೊಭಾ ಮಂದಿರದ ವಾರ್ಷಿಕ ಭಜನ ಮಹೋತ್ಸವವೂ ಅದೇ ದಿನ ಜರಗುತ್ತದೆ. ಈ ಬಾರಿ ಬಿಷಪ್‌ ವಿಶೇಷ ಪೂಜೆಗಾಗಿ ಧರ್ಮಕೇಂದ್ರಕ್ಕೆ ಆಗಮಿಸಿ, ಬಳಿಕ ಸಮುದಾಯ ಭವನದ ಶಿಲಾನ್ಯಾಸ ನೆರವೇರಿಸಿ ಮಂದಿರಕ್ಕೆ ಭೇಟಿ ನೀಡಿದರು.

ಮಂದಿರದ ಮುಖ್ಯಸ್ಥರು ಅವರನ್ನು ಸ್ವಾಗತಿಸಿ ಸಮ್ಮಾನಿಸಿದರು. ಬಿಷಪ್‌ ಮತ್ತು ಸಂಗಡಿಗರು ಕ್ರಿಸ್ಮಸ್‌ ಸಿಹಿ ತಿನಸುಗಳನ್ನು ನೀಡಿ ಶುಭ ಹಾರೈಸಿದರು. 

ತುಳುವಿನಲ್ಲಿ ಸಂದೇಶ
ಈ ಸಂದರ್ಭ ತುಳುವಿನಲ್ಲಿ ಸಂದೇಶ ನೀಡಿದ ಬಿಷಪ್‌, ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ದೇವರು ಆಯುರಾರೋಗ್ಯ, ಸುಖ ಶಾಂತಿ ನೀಡಲಿ; ಎಲ್ಲರಿಗೂ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳು ಎಂದರು.

Advertisement

ಈ ಸೌಹಾರ್ದ ಭೇಟಿಯ ಮೂಲಕ ಎರಡೂ ಧರ್ಮ ಕೇಂದ್ರಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಸಚಿವ ಖಾದರ್‌ ಹೇಳಿದರು.

ಕಳೆದ ವರ್ಷ ನಡೆದ ಸಂತ ಸೆಬಾಸ್ಟಿಯನ್ನರ ಧರ್ಮ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಂದಿರದ ಸದಸ್ಯರು ಭಾಗವಹಿಸಿದ್ದರು.

ಮಂದಿರದ ಅಧ್ಯಕ್ಷ ಪದ್ಮನಾಭ ಕಾಪೆìಂಟರ್‌, ಪ್ರಧಾನ ಕಾರ್ಯದರ್ಶಿ ಚೇತನ್‌ ಕುಮಾರ್‌ ಶೆಟ್ಟಿ, ಕೋಶಾಧಿಕಾರಿ ಮೋಹನ್‌ ಬಂಗೇರ, ಮಾಜಿ ಅಧ್ಯಕ್ಷ ಸಚ್ಚೀಂದ್ರನಾಥ ಸಾಲ್ಯಾನ್‌, ಚರ್ಚ್‌ನ ಧರ್ಮಗುರುಗಳು, ಮುಖಂಡರಾದ ಸುರೇಶ್‌ ಭಟ್ನಗರ, ಬಾಝಿಲ್‌ ಡಿ’ಸೋಜಾ, ಪಿಯೂಷ್‌ ಡಿ’ಸೋಜಾ, ತಾ.ಪಂ. ಮಾಜಿ ಸದಸ್ಯ ಮಹಮ್ಮದ್‌ ಮುಸ್ತಾಫ ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿಯಲ್ಲಿ  ಸಂಭ್ರಮದ ಕ್ರಿಸ್ಮಸ್‌
ಮಂಗಳೂರು/ಉಡುಪಿ/ಕಾಸರಗೋಡು
: ಯೇಸು ಕ್ರಿಸ್ತರ ಜನನದ ಹಬ್ಬವಾದ ಕ್ರಿಸ್ಮಸ್‌ ಅನ್ನು ಮಂಗಳವಾರ ಕರಾವಳಿಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜಗತ್ತಿನ ಎಲ್ಲೆಡೆ ನಡೆಯುವಂತೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯಲ್ಲಿ ಕ್ರಿಸ್ಮಸ್‌ ಆಚರಣೆ ಜೋರಾಗಿತ್ತು. 

ಸೋಮವಾರ ರಾತ್ರಿ ಕೆಥೊಲಿಕ್‌, ಸಿರಿಯನ್‌, ಪ್ರೊಟೆಸ್ಟೆಂಟ್‌, ಮಲಂಕರ ಮೊದಲಾದ ಚರ್ಚ್‌ಗಳು ವಿದ್ಯುತ್‌ ದೀಪಗಳಿಂದ ಆಲಂಕೃತಗೊಂಡಿದ್ದವು. ಕೆಥೆಡ್ರಲ್‌ಗ‌ಳಲ್ಲಿ ಬಿಷಪ್‌ ಅವರು ಪೂಜೆ ನಡೆಸಿದರೆ ಇತರ ಚರ್ಚ್‌ಗಳಲ್ಲಿ ಧರ್ಮಗುರುಗಳಿಂದ ಬಲಿಪೂಜೆ ನಡೆಯಿತು. ಯೇಸು ಕ್ರಿಸ್ತರು ದನದ ಹಟ್ಟಿಯಲ್ಲಿ ಜನಿಸಿದರು ಎನ್ನುವುದರ ಸಂಕೇತವಾಗಿ ಚರ್ಚ್‌ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿ (ಕ್ರಿಬ್‌)ಗಳು ನಿರ್ಮಾಣಗೊಂಡಿದ್ದವು. ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು.

ಪರ ಊರಿನಲ್ಲಿರುವ ಮತ್ತು ವಿದೇಶಗಳಲ್ಲಿರುವ ಕುಟುಂಬದ ಸದಸ್ಯರು ಊರಿಗೆ ಆಗಮಿಸಿ ಹಬ್ಬ ಆಚರಣೆಯನ್ನು ಮನೆಮಂದಿಯೊಂದಿಗೆ ಆಚರಿಸಿ ಸಂಭ್ರಮಿಸಿದರು. ಹೀಗಾಗಿ ಮನೆಗಳಲ್ಲಿ ಸಡಗರದ ವಾತಾವಾರಣ ಸೃಷ್ಟಿಯಾಗಿತ್ತು. ಮನೆಗಳಲ್ಲಿ ವಿಶೇಷ ತಿನಿಸುಗಳನ್ನು ಮಾಡಿ ಹಬ್ಬದ ಸಂಭ್ರಮವನ್ನು ಕ್ರೈಸ್ತರು ಆಚರಿಸಿದರು. 
ಯುವ, ಮಹಿಳಾ ಸಂಘಟನೆಗಳ ಸದಸ್ಯರಿಂದ ಸಾಂತಾಕ್ಲಾಸ್‌ ವೇಷ ಧರಿಸಿದ ನೃತ್ಯಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಂಗಳವಾರ ಬೆಳಗ್ಗೆ ಕ್ರಿಸ್ತರ ಜನನದ ಪ್ರಯುಕ್ತ ವಿಶೇಷ ಪೂಜೆಗಳು ನಡೆದ ಬಳಿಕ ಮನೆಗಳಲ್ಲಿ ಭೋಜನ ಉಣಬಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next