Advertisement

ಕೋಟೆನಾಡಿನೊಂದಿಗೆ ಚಿದಾನಂದಮೂರ್ತಿ ನಂಟು!

01:46 PM Jan 12, 2020 | Naveen |

ಚಿತ್ರದುರ್ಗ: ನಾಡಿನ ಹಿರಿಯ ಸಂಶೋಧಕ ಚಿದಾನಂದಮೂರ್ತಿ ಅವರ ಇಳಿ ವಯಸ್ಸಿನಲ್ಲೂ ಚಿತ್ರದುರ್ಗದಲ್ಲಿ ನಡೆದ ಟಿಪ್ಪು ಜಯಂತಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾದಾಗ ರಾಜ್ಯಾದ್ಯಂತ ಪ್ರತಿಭಟನೆ, ಬಂದ್‌ ಆಗಿದ್ದವು. ಈ ಅವಧಿಯಲ್ಲಿ ಚಿತ್ರದುರ್ಗದಲ್ಲೂ ಕೂಡಾ ಹೋರಾಟ ತೀವ್ರಗತಿಯಲ್ಲಿತ್ತು.

Advertisement

ಎರಡು ವರ್ಷದ ಹಿಂದೆ ಚಿತ್ರದುರ್ಗದಲ್ಲಿ ಮದಕರಿ ನಾಯಕ ಗೌರವ ಸಂರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಒನಕೆ ಚಳವಳಿಯಲ್ಲಿ ಚಿದಾನಂದಮೂರ್ತಿ ಭಾಗವಹಿಸಿ ಭಾಷಣ ಮಾಡಿದ್ದರು.

ಚಿತ್ರನಟಿ ತಾರಾ, ವಿಶ್ವಹಿಂದೂ ಪರಿಷತ್‌ನ ಗೋಪಾಲ್‌ ಹಾಗೂ ಡಾ.ಎಂ. ಚಿದಾನಂದಮೂರ್ತಿ ಅಂದಿನ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಭಾಗವಹಿಸಬೇಕಿತ್ತು. ಆದರೆ, ಪೊಲೀಸರು ತಾರಾ ಅವರನ್ನು ಹಿರಿಯೂರು ಬಳಿಯೇ ತಡೆದರು. ಆದರೆ, ಚಿದಾನಂದಮೂರ್ತಿ ಅವರು ಮೊದಲೇ ಆಗಮಿಸಿ ಡಾ.ಕೆ. ರಾಜೀವಲೋಚನ ಅವರ ಮನೆಯಲ್ಲಿ ಉಳಿದಿದ್ದರು. ಆನಂತರ ಪ್ರತಿಭಟನೆ ಆರಂಭವಾಗಿ ಒನಕೆ ಓಬವ್ವ ವೃತ್ತಕ್ಕೆ ಆಗಮಿಸುವ ವೇಳೆಗೆ ಆಗಮಿಸಿ ಭಾಷಣ ಮಾಡಿದ್ದರು.

ಮುರುಘಾ ಶರಣರ ಸಂತಾಪ: ಕನ್ನಡ, ಕನ್ನಡತ್ವಕ್ಕಾಗಿ ಯಾವುದೇ ಹಿಂಜರಿಕೆಯಿಲ್ಲದೆ ದಿಟ್ಟ ನಿರ್ಧಾರ ಕೈಗೊಂಡ ಅಪೂರ್ವ ಮೂರ್ತಿ ಚಿದಾನಂದಮೂರ್ತಿ ಎಂದು ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದ್ದಾರೆ.

ವಿದ್ಯಾರ್ಥಿ ದಿಸೆಯಿಂದಲೂ ಅವರಿಗೆ ನಾಡಿನ ಬಗ್ಗೆ ಅತೀವ ಕಳಕಳಿ. ಡಿ.ಎಲ್‌. ನರಸಿಂಹಾಚಾರ್ಯರ ಸೂಚನೆಯಂತೆ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನರಚಿಸುವ ಪ್ರಯತ್ನಕ್ಕೆ ಮುಂದಾದರು. ಪ್ರಾಧ್ಯಾಪಕರಾಗಿ ಹಲವಾರು ದೇಶಗಳನ್ನು ಸುತ್ತಿ ಅಪಾರ ಅನುಭವ ಹೊಂದಿದ್ದರು.

Advertisement

ಸಂಶೋಧನೆ, ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಸುತ್ತಿದ್ದಾರೆ. ಭಾಷೆ, ವ್ಯಾಕರಣ ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಇತಿಹಾಸ, ಸಂಸ್ಕೃತಿ ಮೊದಲಾಗಿ ಅನೇಕ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡವರು.

ನಿರ್ದಿಷ್ಟ ಪಾಂಡಿತ್ಯ, ಸತ್ಯ, ನಿಷ್ಠೆ, ಪ್ರಖರ ಪ್ರತಿಭೆ, ವೈಚಾರಿಕ ಸಾಮರ್ಥ್ಯಕ್ಕೆ ಮತ್ತೂಂದು ಹೆಸರು ಚಿದಾನಂದಮೂರ್ತಿಯವರು. ಕನ್ನಡ-ಕರ್ನಾಟಕ ಉಳಿವಿಗೆ ಅವರು ಮಾಡಿದ ಹೋರಾಟ ಅನನ್ಯ.
ಚಿದಾನಂದ ಮೂರ್ತಿಯವರಿಗೂ ಶ್ರೀಮಠಕ್ಕೂ ಹಾಗೂ ನಮಗೂ ಅವಿನಾಭಾವ ಸಂಬಂಧವಿತ್ತು. ದಾವಣಗೆರೆ ಜಯದೇವ ವಿದ್ಯಾರ್ಥಿ ನಿಲಯದಲ್ಲಿದ್ದು ಪ್ರೌಢಶಾಲಾ ಶಿಕ್ಷಣ ಪೂರೈಸಿದ್ದರು. ಅವರಿಗೆ ಜಯದೇವಶ್ರೀ ಪ್ರಶಸ್ತಿ ನೀಡಿ ಶ್ರೀಮಠ ಗೌರವಿಸಿದೆ. ನಾಡು-ನುಡಿಗೆ ಸಂಬಂಧಿಸಿದಂತೆ ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ದೂರವಾಣಿ ಮೂಲಕ ಮತ್ತು ಖುದ್ದಾಗಿ ಚರ್ಚಿಸುತ್ತಿದ್ದೆವು.

2016 ಜನವರಿಯಲ್ಲಿ ನಡೆದ ಪೀಠಾರೋಹಣ ಬೆಳ್ಳಿಹಬ್ಬ ಸಂದರ್ಭದಲ್ಲಿ ಎಂ.ಎಂ.ಕಲಬುರ್ಗಿ ಪ್ರಧಾನ ಸಂಪಾದಕತ್ವದಲ್ಲಿ ಹೊರತಂದ ಶರಣಶ್ರೀ ಅಭಿನಂದನ ಗ್ರಂಥ, 25 ಸಂಶೋಧನಾ ಗ್ರಂಥ, ನಾನೇ ಬರೆದ 37 ಪುಸ್ತಕಗಳು ಒಟ್ಟು 63 ಪುಸ್ತಕಗಳನ್ನು ದೇಜಗೌ ಅವರೊಂದಿಗೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಬಿಡುಗಡೆ ಮಾಡಿದ್ದು, ಇತಿಹಾಸವಾಗಿ ಉಳಿದುಕೊಂಡಿದೆ.

ಇಂತಹ ಶ್ರೇಷ್ಠ ಸಂಶೋಧಕರನ್ನು ನಾಡು ಕಳೆದುಕೊಂಡಿರುವುದು ಸಾಹಿತ್ಯ ಕ್ಷೇತ್ರ ಮಾತ್ರವಲ್ಲ, ನಾಡಿಗು ತುಂಬಲಾರದ ನಷ್ಟವುಂಟಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ಅವರ ಕುಟುಂಬದವರಿಗೆ ಭರಿಸಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next